ತುಮಕೂರು: ಪಹಲ್ಗಾಮ್ ಉಗ್ರರ ದಾಳಿಗರ ಪ್ರತಿಕಾರವಾಗಿ ಆಪರೇಷನ್ ಸಿಂಧೂರ ಯಶಸ್ವಿಯಾಗಿ ನಡೆಸಿ,ಪಾಕಿಸ್ತಾನದ ಉಗ್ರರನ್ನು ಮತ್ತು ಉಗ್ರರ ನೆಲೆಗಳನ್ನು ನಾಶಪಡಿಸಿ ಮತ್ತು ಪಾಕಿಸ್ಥಾನದ ಸೈನಿಕರನ್ನು ಸಹ ಹಿಮ್ಮೆಟ್ಟಿಸಿದ್ದಕ್ಕೆ ಭಾರತೀಯ ಸೇನೆಗೆ ಅಭಿನಂದನೆ ಸಲ್ಲಿಸುವುದಾಗಿ ಅಮ್ ಆದ್ಮಿ ಪಾರ್ಟಿಯ ತುಮಕೂರು ಜಿಲ್ಲಾಧ್ಯಕ್ಷ ಜಯರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಅಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸೇನೆ ಉಗ್ರರ ನೆಲೆಗಳನ್ನು ದ್ವಂಸಗೊಳಿಸುವ ಮೂಲಕ ಪ್ರತ್ಯುತ್ತರ ನೀಡಿ ಉಗ್ರರ ದಾಳಿಯಲ್ಲಿ ಮಡಿದ ಜನರ ಆತ್ಮಕ್ಕೆ ಶಾಂತಿ ದೊರಕಿಸಿದೆ.ಅಲ್ಲದೆ ಈ ಘಟನೆ ಉಗ್ರವಾದವನ್ನು ಬೆಂಬಲಿಸುವ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಿದೆ ಎಂದರು.
ನಮ್ಮ ನೆರೆ ರಾಷ್ಟ್ರ ಪಾಕಿಸ್ಥಾನವು ಸದಾ ಕುತಂತ್ರ ಬುದ್ಧಿಯನ್ನು ಅನುಸರಿಸುತ್ತಾ ಬಂದಿದೆ. ಸಾಮಾಜಿಕ ನ್ಯಾಯದ ಚೌಕಟ್ಟಿನಲ್ಲಿ ದೇಶದ ಆಡಳಿತವನ್ನು ನಡೆಸದೆ,ಉಗ್ರವಾದ ಮತ್ತು ಅರಾಜಕತೆಯ ಮೂಲಕ ಜನರ ಜೀವನದ ಜೊತೆ ಆಟವಾಡುತ್ತಾ ಕಾಲಹರಣ ಮಾಡುತ್ತಿದೆ.ಇದು ಸಲ್ಲದು,ಭಾರತದ ಮೃದುತ್ವನ್ನು ಬಂಡವಾಳವನ್ನಾಗಿಸಿಕೊಳ್ಳಲು ಹೊರಟ ಪಾಕಿಸ್ಥಾನ ಮತ್ತು ಪಾಕಿಸ್ಥಾನದ ಉಗ್ರರಿಗೆ ಭಾರತದ ಮತ್ತು ಭಾರತದ ಸೈನಿಕರು ಭಾರತದ ಮೃದುತ್ವದ ಉಗ್ರ ರೂಪವನ್ನು ತೋರಿಸಿಕೊಟ್ಟಿದ್ದಾರೆ ಎಂದು ಜಯರಾಮಯ್ಯ ತಿಳಿಸಿದರು.
ನಮ್ಮ ದೇಶದ ಮೂರು ಪ್ರಮುಖ ಶಕ್ತಿಗಳಾದ ರೈತರು,ಸೈನಿಕರು ಮತ್ತು ಶ್ರಮಿಕ ವರ್ಗ ಸೇರಿದಂತೆ ಎಲ್ಲಾ ಕಾರ್ಮಿಕರು ದೇಶದ ಬೆನ್ನೆಲುಬುಗಳು.ಸೈನಿಕರು ದೇಶದ ಗಡಿ ಕಾಯ್ದರೆ,ರೈತರ ಅನ್ನ ಬೆಳೆದು ನೀಡಿ ದೇಶವನ್ನು ಸಂರಕ್ಷಿಸುತ್ತಾರೆ.ಹಾಗೆಯೇ ಕಾರ್ಮಿಕರು ದುಡಿಯುವ ಮೂಲಕ ದೇಶದ ಅರ್ಥಿಕ ಬೆಳವಣಿಗೆಗೆ ಕಾರಣರಾಗಿದ್ದಾರೆ. ಹಾಗಾಗಿ ಈ ಮೂರು ವರ್ಗಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ನೀಡಬೇಕೆಂದು ಆಮ್ ಆದ್ಮ ಪಾರ್ಟಿಯ ಒತ್ತಾಯವಾಗಿದೆ ಎಂದು ತುಮಕೂರು ಜಿಲ್ಲಾಧ್ಯಕ್ಷರಾದ ಹೆಚ್.ಎ.ಜಯರಾಮಯ್ಯ ತಿಳಿಸಿದರು.
ಪೆಹಲ್ಗಾಮ್ ಗ್ರಾಮದಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಕುರಿತು ಹಲವು ಪ್ರಶ್ನೆಗಳಿದ್ದರೂ ಅವುಗಳನ್ನು ಕೇಳಲು ಇದು ಸುಸಮಯವಲ್ಲ.ಈಗ ಒಗ್ಗಟ್ಟು ಮುಖ್ಯ.ಜೊತೆಗೆ ಸೈನಿಕರಿಗೆ ನೈತಿಕ ಬೆಂಬಲ ನೀಡುವ ಅಗತ್ಯವಿದೆ. ಹಾಗಾಗಿ ಭಾರತೀಯ ಸೈನಿಕರ ಧೈರ್ಯ ಮತ್ತು ಸಾಹಸವನ್ನು ಅಮ್ಆದ್ಮಿ ಪಕ್ಷ ಸದಾ ಸ್ಮರಿಸುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎನ್ ರಾಮಾಂಜನಪ್ಪ, ರೈತ ಘಟಕದ ಬಿ.ಆರ್ ಯೋಗೇಶ್ ಕರಿಗೌಡ, ಮಾಧ್ಯಮ ಉಸ್ತುವಾರಿಗಳಾದ ಪ್ರಭುಸ್ವಾಮಿ,ಮುಂಖಂಡರುಗಳಾದ ಪ್ರಕಾಶ್,ತಿಮ್ಮಪ್ಪ,ಹೆಚ್.ಬಿ.ಶಿವಲಿಂಗಯ್ಯ, ನಾಗಭೂಷಣ್, ಕೆಂಪನಹಳ್ಳಿ ಕುಮಾರ್, ಬಸವರಾಜು, ಚರಣ್ ಮತ್ತಿತರರು ಉಪಸ್ಥಿತರಿದ್ದರು.