ಕನ್ನಡಪರ ಹೋರಾಟಕ್ಕಾಗಿ ಎಂದು ಹೋರಾಟಗಾರರ ಮೇಲೆ ಪೊಲೀಸರು ದೂರು ದಾಖಲಿಸಿಲ್ಲ : ಡಾ.ಪುರುಷೋತ್ತಮ ಬಿಳಿಮಲೆ

ತುಮಕೂರು : ಕನ್ನಡಪರ ಸಂಘಟನೆಗಳ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣಗಳಲ್ಲಿ ಯಾವುದೇ ದೂರು ಕನ್ನಡ ಪರ ಹೋರಾಟಕ್ಕಾಗಿ ನಡೆಸಿದ್ದಕ್ಕಾಗಿ ಎಂದು ಪೊಲೀಸರು ದೂರು ದಾಖಲಿಸಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದರು.

ಶುಕ್ರವಾರ ತುಮಕೂರು ಜಿಲ್ಲಾ ಪ್ರವಾಸದಲ್ಲಿದ್ದ ಅವರು ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನೆ ಸಭೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅನುಷ್ಠಾನ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಈ ವಿಷಯ ತಿಳಿಸಿದರು.

ಕನ್ನಡಪರ ಹೋರಾಟಗಾರರ ಮೇಲೆ ಸಾರ್ವಜನಿಕ ಆಸ್ತಿಗೆ ನಷ್ಟ, ಕಾನೂನನ್ನು ಕೈಗೆತ್ತಿಕೊಳ್ಳುವ, ಸಾರ್ವಜನಿಕ ಕೆಲಸಗಳಿಗೆ ಅಡ್ಡಿ ಎಂದು ದೂರುಗಳು ದಾಖಲಾಗಿವೆಯೇ ಹೊರತು, ಕನ್ನಡಪರ ಹೋರಾಟಕ್ಕಾಗಿ ದೂರನ್ನು ಪೊಲೀಸರು ದಾಖಲಿಸಿಲ್ಲ, ಇದರಿಂದ ಅವರ ದೂರುಗಳನ್ನು ವಾಪಸ್ಸು ಪಡೆಯಲು ಸಾಧ್ಯವೆ ಎಂಬುದು ಸರ್ಕಾರ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗೆ ಮುನ್ನ ವಿವಿಧ ಕನ್ನಡಪರ ಸಂಘಟನೆಗಳ ಸಭೆ ನಡೆಸಲಾಗಿದ್ದು, ಕನ್ನಡಪರ ಹೋರಾಟಗಾರರು ಹಲವಾರು ಆರೋಪಗಳನ್ನು ಜಿಲ್ಲಾಡಳಿತದ ಮೇಲೆ ಮಾಡಿದ್ದಾರೆ. ಈ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸಿದ್ದು, ಕನ್ನಡಪರ ಹೋರಾಟಗಳ ಸಂದರ್ಭದಲ್ಲಿ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುವ ಸಂಬಂಧ ಪ್ರಾಧಿಕಾರಕ್ಕೆ ಪ್ರಕರಣಗಳ ಪಟ್ಟಿ ನೀಡುವಂತೆ ಕೋರಲಾಗಿದೆ. ಕನ್ನಡಪರ ಹೋರಾಟಗಾರರಿಗೆ ಸಭೆ ನಡೆಸಲು ಕಾನೂನು ವ್ಯಾಪ್ತಿಯಲ್ಲಿ ಪ್ರವಾಸಿ ಮಂದಿರಗಳಲ್ಲಿ ಅವಕಾಶ ನೀಡಲು ತಿಳಿಸಲಾಗಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆ ಉಳಿದರೆ ಕನ್ನಡವೂ ಉಳಿಯುತ್ತದೆ ಎಂಬ ಮಾತಿನಲ್ಲಿ ಪ್ರಾಧಿಕಾರ ವಿಶ್ವಾಸವಿಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಆಸ್ತಿ ಉಳಿಸಲು ಖಾತೆ ನೋಂದಣಿಯಾಗಿದೆಯೇ? ಎಂಬ ಬಗ್ಗೆ ಅಭಿಯಾನ ನಡೆಸಿ ಈವರೆಗೆ 17,500 ಶಾಲೆಗಳ ಆಸ್ತಿ ಖಾತೆ ನೋಂದಣಿ ಮಾಡಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ವಿವಿಧ ಸರ್ಕಾರಿ ಶಾಲೆಗಳ ಆಸ್ತಿ ಖಾತೆ ನೋಂದಣಿಯಾಗದಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ ಬೃಹತ್ ಅಭಿಯಾನ ನಡೆಸಿತ್ತು. ರಾಜ್ಯದಾದ್ಯಂತ ಹಲವಾರು ಶಾಲೆಗಳಿಗಾಗಿ ಈ ಹಿಂದೆ ದಾನಿಗಳು ನೀಡಿದ ಜಮೀನನ್ನು ಖಾತೆಯಾಗದೆ ನಂತರದ ಪೀಳಿಗೆ ವಾಪಸ್ ಪಡೆದಿರುವ ಪ್ರಕರಣಗಳು ಹಾಗೂ ಭೂಗಳ್ಳರಿಂದ ಒತ್ತುವರಿಯಾದ ಬಗ್ಗೆ ದೂರುಗಳನ್ನು ಸ್ವೀಕರಿಸಿತು. ಈ ಹಿನ್ನೆಲೆಯಲ್ಲಿ ನಡೆಸಿದ ಅಭಿಯಾನದಲ್ಲಿ ಸುಮಾರು 17,800 ಶಾಲೆಗಳ ಆಸ್ತಿ ಖಾತೆ ನೋಂದಣಿಯಾಗದಿರುವುದನ್ನು ಪತ್ತೆಹಚ್ಚಿ ಈಗಾಗಲೇ 17,500 ಶಾಲೆಗಳಿಗೆ ಆಸ್ತಿ ನೋಂದಣಿ ಮಾಡಿಸಲಾಗಿದೆ. ಬಾಕಿ 300 ಶಾಲೆಗಳ ಖಾತೆಯನ್ನು ಸಧ್ಯದಲ್ಲಿಯೇ ಮಾಡಿಸಲಾಗುವುದು ಎಂದರು.

ರಾಜ್ಯಾದ್ಯಂತ ವಿವಿಧ ಸರ್ಕಾರಿ ಇಲಾಖೆ ನೌಕರರು ತಮ್ಮ ಊರಿನ ಶಾಲೆಯಲ್ಲಿ ವ್ಯಾಸಂಗ ಮಾಡಿರುತ್ತಾರೆ. ಅವರು ತಾವು ಓದಿದ ಶಾಲೆಯ ಆಸ್ತಿ ಖಾತೆ ನೋಂದಣಿಯಾಗಿದೆಯೇ ಎಂದು ಪರಿಶೀಲಿಸಿ ಪ್ರಾಧಿಕಾರಕ್ಕೆ ವರದಿ ಮಾಡಿದಲ್ಲಿ ಪ್ರಾಧಿಕಾರವೇ ಕಂದಾಯ ಇಲಾಖೆ ಅಧಿಕಾರಿಗಳಿಂದ ನೋಂದಣಿಗೆ ಕ್ರಮವಹಿಸಲಿದೆ. ಆಯಾ ನೋಂದಾಯಿತ ಖಾತೆ ಛಾಯಾಚಿತ್ರಗಳನ್ನು ಶಾಲಾ ಮುಖ್ಯಸ್ಥರ ಕೊಠಡಿಯಲ್ಲಿ ಅಳವಡಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ. ಇದಕ್ಕೆ ಎಲ್ಲಾ ಕನ್ನಡಿಗರೂ ಸ್ಪಂದಿಸಬೇಕು. ಈ ಮೂಲಕ ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕು ಎಂದರು. 

ಮಕ್ಕಳ ಕೊರತೆ ಅಥವಾ ಶಿಕ್ಷಕರ ಕೊರತೆ ಕಾರಣದಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಮುಂದಾದಲ್ಲಿ ಖಾಲಿ ಉಳಿಯುವ ಶಾಲಾ ಕಟ್ಟಡವನ್ನು ಯಾವುದಾದರೂ ಸರ್ಕಾರಿ ಇಲಾಖೆಯ ಬಳಕೆಗೆ ಅದನ್ನು ಹಸ್ತಾಂತರಿಸಬೇಕು. ಈ ಮೂಲಕ ಸರ್ಕಾರಿ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಅವರು ಹೇಳಿದರು.


ಅಲ್ಲದೆ, ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಹೊಂದಿರುವ ತುಮಕೂರು ಜಿಲ್ಲೆಯಲ್ಲಿರುವ ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವ ಕನ್ನಡಿಗರು ಹಾಗೂ ಕನ್ನಡೇತರರ ವಿವರದ ಪಟ್ಟಿಯನ್ನು ನೀಡುವಂತೆ ತಿಳಿಸಲಾಗಿದೆ. ಈ ಮೂಲಕ ಸಿ ಮತ್ತು ಡಿ ವರ್ಗದ ಹುದ್ದೆಗಳಿಗೆ ಸ್ಥಳೀಯರನ್ನು ನೇಮಿಸಿಕೊಳ್ಳಬೇಕೆಂಬ ನಿಯಮಗಳನ್ನು ಸಮರ್ಪಕ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಸರ್ಕಾರಿ ಕಟ್ಟಡಗಳು, ವಾಣಿಜ್ಯ ಕಟ್ಟಡಗಳು ಸೇರಿದಂತೆ ವಿವಿಧೆಡೆ ನಾಮ ಫಲಕಗಳು 60/40 ಅನುಪಾತದಲ್ಲಿ ಅಳವಡಿಸುವ ಸಂಬಂಧ ನಗರ ಸ್ಥಳೀಯ ಸಂಸ್ಥೆಗಳು ಈ ನಿಯಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಒಂದೊಮ್ಮೆ ಈ ಅನುಪಾತದಲ್ಲಿ ಕನ್ನಡದ ನಾಮಫಲಕ ಅಳವಡಿಸದ ಕಂಪನಿಗಳು ಅಥವಾ ಅಂಗಡಿ-ಮುಂಗಟ್ಟುಗಳ ಪರವಾನಗಿ ನವೀಕರಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು. 

ಸಾರ್ವಜನಿಕರು ಅತಿ ಹೆಚ್ಚು ವ್ಯವಹರಿಸುವ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಬ್ಬ ಕನ್ನಡದ ಅಧಿಕಾರಿ ಕಡ್ಡಾಯವಾಗಿ ನೇಮಿಸಬೇಕೆಂದು ಈಗಾಗಲೇ ಸೂಚನೆ ನೀಡಲಾಗಿದೆ ಹಾಗೂ ಹೊರ ರಾಜ್ಯಗಳಿಂದ ವರ್ಗವಾಗಿ ಬಂದ ಬ್ಯಾಂಕ್ ಅಧಿಕಾರಿ 3 ತಿಂಗಳೊಳಗೆ ಕನ್ನಡವನ್ನು ಕಡ್ಡಾಯವಾಗಿ ಕಲಿಯುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೀಹಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ. ಇದ್ದರು.

Leave a Reply

Your email address will not be published. Required fields are marked *