ಪಾಲಿಕೆಯ ನಿದ್ರೆಗೆ ಮುಳುಗಿದ ದಿಬ್ಬೂರು-ನೀರು ಪಾಲಾದ ಜನರ ಬದುಕು, ಚರಂಡಿಗೆ ಮಕ್ಕಳು ಬಿದ್ದಿದ್ದರೆ ದೇವರೇ ಗತಿ

ತುಮಕೂರು :ಕಳೆದ 15 ದಿನಗಳಿಂದ ಬರುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದಿದ್ದು, ತುಮಕೂರು ಅಮಾನಿಕೆರೆ ಕೋಡಿ ಬಿದ್ದಿರುವುದರಿಂದ ದಿಬ್ಬೂರು ನೀರಿನಿಂದ ಜಲಾವೃತವಾಗಿ, ಕೆರೆಯಂತಾಗಿದ್ದು, ದಿಬ್ಬೂರು ವಾಸಿಗಳ ಪಾಡು ನೀರು ಪಾಡಾಗಿದೆ.

oplus_0

ತುಮಕೂರಿನ ರಾಜ ಕಾಲುವೆಗಳು ಬಹುತೇಕ ಊಳು ಮತ್ತು ಕಸ-ಕಡ್ಡಿಗಳಿಂದ ತುಂಬಿರುವುದಲ್ಲದೆ, ಮುಖ್ಯರಾಜಕಾಲುವೇಗಳೇ ಒತ್ತುವರಿಯಾಗಿರುವುದರಿಂದ ನಗರದ ಬಡಾವಣೆಯೊಂದು ನೀರು ಪಾಲಾಗಿ ಅಲ್ಲಿನ ಜನರ ಬದಕು ಮೂರಾ ಬಟ್ಟೆಯಾಗಿದೆ.

ಮಹಾನಗರ ಪಾಲಿಕೆ ಆಡಳಿತವು ಸಮಸ್ಯೆ ಉದ್ಭವವಾದಾಗ ಮಾತ್ರ ದಿಢೀರನೆ ಪ್ರತ್ಯಕ್ಷವಾಗಿ ಬಿಡುತ್ತದೆ. ರಾಜಕಾಲುವೆ ಮತ್ತು ದೊಡ್ಡಚರಂಡಿಗಳನ್ನು ಮಳೆಗೂ ಮುನ್ನ ಅಚ್ಚಕಟ್ಟು ಮಾಡುವುದಾಗಲಿ, ಊಳು ತೆಗೆಯುವುದಾಗಲಿ ಮಾಡದೆ ನಿದ್ರಾವಸ್ಥೆಯಲ್ಲಿ ಮಲಗಿರುತ್ತದೆ.

ದಿಬ್ಬೂರಿನ ಮನೆಗಳು ಜಲಾವೃತವಾಗಿರುವುದರಿಂದ ಮನೆಯಲ್ಲಿನ ದವಸ-ಧಾನ್ಯಗಳನ್ನೆಲ್ಲಾ ಕಳೆದುಕೊಂಡ ಜನರು ಮುಗಿಲತ್ತ ಮುಖ ಮಾಡಿ ನೋಡುತ್ತಿದ್ದಾರೆ.

ನಿರಂತರ ಮಳೆಯಿಂದಾಗಿ ನಗರದ ಅಮಾನಿಕೆರೆ ಕೋಡಿ ನೀರು ನುಗ್ಗಿ ದಿಬ್ಬೂರು ಬಡಾವಣೆಯ ಮನೆ, ಅಂಗಡಿ, ತೋಟಗಳು ಜಲಾವೃತಗೊಂಡಿವೆ.

ಶಾಲೆಗಳಿಗೆ ರಜೆಯೂ ಇಲ್ಲದ ಕಾರಣ ಶಾಲಾ ಮಕ್ಕಳು ಮಂಡಿಯುದ್ದದ ನೀರಿನಲ್ಲಿ ನೆನೆಯುತ್ತಲೇ ಶಾಲೆಗಳಿಗೆ ತೆರಳುತ್ತಿದ್ದರು, ಚಿಕ್ಕಮಕ್ಕಳನ್ನು ಪೋಷಕರು ಹರಿಯುತ್ತಿದ್ದ ನೀರಿನಲ್ಲೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಮನ ಕರಗುವಂತಿತ್ತು. ರಸ್ತೆಯಲ್ಲೇ ನೀರು ಹರಿಯುತ್ತಿದ್ದರಿಂದ ಚರಂಡಿ ಯಾವುದು, ರಸ್ತೆ ಯಾವುದು ಎಂಬುದೇ ಗೊತ್ತಾಗುತ್ತಿರಲಿಲ್ಲ, ಮಕ್ಕಳು ಚರಂಡಿಗೇನಾದರೂ ಗೊತ್ತಿಲ್ಲದೆ ಇಳಿದಿದ್ದರೆ ದೇವರೇ ಗತಿ ಎನ್ನುವಂತಾಗುತ್ತಿತ್ತು.

ಸ್ತಳಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ನರಕ ಸದೃಶ್ಯವಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತುಮಕೂರಿನ ದೇವರಾಯಪಟ್ಟಣ ಕೆರೆ, ಅಕ್ಕ-ತಂಗಿ ಕೆರೆ, ಸತ್ಯಮಂಗಲ ಕೆರೆ ಸೇರಿದಂತೆ ವಿವಿಧ ಕೆರೆಗಳ ಕೋಡಿ ನೀರಿನಿಂದ ನಗರದ ಅಮಾನಿಕೆರೆ ತುಂಬಿ ಕೋಡಿ ಬಿದ್ದಿದ್ದು, ಹೆಚ್ಚುವರಿ ನೀರು ದಿಬ್ಬೂರು ಮಾರ್ಗವಾಗಿ ಭೀಮಸಂದ್ರ ಕೆರೆಯನ್ನು ತಲುಪುತ್ತದೆ. ಆದರೆ ಮಳೆನೀರಿನ ಪ್ರಮಾಣ ಹೆಚ್ಚಿರುವುದರಿಂದ ಬಡಾವಣೆಗೆ ನೀರು ನುಗ್ಗಿದೆ. ಮಹಾನಗರ ಪಾಲಿಕೆ ವತಿಯಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ರಾಜ ಕಾಲುವೆ ತೆರೆವು ಕಾರ್ಯ ಕೈಗೊಳ್ಳಲಾಗಿದೆ. ಯಾವುದೇ ಅವಘಡಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಡಾವಣೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ. 50ರಷ್ಟು ಹೆಚ್ಚುವರಿ ಮಳೆಯಾಗಿದ್ದು, ಮುಂದುವರೆಯುವ ಸಾಧ್ಯತೆ ಇರುವುದರಿಂದ ತಗ್ಗು ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳ, ಜಿಲ್ಲಾಡಳಿತದಿಂದ ತಾತ್ಕಾಲಿಕವಾಗಿ ತೆರೆದಿರುವ ಗಂಜಿ ಕೇಂದ್ರಗಳಿಗೆ ತೆರಳಬೇಕೆಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಕೋಡಿ ನೀರಿನಿಂದ 2 ಮನೆಗಳು ಬಿದ್ದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತ-ವ್ಯಸ್ತವಾಗಿರುವುದನ್ನು ಕಂಡ ಜಿಲ್ಲಾಧಿಕಾರಿಗಳು ಕೂಡಲೇ ಜಲಾವೃತವಾಗಿರುವ ಮನೆಗಳ ಕುಟುಂಬದ ಸದಸ್ಯರನ್ನು ಜಿಲ್ಲಾಡಳಿತದ ವತಿಯಿಂದ ದಿಬ್ಬೂರು ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಕೂಡಲೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

oplus_0

ಸ್ಥಳದಲ್ಲಿದ್ದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಕಳೆದ 2019 ಹಾಗೂ 2022ರಲ್ಲಿ ಅಮಾನಿಕೆರೆ ಕೋಡಿ ನೀರು ನುಗ್ಗಿ ಇಲ್ಲಿನ ನಿವಾಸಿಗಳ ಜೀವನ ಅಸ್ತ-ವ್ಯಸ್ತವಾಗಿತ್ತು. ಇದೇ ಬಡಾವಣೆಯ ಸರ್ವೇ ನಂಬರ್ 207 ಹಾಗೂ 208ರಲ್ಲಿರುವ ರಾಜಗಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲದ ಕಾರಣ ದಿಬ್ಬೂರು ಬಡಾವಣೆ ಜಲಾವೃತಗೊಂಡಿದೆ. ಅಲ್ಲದೆ ನಗರದಲ್ಲಿರುವ ಮುಖ್ಯ ರಾಜಗಾಲುವೆಗಳು ಒತ್ತುವರಿಯಾಗಿರುವುದರಿಂದಲೂ ಜನರು ಇಂತಹ ಸಮಸ್ಯೆಯನ್ನು ಎದುರಿಸುವ ಸಂದರ್ಭ ಎದುರಾಗಿದೆ. ಈ ನಿಟ್ಟಿನಲ್ಲಿ ರಾಜಗಾಲುವೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

oplus_0

ನಂತರ ಹರಿಯುತ್ತಿದ್ದ ಮಳೆ ನೀರಿನಲ್ಲಿಯೇ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳ ತಂಡ ಜಲಾವೃತಗೊಂಡಿದ್ದ ಮನೆ, ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ ಕಂದಾಯ ಹಾಗೂ ಪಾಲಿಕೆ ವತಿಯಿಂದ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಒತ್ತುವರಿಯಾಗಿರುವ ರಾಜಗಾಲುವೆಗಳನ್ನು ತೆರವುಗೊಳಿಸಬೇಕು. ರಾಜಗಾಲುವೆಗಳಲ್ಲಿರುವ ಕಸ-ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವ ಮೂಲಕ ಮಳೆನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕಲ್ಲದೆ, ಮಳೆಯಿಂದ ಯಾವುದೇ ಜೀವಹಾನಿಯಾಗದಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರ ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ಮಾತನಾಡಿ, ಜಿಲ್ಲೆಯಲ್ಲಿ ಮಳೆ ಆರಂಭಕ್ಕೂ ಮುನ್ನವೇ ರಾಜ ಕಾಲುವೆಗಳ ತೆರವು ಕಾರ್ಯ ಕೈಗೊಳ್ಳಲಾಗಿತ್ತು, ಕೆಲವು ಪ್ರದೇಶಗಳಲ್ಲಿ ರಾಜ ಕಾಲುವೆ ಒತ್ತುವರಿಯಾಗಿದ್ದು, ಜಿಲ್ಲಾಡಳಿತ ಮತ್ತು ಪಾಲಿಕೆಯಿಂದ ಜಂಟಿ ಸರ್ವೇ ಕಾರ್ಯ ಕೈಗೊಂಡು ರಾಜ ಕಾಲುವೆ ತೆರವಿಗೆ ಕ್ರಮ ಕೈಗೊಳ್ಳಲಾಗುವುದು. ಮಳೆಯಿಂದ ನಿರಾಶ್ರಿತರಾದವರಿಗೆ ಗಂಜಿ ಕೇಂದ್ರದಲ್ಲಿ ಹಾಸಿಗೆ-ಹೊದಿಕೆ, ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕ ಸಣ್ಣಯ್ಯ, ಪಾಲಿಕೆ ಇಂಜಿನಿಯರ್ ವಿನಯ್, ಅಗ್ನಿಶಾಮಕ, ಕಂದಾಯ ಹಾಗೂ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *