ತುಮಕೂರು : ಕರ್ನಾಟಕದ ಮೇಲಿನ ಸಾಲದ ಹೊರೆಯನ್ನು ಅತಿ ಗರಿಷ್ಠ ಮಟ್ಟಕ್ಕೆ ತೆಗೆದುಕೊಂಡು ಹೋಗಿ ರಾಜ್ಯದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ್ದುದನ್ನು ಬಿಟ್ಟರೆ ೨೦೨೫-೨೬ ನೇ ಸಾಲಿನ ಬಜೆಟ್ನಲ್ಲಿ ಯಾವ ಸಾಧನೆಯೂ ಇಲ್ಲ, ಯಾವ ಪುರುಷಾರ್ಥವೂ ಇಲ್ಲ ಎಂದು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಬಿ. ಸುರೇಶ ಗೌಡರು ಪ್ರತಿಕ್ರಿಯಿಸಿದ್ದಾರೆ.
ʻಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ನೇ ಬಾರಿಗೆ ಬಜೆಟ್ ಮಂಡಿಸಿ ಸಾಧನೆ ಮಾಡಿರುವುದು ಐತಿಹಾಸಿಕ ಎಂದು ಕಾಂಗ್ರೆಸ್ ಪಕ್ಷದವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬಹುದು. ಆದರೆ, ಇದೇ ಅವಧಿಯಲ್ಲಿ ರಾಜ್ಯದ ಜನರ ಮೇಲಿನ ಸಾಲ ಹೊರೆಯೂ ಅದೇ ರೀತಿ ಐತಿಹಾಸಿಕ ದಾಖಲೆಯ ಮಟ್ಟಕ್ಕೆ ಮುಟ್ಟಿರುವುದು ವಿಷಾದದ ಸಂಗತಿʼ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʻಮುಖ್ಯಮಂತ್ರಿಗಳು ತಾವು ಸಾಲದ ಮಿತಿಯನ್ನು ಜಿಎಸ್ಡಿಪಿಯ ಶೇಕಡ 25 ರ ಮಿತಿಯಲ್ಲಿಯೇ ಉಳಿಸಿಕೊಂಡಿರುವಾಗಿ ತಮ್ಮ ಭಾಷಣದ ಆರಂಭದಲ್ಲಿ ಹೇಳಿದ್ದಾರೆ. ಆದರೆ, ಈ ಬಜೆಟ್ನಲ್ಲಿ ಸರ್ಕಾರ ಮಾಡಲು ಹೊರಟಿರುವ ಒಟ್ಟು ಸಾಲ 7,64,655 ಲಕ್ಷ ಕೋಟಿ ರೂಪಾಯಿಗಳು. ಇದು ಜಿಎಸ್ಡಿಪಿ ಶೇಕಡ 24.91 ರಷ್ಟು ಎಂಬ ಅಂಶವೂ ಇದೇ ಬಜೆಟ್ ಪ್ರತಿಯಲ್ಲಿ ಇದೆ. ಅಂದರೆ, ಈ ಸರ್ಕಾರ ಮುಂದೆ ಬರುವ ನಮ್ಮ ಸರ್ಕಾರಕ್ಕೆ ಬಿಡಿ ತಾವೇ ಮುಂದೆ ಮಂಡಿಸಬಹುದಾದ ಬಜೆಟ್ನಲ್ಲಿ ಹೆಚ್ಚಿನ ಸಾಲ ಮಾಡುವ ಅವಕಾಶವನ್ನು ಕೇವಲ ಪಾಯಿಂಟ್ 9 ಕ್ಕೆ ಮಿತಿಗೊಳಿಸಿದೆ. ಇದು ಯಾವ ಆರ್ಥಿಕ ಶಿಸ್ತು, ಯಾವ ಆರ್ಥಿಕ ಮಾದರಿʼ ಎಂದು ಅವರು ಪ್ರಶ್ನಿಸಿದ್ದಾರೆ.
ʻಅದಕ್ಕಾಗಿಯೇ ಸರ್ಕಾರವು ತನ್ನ ಒಟ್ಟು ವರಮಾನದ ಅತಿ ಹೆಚ್ಚಿನ ಪಾಲನ್ನು ಸಾಲ ಮರುಪಾವತಿಗಾಗಿಯೇ ಖರ್ಚು ಮಾಡಲಿದೆ ಎಂಬುದನ್ನು ಕೂಡ ಈ ಬಜೆಟ್ ತಿಳಿಸಿದೆ. (ಒಂದು ರೂಪಾಯಿ ವರಮಾನದಲ್ಲಿ 18 ಪೈಸೆ ಸಾಲ ಮರುಪಾವತಿಗಾಗಿ ವ್ಯಯ ಮಾಡಲಿದೆ.) ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳು ನೇರವಾಗಿ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಪಟ್ಟಿವೆ.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಕಿರುವ ಅಭಿವೃದ್ಧಿ ಮಾದರಿಗೆ ತಮ್ಮ ಮಾದರಿ ಉತ್ತರ ಎನ್ನುವ ರೀತಿಯಲ್ಲಿ ಅವರು ಈ ಮಾತು ಹೇಳುತ್ತಿರುವುದು ಯಾರಿಗಾದರೂ ಗೊತ್ತಾಗುತ್ತದೆ. ಆದರೆ, ಕರ್ನಾಟಕವು ಕಳೆದ ಮೂರು ವರ್ಷಗಳಲ್ಲಿ ಶೂನ್ಯ ಭೌತಿಕ ಅಭಿವೃದ್ಧಿ ಸಾಧಿಸಿರುವುದು ಜಗತ್ತಿಗೇ ತಿಳಿದ ಸಂಗತಿಯಾಗಿದೆʼ ಎಂದು ಅವರು ಕಿಡಿ ಕಾರಿದ್ದಾರೆ.
ಹೊಸ ಆಲೋಚನೆಗಳು ಇಲ್ಲದ ಬಜೆಟ್ :
ʻಒಂದು ರಾಜ್ಯವನ್ನು ವಿಕಾಸದ ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕಾದರೆ ಅದಕ್ಕೆ ಹೊಸ ಆಲೋಚನೆಗಳು, ಚಿಂತನೆಗಳು ಬೇಕು. ಸಿದ್ದರಾಮಯ್ಯನವರು ಎಲ್ಲ ರೀತಿಯಿಂದ ದಣಿದಿದ್ದಾರೆ. ಅವರಿಗೆ ವಯಸ್ಸಾಗಿದೆ. ವಯೋಸಹಜ ದೈಹಿಕ ಸಮಸ್ಯೆಗಳೂ ಅವರಿಗೆ ಇವೆ. ಈ ದಣಿವು ಬಜೆಟ್ನಲ್ಲಿ ವ್ಯಕ್ತವಾಗುತ್ತಿರುವುದು ರಾಜ್ಯದ ವಿಕಾಸದ ದೃಷ್ಟಿಯಿಂದ ಮಾರಕ. ಬಹುಶಃ ಅದಕ್ಕಾಗಿಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೊಸ ರಕ್ತಕ್ಕೆ ಅವಕಾಶ ಕೊಡಬೇಕುʼ ಎಂದು ಹೇಳುತ್ತಿರಬಹುದು ಎಂದು ಸುರೇಶ ಗೌಡರು ಸೂಕ್ಷ್ಮವಾಗಿ ಹೇಳಿದ್ದಾರೆ.
ಗ್ಯಾರಂಟಿ ಮರು ಚಿಂತನೆ ಬೇಕಿತ್ತು :
ಕರ್ನಾಟಕವು ನೀರಾವರಿ, ರಸ್ತೆ, ಶಿಕ್ಷಣ, ಆರೋಗ್ಯ ಮುಂತಾದ ವಿಚಾರಗಳಲ್ಲಿ ದೇಶಕ್ಕೆ ಮಾದರಿಯಾಗಿದ್ದ ಒಂದು ಕಾಲ ಇತ್ತು. ಆದರೆ, ಈ ಸಾರಿಯ ಬಜೆಟ್ನಲ್ಲಿಯೂ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಿದ್ದಾರೆ. ಇದರಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಉಂಟಾಗುತ್ತದೆ. ನೀರಾವರಿಗೆ ಈ ಸಾರಿಯೂ ಕೇವಲ 22,436 ಕೋಟಿ ರೂಪಾಯಿ ಮೀಸಲು ಇರಿಸಿದ್ದಾರೆ. ತುಮಕೂರು ಜಿಲ್ಲೆಯ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸುವ ಕುರಿತು ಯಾವ ಹೊಸ ಭರವಸೆಯ ಮಾತೂ ಬಜೆಟ್ನಲ್ಲಿ ಇಲ್ಲ. ಕಳೆದ ವರ್ಷ ಹೇಳಿದ ಮಾತನ್ನೇ ಈ ವರ್ಷವೂ ಪುನರುಚ್ಚರಿಸಲಾಗಿದೆ. ಹೀಗಾಗಿ ಇದು ತೀರಾ ನಿರಾಶಾದಾಯಕ ಬಜೆಟ್ ಆಗಿದೆ. ಈ ಬಜೆಟ್ನಿಂದ ಕರ್ನಾಟಕ ನಿಂತಲ್ಲಿಯೇ ನಿಂತಿರುತ್ತದೆ. 17 ಬಜೆಟ್ ಮಂಡಿಸುವುದು ದಾಖಲೆಯಾಗಿರಬಹುದು. ಆದರೆ, ಕರ್ನಾಟಕದ ಪ್ರಗತಿಯನ್ನು ಸ್ಥಗಿತಗೊಳಿಸಿರುವ ಅಪಯಶಸ್ಸಿಗೂ ಸಿದ್ದರಾಮಯ್ಯನವರು ಭಾಜನರಾಗಬೇಕಾಗುತ್ತದೆ ಎಂದು ಅತ್ಯಂತ ವಿಷಾದದಿಂದ ಹೇಳಬೇಕಾಗುತ್ತದೆʼ ಎಂದು ಅವರು ಹೇಳಿದ್ದಾರೆ.
ಕಾಲೇಜು ಚುನಾವಣೆ ಸ್ವಾಗತಾರ್ಹ:
ʻಆದರೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿರುವುದನ್ನು ಒಬ್ಬ ಮಾಜಿ ವಿದ್ಯಾರ್ಥಿ ನಾಯಕನಾಗಿ ನಾನು ಸ್ವಾಗತಿಸುತ್ತೇನೆ. ಏಕೆಂದರೆ ನಾಯಕತ್ವ ಹುಟ್ಟಿಕೊಳ್ಳುವುದೇ ಈ ಹಂತದಲ್ಲಿʼ ಎಂದು ಅವರು ತಿಳಿಸಿದ್ದಾರೆ.