ಮಹಿಳಾ ಚಳುವಳಿ ಇತರ ಚಳುವಳಿಯಂತಲ್ಲ, ದಮನದ ನೆಲೆ ಭಿನ್ನವಾಗಿದೆ, – ಮಹಿಳೆಯರು ಯುದ್ಧ ಬಯಸುವುದಿಲ್ಲ-ಹೆಚ್.ಎಸ್.ಅನುಪಮಾ

ತುಮಕೂರು: ಮಹಿಳೆಯರಾದ ನಾವು ಯಾರ ಜೊತೆ ಬದುಕುತ್ತಿದ್ದೇವೋ, ಯಾರಿಂದ ಎಕ್ಸ್ ಕ್ರೋಮೋಜೋನ್ ಪಡೆದುಕೊಳ್ಳುತ್ತಿದ್ದೇವೋ, ಎಕ್ಸ್ ಕ್ರೋಮೋಜೋನ್ ಕೊಡುತ್ತಿದ್ದೇವೋ ಅವರನ್ನು ನಮ್ಮ ವಿರೋಧಿಗಳು ಎಂದು ಹೇಗೆ ಭಾವಿಸುವುದು, ಮಹಿಳಾ ಚಳುವಳಿ ಇತರ ಚಳುವಳಿಯಂತಲ್ಲ, ದಮನದ ನೆಲೆ ಭಿನ್ನವಾಗಿದೆ, ನಮಗೆ ವಿರೋಧಿ ನೆಲೆಯೇ ಇಲ್ಲ, ಒಂದು ಸಂಘಟನೆ, ಒಂದು ಪಕ್ಷ, ಒಂದು ಐಡಿಯಲಾಜಿಯನ್ನು ಇಟ್ಟುಕೊಂಡು ಮಹಿಳಾ ಚಳುವಳಿ ಕಟ್ಟಲು ಸಾಧ್ಯವಿಲ್ಲ, ವಿರೋಧಿ ನೆಲೆಗಳ ಹೋರಾಟವನ್ನೇ ನಾವು ಮಹಿಳಾ ಚಳುವಳಿ ಎಂದು ಭಾವಿಸಬೇಕಾಗಿದೆ ಎಂದು ಮಹಿಳಾ ಸಾಹಿತಿ ಡಾ||ಎಚ್.ಎಸ್.ಅನುಪಮಾ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು, ಐಕ್ಯೂಎಸಿ ಹಾಗೂ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಮಹಿಳೆ ವಿಶೇಷ ಉಪನ್ಯಾಸ ಮಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಇಂದು ಬಾಡಿ ಪಾಲಿಟಿಕ್ಸ್, ಕಲೆಕ್ಟಿವ್ ಪಾಲಿಟಿಕ್ಸ್ ಹಾಗೂ ವೈಯಕ್ತಿಕ ರಾಜಕಾರಣದ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಅತ್ಯಗತ್ಯ. ಹೆಣ್ಣುಮಕ್ಕಳು ಸಮಾಜ ಹೇರಿರುವ ‘ಗುಡ್ ಗರ್ಲ್’ ಎಂಬ ಸಿಂಡ್ರೋಮ್‍ನಿಂದ ಹೊರಬರಬೇಕು, ಹಾಗೆಯೇ ಮಹಿಳೆ ಎಂದೂ ಯುದ್ಧ ಬಯಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಯುದ್ಧ ಎಂಬುದೇ ಒಂದು ಬರಡೆ, ಯುದ್ಧ ಠುಸ್ ಎಂದು ಒಡೆದು ಹೋಗುವಂತಹವುದು, ಅದನ್ನು ಏರಿಸಿ ಇಟ್ಟಿದ್ದಾರೆ, ಹೆಣ್ಣುಗಳಾದ ನಾವು ಯೋದರನ್ನು ಹಡೆದಾಗ ಬೆಲೆ, ರಾಜಮಾತೆಯ ಬೆಲೆ ಅಂತಹ ಸುಳ್ಳು ಬೆಲೆ ಹೆಣ್ಣಿಗೆ ಬೇಕಾಗಿಲ್ಲ, ಯುದ್ಧ ಮಾಡದ ಬುದ್ಧ, ಯುದ್ಧವನ್ನು ನಿರಾಕರಿಸಿದ ಅಶೋಕ ನಮಗೆ ಮಾದರಿ, ಯಾವ ಹೆಣ್ಣು ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ನಾಶವನ್ನು ಬಯಸುವ ಯುದ್ಧವನ್ನು ಬಯಸುವುದಿಲ್ಲ ಎಂದು ಗಟ್ಟಿಯಾಗಿ ಹೇಳಬೇಕಾಗಿದೆ ಎಂದರು.

ಇಂದು ಜಾಲತಾಣಗಳಲ್ಲಿ ಯುದ್ಧ ಬೇಡ ಎಂದು ಬರೆಯಿರಿ, ವಿರೋಧಿಸಿ, ಯುದ್ಧ ಬೇಡ ಎಂದು ಹಾಕಿದ ಕೂಡಲೇ ಯುದ್ಧ ನಿಲ್ಲುವುದಿಲ್ಲ, ಮುಂದಿನ ಯುದ್ಧಗಳನ್ನಾದರೂ ತಡೆಯುವ ಶಕ್ತಿ ಯುವ ಜನರಲ್ಲಿದೆ ಈ ನಿಟ್ಟಿನಲ್ಲಿ ಎಲ್ಲರೂ ಯೋಚಿಸಿ ಯುದ್ಧದ ವಿರುದ್ಧ ಮಾತನಾಡಿ ಎಂದರು.

ಮಹಿಳಾ ಚಳುವಳಿ ಎಂದರೆ ಕೇವಲ ಪುರುಷರನ್ನು ಛೇಡಿಸುವುದಲ್ಲ. ಇದು ದಮನದ ನೆಲೆ ಇಲ್ಲದ, ವಿರೋಧಿ ಭಾವವಿಲ್ಲದ ಒಂದು ವಿಶಿಷ್ಟ ಚಳುವಳಿ. ಲಿಂಗ ತಾರತಮ್ಯ, ಅಸಮಾನತೆ ಮತ್ತು ಲೈಂಗಿಕ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವುದರ ಜೊತೆಗೆ ಸಮಾಜದ ಪ್ರತಿಯೊಂದು ಸಮಸ್ಯೆಗೂ ಮಹಿಳಾ ಚಳುವಳಿ ನಂಟನ್ನು ಹೊಂದಿದೆ ಎಂದು ಅವರು ವಿವರಿಸಿದರು.

ಕಂತಿ ಹಂಪನ ಕಾಲದಿಂದಲೂ ಮಹಿಳಾ ಚಳುವಳಿ ಅಸ್ತಿತ್ವದಲ್ಲಿದೆ. ಭಕ್ತಿಯ ಮಾರ್ಗದಲ್ಲಿ ಮತ್ತು ಸಾಹಿತ್ಯದ ಮೂಲಕ ಇದು ವಿಸ್ತರಿಸಿದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸಂವಿಧಾನ ರಚನೆಯವರೆಗೆ ಮಹಿಳೆಯರ ಶ್ರಮ ಅಪಾರವಾಗಿದೆ. ಆದರೆ, ಇಂದಿಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಮುಂದುವರಿಯುತ್ತಿರುವುದು ಕಳವಳಕಾರಿ ಸಂಗತಿ ಎಂದು ವಿಷಾದಿಸಿದರು.

ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ‘ಸಮಾನತೆಯೆಡೆಗೆ’ (ಖಿoತಿಚಿಡಿಜs ಇquಚಿಟiಣಥಿ) ವರದಿಯನ್ನು ಮತ್ತು ಮಹಿಳೆಯರ ಪರವಾಗಿ ಹೋರಾಡುತ್ತಿರುವ ಸಂಸ್ಥೆಗಳ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ಹೋರಾಟಗಾರರು ಅಧ್ಯಯನ ಮಾಡಬೇಕು ಎಂದು ಡಾ. ಅನುಪಮ ಕರೆ ನೀಡಿದರು.

ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ. ಮೋಹನ ಎಚ್.ಎಸ್. ಮಾತನಾಡಿ, ವಿದ್ಯಾರ್ಥಿಗಳು ಯುದ್ಧ, ಹಿಂಸೆಗಿಂತ ಮಮಕಾರ ಮತ್ತು ಪ್ರೀತಿಯನ್ನು ರೂಢಿಸಿಕೊಳ್ಳಬೇಕು. ಪ್ರವಾಸ ಎಂಬುದು ಕೇವಲ ಮನರಂಜನೆಯಲ್ಲ, ಅದು ಜ್ಞಾನದ ಬುತ್ತಿ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾಗಭೂಷಣ್ ಬಗ್ಗನಡು ಸ್ವಾಗತಿಸಿದರು. ಪ್ರಾಂಶುಪಾಲ ಪೆÇ್ರ. ಎಸ್. ಶ್ರೀನಿವಾಸ, ಐಕ್ಯೂಎಸಿ ಸಂಯೋಜಕ ಡಾ. ವಿಜಯ್ ಕುಮಾರ್, ಪ್ರಾಧ್ಯಾಪಕರಾದ ಡಾ. ವೆಂಕರೆಡ್ಡಿ ರಾಮರೆಡ್ಡಿ, ಡಾ. ಶ್ರೀಪಾದ ತಮ್ಮಯ್ಯ, ಡಾ. ನಟರಾಜು ಜೆ.ಆರ್., ಡಾ. ಶ್ರೀಧರ ಸಿ., ಮತ್ತು ಡಾ. ರಂಗನಾಥ ಸ್ವಾಮಿ ಎಚ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *