ತುಮಕೂರು: ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ,ಒಂದು ಚುನಾವಣೆ ಎಂದಿಗೂ ಸಾಧ್ಯವಿಲ್ಲ.ಬಿಜೆಪಿ ಮತ್ತು ಆರ್.ಎಸ್.ಎಸ್. ಸೇರಿ ತಮಗೆ ಮತ ನೀಡಿದ ದಕ್ಷಿಣ ಭಾರತವನ್ನು ವಾಮ ಮಾರ್ಗದಿಂದ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳಲು ನಡೆಸುತ್ತಿರುವ ಹುನ್ನಾರ ಎಂದು ಮಾಜಿ ಅಡ್ವಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಹೇಳಿದರು.
ತುಮಕೂರಿನ ನೆಲಸಿರಿ ಸಾಂಸ್ಕøತಿಕ ವೇದಿಕೆ ವತಿಯಿಂದ ತುಮಕೂರು ವಿವಿ ಕಲಾ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಚಿಂತಕ ಜಿ.ಶ್ರೀನಿವಾಸಕುಮಾರ್ ನೆನಪಿನ ಸಂವಾದ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಭಾರತ ಸಂವಿಧಾನ ಮತ್ತು ಸಾಮಾಜಿಕ, ಅರ್ಥಿಕ, ರಾಜಕೀಯ ನ್ಯಾಯ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು,ಒಂದು ದೇಶ,ಒಂದು ಭಾಷೆ ವಿಫಲವಾದಂತೆ,ಒಂದು ರಾಷ್ಟ್ರ,ಒಂದು ಚುನಾವಣೆಯೂ ವಿಫಲವಾಗಲಿದೆ.ಹಾಗೆಯೇ ಸರಕಾರದ ಅಂಗಗಳಾದ ಕಾರ್ಯಾಂಗ ಮತ್ತು ನ್ಯಾಯಾಂಗ ಬೇರೆ ಬೇರೆ, ಆದರೆ ನ್ಯಾಯಾಂಗದ ಮುಖ್ಯಸ್ಥರಾದ ಜೆಸ್ಟೀಸ್ ಚಂದ್ರಚೂಡ ಅವರು ಗಣಪತಿ ಪ್ರತಿಷ್ಠಾಪನೆಗೆ ಪ್ರಧಾನಿಯವರನ್ನು ಬರಮಾಡಿಕೊಂಡು ಈ ದೇಶಕ್ಕೆ ಕೆಟ್ಟ ಸಂದೇಶ ನೀಡಿದ್ದಾರೆ.ಇದೊಂದು ಅಸಂವಿಧಾನಿಕ ಕ್ರಿಯೆ. ಎಲ್ಲರೂ ವಿದ್ಯಾವಂತರಾಗಿ,ಜಾತಿ ಮೀರಿ ಒಂದಾಗುವ ಮನಸ್ಸು ಮಾಡಿದಾಗ ಮಾತ್ರ ಜಾತಿ ವಿನಾಶ ಸಾಧ್ಯ ಎಂದು ಸಂವಾದದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಸಮಾನತೆಗೆ ಶಿಕ್ಷಣವೊಂದೇ ಸರಿಯಾದ ಮಾರ್ಗ ಎಂಬುದನ್ನು ಅರಿತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯ ವೇಳೆ ಎಲ್ಲಾ ವರ್ಗಗಳಿಗೂ ಶಿಕ್ಷಣ ದೊರೆಯುವಂತಹ ಕಲಂಗಳನ್ನು ಸೇರಿಸುವ ಮೂಲಕ ಸಾಮಾಜಿಕ, ಅರ್ಥಿಕ ಮತ್ತು ರಾಜಕೀಯ ನ್ಯಾಯ ದೊರಕಿಸುವತ್ತ ದಾಪುಗಾಲು ಇಟ್ಟಿದ್ದರು.
ಆದರೆ ಅಂಬೇಡ್ಕರ್ ಅವರ ಸಂವಿಧಾನದ ಆಶಯವನ್ನು ಸಮರ್ಪಕವಾಗಿ ಜಾರಿಗೆ ತರಲುವಲ್ಲಿ ಇದುವರೆಗೂ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ ಎಂದರು.
ಭಾರತದ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ,ಸಮಾನತೆ,ಸ್ವಾತಂತ್ರ ಮತ್ತು ಭಾತೃತ್ವದ ಅಂಶಗಳು ಸೇರಿರುವುದರ ಹಿಂದೆ ಪ್ರಂಚ್ ಕ್ರಾಂತಿಯ ಪ್ರಭಾವವಿದೆ.ಬಂಡವಾಳ ಶಾಹಿಗಳು, ಪುರೋಹಿತ ಶಾಹಿಗಳ ಸರ್ವಾಧಿಕಾರದ ವಿರುದ್ದ ದಂಗೆ ಎದ್ದ ಅಲ್ಲಿನ ಜನ ಶ್ರೀಮಂತರ ಎಲ್ಲಾ ಆಸ್ತಿಗಳನ್ನು ಮುಟ್ಟುಗೊಲು ಹಾಕಿ,ಸ್ವಾತಂತ್ರ,ಸಮಾನತೆ,ಭ್ರಾತೃತ್ವದ ಹೆಸರಿನಲ್ಲಿ ಎಲ್ಲಾ ವರ್ಗದ ಜನರಿಗೂ ತಲುಪುವಂತೆ ಮಾಡಲಾಗಿತ್ತು.ಬಹುಭಾಷೆ,ಜಾತಿ,ಧರ್ಮವನ್ನು ಹೊಂದಿರುವ ಭಾರತಕ್ಕೆ ಸಾಮಾಜಿಕ ನ್ಯಾಯ ಎಂಬ ಅಂಶವನ್ನು ಸೇರಿಸಿದರು.ಇದು ಅಂಬೇಡ್ಕರ್ ಅವರು 1913ರಲ್ಲಿ ಕೊಲಂಬಿಯಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿರುವ ಸಂದರ್ಭದಲ್ಲಿ ಸಂಗ್ರಹಿಸಿದ 2000 ಪುಸ್ತಕಗಳಲ್ಲಿ ಪ್ರೆಂಚ್ ಕ್ರಾಂತಿ ಕುರಿತ ಪುಸ್ತಕದಲ್ಲಿ ಅಡಕವಾಗಿ ರುವ ಅಂಶವಾಗಿದೆ.1913ರಲ್ಲಿ ಭಾರತದ ಶ್ರೇಣಿಕೃತ ವ್ಯವಸ್ಥೆ ವಿರುದ್ದ ಹೋರಾಡಲು ಅಂಬೇಡ್ಕರ್ ಸಿದ್ದತೆ ಮಾಡಿಕೊಂಡಿ ದ್ದರು ಎಂಬುದಕ್ಕೆ ದೊರೆತ ಸಾಕ್ಷವಾಗಿದೆ ಎಂದು ಪ್ರೊ.ರವಿವರ್ಮಕುಮಾರ್ ತಿಳಿಸಿದರು.
ಭಾರತದ ಶೇ57ರಷ್ಟು ಸಂಪತ್ತು ಶೇ10ರಷ್ಟು ಜನರ ಕೈಯಲಿದೆ.ಉಳಿದ ಶೇ43ರಷ್ಟು ಸಂಪತ್ತನ್ನು ಶೇ90ರಷ್ಟು ಜನರು ಕಷ್ಟಪಟ್ಟು ಗಳಿಸುವಂತಾಗಿದೆ.ಇತ್ತೀಚಿನ ವಿಶ್ವಸಂಸ್ಥೆಯ ವರದಿ ಪ್ರಕಾರ ಅತ್ಯಂತ ಕಡ ಬಡ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.ಇದರ ವಿರುದ್ದ ಭಾರತದ ಜನಸಾಮಾನ್ಯರು ಹೋರಾಡಲು ಮತದಾನ ಎಂಬ ಪ್ರಬಲ ಆಸ್ತ್ರವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ.ಆದರೆ ಇದರ ಸರಿಯಾದ ತಿಳುವಳಿಕೆ ಇಲ್ಲದೆ, ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಸಾಮಾನ್ಯ ಜನರು ಒಂದಾಗದೆ,ಬಡವರು ಮತ್ತು ಶ್ರೀಮಂತರ ನಡುವಿನ ಕಂದಕ ದೊಡ್ಡಾಗುತ್ತಿದೆ.ಇಂದಿರಾಗಾಂಧಿ ಅವರು 1972-1975ರ ಅಧಿಕಾರದ ಅವಧಿಯಲ್ಲಿ ವಿವಿಧ ಯೋಜನೆಗಳ ಮೂಲಕ ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನ ತಗ್ಗಿಸುವ ಪ್ರಯತ್ನ ನಡೆದಿದ್ದವು.ಆದರೆ ಮನಮೋಹನಸಿಂಗ್ ಹಾಗೂ ಆನಂತರದ ಕಾಲದಲ್ಲಿ ಬಡವ, ಬಲ್ಲಿದರ ನಡುವಿನ ಅಂತರ ಮತ್ತಷ್ಟು ದೊಡ್ಡದಾಗುತ್ತಾ ಸಾಗಿತು ಎಂದು ಹಲವು ಅಂಕಿ ಅಂಶಗಳ ಮೂಲಕ ವಿದ್ಯಾರ್ಥಿ ಗಳಿಗೆ ವಿವರಿಸಿದರು.
ಸರಕಾರಗಳು ಬಡವರಿಗಾಗಿ ಘೋಷಿಸುವ ಹಲವಾರು ಯೋಜನೆಗಳು ಅರ್ಥಿಕ ನ್ಯಾಯದ ಒಂದು ಭಾಗವೇ ಆಗಿವೆ. ಕರ್ನಾಟಕ ಸಿದ್ದರಾಮಯ್ಯ ಸರಕಾರ ಘೋಷಿಸಿರುವ ಐದು ಗ್ಯಾರಂಟಿಗಳು ಈ ಸಾಲಿಗೆ ಸೇರುತ್ತವೆ.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ರಾಜಕೀಯ ನ್ಯಾಯದ ಭಾಗವಾಗಿವೆ.ಆದರೆ ಇವುಗಳನ್ನು ಅರ್ಥ ಮಾಡಿಕೊಂಡು ಮುನ್ನೆಡೆದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ.ಮಹಿಳೆಯರಿಗೆ ಸಂಸತ್ತಿನಲ್ಲಿ ಶೇ33ರ ಮೀಸಲಾತಿ ಎಂಬುದು ಕೇವಲ ಚುನಾವಣಾ ತಂತ್ರವಾಗಿದೆ.ಜನಸಂಖ್ಯಾ ಗಣತಿಯಾಗದೆ, ಕ್ಷೇತ್ರಗಳ ಪುನರವಿಂಗಡೆನೆ ಆಗುವವರೆಗೂ ಮಹಿಳಾ ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು ಎಂದು ಪ್ರೊ.ರವಿವರ್ಮಕುಮಾರ್ ಪ್ರತಿಪಾದಿಸಿದರು.
ಇದೇ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಮಧುಸೂಧನ್ ಆರ್.,sಸÀಮೀನ ಬಾನು,ಅನುಷ ಜಿ. ಮತ್ತು ಮಮತ ಹೆಚ್.ಜಿ. ಅವರುಗಳಿಗೆ,ಪದವಿಪೂರ್ವ ವಿಭಾಗದಲ್ಲಿ ಕರಿಯಣ್ಣ, ಸೋಮರೆಡ್ಡಿ, ಕಾವ್ಯ.ಡಿ.ಕೆ, ಅಪೇಕ್ಷ ವಿ.ಎನ್.ಅವರುಗಳಿಗೆ ಪ್ರಥಮ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಕರಿಯಣ್ಣ ವಹಿಸಿದ್ದರು. ನೆಲಸಿರಿ ಸಾಂಸ್ಕøತಿಕ ವೇದಿಕೆಯ ನಟರಾಜಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಜಿ.ಶ್ರೀನಿವಾಸಕುಮಾರ್ ಅವರ ಬದುಕು ಕುರಿತು ವಿವರಿಸಿದರು.
ವೇದಿಕೆಯಲ್ಲಿ ಉದ್ಯಮಿ ಡಿ.ಟಿ.ವೆಂಕಟೇಶ್, ವಕೀಲರಾದ ಹೆಚ್.ವಿ.ಮಂಜುನಾಥ್,ಹಿರಿಯ ಚಿಂತಕ ಕೆ,ದೊರೆರಾಜು, ಡಾ.ಬಸವರಾಜು, ನೆಲಸಿರಿ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಗಂಗಾಧರ ಬೀಚನಹಳ್ಳಿ, ಕಾರ್ಯದರ್ಶಿ ಮಲ್ಲಿಕಾ ಬಸವರಾಜು ಹಾಗೂ ಕಲಾ ಕಾಲೇಜಿನ ಉಪನ್ಯಾಸಕರುಗಳು ಉಪಸ್ಥಿತರಿದ್ದರು.