ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮೋಹನ್ ದಾಸ್ ವರದಿಯನ್ನ ಸಲ್ಲಿಕೆ ಮಾಡಿದ್ದರು. ಈ ವರದಿ ಇಂದು ಜಾರಿಯಾಗುತ್ತೆ ಅಂತಾನೇ ಎಲ್ಲರು ಭಾವಿಸಿದ್ದರು. ಆದರೆ ಅದಾಗಿಲ್ಲ. ಮತ್ತೆ ವರದಿ ಜಾರಿ ಮುಂದೂಡಿಕೆಯಾಗಿದೆ. ಒಳ ಮೀಸಲಾತಿಯಲ್ಲಿ ನಾವೆಲ್ಲಾ ಒಗ್ಗಟ್ಟಾಗಿರಬೇಕು ಎಂದು ಸಚಿವರು, ಶಾಸಕರು ಒಗ್ಗಟ್ಟಾಗಿದ್ದರು.
ಆದರೆ ಅವರಲ್ಲಿಯೇ ಮೂಡದ ಒಮ್ಮತ, ಅವರಲ್ಲಿರುವ ಒಂದಷ್ಟು ಭಿನ್ನಾಭಿಪ್ರಾಯಗಳಿಂದ ವರದಿ ಜಾರಿ ಮುಂದಕ್ಕೆ ಹೋಗಿದೆ.
ಮುಂದಿನ ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಜಾರಿ ಕುರಿತು ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಲ್ಲಿ ಒಟ್ಟು 17% ಮೀಸಲಾತಿಯನ್ನ ಐದು ವರ್ಗಗಳಾಗಿ ವಿಂಗಡಣೆ ಮಾಡಿ ಶಿಫಾರಸು ಮಾಡಲಾಗಿತ್ತು. ಪ್ರವರ್ಗ -ಎಯಿಂದ ಪ್ರವರ್ಗ ಇ ವರೆಗೂ ಒಳ ಮೀಸಲಾತಿ ಹಂಚಿಕೆ ಮಾಡಲಾಗಿತ್ತು. ಪ್ರವರ್ಗ ಎ 1% ಒಳ ಮೀಸಲಾತಿ, ಪ್ರವರ್ಗ ಬಿ 6% ಒಳ ಮೀಸಲಾತಿ, ಪ್ರವರ್ಗ ಸಿ 5%, ಪ್ರವರ್ಗ ಡಿ 4% ಒಳ ಮೀಸಲಾತಿ, ಪ್ರವರ್ಗ ಇ 1% ಒಳ ಮೀಸಲಾತಿ, ಪರಿಶಿಷ್ಟ ಎಡ ಸಮುದಾಯಕ್ಕೆ 6% ಒಳ ಮೀಸಲಾತಿ, ಪರಿಶಿಷ್ಟ ಬಲ ಸಮುದಾಯಕ್ಕೆ 5% ಒಳ ಮೀಸಲಾತಿ ಸೇರಿದಂತೆ ಒಟ್ಟು 17% ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದೆ.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಜನಗಣತಿ ನಡೆಸುವ ವಿಚಾರವಾಗಿ ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಕೈಗೊಳ್ಳಲು ಸರ್ಕಾರ ಸಲಹೆ ನೀಡಿದ್ದು, ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಹಾಗೂ ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು ಸಲಹೆ ನೀಡಿದೆ.
ಪರಿಶಿಷ್ಟ ಜಾತಿಯವರ ದಶಕಗಳ ಹೋರಾಟ, ಸರ್ಕಾರಿ ನೌಕರಿಯಲ್ಲಿ ನೇಮಕ-ಬಡ್ತಿ, ಪರಿಶಿಷ್ಟರಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಉದ್ದೇಶದಿಂದ ವರದಿಯನ್ನು ತ್ವರಿತವಾಗಿ ಅಂಗೀಕರಿಸುವ ಅಗತ್ಯವಿದೆ. ಆದರೆ, ಬಲಗೈ ಸಮುದಾಯದವರು ಶೇ 5 ರಷ್ಟು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಜತೆಗೆ ಎಡಗೈ ಸಮುದಾಯಗಳು ಶೇ 8 ರಷ್ಟು ಮೀಸಲಾತಿಗೆ ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ವರದಿ ಕುರಿತು ವಿಸ್ತೃತ ಚರ್ಚೆ ಅಗತ್ಯವಿದೆ. ಹಾಗಾಗಿ ಆ.16 ರಂದು ವಿಶೇಷ ಸಂಪುಟ ಸಭೆಯಲ್ಲಿ ವರದಿ ಜಾರಿ ಕುರಿತು ತೀರ್ಮಾನಿಸಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಆ.4 ರಂದು ನ್ಯಾ. ನಾಗಮೋಹನ್ ದಾಸ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯ ವರದಿ ಸಲ್ಲಿಸಿದ್ದರು. ಒಟ್ಟು 1766 ಪುಟಗಳ ವರದಿಯಲ್ಲಿ ಜಾತಿಗಳ ದತ್ತಾಂಶ ಮತ್ತು ಅನುಬಂಧಗಳು ಹಾಗೂ ಆರು ಶಿಫಾರಸ್ಸುಗಳು ಇದ್ದವು.
ರಾಜ್ಯವ್ಯಾಪಿ ಸಮೀಕ್ಷೆಯಲ್ಲಿ ಆಯೋಗ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಪಡೆದ ದತ್ತಾಂಶ ವಿಶ್ಲೇಷಣೆ ಮಾಡಿ, ಸುಪ್ರೀಂಕೋರ್ಟ್ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿ ಹಂಚಲಾಗಿದೆ.
2025 ಮೇ 5 ರಿಂದ ಆರಂಭಿಸಿದ್ದ ಸಮೀಕೆಯು ಜುಲೈ 6 ರವರೆಗೆ ನಡೆದಿತ್ತು. ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಒಳಜಾತಿಗಳ ವರ್ಗೀಕರಣಕ್ಕೆ ಸುಪ್ರೀಂಕೋರ್ಟ್ ವಿಧಿಸಿದ ಮಾನದಂಡಗಳಾದ ಶೈಕ್ಷಣಿಕ ಹಿಂದುಳಿದಿರುವಿಕೆ, ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ, ಸಾಮಾಜಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿತ್ತು.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಸುಮಾರು 5ಲಕ್ಷ ಜನರು ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಎಂದೇ ಬರೆಸಿದ್ದರು. 5 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಜಾತಿಸೂಚಕ ಪದ ಬರೆಸಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಗುಂಪು ರಚಿಸಿ, ಶೇ 1 ರಷ್ಟು ಮೀಸಲಾತಿ ಒದಗಿಸಲಾಗಿದೆ.
ಶನಿವಾರದಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸರ್ಕಾರದ ದಲಿತ ಸಚಿವರು ಹಾಗೂ ಶಾಸಕರ ಸಭೆ ಸೇರಿ ಒಳ ಮೀಸಲಾತಿ ವರದಿಗೆ ಯಾವುದೇ ತಕರಾರು ತೆಗೆಯದೇ ಒಮ್ಮತದಿಂದ ಒಪ್ಪಿಕೊಳ್ಳಲು ನಿರ್ಧರಿಸಿದ್ದರು. ಈಗಾಗಲೇ ಒಳ ಮೀಸಲಾತಿ ಹಂಚಿಕೆ ಸಾಕಷ್ಟು ವಿಳಂಬವಾಗಿದೆ. ಇನ್ನಷ್ಟು ತಗಾದೆಗಳು ಎದುರಾಗದರೆ ವಿಳಂಬವಾಗಲಿದೆ. ಮೊದಲಿಗೆ ವರದಿ ಜಾರಿಯಾಗಲಿ, ಆ ನಂತರ ಸಮುದಾಯದ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳಬಹುದು ಎಂಬ ನಿರ್ಣಯಕ್ಕೆ ಬಂದಿದ್ದರು.
2025ರ ವೇಳೆಗೆ ಪರಿಶಿಷ್ಟ ಜಾತಿಯವರ ಜನಸಂಖ್ಯೆ ಅಂದಾಜಿಸಿ (1.16 ಕೋಟಿ) ಹೋಲಿಸಿದಾಗ ಜೂನ್ 27ರವರೆಗೆ ಇಡೀ ರಾಜ್ಯದಲ್ಲಿ ಸಮೀಕ್ಷೆಯಲ್ಲಿ ಶೇ. 91ರಷ್ಟು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇಕಡಾ 53ರಷ್ಟು ಪ್ರಗತಿ ಆಗಿತ್ತು.
ಈಗ ಬಲಗೈ ಸಮುದಾಯದವರು ಎಡಗೈ ಸಮುದಾಯಕ್ಕೆ ನೀಡಿದಷ್ಟೇ ಒಳಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದು, ಸ್ಪರ್ಶ ಜಾತಿಗಳು ನಮಗೆ ಇನ್ನೂ ಒಂದು ಪರ್ಸೆಂಟ್ ಹೆಚ್ಚು ಬೇಕೆಂದು ಬೇಡಿಕೆ ಇಟ್ಟಲ್ಲಿ ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಳ ಮೀಸಲಾತಿ ಜಾರಿಯಾಗುವುದೇ ಎಂಬುದೇ ದೊಡ್ಡ ಪ್ರಶ್ನೆ ಮೀಸಲಾತಿ ಹೋರಾಟಗಾರರನ್ನು ಕಾಡುತ್ತಾ ಇದೆ.
ಬಲಗೈ ಮತ್ತು ಸ್ಪರ್ಶ ಜಾತಿಗಳಿಗೆ ಒಳಮೀಸಲಾತಿ ಜಾರಿಯಾಗುವುದು ಅಷ್ಟಾಗಿ ಒಪ್ಪಿಗೆ ಇಲ್ಲ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ.