ದೋಷಪೂರಿತ ಒಳಮೀಸಲಾತಿ ಜಾರಿ ವಿರೋಧಿಸಿ ಮಾರ್ಚ್ 25ರಂದು ಬಲಗೈ ಸಮುದಾಯದಿಂದ ಪ್ರತಿಭಟನೆ

ತುಮಕೂರು:ಸುಪ್ರಿಂ ಕೋರ್ಟಿನ ನಿರ್ದೇಶನದ ಮೇಲೆ ಸರಕಾರ ರಚಿಸಿದ್ದ ನ್ಯಾ.ನಾಗಮೋಹನ್ ದಾಸ್ ಆಯೋಗ ನೀಡಿರುವ ಒಳಮೀಸಲಾತಿ ವರ್ಗೀಕರಣ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು,ಸರಕಾರ ಅದನ್ನು ರದ್ದು ಪಡಿಸಿ,27 ಫೆಬ್ರವರಿ 2026 ರಂದು ಹೊರಡಿಸಿರುವ ಆದೇಶದಂತೆ ಒಳಮೀಸಲಾತಿ ರಹಿತ ನೇಮಕಾತಿ ಆದಿಸೂಚನೆ ಹೊರಡಿಸಬೇಕೆಂದು ಆಗ್ರಹಿಸಿ ಮಾ.25 ರಂದು ಉರಿಲಿಂಗಿ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ತುಮಕೂರಿನಿಂದ 25 ಸಾವಿರಕ್ಕು ಹೆಚ್ಚು ಜನರು ಭಾಗವಹಿಸುವುದಾಗಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ಜಿಲ್ಲಾ ಮುಖಂಡರಾದ ಸಿ.ಭಾನುಪ್ರಕಾಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನ್ಯಾ.ನಾಗಮೋಹನ್‍ದಾಸ್ ನೀಡಿರುವ ವರದಿ ಅತ್ಯಂತ ಅವೈಜ್ಞಾನಿಕವಾಗಿದ್ದು, ದೋಷಪೂರಿಕ ಮತ್ತು ಪಕ್ಷ ಪಾತದಿಂದ ಕೂಡಿದೆ.ಗೊಂದಲ ಬಗೆಹರಿಸುವ ಬದಲು, ಹೊಲಯ ಸಮುದಾಯದ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆಯುವ ಪ್ರಯತ್ನವನ್ನು ಮಾಡಿದೆ ಎಂದು ಆರೋಪಿಸಿದರು.

ಒಳಮೀಸಲಾತಿಯೂ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಮಾನವಾಗಿ ಹಂಚಿಕೆಯಾಗಬೇಕಾದರೆ ಮೀಸಲಾತಿಯ ಪ್ರಮಾಣ ಹೆಚ್ಚಾಗಬೇಕು.ಸರಕಾರ ಕೇವಲ 1 ಜಾತಿಯ ಒತ್ತಡಕ್ಕೆ ಮಣಿದು ಶೇ15ರ ಮೀಸಲಾತಿಯಲ್ಲಿಯೇ ಒಳಮೀಸಲಾತಿ ಜಾರಿಗೊಳಿಸಲು ಹೊರಟಿರುವುದು ಸರಿಯಾದ ಕ್ರಮವಲ್ಲ.ನಮ್ಮ ವಿರೋಧದ ನಡುವೆಯೂ ಒಳಮೀಸಲಾತಿ ಜಾರಿಗೊಳಿಸಲು ಮುಂದಾದರೆ ಬಲಗೈ ಸಮುದಾಯಗಳ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಿಸಿಎಂಎಸ್ ನ ಅಧ್ಯಕ್ಷರಾದ ಡಾ.ಚಂದ್ರಪ್ಪ ಮಾತನಾಡಿ,ಸರಕಾರ ಅವೈಜ್ಞಾನಿಕ ಮತ್ತು ದೋಷಪೂರಿತವಾದ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಬೇಕು.ಓಬಿಸಿ ಆಯೋಗದ ಸಮೀಕ್ಷಾ ವರದಿಯನ್ನು ನ್ಯಾ.ನಾಗಮೋಹನ್ ದಾಸ್ ವರದಿಗೆ ತಾಳೆಹಾಕಿ, ವ್ಯತ್ಯಾಸ ಕಂಡು ಬಂದರೆ ಮತ್ತೊಮ್ಮೆ ಸಮೀಕ್ಷೆ ನಡೆಸಬೇಕು.ರಾಜ್ಯ ಸರಕಾರವೂ 03-09-2025 ರಂದು ಯಾವುದೇ ಮಾನದಂಡವಿಲ್ಲದೆ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಜಾತಿ ಪ್ರಮಾಣ ಪತ್ರಗಳಲ್ಲಿ ಮೂಲ ಜಾತಿಯ ನಮೂದೆನೆ ಕಡ್ಡಾಯಗೊಳಿಸುವುದು, ಈಗಾಗಲೇ ಇರುವ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಸೂಕ್ತ ಆದೇಶ ಹೊರಡಿಸಬೇಕು.ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಒಂದು ಗುಂಪಿಗೆ ತಂದು ಉದ್ಯೋಗ, ಶಿಕ್ಷಣ ಇತರೆ ಸೌಲಭ್ಯ ಪಡೆಯಲು ಆದೇಶ ಹೊರಡಿಸಬೇಕು. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಕೆಲ ಜಿಲ್ಲೆಗಳಲ್ಲಿ ಬಲಗೈ ಜಾತಿಗಳ ಸಂಖ್ಯೆಯನ್ನು ಅತಿ ಕಡಿಮೆ ನಮೂದಿಸಿದ್ದು,ಪುನರ್ ಪರಿಶೀಲನೆ ನಡೆಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಮಾ.25 ರಂದು ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಲಕ್ಷಾಂತರ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಮುಖಂಡರಾದ ಶ್ರೀನಿವಾಸ್ ಮಾತನಾಡಿ, ಸರಕಾರದ ಮೀಸಲಾತಿ ಅನ್ವಯ ಇತ್ತೀಚಿನ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಗಳಲ್ಲಿನ ರೋಸ್ಟರ್ ಬಿಂದುಗಳನ್ನು ಅವಲೋಕಿಸಿದರೆ ಬಲಗೈ ಸಮುದಾಯ ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಬಾರಿ ಅನ್ಯಾಯವಾಗಲಿದೆ.ನಾವು ಮೀಸಲಾತಿ ವಿರೋಧಿಗಳಲ್ಲ. ಆದರೆ ಇದೇ ರೋಸ್ಟರ್ ಬಿಂದು ಮುಂದುವರೆದರೆ ಪರಿಶಿಷ್ಟ ಜಾತಿಯಲ್ಲಿರುವ ಒಂದು ವರ್ಗವನ್ನು ಹೊರತು ಪಡಿಸಿ, ಉಳಿದ ವರ್ಗಗಳಿಗೆ ಉದ್ಯೋಗ, ಶಿಕ್ಷಣ, ಅರ್ಥಿಕ ಸವಲತ್ತುಗಳು ದೊರೆಯುವುದು ಮರಿಚೀಕೆ.ಹಾಗಾಗಿ ಇದರ ವಿರುದ್ದ ಹೋರಾಟ ಅನಿವಾರ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಛಲವಾದಿ ಶೇಖರ್, ಸಿದ್ದಲಿಂಗಯ್ಯ, ಭೈರೇಶ್, ಕೃಷ್ಪಪ್ಪ ಹೆಗ್ಗೆರೆ,ಗಿರಿಜೇಶ್,ಜಿ.ಆರ್, ಅಪ್ಪಾಜಯ್ಯ, ಇಂದ್ರಕುಮಾರ್, ವಕೀಲರಾದ ನಾಗೇಶ್, ಗಂಗಾಂಜನೇಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *