ತುಮಕೂರು: ಸರ್ಕಾರ ಮತ್ತು ಜನಗಳ ನಡುವೆ ಉತ್ತಮ ಸಂಬಂಧ ಏರ್ಪಡುವಂತೆ ಮಾಡಲು ಒಳ್ಳೆಯ ಪತ್ರಕರ್ತರಿಂದ ಮಾತ್ರ ಸಾಧ್ಯ. ಮಾಧ್ಯಮಗಳು ಅವರ ನಡುವಿನ ಸೇತುವೆಯಾಗಬೇಕು ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಬಾಬು ಸಿ.ಬಿ. ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕನ್ನಡ ಸಾಹಿತ್ಯ ಪರಿಷತ್, ಎಸ್. ಬಿ. ಚಾರಿಟೇಬಲ್ ಟ್ರಸ್ಟ್, ಸುವರ್ಣಮುಖಿ ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆರಂಭಗೊಂಡ ಎರಡು ದಿನಗಳ ಜಿಲ್ಲಾ ಮಟ್ಟದ ಗ್ರಾಮೀಣ ಪತ್ರಿಕೋದ್ಯಮ ಕಾರ್ಯಗಾರ ಹಾಗೂ ದಿ.ಎನ್. ಬಸವಯ್ಯ ಜೀವಮಾನ ಸಾಧನೆ ದತ್ತಿಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯುವಜನತೆ ಮಾಧ್ಯಮರಂಗದಲ್ಲಿ ತೊಡಗಿಸಿಕೊಂಡು ಸಮಾಜವನ್ನು ಒಳ್ಳೆಯ ಹಂತಕ್ಕೆ ಕೊಂಡೊಯ್ಯಲು ಶ್ರಮಿಸಬೇಕು. ಮಾಧ್ಯಮರಂಗಕ್ಕೆ ನೈತಿಕಪ್ರಜ್ಞೆ, ಬದ್ಧತೆ ಹಾಗೂ ಪರಿಶ್ರಮ ಹೊಂದಿರುವ ಯುವಕರ ಅಗತ್ಯವಿದೆ ಎಂದರು.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ. ಎಸ್. ಸಿದ್ದಲಿಂಗಪ್ಪ ಮಾತನಾಡಿ, ಪತ್ರಿಕೆ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಸಾಹಿತ್ಯ ಲೋಕ ವಿಸ್ತಾರವಾಗುವಲ್ಲಿ, ಭಾಷೆ ಬೆಳೆಯುವಲ್ಲಿ ಮಾಧ್ಯಮಗಳ ಕೊಡುಗೆ ಅಪಾರ ಎಂದರು.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿ, ಸಮಾಜದಲ್ಲಿ ಪತ್ರಿಕೋದ್ಯಮದ ಮಹತ್ವವನ್ನು ಎತ್ತಿ ತೋರಿಸುವ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಜಾಗೃತರಾಗಬೇಕು. ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡು ಉತ್ತಮ ಅಧ್ಯಯನ ನಡೆಸಬೇಕು ಎಂದರು.
ತುಮಕೂರು ವಿವಿಯ ಸಮಾಜಕಾರ್ಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ. ಜಿ. ಪರಶುರಾಮ ಮಾತನಾಡಿ, ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸುವಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಜತೆಯಾಗಿ ಸಾಗಬೇಕು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಾಗಾರದ ನಿರ್ದೇಶಕ ಹಾಗೂ ತುಮಕೂರು ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಕೆ.ವಿ., ಗ್ರಾಮೀಣ ಪತ್ರಕರ್ತರು ಪ್ರಜಾಪ್ರಭುತ್ವದ ನಿಜವಾದ ಆಧಾರ ಸ್ತಂಭಗಳು. ಜನಸಾಮಾನ್ಯರ ಜತೆಗಿದ್ದುಕೊಂಡು, ಸಾಮಾಜಿಕ ವ್ಯವಸ್ಥೆಯ ಒಳಗಿದ್ದುಕೊಂಡು ಅಭ್ಯುದಯಲ್ಲಿ ಭಾಗಿಗಳಾಗುವ ಅವಕಾಶ ಅವರಿಗಿದೆ ಎಂದರು.
ಹಿರಿಯ ಪತ್ರಕರ್ತ, ಉದಯವಾಣಿ ಮಣಿಪಾಲ ಸಂಪಾದಕ ಅರವಿಂದ ನಾವಡ ‘ಹಳ್ಳಿಗಳಾಗುತ್ತಿರುವ ಪಟ್ಟಣಗಳು: ಗ್ರಾಮೀಣ ಪತ್ರಕರ್ತರ ಸವಾಲುಗಳು’ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ‘ಪತ್ರಿಕೋದ್ಯಮ: ಏನು, ಏಕೆ, ಹೇಗೆ?’ ಕುರಿತು ಕುವೆಂಪು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ. ಸತೀಶ್ ಕುಮಾರ್ ಅಂಡಿಂಜೆ, ಮಾಧ್ಯಮರಂಗದ ಉದ್ಯೋಗಾವಕಾಶಗಳ ಬಗ್ಗೆ ದೂರದರ್ಶನದ ಹಿರಿಯ ವಾರ್ತಾವಾಚಕಿ ಚೇತನಾ ರಾಜೇಂದ್ರ, ಬರವಣಿಗೆಯ ಆರಂಭಿಕ ಹೆಜ್ಜೆಗಳ ಕುರಿತು ಡಾ. ಸಿಬಂತಿ ಪದ್ಮನಾಭ ಗೋಷ್ಠಿಗಳನ್ನು ನಡೆಸಿಕೊಟ್ಟರು.
ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್, ತಾಲೂಕು ಕ.ಸಾ.ಪ ಅಧ್ಯಕ್ಷ ಎಂ. ಎಸ್. ರವಿಕುಮಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ. ಯೋಗೀಶ್, ಪತ್ರಕರ್ತ ಸಿ. ಗುರುಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.