ವೀರಶೈವ-ಲಿಂಗಾಯಿತರು ಒಗ್ಗೂಡಿದಾಗ ಸಮಾಜ ಅಭಿವೃದ್ಧಿ ಸಾಧ್ಯ-ಶ್ರೀ ಸಿದ್ದಲಿಂಗ ಸ್ವಾಮೀಜಿ

ತುಮಕೂರು:ವೀರಶೈವ, ಲಿಂಗಾಯತರಲ್ಲಿ ಐಕ್ಯತೆ ಮತ್ತು ಅಭಿವೃದ್ದಿ ಕಾಣುವುದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶ್ರೀಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ, ತುಮಕೂರು ಜಿಲ್ಲಾ ಘಟಕದ ವಸತಿ ವತಿಯಿಂದ ಆಯೋಜಿಸದಸ ಸೇವಾಧೀಕ್ಷೆ,ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ತುಮಕೂರು ಜಿಲ್ಲಾ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡಿ,ದಿಕ್ಸೂಚಿ ಭಾಷಣ ಮಾಡಿದ ಮಹಾಸಭಾದ ಕರ್ನಾಟಕ ರಾಜ್ಯಘಟಕದ ಅಧ್ಯಕ್ಷ ಶಂಕರಬಿದರಿ, ಇಂದು ಸೇವಾ ದೀಕ್ಷೆ ಸ್ವೀಕರಿಸಿರುವ ಎಲ್ಲಾ ಪದಾಧಿಕಾರಿಗಳು ಮುಂದಿನ ಐದು ವರ್ಷಗಳ ಕಾಲ ವೀರಶೈವ,ಲಿಂಗಾಯಿತ ಮಹಾಸಭಾವನ್ನು ಮುನ್ನೆಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ರೇಣುಕಾಚಾರ್ಯರು ಸೇರಿದಂತೆ ಬಸವಾದಿ ಶರಣರ ಆಶೀರ್ವಾದ ಇವರ ಮೇಲಿದೆ.ಇವರ ಜೊತೆ ಕೈಜೋಡಿಸುವ ಮೂಲಕ ಸಮಾಜದ ಅರ್ಥಿಕ, ಸಾಮಾಜಿಕ,ಶೈಕ್ಷಣಿಕ ಉನ್ನತ್ತಿಗೆ ಸಹಕಾರ ನೀಡಬೇಕಿದೆ ಎಂದರು.

ಭಾರತದಲ್ಲಿ ವೀರಶೈವ,ಲಿಂಗಾಯಿತರು ಬಹುಸಂಖ್ಯೆಯಲ್ಲಿದ್ದಾರೆ.ಆದರೆ ಒಗ್ಗಟ್ಟಿನ ಕೊರತೆಯಿಂದ ಎಲ್ಲಾ ವರ್ಗಗಳಲ್ಲಿಯೂ ಹಿಂದುಳಿದಿದ್ದೇವೆ. ಭಾರತದ ಒಟ್ಟಾರೆ ಜನಸಂಖ್ಯೆಯ ಶೇ3 ರಷ್ಟಿರುವ ಬ್ರಾಹ್ಮಣರೇ ಇಡೀ ದೇಶವನ್ನು ಲೀಡ್ ಮಾಡುತ್ತಿದ್ದಾರೆ. ಎಲ್ಲಾ ರಂಗದಲ್ಲಿಯೂ ಬ್ರಾಹ್ಮಣ ಸಮುದಾಯ ರಾಜಕೀಯವಾಗಿ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸಿಂಹಪಾಲು ಪಡೆದಿದೆ.ಕೇಂದ್ರದ ಮಂತ್ರಿ ಮಂಡಲದಲ್ಲಿ 18 ಜನ ಕ್ಯಾಬಿನೆಟ್ ದರ್ಜೆ ಸಚಿವರಿದ್ದಾರೆ.ನಮ್ಮವರಿಗೆ ಇದುವರೆಗೂ ಕ್ಯಾಬಿನೆಟ್ ಸ್ಥಾನಮಾನ ಸಿಕ್ಕಿಲ್ಲ. ಐಎಎಸ್, ಐಪಿಎಸ್, ರಾಜ್ಯಪಾಲರ ಹುದ್ದೆಗಳಲ್ಲಿ ಆ ಸಮುದಾಯವೇ ಹೆಚ್ಚಿದೆ.ಇದಕ್ಕೆ ಸಂಘಟನೆಯ ಕೊರತೆಯೇ ಕಾರಣ.ವೀರಶೈವ,ಲಿಂಗಾಯಿತ ಎಂಬ ನಮ್ಮಲ್ಲಿನ ಒಡಕು ಹೋಗಬೇಕು.ಲಿಂಗೈಕ್ಯ ಡಾ.ಶ್ರೀಶಿವಕುಮಾರಸ್ವಾಮೀಜಿಗಳು ಹೇಳಿದಂತೆ ವೀರಶೈವ, ಲಿಂಗಾಯಿತ ಬೇರೆ ಬೇರೆಯಲ್ಲ. ಎರಡು ಒಂದೇ.ನಮ್ಮ ನಡುವಿನ ವೆತ್ಯಾಸವೆಂದರೆ ವೀರಶೈವರೆಂದರೆ ಸಂಸ್ಕøತ, ಲಿಂಗಾಯಿತರೆಂದರೆ ಕನ್ನಡ.ಜಾಗತಿಕ ಲಿಂಗಾಯಿತ ಮಹಾಸಭಾದವರು ನಮ್ಮನ್ನು ಏನು ಟೀಕಿಸಲು ಅದಕ್ಕೆ ತೆಲೆ ಕೆಡಿಸಿಕೊಳ್ಳುವುದು ಬೇಡ ಎಂದು ಶಂಕರ ಬಿದರಿ ಕಿವಿ ಮಾತು ಹೇಳಿದರು.

ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,ಹನ್ನೆರಡೆನೇ ಶತಮಾನದ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿರುವ ಯಾವುದಾದರೂ ಸಮುದಾಯಗಳಿದ್ದರೆ ಅದು ವೀರಶೈವ ಮತ್ತು ಲಿಂಗಾಯಿತ ಮಾತ್ರ. ನಮ್ಮಲ್ಲಿಯೇ ಸಣ್ಣ ಸಣ್ಣ ಸಂಘಟನೆಗಳು ಹುಟ್ಟಿಕೊಂಡು ಶಕ್ತಿ ಕುಂದಿದೆ.ಹಾಗಾಗಿ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಹೆಸರಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು.ರಾಜಕೀಯ ಕ್ಷೇತ್ರವನ್ನು ಹೊರತು ಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಒಗ್ಗಟ್ಟು ಅನಿವಾರ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ವೀರಶೈವ,ಲಿಂಗಾಯಿತರು ಸುಮಾರು 7-8ಲಕ್ಷ ಜನಸಂಖ್ಯೆ ಇದೆ. ಆದರೆ ಮಹಾಸಭಾದಲ್ಲಿ ಸದಸ್ಯರಾಗಿರುವುದು ಕೇವಲ 2 ಸಾವಿರ ಜನ ಮಾತ್ರ. ಮಹಾಸಭಾದ ತೀರ್ಮಾನದಂತೆ ಮುಂದಿನ ಒಂದು ವರ್ಷದಲ್ಲಿ ರಾಜ್ಯದ ಪ್ರತಿ ಮನೆಯಲ್ಲಿಯೂ ಓರ್ವ ಸದಸ್ಯನನ್ನು ನೊಂದಾಯಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ಕೆಲಸವನ್ನು ನಾನು ಮತ್ತು ನನ್ನ ತಂಡ ಶಿರಾಸಹ ವಹಿಸಿ ಪಾಲಿಸುತ್ತೇವೆ.ಸಮುದಾಯದ ಅರ್ಥಿಕ, ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗೆ ಒಗ್ಗಟ್ಟು ಮುಖ್ಯವಾಗಿದೆ ಎಂದರು.

ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯದಲ್ಲಿ ಸುಮಾರು 55 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ವೀರಶೈವ, ಲಿಂಗಾಯಿತರನ್ನು ರಾಜಕೀಯವಾಗಿ ನಿರ್ಲಕ್ಷಿಸಲಾಗುತ್ತಿದೆ.ಬೊಮ್ಮಾಯಿ ಅವರನ್ನು ಹೊರತು ಪಡಿಸಿದರೆ ಉಳಿದವರಿಗೆ ಕ್ಯಾಬಿನೇಟ್ ದರ್ಜೆ ಸ್ಥಾನಮಾನ ಸಿಕ್ಕಿಲ್ಲ.ಇದಕ್ಕೆ ನಮ್ಮಲ್ಲಿನ ಒಗ್ಗಟ್ಟಿನ ಕೊರತೆ ಕಾರಣ.ತೆಲಂಗಾಣ, ಆಂದ್ರ,ಮಹಾರಾಷ್ಟ್ರ,ಕೇರಳ, ಕರ್ನಾಟಕ ಈ ಭಾಗದಲ್ಲಿ ನಾವು ಹೆಚ್ಚಿನ ಜನಸಂಖ್ಯೆ ಇದ್ದರೂ ನಿರೀಕ್ಷಿತ ಮಟ್ಟದ ರಾಜಕೀಯ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠದ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ, ಡಾ.ಶಿವರುದ್ರಶಿವಾಚಾರ್ಯ ಸ್ವಾಮೀಜಿ, ಬೆಟ್ಟದಳ್ಳಿ ಶ್ರೀಚಂದ್ರಶೇಖರ ಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ ವಹಿಸಿದ್ದರು. ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ.ಎಸ್.ಸಚ್ಚಿದಾನಂದಮೂರ್ತಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಎಸ್.ಕೆ.ರಾಜಶೇಖರ್, ಮಹಿಳಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮುಕ್ತಾಂಭ, ಜಿಲ್ಲಾ ಪದಾಧಿಕಾರಿಗಳಾದ ಡಾ.ಎಸ್.ಪರಮೇಶ, ಎಸ್.ಡಿ.ದಿಲೀಪ್‍ಕುಮಾರ್, ಎಲ್.ಪಿ.ರವಿಶಂರ್, ಶ್ರೀಮತಿ ಗೀತಾ ರುದ್ರೇಶ್, ಶಶಿ ಹುಲಿಕುಂಟೆ ಮಠ್, ವಿಶ್ವನಾಥ್ ಅಪ್ಪಾಜಪ್ಪ, ಆರ್.ಬಿ.ಜಯಣ್ಣ, ಟಿ.ಎಸ್.ರುದ್ರಪ್ರಸಾದ್, ಟಿ.ಎಂ.ವಿಜಯಕುಮಾರ್, ಟಿ.ಎಂ.ವಿಜಯಕುಮಾರ್ ತಳವಾರನಹಳ್ಳಿ, ಶ್ರೀಮತಿ ಬಿಂದು, ಯುವ ಘಟಕದ ಅಧ್ಯಕ್ಷ ಡಾ.ಕೆ.ಎಲ್.ದರ್ಶನ್, ಮಹಿಳಾ ಘಟಕದ ಅಧ್ಯಕ್ಷೆ ಮಮತ ದಿವಾಕರ್ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜಕ್ಕಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *