ದಶಕಗಳ ಹೋರಾಟಕ್ಕೆ ಬಾಬು ಜಗಜೀವನರಾಂ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಶ್ರಮಜೀವಿ ನರಸೀಯಪ್ಪ

ತುಮಕೂರು : ಮಂಡಿಪೇಟೆಯಲ್ಲಿ ಹಮಾಲಿ ಕೆಲಸ ಮಾಡಿ ದಲಿತ ಸಂಘರ್ಷ ಕಟ್ಟಲು ಹಗಲಿರಳು ಶ್ರಮಿಸಿದ ಶ್ರಮಜೀವಿ ನರಸೀಯಪ್ಪನವರಿಗೆ ಬಾಬು ಜಗಜೀವನರಾಂ ರಾಜ್ಯ ಪ್ರಶಸ್ತಿ ಲಭಿಸಿದೆ.

80, 90 ದಶಕದಲ್ಲಿ ತುಮಕೂರಿನ ಮಂಡಿಪೇಟೆಯ ರಾಜಣ್ಣ ಅಂಗಡಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ನರಸೀಯಪ್ಪ, ಬಿ.ಹೆಚ್.ಗಂಗಾಧರ್ ಅವರು ಬಿ.ಕೃಷ್ಣಪ್ಪನವರ ಪ್ರಭಾವದಿಂದ ದಸಂಸ ಸಂಘಟನೆಯಲ್ಲಿ ಗುರುತಿಸಿಕೊಂಡು, ಅಂದಿನ ದಸಂಸ ಹೋರಾಟಕ್ಕೆ, ಹೋರಾಟಗಾರರಿಗೆ ತಮ್ಮ ತನು, ಮನ ಅರ್ಪಿಸಿಕೊಂಡವರು.

ದಸಂಸಕ್ಕೆ ಇವರಷ್ಟೇ ಅಲ್ಲದೆ ಅವರ ಪತ್ನಿಯರನ್ನೂ ಚಳವಳಿಗೆ ಧುಮುಕಿಸಿ ಜಿಲ್ಲೆಯಲ್ಲಿ ದಸಂಸಕ್ಕೆ ಒಂದು ರೂಪ ಕೊಟ್ಟವರು ನರಸೀಯಪ್ಪ ಮತ್ತು ಇತರರು, ಇವರು ಮಂಡಿಯಲ್ಲಿ ಕೆಲಸ ಮಾಡುವಾಗ ಕಡ್ಲೆ ಬೀಜವನ್ನು ತಮ್ಮ ಜೇಬುಗಳಿಗೆ ತುಂಬಿಕೊಂಡು ಬಂದ ಹೋರಾಟಗಾರರಿಗೆ ತಿನ್ನಿಸಿ ಹಸಿವು ನೀಗಿಸಿದವರು.

ಗೂಳೂರು ಹೋಬಳಿಯ ಹೊನ್ನೇನಹಳ್ಳಿಯ ಭೂ ಹೋರಾಟ ಮತ್ತು ಪಾವಗಡ ತಾಲ್ಲೂಕಿನ ಸೂಲನಾಯಕನಹಳ್ಳಿಯ ಅಂಬೇಡ್ಕರ್ ನಗರ ವಸತಿ ಹೋರಾಟ ಸೇರಿದಂತೆ ಹಲವಾರು ದಲಿತರ ಹೋರಾಟಗಳಲ್ಲಿ ಪ್ರಮುಖ ಪಾತ್ರ ವಹಿಸಿದವರು. ಪ್ರೊ.ಬಿ.ಕೃಷ್ಣಪ್ಪನವರು ತುಮಕೂರಿಗೆ ಬಂದಾಗಲೆಲ್ಲಾ ನರಸೀಯಪ್ಪನವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು.

1989ರಲ್ಲಿ ಕೆ.ದೊರೈರಾಜ್, ನರಸಿಂಹಯ್ಯ, ತುಂಬಾಡಿ ರಾಮಯ್ಯ, ರಂಗಸ್ವಾಮಿ ಬೆಲ್ಲದಮಡು, ಬಿ.ಹೆಚ್.ಗಂಗಾಧರ್ ಇತರರ ಒತ್ತಾಸೆ ಮತ್ತು ಬೆಂಬಲದಿಂದ ನಗರಸಭೆ ಚುನಾವಣೆಗೆ ನಿಂತು ಗೆದ್ದು ಉತ್ತಮ ಕೆಲಸ ನಿರ್ವಹಿಸಿದವರು.

ಯಾರೇ ಹೋರಾಟಗಾರರು, ತುಮಕೂರಿನಲ್ಲಿ ಓದುತ್ತಿದ್ದ ಬಡ ಮಕ್ಕಳು ಇವರ ಮನೆಗೆ ಬಂದರೆ ಮೊದಲು ಅವರಿಗೆ ಊಟ ಮಾಡಿಸಿ ಮುಂದಿನ ಕಾರ್ಯ ಕೈಗೊಳ್ಳುತ್ತಿದ್ದರು, ಇವರೆಲ್ಲಾ ಹೋರಾಟಕ್ಕೆ ಬೆಂಬಲವಾಗಿ ಅವರ ಪತ್ನಿ ಹುಚ್ಚಹನುಮಕ್ಕೆ ಹೆಗಲಿಗೆ ಹೆಗಲು ಕೊಟ್ಟು ಅವರೂ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಒಳಮೀಸಲಾತಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಯುವರಿಗೆ, ಮುಂದಿನ ಪೀಳಿಗೆಗೆ ಒಳಮೀಸಲಾತಿ ಅಗತ್ಯದ ಬಗ್ಗೆ ಸಂಘಟನಾತ್ಮಕವಾಗಿ ಎಲ್ಲಾ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಒಂದು ಕಾಲದಲ್ಲಿ ಮುಂಗಾರು, ಲಂಕೇಶ್, ಪಂಚಮ ಪತ್ರಿಕೆಗಳ ವಿತರಕರಾಗಿಯೂ ಸಹ ಕಾರ್ಯನಿರ್ವಹಸಿದ್ದಾರೆ.

ಇವರ ಹೋರಾಟ, ಸಾಮಾಜಿಕ ಕಳಕಳಿಯನ್ನು ಕರ್ನಾಟಕ ರಾಜ್ಯ ಸರ್ಕಾರ ಗುರುತಿಸಿ ಡಾ.ಬಾಬು ಜಗಜೀವನರಾಂ ಪ್ರಶಸ್ತಿ ನೀಡಿರುವುದು ಒಬ್ಬ ದಿಟ್ಟ ಹೋರಾಟಗಾರ, ಹಮಾಲಿ ಕೆಲಸದಿಂದ ಒಂದು ಜನಾಂಗದ ಪರವಾಗಿ, ಶೊಷಿತರ ಪರವಾಗಿ ನಿಂತು ಸಂಘಟನೆ ಕಟ್ಟಿದಂತಹ ನರಸೀಯಪ್ಪನವರಿಗೆ ಈ ಡಾ.ಬಾಬು ಜಗಜೀವನರಾಂ ಪ್ರಶಸ್ತಿ ಲಭಿಸಿರುವುದು ಸಂತೋಷದ ವಿಷಯ. ಅವರ ಅಭಿಮಾನಿಗಳಿಗೆ, ಸ್ನೇಹಿತರಿಗೆ ಇದು ಸಂತೋಷವನ್ನು ತಂದಿದೆ. ನರಸೀಯಪ್ಪನವರು ದಶಕಗಳ ಹೋರಾಟಕ್ಕೆ ಸಂದ ಗೌರವ ಇದಾಗಿದೆ.

Leave a Reply

Your email address will not be published. Required fields are marked *