ತುಮಕೂರು- ಇಲ್ಲಿನ ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 48ನೇ ವರ್ಷದ 28 ದಿನಗಳ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿಯಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಚಾಲನೆ ನೀಡಲಾಯಿತು.
48ನೇ ವರ್ಷದ ಗಣೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮನಸ್ಸು ಮತ್ತು ಭಾವನೆಗಳು ಶುದ್ಧಿಗೊಳಿಸುವಂತಹದ್ದು ಹಬ್ಬಗಳ ಆಚರಣೆಯ ಮುಖ್ಯ ಸಂದೇಶವಾಗಿದೆ, ಎಲ್ಲ ಸಮುದಾಯದವರು ಸಾಂದರ್ಭಿಕವಾಗಿ ಹಬ್ಬಗಳನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಎಂದರು.

ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯವರು ಕಳೆದ 48 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಇನ್ನು ಎರಡು ವರ್ಷ ಕಳೆದರೆ ಸುಪರ್ಣ ಮಹೋತ್ಸವ ಆಚರಿಸುವ ಸಂದರ್ಭ ಬಹುತ್ತಿದೆ. ಮತ್ತಷ್ಟು ಜನರನ್ನು ಸೇರಿಸುವ ಮೂಲಕ ಸುವರ್ಣ ಮಹೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಬೇಕು ಎಂದರು.
ಮಹಾದ್ವಾರ ಉದ್ಘಾಟಿಸಿದ ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಡೀ ನಾಡು ಸಂಭ್ರಮದಿಂದ ಗಣೇಶನ ಪ್ರತಿಷ್ಠಾಪನಾ ಉತ್ಸವದಲ್ಲಿ ಭಾಗಿಯಾಗಿದೆ. ಹಾಗೆಯೇ ಸಿದ್ದಿವಿನಾಯಕ ಸೇವಾ ಮಂಡಳಿ ಕಳೆದ 48 ವರ್ಷಗಳಿಂದ ನಗರದಲ್ಲಿ ಗಣಪತಿ ಹಬ್ಬವನ್ನು ಮಾಡುತ್ತಾ ಬಂದಿದೆ. ನಿರಂತರವಾಗಿ 48 ವರ್ಷಗಳಿಂದ ವಿಘ್ನೇಶ್ವರನ ಜಾತ್ರೆ ನಡೆಸಿಕೊಂಡು ಬರುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
.
ದೃಶ್ಯಾವಳಿ ಉದ್ಘಾಟಿಸಿ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಕಳಸ ಪ್ರಾಯವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಅಭಿವೃದ್ಧಿ ಕಾರ್ಯಕ್ಕೆ ಶಾಸಕರ ಅನುದಾನ ನೀಡುವುದಾಗಿ ಭರವಸೆ ನೀಡಿದ ಅವರು, ಮಂಡಳಿಯ ಇತಿಹಾಸ ಕಾಪಾಡಿಕೊಂಡು ಹೋಗುವುದು ಮಂಡಳಿಯ ಪ್ರತಿಯೊಬ್ಬ ಸzಸ್ಯರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಾತನಾಡಿ, ರಾಜ್ಯದಲ್ಲಿ ಅತಿಹೆಚ್ಚು ಹಳೆಯ ಇತಿಹಾಸವನ್ನು ಸಿದ್ದಿವಿನಾಯಕ ಸೇವಾ ಮಂಡಳಿ ಹೊಂದಿದೆ. ಭಕ್ತಿ ಭಾವದಿಂದ ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ಆಚರಿಸುತ್ತಿರುವುದು ಸಂತೋಷಕರ ವಿಚಾರ ಎಂದರು.
ಗಣೇಶ ಹಬ್ಬ ಸಮಾಜದಲ್ಲಿ ಒಗ್ಗಟ್ಟು ಪ್ರದರ್ಶನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಎಲ್ಲರಲ್ಲೂ ಮನೆಯಲ್ಲೇ ಕುಳಿತು ಹಬ್ಬ ಆಚರಿಸುವ ಬದಲು ಇಂತಹ ಮಂಡಳಿಗಳಿಗೆ ಸಹಕಾರ ನೀಡಿ ಹಬ್ಬ ಆಚರಣೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಸಿದ್ದಿವಿನಾಯಕ ಸೇವಾ ಮಂಡಳಿಯ ಅಧ್ಯಕ್ಷ ಹೆಚ್.ಆರ್.ನಾಗೇಶ್ ಮಾತನಾಡಿ, 1977ರಿಂದ ಈ ಸಿದ್ದಿ ವಿನಾಯಕ ಸೇವಾ ಮಂಡಳಿ ಶ್ರೀ ಸಿದ್ದಗಂಗಾ ಶ್ರೀಗಳ ನೇತೃತ್ವದಲ್ಲಿ ಆರಂಭವಾದ ಗಣೇಶಮೂರ್ತಿ ಪ್ರತಿಷ್ಠಾಪನೆ ಯಾವುದೇ ವಿಘ್ನವಿಲ್ಲದೆ ನಡೆಯುತ್ತಿದೆ. ಸುಮಾರು 28 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಉತ್ಸವದಲ್ಲಿ ದೇಶದ ಹಿರಿಯ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮ ನೀಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಮುದಾಯಭವನ್ನು ಶುಭ ಸಮಾರಂಭಗಳಿಗೆ ಅತಿ ಕಡಿಮೆ ಬಾಡಿಗೆಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಮಂಡಳಿಯಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಕಲಾಮಂಟಪ, ಆವರಣದಲ್ಲಿ ಕಾಂಕ್ರೀಟ್ ಹಾಕಲಾಗಿದೆ. ಇದರೊಂದಿಗೆ ಅಗತ್ಯ ಇರುವ ಕೆಲಸ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ಮುಂದಿನ 2 ವರ್ಷದಲ್ಲಿ ಮಂಡಳಿಗೆ 50 ವರ್ಷ ತುಂಬಲಿದ್ದು, ಶ್ರೀಗಳ ಆಶಯದಂತೆ ಸುವರ್ಣ ಮಹೋತ್ಸವವನ್ನು ಎಲ್ಲರನ್ನು ಒಗ್ಗೂಡಿಸಿಕೊಂಡು ಬಹಳ ಅದ್ದೂರಿಯಿಂದ ಆಚರಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷ ಹೆಚ್.ಆರ್. ನಾಗೇಶ್, ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್, ಕೋರಿ ಮಂಜಣ್ಣ, ರಾಘವೇಂದ್ರ, ಜಗಜ್ಯೋತಿ ಸಿದ್ದರಾಮಯ್ಯ ಟಿ.ಎಸ್, ಪ್ರಭು ಎಸ್.ಜಿ., ಆರ್.ಜೆ. ಸುರೇಶ್, ರೇಣುಕಾ ಪರಮೇಶ್, ಜಿಯಾವುಲ್ಲಾ, ಅನುಸೂಯಮ್ಮ, ನಟರಾಜು, ಶ್ರೀನಾಥ್ ಮತ್ತಿತರರು ಉಪಸ್ಥಿತರಿದ್ದರು.