ತುಮಕೂರು: ಕಾಶ್ಮೀರದ ಪೆಹಲ್ಗಾಮ್ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರನ್ನು ಹತ್ಯೆ ಮಾಡಿ, ಭಾರತದ ಭದ್ರತೆಗೆ ಸವಾಲು ಹಾಕಿದ ಕೃತ್ಯಕ್ಕೆ ಪ್ರತೀಕಾರವಾಗಿ ನಡೆದ ಕಾರ್ಯಾಚರಣೆಯ ಯಶಸ್ಸಿನ ‘ಆಪರೇಷನ್ ಸಿಂಧೂರ ವಿಜಯೋತ್ಸವ’ವನ್ನು ಆಗಸ್ಟ್ 30ರಂದು ನಗರದಲ್ಲಿ ಆಚರಿಸಲಾಗುತ್ತದೆ ಎಂದು ಆಚರಣೆ ಸಮಿತಿ ಅಧ್ಯಕ್ಷರೂ ಆದ ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ಕಾರ್ಯಕ್ರಮ ಹಮ್ಮಿಕೊಂಡಿರುವ ನಗರದ ಸರ್ಕಾರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮೊದಲಬಾರಿಗೆ ಆಪರೇಷನ್ ಸಿಂಧೂರ ವಿಜಯೋತ್ಸವ ಆಚರಿಸಲಾಗುತ್ತಿದೆ. ಇದು ರಾಷ್ಟ್ರದ ಗೌರವ, ಶೌರ್ಯ ಮತ್ತು ಅಚಲ ಬದ್ಧತೆಯ ಸಂಕೇತವಾಗಿದೆ ಎಂದರು.
ವಿದ್ಯಾರ್ಥಿ, ಯುವಜನರಿಗೆ ದೇಶದ ರಕ್ಷಣಾ ಸಂಸ್ಥೆಯ ಕಾರ್ಯತಂತ್ರ ತಿಳಿಸಿ ಅವರಲ್ಲಿ ದೇಶದ ಭದ್ರತೆ, ದೇಶಪ್ರಮದ ಬಗ್ಗೆ ಜಾಗೃತಗೊಳಿಸುವ ಉದ್ದೇಶವಾಗಿದೆ. ಜಿಲ್ಲೆಯ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು, ಸಾರ್ವಜನಿಕರೂ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ಗೌಡರು ಮಾತನಾಡಿ, ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಒಂದು ಸೇನಾ ಕಾರ್ಯಚರಣೆ ಮಾತ್ರವಲ್ಲದೆ, ನಮ್ಮ ದೇಶ ಎಷ್ಟು ಬಲಿಷ್ಠವಾಗಿದೆ ಮತ್ತು ಕೆಲವೇ ಗಂಟೆಗಳಲ್ಲಿ ವೈರಿ ರಾಷ್ಟ್ರದ ಮಗ್ಗುಲು ಮುರಿದು ಶರಣಾಗತಿ ಆಗುವಂತೆ ಮಾಡಬಲ್ಲ ಸಾಮಥ್ರ್ಯ ನಮ್ಮ ದೇಶಕ್ಕಿದೆ ಎಂಬುದನ್ನು ತೋರಿಸಿಕೊಟ್ಟ ಕಾರ್ಯಾಚರಣೆಯಾಗಿದೆ. ದೇಶದ ಗಡಿ ಕಾಯುವ ಸೈನಿಕರಿಗೆ ಗೌರವ ಸಲ್ಲಿಸಲು ಹಾಗೂ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪೆಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ ಭಯೋತ್ಪಾದಕರು ಧರ್ಮ ಕೇಳಿ, ಕಲ್ಮಾ ಪಠಿಸಲು ಹೇಳಿ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಅವರ ಕುಟುಂಬದವರ ಎದುರೇ ಗುಂಡಿಕ್ಕಿ ಹತ್ಯೆ ಮಾಡಿದ ಕೃತ್ಯವನ್ನು ಯಾವ ಭಾರತೀಯನಿಗೂ ಸಹಿಸಿಕೊಳ್ಳಲಾಗುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ಕೋರಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಕಾರ್ಯಕ್ರಮವೂ ಇದಾಗಿದೆ. ಇಂತಹ ದುರ್ಘಟನೆಗಳು ಮರುಕಳಿಸಬಾರದು. ಅದಕ್ಕಾಗಿ ಎಷ್ಟೇ ಮುಂಜಾಗೃತೆ ವಹಿಸಿದರೂ ಸಾಲದು. ಭಾರತೀಯರು ದೇಶದ ಭದ್ರತೆಯ ವಿಚಾರದಲ್ಲಿ ಒಟ್ಟಾಗಿ ಇರಬೇಕು. ನಮ್ಮ ಸಶಸ್ತ್ರಪಡೆಗಳ ಬೆಂಬಲಕ್ಕೆ ನಿಲ್ಲಬೇಕು ಎಂದು ಸುರೇಶ್ಗೌಡರು ಹೇಳಿದರು.
30ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ದಿವ್ಯ ಸಾನಿಧ್ಯವಹಿಸುವರು. ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್.ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು.
ಸಚಿವರುಗಳಾದ ಹೆಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಡಾ.ಜಿ.ಪರಮೇಶ್ವರ್, ಸಂಸದರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಮಂಜುನಾಥ್, ಶಾಸಕರಾದ ಕೆ.ಎನ್.ರಾಜಣ್ಣ, ಸುರೇಶ್ಗೌಡ, ಎಂ.ಟಿ.ಕೃಷ್ಣಪ್ಪ, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಅಲ್ಲದೆ ಜಿಲ್ಲೆಯ ಶಾಸಕರು, ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಅಜಿತ್ ಹನುಮಕ್ಕನವರ್, ರಂಗನಾಥ ಭಾರಧ್ವಜ್ ಭಾಷಣಕಾರರಾಗಿ ಆಗಮಿಸುವರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಮಾಜಿ ನಿರ್ದೇಶಕ ಡಾ.ಪ್ರಹ್ಲಾದ್ ರಾಮ್ರಾವ್, ಇಸ್ರೋ ಮಾಜಿ ಅಧ್ಯಕ್ಷರಾದ ಡಾ.ಎ.ಎಸ್.ಕಿರಣ್ಕುಮಾರ್, ಡಾ.ಎಸ್.ಸೋಮನಾಥ್ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯ ಸಾಧಕರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಗುತ್ತದೆ.
ಮುಖಂಡರಾದ ಆಶಾ ಪ್ರಸನ್ನಕುಮಾರ್, ಡಾ.ಎಸ್.ಪರಮೇಶ್, ಪ್ರಭಾಕರ್, ಸಂಪಿಗೆ ಜಗದೀಶ್, ಎಂ.ಬಿ.ನಂದೀಶ್, ಜಿ.ಎಸ್.ಶಿವಕುಮಾರ್, ಧನಿಯಾಕುಮಾರ್, ರಂಗಾನಾಯ್ಕ, ಗೂಕುಲ ಮಂಜುನಾಥ್, ಡೆಲ್ಟಾ ರವಿ, ಶ್ರೀಧರಮೂರ್ತಿ, ಮಾಜಿ ಸೈನಿಕರ ಸಂಘದ ಕಾರ್ಯಾಧ್ಯಕ್ಷ ವಿ.ಡಿ.ನಾಗರಾಜು, ಪಿ.ರವಿಶಂಕರ್, ಕೆ.ಪಿ.ಮಹೇಶ್, ಬಾವಿಕಟ್ಟೆ ಗಣೇಶ್ ಮೊದಲಾದವರು ಭಾಗವಹಿಸಿದ್ದರು.