ಶಿಸ್ತು-ಆರೋಗ್ಯಕ್ಕೆ ಕ್ರೀಡೆ ಅವಶ್ಯಕ-ಗೃಹ ಸಚಿವರು

ತುಮಕೂರು- ಕ್ರೀಡೆ ಮನುಷ್ಯನಿಗೆ ಶಿಸ್ತು, ಆರೋಗ್ಯದ ಜತೆಗೆ ಜೀವನದಲ್ಲಿ ಪಾಠ ಕಲಿಸುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಬಲೂನ್ ಹಾಗೂ ಪಾರಿವಾಳಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆ ಮನುಷ್ಯನ ಜೀವನದಲ್ಲಿ ಬಹಳ ಉಪಯುಕ್ತವಾಗಿದ್ದು, ಶಿಸ್ತು ಕಲಿಸುವುದು ಮಾತ್ರಲ್ಲ ಜೀವನದಲ್ಲಿ ಅನೇಕ ಪಾಠವನ್ನು ಕಲಿಸುತ್ತದೆ ಎಂದು ಅವರು ಹೇಳಿದರು.

ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗೆಲುವನ್ನು ಎಷ್ಟು ಸಂತೋಷದಿಂದ ಸ್ವೀಕರಿಸುತ್ತೇವೋ, ಅಷ್ಟೇ ಸಂತೋಷದಿಂದ ಸೋಲನ್ನು ಸ್ವೀಕರಿಸುವ ಮನೋಭಾವ ಹೊಂದಿರಬೇಕು. ಸೋಲು ಗೆಲುವಿನ ದಾರಿ ಎಂಬುದನ್ನು ಯಾರೂ ಮರೆಯಬಾರದು. ಕ್ರೀಡೆಯಂತೆಯೇ ಜೀವನದಲ್ಲೂ ಅನೇಕ ಬಾರಿ ಸೋಲುಗಳನ್ನು ಅನುಭವಿಸುತ್ತೇವೆ ಎಂದರು.

ಕ್ರೀಡೆಯಲ್ಲಿ ಸೋಲು ಅನುಭವಿಸಿದಾಗ ನಿರಾಶರಾಗದೆ ಮತ್ತೊಮ್ಮೆ ಗೆಲ್ಲಬೇಕು ಎಂಬ ಹುಮ್ಮಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಇದನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಮನುಷ್ಯನಿಗೆ ಮಾನಸಿಕವಾಗಿ ಶಾಂತಿ, ಸಮಾಧಾನವನ್ನು ಕ್ರೀಡೆ ತಂದು ಕೊಡುತ್ತದೆ. ಅಲ್ಲದೆ ಮನಸ್ಸು ಸಹ ಶುದ್ಧವಾಗುತ್ತದೆ. ಇದರೊಂದಿಗೆ ಶಾರೀರಿಕವಾಗಿಯೂ ಸದೃಢರಾಗಬಹುದು ಎಂದು ತಿಳಿಸಿದರು.

ಪೊಲೀಸ್ ಇಲಾಖೆ ಶಿಸ್ತು ಕಾಪಾಡುವ ಇಲಾಖೆ. ಸದಾ ಒತ್ತಡದಲ್ಲಿ ಸೇವೆ ಸಲ್ಲಿಸುವ ಪೊಲೀಸರು ವರ್ಷಕ್ಕೊಮ್ಮೆ ಆಯೋಜಿಸುವ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ ಒತ್ತಡ ನಿವಾರಿಸಿಕೊಳ್ಳಲು ಮುಂದಾಗಬೇಕು. ಇದರೊಂದಿಗೆ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಕರ್ನಾಟಕದ ಪೊಲೀಸರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ. 3 ರಷ್ಟು ಮೀಸಲಾತಿ ನೀಡಲಾಗಿದೆ. ಹಾಗೆಯೇ ಈ ಮೀಸಲಾತಿಯನ್ನು ಎಲ್ಲಾ ಇಲಾಖೆಗಳಿಗೂ ವಿಸ್ತರಣೆ ಮಾಡಲಾಗಿದೆ. ಬೇರೆ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ಶೇ. 2 ರಷ್ಟು ಮೀಸಲಾತಿ ನಿಗದಿಗೊಳಿಸಲಾಗಿದೆ.ಪೊಲೀಸ್‍ಗೆ ಮಾತ್ರ ಶೇ. 3 ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಹಾಗೆಯೇ ಭಾರತೀಯ ಸೇನೆಯಲ್ಲೂ ಸಹ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ತುಮಕೂರಿನ ತಿಲಕ್‍ಪಾರ್ಕ್ ಪೊಲೀಸ್ ಠಾಣೆಯ ಗುರುಪ್ರಸಾದ್ ಅವರು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್‍ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿ ದೇಶ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮನಸ್ಸು, ಸಂಕಲ್ಪ, ಸಾಧನೆ ಮಾಡುವ ಧೈರ್ಯ, ಛಲ ಇದ್ದೆ ಇಂತಹ ಸಾಧನೆಗಳು ಸಾಧ್ಯವಾಗುತ್ತದೆ. ಪ್ರತಿಭೆ ಇರುವವರು ಹೆಚ್ಚು ಹೆಚ್ಚು ಅಭ್ಯಾಸ ಮಾಡುವ ಮೂಲಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿರುವ ತಿಲಕ್‍ಪಾರ್ಕ್ ಪೊಲೀಸ್ ಠಾಣೆಯ ಗುರುಪ್ರಸಾದ್ ರವರನ್ನು ಸಚಿವರು ಅಭಿನಂದಿಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕುಣಿಗಲ್, ತಿಪಟೂರು, ಮಧುಗಿರಿ, ತುಮಕೂರು, ಸಿರಾ ಉಪವಿಭಾಗದ ಪೊಲೀಸರಿಂದ ಆಕರ್ಷಕ ಪಥಸಂಚಲನ ನಡೆಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಸದಾ ಕಾಲ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವರ್ಷಕ್ಕೊಮ್ಮೆ ಕ್ರೀಡಾಕೂಟದ ಅವಶ್ಯವಿದೆ. ಹೀಗಾಗಿ ಪ್ರತಿ ವರ್ಷವೂ ಕ್ರೀಡಾಕೂಟವನ್ನು ನಡೆಸಲಾಗುತ್ತಿದೆ ಎಂದರು.

ಪೆÇಲೀಸರ ದೈಹಿಕ-ಮಾನಸಿಕ ಆರೋಗ್ಯ ಸುಧಾಕರಣೆಗೆ ಕ್ರೀಡೆ ಸಹಕಾರಿ. ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಪೆÇಲೀಸರಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, 12ನೇ ಕೆಎಸ್‍ಆರ್‍ಪಿ ಬೆಟಾಲಿಯನ್ ಮುಖ್ಯಸ್ಥರಾದ ಹಂಜಾ ಹುಸೇನ್, ಅಡಿಷನಲ್ ಎಸ್ಪಿ ಪುರುಷೋತ್ತಮ್, ಜಿಲ್ಲೆಯ ಡಿವೈಎಸ್ಪಿಗಳು, ಸರ್ಕಲ್ ಇನ್ಸ್‍ಪೆಕ್ಟರ್‍ಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *