ತುಮಕೂರು : ಜಿಲ್ಲೆಯಲ್ಲಿ ಇಂದಿನಿಂದ ಶಾಲೆಗಳು ಪ್ರಾರಂಭವಾಗಲಿದ್ದು, ಶಾಲಾ ಸಮಯದಲ್ಲಿ ಮಕ್ಕಳು ಶಾಲೆಗೆ ಹೋಗಿ ಬರಲು ಅನುವಾಗುವಂತೆ ಹೆಚ್ಚುವರಿ ಬಸ್ ಕಾರ್ಯಾಚರಣೆಗೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಚಂದ್ರಶೇಖರ್ ಅವರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಗುರುವಾರ ಸಂಜೆ ಶಾಲೆ ಆರಂಭದ ಪೂರ್ವ ಸಿದ್ಧತೆ ಸಭೆ ನಡೆಸಿ ಮಾತನಾಡಿದ ಅವರು, ಮಕ್ಕಳು ಶಾಲೆಗೆ ತೆರಳಲು ಅನಾನುಕೂಲವಾಗದಂತೆ ನಿಗಧಿತ ಶಾಲಾ ಸಮಯದಲ್ಲಿ ಸಾರಿಗೆ ಬಸ್ ಕಾರ್ಯಾಚರಣೆಯಾಗಬೇಕು. ಬಸ್ ಸೌಕರ್ಯವಿಲ್ಲವೆಂದು ಪೋಷಕರು ತಮ್ಮ ಶಾಲಾ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂಬ ದೂರು ಬರಬಾರದು ಎಂದು ತಿಳಿಸಿದರಲ್ಲದೆ, ಬಸ್ಗಳಲ್ಲಿ ಮಕ್ಕಳು ಮೆಟ್ಟಿಲಿನ ಮೇಲೆ ನಿಲ್ಲದಂತೆ ಹಾಗೂ ಜನಸಂದಣಿಯಾಗದಂತೆ ನಿಗಾವಹಿಸಬೇಕು. ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ಬಸ್ ನಿಲುಗಡೆ ಮಾಡುವುದರಿಂದ ಮಕ್ಕಳಿಗೆ ಬಸ್ ಹತ್ತಲು ಹಾಗೂ ಇಳಿಯಲು ತೊಂದರೆಯುಂಟಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ವೃತ್ತಗಳ ಬಳಿ ಬಸ್ ನಿಲುಗಡೆ ಮಾಡದಂತೆ ಬಸ್ಸಿನ ಚಾಲಕ ಹಾಗೂ ನಿರ್ವಾಹಕರಿಗೆ ಸೂಚನೆ ನೀಡಬೇಕೆಂದು ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಶಾಲೆಗಳು ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಹಲವು ಕಾರಣಗಳಿಂದ ಶಾಲೆಯನ್ನು ಬಿಟ್ಟಿರುವಂತ ಮಕ್ಕಳ ಪೋಷಕರ ಮನವೊಲಿಸಿ ಮರಳಿ ಶಾಲೆಯತ್ತ ಬರುವಂತೆ ಉತ್ತೇಜನ ನೀಡಬೇಕು. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆ ತರಲು ಶಿಕ್ಷಕರು ಶ್ರಮಿಸಬೇಕು ಎಂದರಲ್ಲದೇ ಮಳೆಯಿಂದಾಗಿ ಹಲವು ಶಾಲೆಗಳ ಕೊಠಡಿಗಳು ಶಿಥಿಲಗೊಂಡಿದ್ದು ಅಂಥಹ ಕೊಠಡಿಗಳಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ಬೋಧನೆ ಮಾಡಬಾರದು. ಶಿಥಿಲಗೊಂಡಿರುವ ಕೊಠಡಿಗಳ ಬಗ್ಗೆ ಮಾಹಿತಿ ನೀಡಿದಲ್ಲಿ ದುರಸ್ತಿಗೆ ಮುಂದಿನ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸದ ಕಾರಣ ಶಿಕ್ಷಕರು ಈಗಿನಿಂದಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಯನ್ನು ಯಾರೂ ಅಲ್ಲಗಳೆಯದಂತೆ ಶಿಕ್ಷಣ ಮಟ್ಟವನ್ನು ಸುಧಾರಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ನಿರ್ದೇಶಿಸಿದರು.
ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಕೊಠಡಿ, ಅಡುಗೆ ಕೋಣೆ, ಶಾಲಾ ಆವರಣ, ಶೌಚಾಲಯ, ಸೇರಿದಂತೆ ಶಾಲೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಶಾಲೆಯ ನೀರಿನ ಮೂಲದ ಮಾದರಿಯನ್ನು ಕುಡಿಯಲು ಯೋಗ್ಯವಿರುವ ಬಗ್ಗೆ ಪರೀಕ್ಷೆಗೊಳಪಡಿಸಿ ದೃಢೀಕರಣ ಪಡೆಯಬೇಕು ಎಂದು ಸೂಚಿಸಿದರು.
ಶಾಲೆ ಪ್ರಾರಂಭವಾದ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸಮರ್ಪಕವಾಗಿ ವಿತರಿಸಬೇಕು ಎಂದರಲ್ಲದೆ, ಶಾಲೆಗೆ ದಾಖಲಾಗಲು ಮಕ್ಕಳ ಆಧಾರ್ ಕಾರ್ಡ್ ಕಡ್ಡಾಯವೆಂದು ಪೋಷಕರಿಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಬಸ್ ಸಮಸ್ಯೆಗಾಗಿ ಸಹಾಯವಾಣಿ :
ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗುವುದು. ನಿಗಧಿತ ಸಮಯಕ್ಕೆ ಬಸ್ ಬಾರದಿದ್ದಲ್ಲಿ ಆಯಾ ತಾಲ್ಲೂಕಿನ ಘಟಕ ವ್ಯವಸ್ಥಾಪಕರ ದೂರವಾಣಿಗೆ ಕರೆ ಮಾಡಿ ದೂರು ಸಲ್ಲಿಸಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದ್ದು, ನಿಗಧಿತ ವೇಳೆಗೆ ಬಸ್ ಬಾರದಿದ್ದಲ್ಲಿ ತುಮಕೂರು ಹಾಗೂ ಗುಬ್ಬಿ ತಾಲ್ಲೂಕಿನ ಸಹಾಯವಾಣಿ ಸಂಖ್ಯೆ: 7760990913, ಕುಣಿಗಲ್-7760990914, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ-7760990915, ಶಿರಾ-7760990916, ತಿಪಟೂರು-7760990917, ಕೊರಟಗೆರೆ-7760990935, ಮಧುಗಿರಿ-7349418324ನ್ನು ಸಂಪರ್ಕಿಸಬಹುದಾಗಿದೆ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಭೆಗೆ ತಿಳಿಸಿದರಲ್ಲದೆ, ವಿದ್ಯಾರ್ಥಿಗಳು ಬಸ್ ಪಾಸಿಗಾಗಿ ಆನ್ಲೈನ್ ಮೂಲಕ ಜೂನ್ 1 ರಿಂದ ಸಮೀಪದ ತುಮಕೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರಂಗಧಾಮಯ್ಯ ಮಾತನಾಡಿ, ಜಿಲ್ಲೆಯಲ್ಲಿ 2112 ಸರ್ಕಾರಿ ಶಾಲೆ ಹಾಗೂ 542 ಅನುದಾನಿತ ಮತ್ತು ಅನುದಾನರಹಿತ ಶಾಲೆ ಸೇರಿ ಒಟ್ಟು 2654 ಶಾಲೆಗಳಿದ್ದು, 1 ರಿಂದ 10ನೇ ತರಗತಿವರೆಗಿನ ಒಟ್ಟು 2,29,315 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಈಗಾಗಲೇ 1622 ಶಾಲೆಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಉಳಿದ 1032 ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಶಾಲೆಗಳ ಶೌಚಾಲಯ, ಅಡುಗೆ ಕೋಣೆ, ಶಾಲಾ ಕೊಠಡಿ, ಶಾಲಾ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲು ಶಿಕ್ಷಣ ಇಲಾಖೆ ಸಿದ್ಧವಿದೆ ಎಂದು ತಿಳಿಸಿದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪಯೋಜನಾ ಸಮನ್ವಯಾಧಿಕಾರಿ ಪುಷ್ಪವಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 1331 ಸರ್ಕಾರಿ ಶಾಲೆ ಹಾಗೂ 229 ಅನುದಾನಿತ ಮತ್ತು ಅನುದಾನರಹಿತ ಶಾಲೆ ಸೇರಿ ಒಟ್ಟು 1560 ಶಾಲೆಗಳಿದ್ದು, 1 ರಿಂದ 10ನೇ ತರಗತಿವರೆಗಿನ ಒಟ್ಟು 1,27,000 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ. ಶಾಲಾ ಮಕ್ಕಳ ಹಿತದೃಷ್ಟಿಯಿಂದ ಈಗಾಗಲೇ 1537 ಶಾಲೆಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ. ಉಳಿದ 23 ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.