ತುಮುಲ್ ಗೆ ಮರು ಎಣಿಕೆ, ಕೊಂಡವಾಡಿ ಚಂದ್ರಶೇಖರ್, ಚನ್ನಮಲ್ಲಯ್ಯ ಆಯ್ಕೆ

ತುಮಕೂರು- ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳಿಗೆ ಹೈಕೋರ್ಟ್ ಆದೇಶದ ಮೇರೆಗೆ ಇಂದು ಮರು ಮತ ಎಣಿಕೆ ನಡೆದು ಇಬ್ಬರು ನೂತನ ನಿರ್ದೇಶಕರುಗಳು ಆಯ್ಕೆಯಾಗಿದ್ದಾರೆ.

ತುಮಕೂರು ಹಾಲು ಒಕ್ಕೂಟಕ್ಕೆ 2024ರ ನವೆಂಬರ್ 10 ರಂದು ಚುನಾವಣೆ ನಡೆದಿತ್ತು. ಬಳಿಕ ಎರಡು ತಿಂಗಳ ನಂತರ ಮತ ಎಣಿಕೆಯೂ ನಡೆದಿತ್ತು. ಆ ಸಂದರ್ಭದಲ್ಲಿ ಪಾವಗಡ ಕ್ಷೇತ್ರದಿಂದ ಕೊಂಡವಾಡಿ ಚಂದ್ರಶೇಖರ ಮತ್ತು ಮಧುಗಿರಿ ಕ್ಷೇತ್ರದಿಂದ ಬಿ. ನಾಗೇಶ್‍ಬಾಬು ಆಯ್ಕೆಯಾಗಿದ್ದರು. ಇವರುಗಳ ಆಯ್ಕೆಯನ್ನು ಪ್ರಶ್ನಿಸಿ ಮಧುಗಿರಿ ಕ್ಷೇತ್ರದಿಂದ ಪರಾಭವಗೊಂಡಿದ್ದ ಕೊಂಡವಾಡಿ ಚಂದ್ರಶೇಖರ್ ಹಾಗೂ ಪಾವಗಡ ಕ್ಷೇತ್ರದಿಂದ ಚನ್ನಮಲ್ಲಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ದಾಖಲಾಗಿದ್ದ ರಿಟ್ ಅಫೀಲು ಅರ್ಜಿಯ ವಿಚಾರಣೆ ನಡೆದು ತುಮಕೂರು ಹಾಲು ಒಕ್ಕೂಟದ ಆಡಳಿತ ಮಂಡಳಿಯ ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳ ನಿರ್ದೇಶಕರ ಸ್ಥಾನದ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು.

ತುಮಕೂರು ಹಾಲು ಒಕ್ಕೂಟದ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರ ನೇತೃತ್ವದಲ್ಲಿ ಇಂದು ಮರು ಮತ ಎಣಿಕೆ ನಡೆಸಿದಾಗ ಪಾವಗಡ ಕ್ಷೇತ್ರದಿಂದ ಚನ್ನಮಲ್ಲಯ್ಯ ಅವರು 25 ಮತ ಹಾಗೂ ಈ ಹಿಂದೆ ಗೆಲುವು ಸಾಧಿಸಿದ್ದ ಚಂದ್ರಶೇಖರರೆಡ್ಡಿ 21 ಮತ ಪಡೆದಿರುವುದು ಬೆಳಕಿಗೆ ಬಂದಿತು. ಹೀಗಾಗಿ ಈ ಹಿಂದೆ ಪರಾಭವಗೊಂಡಿದ್ದ ಚನ್ನಮಲ್ಲಯ್ಯ ರವರು ಇಂದಿನ ಮರು ಮತ ಎಣಿಕೆಯಲ್ಲಿ 25 ಮತಗಳನ್ನು ಪಡೆದು ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಹಾಗೆಯೇ ಮಧುಗಿರಿ ಕ್ಷೇತ್ರದಿಂದ ನಾಗೇಶ್ ಬಾಬು ಅವರು ಅನರ್ಹಗೊಂಡಿರುವುದರಿಂದ ಪ್ರತಿಸ್ಪರ್ಧಿ ಕೊಂಡವಾಡಿ ಚಂದ್ರಶೇಖರ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.

ಇಂದು ನಡೆದ ಮರು ಮತ ಎಣಿಕೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರುಗಳನ್ನು ಬೆಂಬಲಿಗರು ಅಭಿನಂದಿಸಿದರು.

Leave a Reply

Your email address will not be published. Required fields are marked *