ಕೇಂದ್ರ ಸರ್ಕಾರದಿಂದ ಒಟ್ಟು 69,250 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಸೂಚನೆ

ತುಮಕೂರು : ಕೇಂದ್ರ ಸರ್ಕಾರದಿಂದ ಒಟ್ಟು 69,250 ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಮಾಡಲು ಮಂಜೂರು ಮಾಡಲಾಗಿದೆ. ಇದರಿಂದ ಎಲ್ಲ ಜಿಲ್ಲೆ/ತಾಲೂಕುಗಳಿಗೆ ಅವುಗಳ ಉತ್ಪಾದನೆ ಮತ್ತು ಬೆಳೆ ಪ್ರದೇಶಗಳಿಗನುಸಾರವಾಗಿ ಹಂಚಿಕೆಯಗದೇ ಕೇವಲ ಒಂದೆರಡು ಜಿಲ್ಲೆಗಳಿಗೆ ಮಾತ್ರ ಸಿಂಹಪಾಲು ದೊರೆಯುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾವಾರು ಉಂಡೆ ಕೊಬ್ಬರಿ ಉತ್ಪಾದನೆ, ಕಳೆದ ವರ್ಷ ಖರೀದಿಸಲಾದ ಜಿಲ್ಲಾವಾರು ಪ್ರಮಾಣ ಹಾಗೂ ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಗರಿಷ್ಠ ಪ್ರಮಾಣವನ್ನು ಪರಿಗಣಿಸಿ ಹೆಚ್ಚು ತೆಂಗು ಬೆಳೆಯುವ ಜಿಲ್ಲೆಯ ರೈತರಿಗೆ ಅನ್ಯಾಯವಾಗಬಾರದೆಂದು ಸರ್ಕಾರವು ಜಿಲ್ಲೆಯ ಕೊಬ್ಬರಿ ಖರೀದಿ ಪ್ರಮಾಣವನ್ನು 3,50,000 ಕ್ವಿಂಟಾಲ್‍ಗೆ ನಿಗಧಿಪಡಿಸಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ರೈತರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಉಂಡೆ ಕೊಬ್ಬರಿ ಖರೀದಿಸಲು ಹೆಚ್ಚುವರಿಯಾಗಿ 10 ಕೇಂದ್ರಗಳನ್ನು ತೆರೆಯಬೇಕೆಂದು ರಾಜ್ಯ ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿ, ಎಪಿಎಂಸಿ, ಕೃಷಿ, ತೋಟಗಾರಿಕೆ, ಪೊಲೀಸ್, ನ್ಯಾಫೆಡ್, ಸಹಕಾರ ಮಾರಾಟ ಮಂಡಳಿ, ಕೃಷಿ ಮಾರಾಟ ಇಲಾಖೆ ಸೇರಿದಂತೆ ಮತ್ತಿತರ ಇಲಾಖಾಧಿಕಾರಿಗಳೊಂದಿಗೆ ಶನಿವಾರ  ಜರುಗಿದ ಕಾರ್ಯ ಪಡೆ(ಟಾಸ್ಕ್ ಫೋರ್ಸ್) ಸಭೆಯಲ್ಲಿ ಹೆಚ್ಚುವರಿ ಕೇಂದ್ರಗಳನ್ನು ತೆರೆಯುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 23 ಕೇಂದ್ರಗಳನ್ನು ತೆರೆಯುವ ಬಗ್ಗೆ ಫೆಬ್ರವರಿ 21ರಂದು ಜರುಗಿದ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಆದರೆ ಕೊಬ್ಬರಿ ಖರೀದಿಯಲ್ಲಿ ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರದೆಂಬ ದೃಷ್ಟಿಯಿಂದ ಹೆಚ್ಚುವರಿಯಾಗಿ 10 ಖರೀದಿ ಕೇಂದ್ರಗಳನ್ನು ತೆರೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಕೊಬ್ಬರಿ ಖರೀದಿಗಾಗಿ ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿ 1, ತಿಪಟೂರಿನಲ್ಲಿ 11, ತುರುವೇಕೆರೆಯಲ್ಲಿ 10, ಗುಬ್ಬಿ ತಾಲ್ಲೂಕಿನಲ್ಲಿ 4, ಕುಣಿಗಲ್ ಹಾಗೂ ಶಿರಾದಲ್ಲಿ ತಲಾ 1, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 5 ಸೇರಿದಂತೆ ಒಟ್ಟು 33 ಕೇಂದ್ರಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆಯಲ್ಲದೆ, ಎಲ್ಲಾ ಖರೀದಿ ಕೇಂದ್ರಗಳಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿಯ ಒಬ್ಬರು ಸಿಬ್ಬಂದಿ ಜೊತೆಗೆ ಗ್ರೇಡರ್ ಹಾಗೂ ನ್ಯಾಫೆಡ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‍ಎಕ್ಯೂ (ಫೇರ್ ಆವರೇಜ್ ಕ್ವಾಲಿಟಿ)ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಯನ್ನು ಪ್ರತಿ ಕ್ವಿಂಟಾಲ್‍ಗೆ ಕೇಂದ್ರ ಸರ್ಕಾರದ 12,000 ರೂ. ಹಾಗೂ ರಾಜ್ಯ ಸರ್ಕಾರದ 1,500 ರೂ. ಸೇರಿ ಒಟ್ಟು 13,500 ರೂ.ಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗಧಿಪಡಿಸಲಾಗಿದೆ.  ಕೇಂದ್ರ ಸರ್ಕಾರದ ಪರವಾಗಿ ನ್ಯಾಫೆಡ್ ಸಂಸ್ಥೆ ಹಾಗೂ ರಾಜ್ಯ ಸರ್ಕಾರದ ಪರವಾಗಿ ತುಮಕೂರು ಜಿಲ್ಲೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಖರೀದಿ ಸಂಸ್ಥೆಯನ್ನಾಗಿ ನೇಮಿಸಲಾಗಿದೆ.

ಕೊಬ್ಬರಿ ಖರೀದಿಗಾಗಿ ಈಗಾಗಲೇ ನೋಂದಣಿ ದಿನಾಂಕಗಳನ್ನು 2 ಬಾರಿ ಮುಂದೂಡಿ ಫೆಬ್ರವರಿ 5 ರಿಂದ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತಾದರೂ ನೋಂದಣಿ ಪ್ರಕ್ರಿಯೆಯಲ್ಲಿ ಲೋಪದೋಷ ಕಂಡು ಬಂದ ಕಾರಣ ಖರೀದಿಯನ್ನು ರದ್ದುಗೊಳಿಸಲಾಗಿತ್ತು.  ಇದರಿಂದ ತೊಂದರೆಗೊಳಗಾಗಿದ್ದ ರೈತರಿಗೆ ಅನುಕೂಲ ಮಾಡಿಕೊಡಲು ಮಾ.4ರಿಂದಲೇ ಖರೀದಿ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಖರೀದಿ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ  ಖರೀದಿ ಪ್ರಕ್ರಿಯೆಯನ್ನು ನಿಲ್ಲಿಸಬಾರದು.  ಅಗತ್ಯಕ್ಕೆ ತಕ್ಕಂತೆ ಪ್ರತಿ ದಿನ ಟೋಕನ್ ನೀಡಿ ರೈತರಿಂದ ಕೊಬ್ಬರಿ ಖರೀದಿ ಮಾಡಬೇಕು. ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಬಯೋಮೆಟ್ರಿಕ್ ಅನ್ನು ಅಳವಡಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಹಾಗೂ ಹಮಾಲರಿಂದ ಯಾವುದೇ ದೂರುಗಳು ಬಾರದಂತೆ ಕ್ರಮವಹಿಸಬೇಕು. ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಕೊಬ್ಬರಿಯನ್ನು ಕೇಂದ್ರ ಹಾಗೂ ರಾಜ್ಯ ಉಗ್ರಾಣಗಳಲ್ಲಿ ಸಂಗ್ರಹಣೆ ಮಾಡಬೇಕು ಎಂದು ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. 

ಖರೀದಿ ಕೇಂದ್ರಕ್ಕೆ ವಿದ್ಯುನ್ಮಾನ ತೂಕದ ಯಂತ್ರ, ಮೇಜು ಮತ್ತು ಖುರ್ಚಿಗಳನ್ನು ಹಾಗೂ ಖರೀದಿ ಕೇಂದ್ರದ ಸಿಬ್ಬಂದಿಗಳ ವಾಸ್ತವ್ಯಕ್ಕೆ ರೈತಭವನದಲ್ಲಿ ಉಚಿತ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಎಪಿಎಂಸಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. 

ಸರ್ಕಾರದ ಆದೇಶದಂತೆ 45 ದಿನಗಳವರೆಗೆ   ನೋಂದಣಿ ಪ್ರಕ್ರಿಯೆ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ನಡೆಸಲಾಗುವುದು.  ಖರೀದಿ ಪ್ರಕ್ರಿಯೆಯಲ್ಲಿ ಫ್ರೂಟ್ಸ್ ದತ್ತಾಂಶದಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಳ್ಳಲು ರೈತರು ಆಧಾರ್ ಕಾರ್ಡನ್ನು ಸಲ್ಲಿಸಬೇಕು.  ರೈತರಿಂದ ನೀಡಲ್ಪಡುವ ಓಟಿಪಿಯನ್ನು ಮೂಲ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಲಾಗುವುದು. ನಿಗಧಿಪಡಿಸಿದ ದಿನಾಂಕದಂದು ಎಫ್‍ಎಕ್ಯೂ ಗುಣಮಟ್ಟದ ಕೊಬ್ಬರಿಯನ್ನು ಮಾರಾಟಕ್ಕೆ ತರಬೇಕೆಂದು ರೈತರಲ್ಲಿ ಮನವಿ ಮಾಡಿದ್ದಾರೆ.

ಖರೀದಿಸಿದ ಕೊಬ್ಬರಿಯ ಪ್ರಾಥಮಿಕ ದಾಸ್ತಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ ತುಮಕೂರಿನ 2 ಶಿರಾ, ತುರುವೇಕೆರೆ, ತಿಪಟೂರು, ಕುಣಿಗಲ್ ತಾಲ್ಲೂಕಿನಲ್ಲಿ ತಲಾ 1ರಂತೆ ಒಟ್ಟು 6 ರಾಜ್ಯ ಉಗ್ರಾಣ ನಿಗಮ ಸೇರಿದಂತೆ ಪ್ರಸ್ತುತ ಖಾಲಿಯಿರುವ ಎಲ್ಲ ಗೋದಾಮು ಹಾಗೂ ಖಾಲಿಯಾಗಬಹುದಾದ ಗೋದಾಮುಗಳನ್ನೂ ಸಹ ಬೆಂಬಲ ಬೆಲೆ ಕೊಬ್ಬರಿ ದಾಸ್ತಾನಿಗೆ ಕಾಯ್ದಿರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ರೈತರಿದಂದ ಪ್ರತಿ ಎಕರೆಗೆ 6 ಕ್ವಿಂಟಾಲ್ ಹಾಗೂ ಗರಿಷ್ಠ 15 ಕ್ವಿಂಟಾಲ್ ಕೊಬ್ಬರಿಯನ್ನು ಖರೀದಿ ಮಾಡಲಾಗುವುದು.  ನೋಂದಣಿ ಮತ್ತು ಖರೀದಿಯಲ್ಲಿ ಯಾವುದೇ ಲೋಪದೋಷವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.  ನೋಂದಣಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ ಸಾಧ್ಯವಾಗದಿದ್ದಾಗ ರೈತರ ಕಣ್ಣಿನ ಸ್ಕ್ಯಾನ್ ಮೂಲಕ ನೋಂದಣಿ ಮಾಡಿಕೊಳ್ಳಲಾಗುವುದು.  ನೋಂದಣಿ ಸಂದರ್ಭದಲ್ಲಿ ಒಂದು ಉಪಕರಣಕ್ಕೆ ಒಂದೇ ಲಾಗಿನ್ ಐ.ಡಿ. ಪಾಸ್‍ವರ್ಡ್ ನೀಡಲು, ನೋಂದಣಿಯಲ್ಲಿ ಅವ್ಯವಹಾರ ನಡೆಯದಂತೆ ತಡೆಯಲು ಹೆಚ್ಚಿನ ಲಾಗಿನ್ ಐ.ಡಿ. ಮತ್ತು ಪಾಸ್‍ವರ್ಡ್‍ಗಳನ್ನು ಒಂದೇ ಉಪಕರಣ ಅಳವಡಿಸದಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *