ತುಮಕೂರು:ಕ್ರೀಡೆ,ನಾಟಕ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ತುಮಕೂರು ತಾಲೂಕಿನ ಮೆಳೆಹಳ್ಳಿ ಗ್ರಾಮದ ಮಕ್ಕಳು ನಿರಂತರವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಊರಿನ ಹೆಸರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ನಗರಕ್ಕೆ ಸಮೀಪದ ಮೇಳೆಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿಯಲ್ಲಿ ಭಾಗವಹಿಸಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಹಿಮಾಲಯ ಜೊತೆಗೂಡಿ ಮಕ್ಕಳನ್ನು ಬೀಳ್ಕೂಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ.ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಹಣಕಾಸಿನ ನೆರವು ನೀಡಿದರೆ, ಅವರು ಸಹ ಒಲಂಪಿಕ್ನಂತಹ ಕ್ರೀಡೆಗಳಲ್ಲಿ ಭಾಗವಹಿಸಿ ದೇಶಕ್ಕೆ ಹೆಸರು ತರುವ ಕೆಲಸ ಮಾಡಲಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಪಟುಗಳಿಗೆ ಅಗತ್ಯ ನೆರವು ನೀಡಲು ಹಿಮಾಲಯ ಕಂಪನಿ ಮುಂದೆ ಬಂದಿರುವುದು ಸ್ವಾಗತಾರ್ಹ ಬೆಳೆವಣಿಗೆ. ಇದೇ ರೀತಿ ತುಮಕೂರು ಪರಿಸರದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿರುವ ಕೈಗಾರಿಕೆಗಳು ಗ್ರಾಮೀಣ ಪ್ರತಿಭೆಗಳ ಪ್ರೋತ್ಸಾಹಕ್ಕೆ ತಮ್ಮ ಸಿ.ಎಸ್.ಆರ್ ನಿಧಿಯನ್ನು ಬಳಕೆ ಮಾಡಿದರೆ ಜಿಲ್ಲೆಯ ಹೆಸರಿನ ಜೊತೆಗೆ, ಕಂಪನಿಯ ಹೆಸರು ಸಹ ಲೋಕ ವಿಖ್ಯಾತವಾಗಲಿದೆ ಎಂದರು.
ಮೇಳೆಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿ ಬೆಳಕು ತಜ್ಞ ವಿ.ರಾಮಮೂರ್ತಿ ಹೆಸರಿನ ರಂಗಮಂದಿರವಿದೆ.ಒಂದು ಕುಟುಂಬವೇ ರಂಗಭೂಮಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದೆ.ಹಾಗೆಯೇ ಮೇಳೆಹಳ್ಳಿ ಶಾಲೆಯ ಮಕ್ಕಳು ಹತ್ತಾರು ವರ್ಷಗಳಿಂದ ಖೋ-ಖೋ ಆಟದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಕಳೆದ ವರ್ಷದ ರಾಷ್ಟ್ರಮಟ್ಟದ ಸ್ಕೂಲ್ ಗೇಮ್ಸ್ ನಲ್ಲಿ ಮೇಳೆಹಳ್ಳಿ ಶಾಲೆಯ ಮೂವರು ಮಕ್ಕಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿದ್ದಾರೆ.ಈ ಬಾರಿಯೂ ಸಹ ಈ ಶಾಲೆಯ ಮಕ್ಕಳು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳುವಂತೆ ಅವರನ್ನು ಹರಸಿ, ಆಶೀರ್ವದಿಸುವುದರ ಜೊತೆಗೆ,ಸೂಕ್ತ ತರಬೇತಿಯೊಂದಿಗೆ ಹಣಕಾಸಿನ ನೆರವನ್ನು ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಎಲ್ಲಾ ನೆರವನ್ನು ನೀಡಲಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ವೇದಿಕೆಯಲ್ಲಿ ಹಿಮಾಲಯ ಸಂಸ್ಥೆಯ ಜನರಲ್ ಮ್ಯಾನೇಜರ್ ಸಂಜೀವ್ ಖನ್ನಾ,ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪರಮೇಶ್ವರಪ್ಪ,ಬಿಇಓ ಹನುಮಂತಪ್ಪ,ಗ್ರಾಮದ ಮುಖಂಡರಾದ ಯದು, ಮಲ್ಲಿಕಾರ್ಜುನಯ್ಯ,ಗಂಗರಾಜಯ್ಯ,ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸಿದ್ದಗಂಗಯ್ಯ,ರಾಷ್ಟ್ರೀಯ ಕಬ್ಬಡಿ ತರಬೇತಿದಾರರಾದ ವÀಜ್ರಪ್ಪ,ನಿವೃತ್ತ ದೈಹಿಕ ಶಿಕ್ಷಕರು, ಮೆಳೆಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರುಗಳು,, ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.