ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರಕಾರʼ- ಪುನರ್‌ ಪರಿಶೀಲನೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಒತ್ತಾಯ

ಪಾಂಡವಪುರ : ರಾಜ್ಯ ಸರಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ ಹಾಗೂ ಸೇಡಿನ ಮನೋಭಾವ ಒಳಗೊಂಡ ನೀತಿಯಾಗಿದ್ದು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಪಾಲಿಗೆ ಮರಣ ಶಾಸನವಾಗಿದೆ. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಅಭಿಪ್ರಾಯಪಟ್ಟಿದೆ.


ಈ ಸಂಬಂಧ ಮಾರ್ಚ್ 22ರಂದು ಪತ್ರಕರ್ತರ ಭವನದಲ್ಲಿ ಸಂಘದ ಅಧ್ಯಕ್ಷ ಕೆ.ದೀಪಕ್‌ ನೇತೃತ್ವದಲ್ಲಿ ನಡೆದ ಪತ್ರಿಕಾ ಸಂಪಾದಕರ ಸಭೆಯಲ್ಲಿ ರಾಜ್ಯ ಸರಕಾರವು ʻಕರ್ನಾಟಕ ಜಾಹೀರಾತು ನೀತಿʼಯನ್ನು ಜಾರಿಗೆ ತರಲು ಮುಂದಾಗುವ ಮೂಲಕ ಸಂಕಷ್ಟದಲ್ಲಿರುವ ಪತ್ರಿಕೆಗಳನ್ನು ಮೇಲೆತ್ತುವ ಬದಲು ಕುತ್ತಿಗೆ ಹಿಸುಕಿ ಕೊಲ್ಲಲು ಸಂಚು ರೂಪಿಸಿದೆ ಎಂಬ ಅನಿಸಿಕೆ ಸಭೆಯಲ್ಲಿ ಪತ್ರಿಕಾ ಸಂಪಾದಕರು ಕಳವಳ ವ್ಯಕ್ತಪಡಿಸಿದರು.


ಸಾಮಾನ್ಯ ವರ್ಗದ ಪತ್ರಿಕೆಗಳು ಮಾಧ್ಯಮ ಪಟ್ಟಿಗೆ ಸೇರಲು 2 ವರ್ಷದಿಂದ 3 ವರ್ಷಕ್ಕೆ ಪ್ರಕಟಣಾ ಅವಧಿಯನ್ನು ವಿಸ್ತರಿಸಿರುವುದು ಹಾಗೂ ಪರಿಶಿಷ್ಟ ಜಾತಿ, ವರ್ಗ, ವಿಶೇಷ ಸ್ಥಾನಮಾನ ಹೊಂದಿರುವ ಜಿಲ್ಲೆಗಳ ಪತ್ರಿಕೆಗಳು ಹಾಗೂ ಪ್ರಾದೇಶಿಕ ಭಾಷಾ ಪತ್ರಿಕೆಗಳಿಗೆ ಇದ್ದ 1 ವರ್ಷದ ಪ್ರಸಾರಣ ಅವಧಿಯನ್ನು 2 ವರ್ಷಕ್ಕೆ ವಿಸ್ತರಿಸಿರುವುದು ಹೊಸ ಪತ್ರಿಕೆಗಳ ಆರಂಭಕ್ಕೆ ಕಡಿವಾಣ ಹಾಕುವ ಹುನ್ನಾರವಾಗಿದೆ.
ಸದ್ಯ ಮಾನ್ಯತಾ ಪಟ್ಟಿಯಲ್ಲಿರುವ ಪತ್ರಿಕೆಗಳ ಮಾನ್ಯತೆಯನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಮಾಧ್ಯಮ ಪರಿಶೀಲನಾ ಸಮಿತಿಯಿಂದ ಪುನರ್‌ ಪರಾಮರ್ಶಿಸುವುದು, ಪ್ರಾದೇಶಿಕ ಪತ್ರಿಕೆಗಳು ಸ್ವಂತ ಕಛೇರಿ ಮತ್ತು ಮುದ್ರಣಾ ಘಟಕ ಹೊಂದಿರಬೇಕು ಹಾಗೂ ಕನಿಷ್ಠ 15 ಜನ ಖಾಯಂ ನೌಕರರರನ್ನು ಹೊಂದಿರಬೇಕು ಹಾಗೂ ಕನಿಷ್ಠ 6 ಜಿಲ್ಲೆಗಳಲ್ಲಿ 25,000 ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಹೊಂದಿರಬೇಕು ಎಂದು ಷರತ್ತು ಹಾಕಲಾಗಿದೆ. ಪ್ರಾದೇಶಿಕ ಪತ್ರಿಕೆ ನಡೆಸುತ್ತಿರುವ ಎಲ್ಲರೂ ಪ್ರತ್ಯೇಕ ಮುದ್ರಣ ಘಟಕ ಸ್ಥಾಪಿಸಲು ಸಾಧ್ಯವೆ ? ಎಂದು ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.


ಪತ್ರಿಕೆ ಟೈಟಲ್‌ ವರ್ಗಾವಣೆ ರದ್ದು: ಪತ್ರಿಕೆಯ ಟೈಟಲ್‌ ವರ್ಗಾವಣೆಯನ್ನು ಕೇವಲ ಕುಟುಂಬಕ್ಕೆ ಸೀಮಿತಗೊಳಿಸುವುದು ಒಂದು ಪತ್ರಿಕೆಯ ಪರಂಪರೆ ಮುಂದುವರೆಕೆಗೆ ಧಕ್ಕೆಯಾಗಲಿದೆ. ಸಂಪಾದಕ ಸತ್ತರೂ ಪತ್ರಿಕೆಗಳು ಸಾಯಬಾರದು. ಪತ್ರಿಕೆಗಳ ಟೈಟಲ್‌ ವರ್ಗಾವಣೆ ಮಾಡಿದರೆ ಮಾನ್ಯತಾ ಪಟ್ಟಿಯಿಂದ ಕೈಬಿಡುವ ಕ್ರಮವೂ ಸಹ ಪತ್ರಿಕೆ ಮಾಲೀಕನ ಹಕ್ಕುಗಳನ್ನು ಕಸಿದುಕೊಳ್ಳುವಂತ್ತಾಗಲಿದೆ. ಹಾಗೂ ಪತ್ರಿಕೆಗಳು ದೀರ್ಘಕಾಲ ಮುದ್ರಣಗೊಳ್ಳಲು ತೊಡಕಾಗಲಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಜಾಹೀರಾತು ದರ ಪರಿಷ್ಕರಣೆ ವಿಷಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2013 ಅನ್ವಯ ಶೇ. 12ರಷ್ಟು ಜಾಹಿರಾತು ದರವನ್ನು 2 ವರ್ಷಕ್ಕೊಮ್ಮೆ ಪರಿಷ್ಕರಿಸಬೇಕಿತ್ತು. ಅದರೆ, ಕಳೆದ ಐದು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ. ಈನಡುವೆ, ಪರಿಶಿಷ್ಟ ಜಾತಿ ಮತ್ತು ವರ್ಗದವರ ಮಾಲಿಕತ್ವದ ಪತ್ರಿಕೆಗಳಿಗೆ ಜಾಹಿರಾತು ಹಣವನ್ನು ಎಸ್.ಸಿ.ಎಸ್.ಪಿ/ಟಿ.ಎಸ್‌.ಪಿಗೆ ಅನುದಾನದ ವ್ಯಾಪ್ತಿಗೆ ಒಳಪಡಿಸಿ ವಾರ್ತಾ ಇಲಾಖೆಯಿಂದ ಬೇರ್ಪಡಿಸಿ, ಈ ಸಮುದಾಯಗಳ ಪತ್ರಿಕೆಗಳನ್ನು ಮುಖ್ಯವಾಹಿನಿಯಿಂದ ದೂರವಿಡುವ ಷಡ್ಯಂತರ ನಡೆದಿದೆ ಎಂದು ದೂರಲಾಯಿತು.


ಸಿಎಂ ಬಳಿಗೆ ನಿಯೋಗ:
ಕರ್ನಾಟಕ ಹೊಸ ಜಾಹಿರಾತು ನೀತಿಯ ನ್ಯೂನ್ಯತೆಗಳ ವಿರುದ್ಧ ರಾಜ್ಯ ಮಟ್ಟದಲ್ಲಿ ಎಲ್ಲ ಪತ್ರಿಕಾ ಸಂಪಾದಕರ ಸಭೆಯನ್ನು ಮಾರ್ಚ್‌ 24ರಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಸಭೆಯ ನಂತರ ಮೈಸೂರು ಜಿಲ್ಲಾ ಪತ್ರಕರ್ತರ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹೊಸ ಜಾಹೀರಾತು ನೀತಿಯಿಂದ ಉಂಟಾಗಿರುವ ಪರಿಣಾಮಗಳನ್ನು ಗಮನಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು. ಹಾಗೂ ಸರಕಾರ ಪತ್ರಿಕಾ ಸಂಪಾದಕರ ಸಂಘಗಳು, ಪತ್ರಕರ್ತರ ಸಂಘಗಳು ಒಳಗೊಂಡ ಸಮಿತಿಯ ಮೂಲಕ ಹೊಸ ನೀತಿಯನ್ನು ಪುನರ್‌ ಪರಿಶೀಲಿಸಬೇಕೆಂದು ಆಗ್ರಹಿಸಲಾಯಿತು.

ಸಭೆಯಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್‌, ಪ್ರತಿನಿಧಿ ಪತ್ರಿಕೆಯ ಪ್ರಕಾಶಕರಾದ ಶ್ರೀಹರಿ ದ್ವಾರಕನಾಥ್‌, ಸಂಪಾದಕರಾದ ಸಿ.ಕೆ.ಮಹೇಂದ್ರ, ರಾಜ್ಯಧರ್ಮ ಪತ್ರಿಕೆ ಸಂಪಾದಕಿ ಎಸ್.ಕವಿತಾ, ಪ್ರಜಾನುಡಿ ಪತ್ರಿಕೆಯ ಸಂಪಾದಕ ಸ್ವರೂಪ್‌, ವರ್ತಮಾನ ಪತ್ರಿಕೆಯ ಸಂಪಾದಕ ಕೆ.ಎನ್.ರವಿ, ಮೈಸೂರು ಪತ್ರಿಕೆಯ ಸಂಪಾದಕ ಮೋಹನ್‌, ನಗರ ಬೆಳಕು ಪತ್ರಿಕೆ ಸುವರ್ಣ, ಮಲ್ಲಿಗೆ ಮಾಚಮ್ಮ, ಸಾಧ್ವಿ ಪತ್ರಿಕೆ ಸಂಪಾದಕ ಬಿ.ರಾಘವೇಂದ್ರ, ನಿಜದನಿ ಪತ್ರಿಕೆಯ ಸಂಪಾದಕ ಸುನಿಲ್‌, ನನ್ನೂರು ಮೈಸೂರು ಪತ್ರಿಕೆ ಎನ್.‌ ಸುರೇಶ್‌, ಲೋಕಹಿತ ಪತ್ರಿಕೆಯ ಸಂಪಾದಕ ಲೋಹಿತ್‌, ಪ್ರಬುದ್ಧ ಮಿತ್ರ ಪತ್ರಿಕೆಯ ರಾಘವೇಂದ್ರಸ್ವಾಮಿ, ಪ್ರಬುದ್ಧ ವಿಜಯ ಪತ್ರಿಕೆ ಸಂಪಾದಕ ಕಿಶೋರ್‌ ನಾಗ್ ಹಾಗೂ ಅನೇಕ ಪತ್ರಿಕೆಗಳ ಪ್ರತಿನಿಧಿಗಳು, ಸಂಘದ ಪದಾಧಿಕಾರಿಗಳಾದ ದಾರಾ ಮಹೇಶ್‌, ನಿರ್ದೇಶಕರಾದ ಸೋಮಶೇಖರ್‌, ಹನಗೋಡು ನಟರಾಜ್‌ ಮತ್ತಿತರರು ಹಾಜರಿದ್ದರು.

ಕೋಟ್ಸ್…

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವವಾದಿಗಳು. ಪ್ರಜಾಪ್ರಭುತ್ವ ಉಳಿವಿನಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು ಎಂದು ಸದಾ ಹೇಳುವವರು. ಆದರೆ, ಕರ್ನಾಟಕ ಜಾಹೀರಾತು ನೀತಿ-2026 ಮೂಲಕ ಅನವಶ್ಯಕ ಷರತ್ತುಗಳನ್ನು ವಿಧಿಸಿ ಪತ್ರಿಕೆಗಳ ಕುತ್ತಿಗೆ ಹಿಸುಕುವ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಒಬ್ಬ ಕಳ್ಳನನ್ನು ತಡೆಯಲು ವಿಶ್ವಾಸರ್ಹತೆ ಉಳಿಸಿಕೊಂಡಿರುವ ಇಡೀ ಪತ್ರಿಕಾ ಸಮ್ಮೂಹಕ್ಕೆ ಕೋಳ ತೊಡಿಸಲು ಸರಕಾರ ಮುಂದಾಗಿದೆ. ವಾರ್ತಾ ಇಲಾಖೆಯು ಪೂರ್ವಾಗ್ರಹ ಮನಸ್ಥಿತಿಯಿಂದ ಹೊರ ಬಂದು ಹೊಸ ಜಾಹಿರಾತು ನೀತಿಯನ್ನು ಎಲ್ಲರ ಸಲಹೆ ಪಡೆದು ಪುನರ್‌ ಪರಿಶೀಲಿಸಬೇಕು. ಪತ್ರಿಕೆಗಳು ನಾಶವಾದರೆ ಪ್ರಜಾಪ್ರಭುತ್ವವೂ ನಾಶವಾಗಲಿದೆ ಎಂಬ ಅರಿವು ಸರಕಾರಕ್ಕೆ ಇರಬೇಕು.

Leave a Reply

Your email address will not be published. Required fields are marked *