ಕಥಾಕೀರ್ತನಕಾರ, ರಂಗಭೂಮಿ, ನಾಟಕಕಾರ – ಒಬ್ಬ ನಟ ಇವೆಲ್ಲದರ ಸಮಾಗಮ ಲಕ್ಷ್ಮಣ್‍ದಾಸ್-ಬರಗೂರು ರಾಮಚಂದ್ರಪ್ಪ

ತುಮಕೂರು- ಲಕ್ಷ್ಮಣ್‍ದಾಸ್ ಮೂಲತಃ ರಂಗಭೂಮಿಯಿಂದ ಬಂದವರು. ಅವರೊಳಗೆ ಕಥಾಕೀರ್ತನಕಾರ, ರಂಗಭೂಮಿ, ನಾಟಕಕಾರ ಹಾಗೂ ಒಬ್ಬ ನಟನೂ ಇದ್ದಾನೆ. ಇವೆಲ್ಲದರ ಸಮಾಗಮ ಲಕ್ಷ್ಮಣ್‍ದಾಸ್ ಅವರು ಎಂದು ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಡಾ. ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಕಲಾಶ್ರೀ ಹಿರಿಯ ರಂಗ ಕಲಾವಿದರಾದ ಕಲಾಶ್ರೀ ಡಾ. ಲಕ್ಷ್ಮಣದಾಸ್ ರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವಂತಹ ದುಷ್ಟಶಕ್ತಿಗಳಿಂದ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ರಂಗಭೂಮಿ ಕಲೆಗೆ ಇದೆ, ಸಮಾಜದಲ್ಲಿ ವೃತ್ತಿ ರಂಗಭೂಮಿ ಭಾವೈಕ್ಯತೆಯನ್ನು ಕಟ್ಟಿಕೊಟ್ಟಿದೆ. ಮೂಲತಃ ರಂಗಭೂಮಿ ಕಲಾವಿದರಾದ ಲಕ್ಷ್ಮಣ್‍ದಾಸ್ ಅವರು ಒಂದು ರೂಪಕವಾಗಿ ಮುಖ್ಯವಾಹಿನಿಗೆ ಬರುವ ಮುಖೇನ ಸವಾಲು ಸ್ವೀಕರಿಸುವ ಅನೇಕ ಪ್ರತಿಭೆಗಳಿಗೆ ಉತ್ತೇಜಕರಾಗಿದ್ದಾರೆ ಎಂದರು.

ಲಕ್ಷ್ಮಣ್‍ದಾಸ್ ಮತ್ತು ನನ್ನದು ಬಹಳ ಅವಿನಾಭಾವ ಹಾಗೂ ಸೋದರ ಸಂಬಂಧ. ನನ್ನನ್ನು ಕಂಡರೆ ಅವರಿಗೆ ಅಪಾರ ಪ್ರೀತಿ ವಿಶ್ವಾಸ ಎಂದು ಹೇಳಿದರು.

ಲಕ್ಷ್ಮಣ್‍ದಾಸ್ ಅವರದು ಮಗುವಿನ ಮನಸ್ಸು. ಮನುಷ್ಯರಲ್ಲಿ ಮಗು ಮನಸ್ಸು ಇರುವುದು ಬಹಳ ಅಪರೂಪ. ಮಗು ಎಂದಿಗೂ ಮುಗ್ದತೆಗೆ ಹೆಸರಾದದ್ದು. ಮಗು ಸದಾ ಕುತೂಹಲ, ಮುಗ್ದತೆ ಹೊಂದಿರುತ್ತದೆ. ಅಂತಹ ಮನಸ್ಸು, ಮುಗ್ದತೆ ಲಕ್ಷ್ಮಣ್‍ದಾಸ್ ರವರಲ್ಲಿದೆ ಎಂದು ಅವರು ಬಣ್ಣಿಸಿದರು.

ಲಕ್ಷ್ಮಣ್‍ದಾಸ್ ಅವರಲ್ಲಿ ಅಪಾರ ಪ್ರೀತಿ, ಜೀವನ ಉತ್ಸಾಹವನ್ನು ಹೊಂದಿರುವ ಸಾಮಾಜಿಕ ಕಾಳಜಿ ಸದಾ ಜಾಗೃತವಾಗಿದೆ ಎಂದು ಅವರು ತಿಳಿಸಿದರು.

ರಂಗಭೂಮಿ ಸೇವೆಯನ್ನು ರಂಗಭೂಮಿ ಕ್ರಿಯಾಶೀಲತೆ ಎಂದು ಕರೆಯಬಹುದು. ಅನೇಕ ರಂಗಭೂಮಿ ನಾಟಕಗಳಲ್ಲಿ ಲಕ್ಷ್ಮಣ್‍ದಾಸ್ ಅವರು ಅಭಿನಯಿಸಿದ್ದಾರೆ. ಜತೆಗೆ ಅನೇಕ ಸಿನಿಮಾ ಕಲಾವಿದರೊಂದಿಗೆ ಬೇರೆ ಬೇರೆ ನಾಟಕಗಳಲ್ಲೂ ಅಭಿನಯಿಸಿರುವ ಅನುಭವ ಹೊಂದಿದ್ದಾರೆ ಎಂದ ಅವರು, ಲಕ್ಷ್ಮಣ್‍ದಾಸ್ ಅವರು ವೃತ್ತಿ ನಾಟಕಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕಲ್ಯಾಣಕ್ರಾಂತಿ ಎಂಬ ನಾಟಕಗಳಲ್ಲೂ ಪಾತ್ರ ಮಾಡಿದ್ದಾರೆ.

ಇದರೊಂದಿಗೆ 6 ನಾಟಕಗಳನ್ನು ಕುರಿತು ಪುಸ್ತಕ ಹಾಗೂ ಗುಬ್ಬಿ ಕಂಪೆನಿ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಏಕಕಾಲಕ್ಕೆ ಲೇಖಕರು, ನಟರು ಮತ್ತು ಸಂಸ್ಥೆಗಳನ್ನು ಸ್ಥಾಪನೆ ಮಾಡುವಂತಹ ಕ್ರಿಯಾಶೀಲರು, ಕಥಾಕೀರ್ತನಕಾರರು. ಎಲ್ಲಾ ಪ್ರತಿಭೆಗಳನ್ನು ಒಟ್ಟಿಗೆ ಹೊಂದಿರುವ ಕ್ರಿಯಾಶೀಲರು ಲಕ್ಷ್ಮಣ್‍ದಾಸರು ಎಂದು ಬಣ್ಣಿಸಿದರು.

ದಲಿತ ಸಮುದಾಯದಿಂದ ಬಂದು ಸಾಮಾಜಿಕ ಸೀಮೋಲ್ಲಂಘನೆ ಮಾಡಿದ್ದು ಬಹಳ ಮುಖ್ಯವಾದದ್ದು. ಈ ಸಾಮಾಜಿಕ ಸೀಮೋಲಂಘನೆಯ ಸಂಕೇತವಾಗಿ ಲಕ್ಷ್ಮಣ್‍ದಾಸ್ ರವರದ್ದು ಬಹಳ ಮುಖ್ಯ ವ್ಯಕ್ತಿತ್ವ. ಕಲೆಯ ಮುಖ್ಯವಾಹಿನಿಗೆ ಬರುವ ಜತೆಗೆ ತಮ್ಮ ಪ್ರತಿಭೆಯನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದರು.
ಕಲಾ ಪ್ರಕಾರಗಳು ಸಾಮಾಜಿಕ ವಿಭಜನೆಗೆ ಒಳಪಟ್ಟಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಇಂತಹ ಸಮಾಜದ ಒಳಗೆ ಅಲ್ಪಸ್ವಲ್ಪ ಬದಲಾವಣೆ ಆಗಿಲ್ಲ ಎನ್ನುವುದು ಸುಳ್ಳಾಗುತ್ತದೆ. ಶಿಕ್ಷಣ ಬಂದ ಮೇಲೆ ಸಮಾಜದಲ್ಲಿ ಅನೇಕ ರೀತಿಯ ಸ್ಥಿತ್ಯಂತರ ನಡೆದಿರುವುದೂ ಉಂಟು ಎಂದರು.

ಸಾಮಾಜಿಕ ಸೀಮೋಲ್ಲಂಘನೆಯ ಪ್ರತಿಭೆಗಳ ಸಂಖ್ಯೆ ಹೆಚ್ಚಾದಂತೆ ಜನರ ನಡುವೆ ಸಾಮರಸ್ಯವನ್ನು ನಾವು ನೋಡಬಹುದಾಗಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಗ್ರಾಮೀಣ ರಂಗಭೂಮಿಯನ್ನು ಸಶಕ್ತವಾಗಿ ಕಟ್ಟಿರುವುದು ತುಮಕೂರು ಜಿಲ್ಲೆಯಲ್ಲಿ ಮಾತ್ರ. ರಂಗಭೂಮಿ ಕಲಾವಿದರು ಅಭಿನಯಿಸಲು ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ಇಡೀ ರಾತ್ರಿ ನಾಟಕದಲ್ಲಿ ಅಭಿನಯಿಸುತ್ತಾರೆ. ಈ ಮೂಲಕ ಗ್ರಾಮೀಣ ರಂಗಭೂಮಿಯನ್ನು ಕಲಾವಿದರು ಗಟ್ಟಿಯಾಗಿ ಕಟ್ಟುತ್ತಿದ್ದಾರೆ ಎಂದರು.

ಗ್ರಾಮೀಣ ರಂಗಭೂಮಿಯ ಕಲಾವಿದರನ್ನು ಇದುವರೆಗೂ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿಲ್ಲ. ಇದಕ್ಕೆ ಕಾರಣ ರಂಗಭೂಮಿ ಕಲಾವಿದರು ಸಂಘಟಿತರಾಗದಿರುವುದೇ ಕಾರಣ ಎಂದರು.

ಗ್ರಾಮೀಣ ರಂಗಭೂಮಿ ಕಲಾವಿದರು ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿಲ್ಲ.
ಗ್ರಾಮೀಣ ರಂಗಭೂಮಿಯನ್ನು ಚೆನ್ನಾಗಿ ಕಟ್ಟಿ ಬೆಳೆಸಿದವರಲ್ಲಿ ಲಕ್ಷ್ಮಣ್‍ದಾಸ್ ಕೂಡ ಒಬ್ಬರು. ಎಲ್ಲ ವಿಷಯಗಳನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡಿರುವ ಲಕ್ಷ್ಮಣದಾಸ್ ರವರು ಅನೇಕ ಕಲಾವಿದರಿಗೆ ಪೆÇ್ರೀತ್ಸಾಹಕರಾಗಿದ್ದಾರೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಎಸ್. ನಾಗಣ್ಣ ಮಾತನಾಡಿ, ಹಿರಿಯ ರಂಗಭೂಮಿ ಕಲಾವಿದರಾಗಿರುವ ಡಾ. ಲಕ್ಷ್ಮಣ್‍ದಾಸ್ ಅವರು ವೃತ್ತಿಗಿಂತ ಪ್ರವೃತ್ತಿಯಲ್ಲಿ ಎಲ್ಲವನ್ನು ಹೆಚ್ಚು ಗಳಿಸಿಕೊಂಡಿದ್ದಾರೆ. ಇಂತಹ ಬಹುಮುಖ ಪ್ರತಿಭೆಯ ಕಲಾವಿದರಿಗೆ ಗೌರವ ಅಭಿನಂದನೆ ಸಲ್ಲಿಸುತ್ತಿರುವುದು ಅರ್ಥಪೂರ್ಣ ಮತ್ತು ಅವಿಸ್ಮರಣೀಯ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ಲಕ್ಷ್ಮಣ್‍ದಾಸ್ ಅವರು ಮಗುವಿನ ಮನಸ್ಸು ಹೊಂದಿರುವ ವ್ಯಕ್ತಿತ್ವವುಳ್ಳವರು. ರಂಗಭೂಮಿ, ಕಥಾಕೀರ್ತನ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದರು.

ಗ್ರಾಮೀಣ ರಂಗಭೂಮಿಗೆ ದೊಡ್ಡ ಕೊಡುಗೆಯನ್ನು ನೀಡಿರುವ ಹಿರಿಯ ರಂಗಕರ್ಮಿ ಡಾ. ಲಕ್ಷ್ಮಣ್‍ದಾಸ್‍ರವರಿಗೆ ದೇಶದ ಶ್ರೇಷ್ಠ ನಾಗರಿಕ ಪ್ರಶಸ್ತಿ ಸಲ್ಲಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ, ಹರಿಕಥಾ ವಿದ್ವಾನ್ ಕಲಾಶ್ರೀ ಡಾ. ಲಕ್ಷ್ಮಣ್‍ದಾಸ್ ರವರನ್ನು ಅಭಿನಂದಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕಲಾವಿದರ ಸಂಘದ ಅಧ್ಯಕ್ಷ ಶಿವಣ್ಣ, ಧನಿಯಕುಮಾರ್, ಯೋಗಾನಂದ್, ಎಂ.ವಿ. ನಾಗಣ್ಣ, ವಸಂತಕುಮಾರ್, ಡಾ. ಡಿ.ಎನ್. ಯೋಗೀಶ್ವರಪ್ಪ, ಉಮಾಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಚಿಕ್ಕಬೆಳ್ಳಾವಿ ಶಿವಕುಮಾರ್, ಲೋಕೇಶ್‍ದಾಸ್, ಗೋಪಾಲ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *