‘ಕನಸುಗಳನ್ನು ಬೆನ್ನಟ್ಟುವ ಭರವಸೆ ವಿದ್ಯಾರ್ಥಿಗಳದ್ದಾಗಬೇಕು’

ತುಮಕೂರು: ಕಲಿಕೆಯ ಸಮಯದ ಶ್ರಮ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಸಮಯದ ಮೌಲ್ಯವನ್ನು ಎಲ್ಲರೂ ಅರಿಯಬೇಕು. ಪದವಿ ಹಂತದಲ್ಲಿ ಕಂಡ ದೊಡ್ಡ ಕನಸುಗಳನ್ನು ಬೆನ್ನಟ್ಟುವ ಭರವಸೆ, ಗುರಿ ನಿಮ್ಮದಾಗಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಗುರುವಾರ ಆಯೋಜಿಸಿದ್ದ ‘ಆರೋಹಣ’ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಪದವಿಯ ನಂತರದ ಬದುಕೇನೆಂಬುದನ್ನು ವಿದ್ಯಾರ್ಥಿಗಳು ಈಗಲೇ ತೀರ್ಮಾನಿಸಬೇಕು. ಓದುವ ಸಮಯದಲ್ಲಿ ಮೋಜಿಗೆ ಹೆಚ್ಚಿನ ಸಮಯ ವ್ಯಯಿಸಿದರೆ ನಂತರ ಉದ್ಯೋಗದ ಹುಡುಕಾಟದಲ್ಲಿ ಬದುಕಿನ ಸಮಯ ವ್ಯರ್ಥವಾಗುತ್ತದೆ. ಸಮಯದ ಮಹತ್ವ ಅರಿತವನು ಸದಾ ಗೆಲ್ಲುತ್ತಾನೆ ಎಂದು ತಿಳಿಸಿದರು.

ವಿವಿಯ ಸಿಂಡಿಕೇಟ್ ಸದಸ್ಯ ಕೆ. ಆರ್. ದೇವರಾಜು ‘ಭಾರತದ ಷೇರು ಮಾರುಕಟ್ಟೆ ಹಾಗೂ ವಾಣಿಜ್ಯೋದ್ಯಮ’ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ವಿವಿ ಹಣಕಾಸು ಅಧಿಕಾರಿ ಪ್ರೊ. ಪಿ. ಪರಮಶಿವಯ್ಯ, ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಮುಖ್ಯಸ್ಥ ಪ್ರೊ. ಬಿ. ಶೇಖರ್, ಪ್ರಾಧ್ಯಾಪಕರದ ಪ್ರೊ. ಜಿ. ಸುದರ್ಶನ ರೆಡ್ಡಿ, ಪ್ರೊ. ಬಿ. ಕೆ ಸುರೇಶ್, ಎಂ.ಕಾಂ (ಮಾಹಿತಿ ವ್ಯವಸ್ಥೆ) ವಿಭಾಗದ ಮುಖ್ಯಸ್ಥ ಡಾ. ದೇವರಾಜಪ್ಪ ಎಸ್., ಉಪನ್ಯಾಸಕರಾದ ಎನ್. ವಿಜಯ್, ಬಿ. ಆರ್. ರಕ್ಷಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *