ಕಾಂಗ್ರೆಸ್ ಪಕ್ಷದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಮತ್ತು ಮುಖ್ಯಮಂತ್ರಿ ಗದ್ದುಗೆಗಾಗಿ ನಡೆಯುತ್ತಿರುವ ಮಾತಿನ ವರಸೆಗಳು ಹಾದಿ ರಂಪ ಬೀದಿ ರಂಪದ ಮಟ್ಟ ಮುಟ್ಟಿದ್ದು ಪೂರ್ಣ ಬಹುಮತವನ್ನು ಕೊಟ್ಟು ಅಧಿಕಾರಕ್ಕೆ ತಂದ ಜನರು ಪಶ್ಚಾತ್ತಾಪ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಬಿ ಸುರೇಶ್ ಗೌಡ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜನರ ಸಂಕಷ್ಟಕ್ಕೆ ಮಿಡಿಯದವರು ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದು ಎಂದು ಆಗ್ರಹಿಸಿದ್ದಾರೆ.
ನಮ್ಮ ಜಿಲ್ಲೆಯವರು ಸಹಕಾರ ಸಚಿವರೂ ಆದ ಕೆ.ಎನ್.ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರ ಉಪಮುಖ್ಯಮಂತ್ರಿ ಹುದ್ದೆಗೆ ಮಾತ್ರವಲ್ಲದೇ ಅವರ ಕೆಪಿಸಿಸಿ ಅಧ್ಯಕ್ಷ ಹುದ್ದೆಗೇ ನೇರವಾಗಿ ಸೆಡ್ಡು ಹೊಡೆದಿದ್ದು ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಇದು ದ್ಯೋತಕವಾಗಿದೆ ಎಂದು ಅವರು ಹೇಳಿದ್ದಾರೆ.
ʻಜನರು ಒಂದು ಪಕ್ಷಕ್ಕೆ ಅಧಿಕಾರ ಕೊಡುವುದು ಅದು ಜನಪರವಾಗಿ ಕೆಲಸ ಮಾಡಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲಿ ಎಂದು. ಆದರೆ, ಅನುಭವಿ ರಾಜಕಾರಣಿ, 15 ಸಾರಿ ಬಜೆಟ್ ಮಂಡಿಸಿದ ಖ್ಯಾತಿಯ ಸಿದ್ದರಾಮಯ್ಯ ಅವರಂಥವರೇ ಮುಖ್ಯಮಂತ್ರಿ ಆಗಿದ್ದಾಗಲೂ ರಾಜ್ಯದ ಆಡಳಿತ ದಿಕ್ಕು ತಪ್ಪಿದ ಹಡಗಿನಂತೆ ಆಗಿರುವುದು ಈ ರಾಜ್ಯದ ದುರ್ದೈವʼ ಎಂದು ಅವರು ವಿಷಾಧಿಸಿದ್ದಾರೆ
ʻಗುರುವಾರ ಬೆಂಗಳೂರಿನಲ್ಲಿ ನಡೆದ ಕೆಂಪೇಗೌಡ ದಿನಾಚರಣೆಯಲ್ಲಿ ಒಕ್ಕಲಿಗರ ಮಹಾಸಂಸ್ಥಾನ ಮಠದ ಮುಖ್ಯಸ್ಥರಾದ ಚಂದ್ರಶೇಖರನಾಥ ಸ್ವಾಮೀಜಿಯವರು ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಬೇಕು ಎಂದು ಕರೆ ನೀಡಿರುವುದು ಗದ್ದುಗೆಯ ಗುದ್ದಾಟ ಎಲ್ಲಿಯವರೆಗೆ ಬಂದು ಮುಟ್ಟಿದೆ ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ. ಇದು ರಾಜ್ಯದಲ್ಲಿ ಹಿಂದೆ ಎಂದೂ ಕೇಳಿ ಅರಿಯದ ಸಂಗತಿಯಾಗಿದೆʼ ಎಂದು ಅವರು ತಿಳಿಸಿದ್ದಾರೆ.
ʻನಿತ್ಯವೂ ಹೈಕಮಾಂಡ್ ಜಪ ಮಾಡುವಂಥ ಒಂದು ಪಕ್ಷದಲ್ಲಿ ರಾಜ್ಯದ ಕಾಂಗ್ರೆಸ್ ಧುರೀಣರು ಹಾದಿ ಬೀದಿಯಲ್ಲಿ ಪಕ್ಷದ ವಿದ್ಯಮಾನಗಳನ್ನು ಚರ್ಚೆ ಮಾಡುತ್ತಿರುವುದು ಆ ಪಕ್ಷದಲ್ಲಿ ನಾಯಕತ್ವವೆ ಇಲ್ಲ ಎನ್ನುವುದರ ಸಂಕೇತವಾಗಿದೆ. ಆ ವಿದ್ಯಮಾನಗಳ ಬಗ್ಗೆ ನಮ್ಮ ಪಕ್ಷಕ್ಕೆ ಏನೂ ಸಂಬಂಧವಿಲ್ಲ. ಬೇಕಾದರೆ ಅವರು ಬೀದಿಗೆ ಇಳಿದು ಹೊಡೆದಾಡಲಿ. ಆದರೆ, ರಾಜ್ಯದ ಜನರ ನಿತ್ಯದ ಕಷ್ಟಗಳ ಬಗ್ಗೆ ನಮ್ಮ ಪಕ್ಷಕ್ಕೆ ಚಿಂತೆಯಿದೆʼ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ʻಹುಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ನಿತ್ಯವೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ಒಂದೊಂದೇ ಬೆಲೆ ಏರಿಸುತ್ತಿದ್ದಾರೆ. ಈಗಲೇ ಸಂಕಷ್ಟದಲ್ಲಿ ಇರುವ ಜನರು ಇನ್ನಷ್ಟು ಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದಲ್ಲಿ ಇದೀಗ ಮುಂಗಾರು ಮಳೆ ಬೀಳುತ್ತಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಆಗಬೇಕು. ಅವರು ಸಕಾಲದಲ್ಲಿ ಬಿತ್ತನೆ ಮಾಡಿ ಬೆಳೆ ತೆಗೆಯಬೇಕು. ಆ ದಿಸೆಯಲ್ಲಿ ಸರ್ಕಾರದ ಮಟ್ಟದಲ್ಲಿ ಯಾವ ಚಿಂತನೆಯೂ ನಡೆದಂತೆ ಕಾಣುವುದಿಲ್ಲʼ ಎಂದಿದ್ದಾರೆ.
ʻಈ ಸರ್ಕಾರದಲ್ಲಿ ಅಂತಃಕಲಹ ಮೇರೆ ಮೀರಿದ್ದು, ದುರ್ಬಲವಾಗಿರುವ ಕಾಂಗ್ರೆಸ್ ಹೈಕಮಾಂಡ್ ಅದನ್ನು ನಿಯಂತ್ರಿಸುವ ಶಕ್ತಿಯನ್ನು ಕಳೆದುಕೊಂಡಿದೆ. ಈ ಸರ್ಕಾರ ಇಸ್ಪೀಟು ಎಲೆಗಳ ಸೌಧದ ಹಾಗೆ ಇನ್ನೇನು ಕುಸಿದು ಬೀಳಲಿದೆ. ಲೋಕಸಭೆಯ ಚುನಾವಣೆಯಲ್ಲಿ ಎರಡು ಅಂಕಿ ದಾಟದಂತೆ ಕಾಂಗ್ರೆಸ್ ಸದಸ್ಯರನ್ನು ಗೆಲ್ಲಿಸಿರುವುದು ಕರ್ನಾಟಕದ ಭವಿಷ್ಯದ ರಾಜಕಾರಣದ ದಿಕ್ಕಿನ ಮುನ್ಸೂಚನೆಯಂತೆ ಇದೆ. ಬಿಜೆಪಿ ಜೆಡಿಎಸ್ ಮೈತ್ರಿಯು ಮುಂದಿನ ದಿನಗಳಲ್ಲಿ ಬರಲಿರುವ ಜನಪರ ಸರ್ಕಾರಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ಶಾಸಕ ಬಿ ಸುರೇಶ್ ಗೌಡ ಹೇಲಿದ್ದಾರೆ.