ತುಮಕೂರು:ಸುಪ್ರಿಂ ಕೋರ್ಟಿನ ತೀರ್ಪಿನ ನಡುವೆಯೂ ಒಳಮೀಸಲಾತಿ ಜಾರಿಗೆ ವಿವಿಧ ಕಾರಣಗಳನ್ನು ನೀಡಿ ನಿರ್ಲಕ್ಷ ತೋರಿರುವ ರಾಜ್ಯ ಸರಕಾರದ ವಿರುದ್ದ ಅಂಬೇಡ್ಕರ್ ಪರಿನಿಬ್ಬಾಣದ ದಿನವಾದ ಡಿಸೆಂಬರ್ 06 ರಿಂದ 11ರವರೆಗೆ ಮೈಸೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಕೈಗೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕರಾದ ಕೇಶವಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಡಿಸೆಂಬರ್ 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನ ಹುಂಡಿಯಿಂದ “ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ”ಎಂಬ ಘೋಷ ವಾಕ್ಯದೊಂದಿಗೆ ಮೈಸೂರು ಚಲೋ ಜಾಥಾ ಆರಂಭಿಸಿ,ಡಿಸೆಂಬರ್ 11 ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಮುಕ್ತಾಯಗೊಳಿಸಲಾಗುವುದು ಎಂದರು.
ಒಳಮೀಸಲಾತಿ ಕುರಿತಂತೆ ಸುಪ್ರಿಂಕೋರ್ಟಿನ 2024ರ ಆಗಸ್ಟ್ 1 ಐತಿಹಾಸಿಕ ತೀರ್ಪಿನ ನಂತರದ ಕೆಲವೇ ತಿಂಗಳುಗಳಲ್ಲಿ ನೆರೆಯ ಆಂಧ್ರ,ತೆಲಂಗಾಣ, ತೆಮಿಳುನಾಡು, ಹರಿಯಾಣ, ಪಂಜಾಬ್ ಸರಕಾರಗಳು ಒಳಮೀಸಲಾತಿಯನ್ನು ಜಾರಿಗೆ ತಂದರೂ ಕರ್ನಾಟಕದಲ್ಲಿ ಮಾತ್ರ ನಿಖರ ಮಾಹಿತಿ ಹೆಸರಿನಲ್ಲಿ ಅನಗತ್ಯ ವಿಳಂಬ ಮಾಡುತ್ತಾ ಬಂದಿದೆ. ನ್ಯಾ.ನಾಗಮೋಹನ್ ದಾಸ್ ಸಮಿತಿ ರಚನೆ,ಹಣಕಾಸು ಬಿಡುಗಡೆ,ವರದಿ ಸಲ್ಲಿಕೆ, ವರದಿಯನ್ನು ಸದನದಲ್ಲಿ ಮಂಡನೆ ಹೀಗೆ ಪ್ರತಿ ಹಂತದಲ್ಲಿಯೂ ಒಳಮೀಸಲಾತಿ ಹೋರಾಟ ಸಮಿತಿಗಳು ಪ್ರತಿಭಟನೆ, ಧರಣಿ, ಸಮಾವೇಶಗಳ ಮೂಲಕವೇ ಸರಕಾರದ ಮೇಲೆ ಒತ್ತಡ ತಂದು, ಕೆಲಸ ಮಾಡುವಂತೆ ಮಾಡಲಾಗಿದೆ.ಆದರೆ ಅವೈಜ್ಞಾನಿಕವಾಗಿ ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸಿ, ಒಳಮೀಸಲಾತಿ ಜಾರಿ ಮಾಡಿದ ಪರಿಣಾಮ ಅಲೆಮಾರಿ ಸಮುದಾಯದವರು ನ್ಯಾಯಾಲಯಕ್ಕೆ ಹೋಗಿ ಪರೋಕ್ಷ ತಡೆಯಾಜ್ಞೆ ತಂದಿದ್ದಾರೆ. ಇದಕ್ಕೆಲ್ಲಾ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಒಳಮೀಸಲಾತಿ ವಿರೋಧಿ ಧೋರಣೆಯೇ ಕಾರಣ.ಹಾಗಾಗಿ ಡಿಸೆಂಬರ್ 06 ರಿಂದ 11ರವರೆಗೆ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕೇಶವಮೂರ್ತಿ ತಿಳಿಸಿದರು.
ಸರಕಾರ ಹೇಳುತ್ತಿರುವಂತೆ ಒಳಮೀಸಲಾತಿಯನ್ನು ಕೇವಲ ಉದ್ಯೋಗ ಮತ್ತು ಶಿಕ್ಷಣಕ್ಕೆ ಸಮಿತಗೊಳಿಸುವುದು ಸರಿಯಲ್ಲ. ರಾಜಕೀಯ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಒಳಮೀಸಲಾತಿ ಪರಿಪೂರ್ಣವಾಗಿ ಜಾರಿಗೆ ಬರಬೇಕು ಎಂಬುದು ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳ ಜನರ ಒತ್ತಾಯವಾಗಿದೆ.ಕೆಲ ಪಟ್ಟಭದ್ರ ಹಿತಾಸಕ್ತಿಗಳು ಒಳಮೀಸಲಾತಿ ಜಾರಿಗೆ ಅಡ್ಡಿಯಾ ಗುತ್ತಿದ್ದು,ಅಂತಹ ಹಿತಾಸಕ್ತಿಗಳಿಗೆ ಸರಕಾರ ಬಲಿಯಾಗದೆ,ಸಾಮಾಜಿಕ ನ್ಯಾಯದ ಅಡಿಯಲ್ಲಿ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕೆಂಬುದು ನಮ್ಮ ಆಗ್ರಹ.ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಒಳಮೀಸಲಾತಿಗೆ ಅಡ್ಡಿಯಾಗಿರುವ ದುಷ್ಟ ಶಕ್ತಿಗಳನ್ನು ಮೆಟ್ಟಿನಿಂತು ನ್ಯಾಯ ಒದಗಿಸಬೇಕೆಂದರು.
ಒಳಮೀಸಲಾತಿ ಹೋರಾಟಗಾರರಾದ ಪಾವಗಡ ಶ್ರೀರಾಮ್, ಒಳಮೀಸಲಾತಿ ಹೋರಾಟಗಾರರಾದ ಸಿದ್ದಗಂಗಾ ಶಿವಯೋಗಿ ಮಾತನಾಡಿದರು. ದಸಂಸದ ಪಿ.ಎನ್.ರಾಮಯ್ಯ ಇತರ ದಲಿತ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.