ತುಮಕೂರು : ಇಡೀ ಜಗತ್ತಿನಲ್ಲಿ ಈ ಕಾರ್ಮಿಕ ವರ್ಗ, ದುಡಿಯುವ ವರ್ಗ, ಶ್ರಮಿಕ ವರ್ಗದವರಿಗೆ ಚರಿತ್ರೆಯೇ ಇಲ್ಲ. ಆಳಿದೋರ ಇತಿಹಾಸ ಇದೆ. ದುಡಿದು ಇನ್ನೊಬ್ಬರನ್ನು ಸಾಕಿ ಸ್ವಾಭಿಮಾನದಿಂದ ಬದುಕಿದವರ ಚಿತ್ರಣ ಇಲ್ಲ. ಹಾಗಾಗಿ ಈ ಹಟ್ಟಿಯನ್ನು ಚರಿತ್ರೆಯ ಪುಟಗಳಲ್ಲಿ ದಾಖಲಿಸಬೇಕೆಂದು ಈ ಪುಸ್ತಕವನ್ನು ಹೊರತರಲಾಗಿದೆ. ಇದು ಶ್ರಮಿಕರ ಚರಿತ್ರೆ. ಆಮೇಲೆ ಇದರ ಕೊಡುಗೆಯನ್ನು ಯಾರೂ ನೆನಪಿಸಕೊಳ್ಳುವುದಿಲ್ಲ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.
ಪ್ರತಿಪದ ಪ್ರಕಾಶನದ ವತಿಯಿಂದ ಜನಪರ ಚಿಂತಕ ಕೆ.ದೊರೈರಾಜ್ ಅವರ ‘ನಮ್ಮ ಹಟ್ಟಿ’ ಒಂದು ಹಟ್ಟಿಯ ಆತ್ಮಕಥಾನಕ ಕೃತಿ ಬಿಡುಗಡೆ ಹಟ್ಟಿಯ ಮಕ್ಕಳಿಂದ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ದೊರೈರಾಜ್, ನಮಗೆ ತಿಳುವಳಿಕೆ ತುಂಬ ಅಗತ್ಯವಿದೆ. ಈ ತಿಳುವಳಿಕೆ ನೀಡಲಿ ಎಂದೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಇಡೀ ಚರಿತ್ರೆಯನ್ನು ಓದಿದರೆ, ಇಲ್ಲಿ ಬದುಕಿರುವ ಹಿರಿಯರನ್ನು ನೋಡಿದರೆ ನಮ್ಮ ಹಟ್ಟಿಯನ್ನು ಹೊರಗಿಡಲಾಗಿದೆ. ತುಮಕೂರಿಗೆ ಸಂಬಂಧಿಸಿದ ಒಂದು ಲೇಖನವನ್ನು ಓದುತ್ತಿದ್ದೆ. ಅದರಲ್ಲಿ ಕೋಟೆ ಆಂಜನೇಯ ಸೇರಿದಂತೆ ಎಲ್ಲವನ್ನು ಉಲ್ಲೇಖಿಸುತ್ತಾರೆ. ಆದರೆ ಅಲ್ಲಿರುವ ದುರ್ಗಮ್ಮನ ದೇವಸ್ಥಾನ ಬಗ್ಗೆ ಉಲ್ಲೇಖವಿಲ್ಲ. ಯಾಕೆ ಇದನ್ನು ಹೊರಗಿಟ್ಟರು ಎಂಬುದನ್ನು ಮುಖ್ಯವಾಗಿ ಗಮನಿಸಬೇಕು ಎಂದರು.
ಸಾಂಸ್ಕೃತಿಕವಾಗಿ ಸ್ಪಷ್ಟತೆಯನ್ನು ತಿಳಿದುಕೊಂಡಿರುವವರು ಇಡೀ ಜಗತ್ತನ್ನು ಆಳುತ್ತಿದ್ದಾರೆ.. ಈ ಪದಗಳನ್ನು ಕೇಳದೆ, ಇದರ ಅರ್ಥಗಳನ್ನು ಕೇಳದೆ ನರಳುತ್ತಿರುವಂಥವರು ಶೇ.99ರಷ್ಟು ಜನ ಇದ್ದಾರೆ. ನಾವು ತಿಳುವಳಿಕೆಯನ್ನು ದೂರ ಇಟ್ಟು, ಬರೀ ನಾವ್ ನಾವೇ ಕುಳಿತು ಮಾತನಾಡಿಕೊಳ್ಳುವುದಾದರೆ ನಮ್ಮೆಲ್ಲರ ಉದ್ದಾರ ಸಾಧ್ಯವಿಲ್ಲ ಎಂದು ಜನಪರ ಹೇಳಿದರು.
ಈ ಹಟ್ಟಿಯಲ್ಲಿರುವ ಕಾರ್ಮಿಕರು ಕುಶಲಿಗಳು. ಮನೆ ಕಟ್ಟಿಕೊಟ್ಟರು. ಆದರೆ ಇವರಿಗೆ ಮನೆ ಮಾಡಿಕೊಳ್ಳಲಿಲ್ಲ. ಹಟ್ಟಿಯ ಜನರಲ್ಲಿ ಕೌಶಲ್ಯ ಇದೆ. ಇದರಿಂದಾಗಿ ತುಮಕೂರು ಸೇರಿದಂತೆ ಸುತ್ತಮುತ್ತಲ ಪ್ರದೇಶ ಬೆಳವಣಿಗೆಯಾಗಿದ್ದು, ಇವರ ಕೊಡುಗೆಯಿಂದಲೇ ಜಗತ್ತು ಸುಖಿಯಾಗಿರುವುದು. ಆದರೆ ಈ ಶ್ರಮಿಕ ವರ್ಗದ ಕೊಡುಗೆಯನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ ಎಂದರು.
ಶಂಭಾ ಜೋಷಿಯವರು ಬರೆದಿರುವ ಕೃತಿಯೊಂದರಲ್ಲಿ ಹಟ್ಟಿ ಎನ್ನುವ ಪದ ಬರುತ್ತದೆ. ಇತಿಹಾಸದಲ್ಲಿ ಎಲ್ಲಿ ಹುಡುಕಿದರೂ ಈ ಹಟ್ಟಿಯ ಪದ ಉಲ್ಲೇಖವಿಲ್ಲ. ಯಾವ ಜನಾಂಗಕ್ಕೆ ಅಥವಾ ವ್ಯಕ್ತಿಗೆ ಸಾಂಸ್ಕೃತಿಕ ಎಚ್ಚರ ಇರುವುದಿಲ್ಲವೋ ಆ ಜನಾಂಗಕ್ಕೆ ಭವಿಷ್ಯವಿಲ್ಲ. ಸಂಸ್ಕೃತಿ ಎನ್ನುವುದು ಇನ್ನೊಬ್ಬರಿಂದು ದುಡಿಸಿಕೊಂಡು ಮಜಾ ಹುಡಾಯಿಸುವುದು. ಕೆಳವರ್ಗದ ಜನಕ್ಕೆ ಅಧಿಕಾರ ಇಲ್ಲ. ಜೀವನ ಇಲ್ಲ. ಸುಖ ಇಲ್ಲ ಅಂದರೆ ಏನೂ ಇಲ್ಲದೆ ಬದುಕುತ್ತಿದ್ದಾರೆ. ಈ ಥರ ಎರಡು ಸಂಸ್ಕೃತಿ ಇದೆ ಎಂದು ಹೇಳಿದರು.
ನಮಗೆ ಬೇಕಾಗಿರುವುದು ಸಾಂಸ್ಕೃತಿಕ ಎಚ್ಚರ. ಈ ಪದ ಹೇಳುವುದಕ್ಕೆ ಕಾರಣವಿದೆ. ಬಹಳ ಜನ ನಮ್ಮ ಹಟ್ಟಿ ಕೃತಿಗೆ ಹಟ್ಟಿ ಅಂಥಾ ಯಾಕೆ ಹೆಸರಿಟ್ರಿ ಎಂದು ಕೇಳುತ್ತಾರೆ. ಹಟ್ಟಿ ಸರಿ ಇಲ್ಲ ಸರ್ ಎನ್ನುತ್ತಾರೆ. ಇಲ್ಲಿ ಅವಮಾನಿಸಿಕೊಳ್ಳುವುದಲ್ಲ. ನಾನು ನಿಮ್ಮಂಥ ಮನುಷ್ಯ ಎಂದು ಹೇಳಬೇಕು. ನಮ್ಮ ಹಟ್ಟಿ ಜನ ಇಲ್ಲಿದ್ದರೆ ನಮಗೆ ಬೆಲೆ ಇರುವುದಿಲ್ಲ ಎಂದು ತಿಳಿದು ಹಟ್ಟಿಯಿಂದ ಬೇರೆ ಕಡೆ ಹೋದರು. ಹಟ್ಟಿ ಅಂದ್ರೆ ಅವಮಾನಿತ ಪದ, ಅಪಮಾನಕ್ಕೊಳಗಾಗುವಂಥವರು ಬದುಕು ಸ್ಥಳ ಎಂಬ ಭಾವನೆ ಇದೆ. ಇದು ಗುಲಾಮರಿಯ ಸಂಕೇತ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಹೇಳಿದರು.
ನಾವು ಶ್ರೇಷ್ಟ, ಹಣವುಳ್ಳವರು, ನಾವು ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ತುಳಿಯೋ ಸಂಸ್ಕೃತಿ, ಯಜಮಾನಿಕ ಸಂಸ್ಕೃತಿ ವಿರುದ್ಧ ಕೆಳಜಾತಿಗಳು ಕೆಳಸಮುದಾಯಗಳು ಪ್ರಜ್ಞಾವಂತರೂ ಕೂಡ ಹೋರಾಡಿ ಸಮಾನತೆಯ ಪರವಾಗಿ ನಿಲ್ಲಬೇಕು ಎಂದು ತಿಳಿಸಿದರು.
ಹಟ್ಟಿಯವರು ಅನ್ನೋ ಕಾರಣಕ್ಕೆ ಅಸ್ಪೃಶ್ಯರು ಅಂತ ಹೊರಗಿಟ್ಟಿದ್ದಾರೆ. ಮುಸ್ಲಿಮರನ್ನು, ಗೊಲ್ಲರನ್ನು ಹೊರಗಿಡಲಾಗಿದೆ. ಹೀಗಾಗಿ ಸಾಂಸ್ಕೃತಿಕವಾಗಿ ಎಚ್ಚರಗೊಳ್ಳಬೇಕು. ಯಜಮಾನ ಸಂಸ್ಕೃತಿಯ ವಿರುದ್ಧ ನಾವು ನಮಾನತೆ ಸಂಸ್ಕೃತಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಕೊಳ್ಳಬೇಕು. ನಮ್ಮ ಆಚರಣೆಗ¼ಲ್ಲಿ ರೂಢಿಸಿಕೊಳ್ಳಬೇಕು. ಇದರ ಮೂಲಕ ನಮಗೆ ಭವಿಷ್ಯವಿದೆ. ನಾವು ಎಲ್ಲರೊಂದಿಗೆ ಸರಿಸಮಾನರಾಗಿ ಬದುಕಬಹುದು. ಮೇಲು ಕೀಳು ಅನ್ನೋರು ಅಯೋಗ್ಯ, ಅವಿವೇಕದ ತಿಳುವಳಿಕೆ ಎಂದರು.