ತುಮಕೂರು: ಇಂದಿನ ರಾಜಕೀಯ, ಆಡಳಿತ ವ್ಯವಸ್ಥೆ ಸರಿಯಿದೆಯೆ? ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ವ್ಯವಸ್ಥೆ ಸುಧಾರಣೆ ಮಾಡಲು ಎಲ್ಲರೂ ಪ್ರಯತ್ನಿಸಬೇಕು. ಜೆಡಿಯು ಅಭ್ಯರ್ಥಿಯೊಂದಿಗೆ ಈ ಬಾರಿಯ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಭ್ರಷ್ಟಾಚಾರರಹಿತವಾಗೇ ನಡೆಸುತ್ತೇವೆ ಎಂದು ಮಾಜಿ ಶಾಸಕ, ಸಂಯುಕ್ತ ಜನತಾದಳ ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಹೇಳಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕೆ.ನಾಗರಾಜು ಅವರು ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯುನ ಅಧಿಕೃತ ಅಭ್ಯರ್ಥಿ. ಇವರು ಈಗಾಗಲೇ ಕ್ಷೇತ್ರದಾದ್ಯಂತ ಪ್ರಚಾರ ಆರಂಭಿಸಿದ್ದಾರೆ. ಪಾರದರ್ಶಕವಾದ ಮಾದರಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದರು.
ಚುನಾವಣೆಯಲ್ಲಿ ಎನ್ಡಿಎ ಜೊತೆ ಜೆಡಿಯು ಮೈತ್ರಿ ಮಾಡಿಕೊಳ್ಳುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಿಮಾ ಪಟೇಲ್, ಮೈತ್ರಿ ಇಲ್ಲ, ಅವರ ಬೆಂಬಲ ಕೋರುತ್ತೇವೆ, ಕೊಟ್ಟರೆ ಬೆಂಬಲ ಪಡೆಯುತ್ತೇವೆ. ಇಲ್ಲವಾದರೆ ಜೆಡಿಯು ಪ್ರತ್ಯೇಕವಾಗಿ ಸ್ಪರ್ಧೆ ಮಾಡುತ್ತದೆ ಎಂದರು. ಈಗಿನ ಚುನಾವಣೆ ವ್ಯವಸ್ಥೆ ಬಗ್ಗೆ ಎಲ್ಲರಿಗೂ ಬೇಸರವಾಗಿದೆ. ಆದರೆ ಸರಿಮಾಡುವವರು ಯಾರು? ನಾವೆಲ್ಲರೂ ಸರಿಮಾಡಬೇಕು. ಮಾಡಬೇಕು ಎಂಬ ಆಲೋಚನೆ ಮಾಡಿ ಮುಂದುವರೆದರೆ ಸಾಧ್ಯವಾಗುತ್ತದೆ. ನಮಗೆ ಎಂತಹ ಭವಿಷ್ಯ ಬೇಕು ಎಂದು ನಾವು ಚಿಂತನೆ ಮಾಡದೆ ಇನ್ಯಾರು ಮಾಡಬೇಕು? ಪ್ರಸ್ತುತ ರೀತಿಯ ಆಡಳಿತ ಹಾಗೂ ರಾಜಕೀಯ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಎಲ್ಲರಲ್ಲಿಯೂ ಆಲೋಚನೆ ಬರಬೇಕು ಎಂದು ಆಶಿಸಿದರು.
ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ.ಜೆ.ಹೆಚ್.ಪಟೇಲ್ ಅವರ ಜನ್ಮದಿನ ಅಕ್ಟೋಬರ 1, ಮೃತಪಟ್ಟ ದಿನ ಡಿಸೆಂಬರ್ 12. ಹೀಗಾಗಿ ಜನ್ಮದಿನ ಆಚರಣೆ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಈ ತಿಂಗಳ 12ರಂದು ನಗರದ ಕನ್ನಡ ಭವನದಲ್ಲಿ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರೆ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧ್ಯಕ್ಷತೆವಹಿಸುವರು. ವಿವಿಧ ಕ್ಷೇತ್ರಗಳ ಸಾಧಕರು, ರಾಜಕೀಯ ನಾಯಕರು ಭಾಗವಹಿಸುವರು. ವ್ಯವಸ್ಥೆ ಸುಧಾರಣೆಗೆ ತಾವೇನು ಕೊಡುಗೆ ಕೊಡುತ್ತೇವೆ ಎನ್ನುವ ಬಗ್ಗೆ ಅತಿಥಿಗಳು ಮಾತನಾಡುವರು ಎಂದು ಮಹಿಮಾ ಪಟೇಲ್ ಹೇಳಿದರು.
ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಮಾತನಾಡಿ, ಈಗಾಗಲೇ ಸಾಕಷ್ಟು ಬಾರಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದೇವೆ. ಯಾವುದೇ ಪಕ್ಷದ ಬೆಂಬಲದ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಮತದಾರರ ನೋಂದಣಿ ಬಗ್ಗೆ ವ್ಯಾಪಕ ಪ್ರಚಾರ ಮಾಡುತ್ತಿದ್ದೇವೆ. ಹಿಂದಿನ ಚುನಾವಣೆಗಳಲ್ಲಿ ಮತ ಚಲಾಯಿಸಿರುವ ಪದವಿಧರ ಮತದಾರರೂ ಈ ಬಾರಿಯೂ ಮತ್ತೆ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು. ಅದಕ್ಕಾಗಿ ಕ್ಷೇತ್ರದಾದ್ಯಂತ ಪ್ರಚಾರ ಮಾಡಿ ನೋಂದಣಿ ಮಾಡಿಸಲು ಪದವಿಧರರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಹೇಳಿದ ಅವರು, ಈ ಬಾರಿ ಕ್ಷೇತ್ರದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತದಾರರನ್ನು ನೋಂದಾವಣೆ ಆಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ಬೇಕಾಗಿರುವ ದಾಖಲಾತಿ, ನೋಂದಣಿ ಪ್ರಕ್ರಿಯೆ ಬಗ್ಗೆ ಕ್ಷೇತ್ರದೆಲ್ಲೆಡೆ ಅರಿವು, ಮಾರ್ಗದರ್ಶನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪಡೆದವರು ನಮೂನೆ 18ರ ಅರ್ಜಿ ಭರ್ತಿ ಮಾಡಿ, ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್, ಪದವಿ ಪ್ರಮಾಣ ಪತ್ರದೊಂದಿಗೆ ಆಯಾ ತಾಲ್ಲೂಕಿನ ಚುನಾವಣಾ ಶಾಖೆಗೆ ನೀಡಿ ಮತದಾರರ ಪಟ್ಟಿಯಲ್ಲಿ ನೋಂದಾಗಿಸಿಕೊಳ್ಳಲು ಡಾ.ನಾಗರಾಜು ಕೋರಿದರು.
ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್.ರಂಗನಾಥ್, ಹೆಚ್.ಸಿ.ಸುರೇಶ್, ಯುವ ಘಟಕ ಕಾರ್ಯಾಧ್ಯಕ್ಷ ಡಿ.ಜೆ.ಪ್ರಭು, ವಕ್ತಾರ ಮೋಹನ್, ನಗರ ಅಧ್ಯಕ್ಷ ಪರಮೇಶ್ ಸಿಂಧಗಿ, ಮುಖಂಡರಾದ ಮಂಜುನಾಥ್, ಮೈನಾವತಿ, ಶಾಂತಕುಮಾರಿ ಮೊದಲಾದವರು ಭಾಗವಹಿಸಿದ್ದರು.
ಪತ್ರಿಕಾಗೋಷ್ಠಿ ನಂತರ ಮಹಿಮಾ ಪಟೇಲ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿಯವರನ್ನು ಭೇಟಿ ಮಾಡಿ, ಈ ಬಾರಿ ಆಗ್ನೇಯ ಪದವಿಧರ ಕ್ಷೇತ್ರದ ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುವ ಕುರಿತು ಚರ್ಚಿಸಿದರು. ಮತದಾರರ ಪಟ್ಟಿಗೆ ನೋಂದಣಿ ಪ್ರಕ್ರಿಯೆಯಲ್ಲಿ ಪದವಿಧರರಿಗೆ ಸ್ಪಂದಿಸಲು ಸಂಬಂಧಿಸಿದವರಿಗೆ ಸೂಚನೆ ನೀಡುವಂತೆ ಕೋರಿದರು. ಈ ವೇಳೆ ಜೆಡಿಯು ಅಭ್ಯರ್ಥಿ ಡಾ.ನಾಗರಾಜು ಹಾಗೂ ಮುಖಂಡರು