ತುಮಕೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳಲ್ಲಿ ಪುಸ್ತಕ ಓದುವುದನ್ನು ಕಡ್ಡಾಯ ಮಾಡಬೇಕು. ಓದುವ ಪಿರಿಯಡ್ ಅನ್ನು ರೂಪಿಸಿಬೇಕು. ಆ ಅವಧಿಯಲ್ಲಿ ಮಕ್ಕಳು ಗ್ರಂಥಾಲಯದಲ್ಲಿ ಪುಸ್ತಕ ಓದಿ, ನಂತರ ತಾವು ಓದಿದ್ದನ್ನು ಇತರೆ ಮಕ್ಕಳೊಂದಿಗೆ ಸಂವಾದ ಮಾಡುವ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆರಂಭಿಸಬೇಕು ಎಂದು ಶಿಕ್ಞಣತಜ್ಞ, ವಾಗ್ಮೀ ಡಾ.ಗುರುರಾಜ್ ಕರ್ಜಜಿ ಸಲಹೆ ಮಾಡಿದರು.
ರಾಜ್ಯ ಗ್ರಂಥಾಲಯ ಸಂಘ, ತುಮಕೂರು ವಿಶ್ವವಿದ್ಯಾಲಯ, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘ, ಬೆಂಗಳೂರಿನ ಎಲ್ಐಎಸ್ ಅಕಾಡೆಮಿ, ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ಆಶ್ರಯದಲ್ಲಿ ನಗರದ ಎಸ್ಐಟಿಯ ಬಿರ್ಲಾ ಸಭಾಂಗಣದಲ್ಲಿ ಗುರುವಾರ ಆರಂಭವಾದ ‘ರೀಡರ್ಸ್ ಆರ್ ಲೀಡರ್ಸ್’ ಎಂಬ ಘೋಷವಾಕ್ಯದ ಅಂತಾರಾಷ್ಟ್ರೀಯ ಗ್ರಂಥಪಾಲಕರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಓದಿನಿಂದ ಕೇವಲ ಜ್ಞಾನ ಮಾತ್ರವಲ್ಲ, ಗ್ರಹಿಕೆ, ಆಲೋಚನಾಶಕ್ತಿ ವೃದ್ಧಿಯಾಗುತ್ತದೆ. ಜೀವನ ಪರಿವರ್ತನೆಗೂ ಓದು ಕಾರಣವಾಗುತ್ತದೆ. ಗಾಂಧೀಜಿ, ಅಂಬೇಡ್ಕರ್, ಅಬ್ದುಲ್ ಕಲಾಂ ಅಂತಹ ಅನೇಕರು ಪುಸ್ತಕ ಪ್ರೀತಿ ಬೆಳೆಸಿಕೊಂಡಿದ್ದರು. ಓದುವು ಜೀವನೋತ್ಕರ್ಷಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಪುಸ್ತಕಗಳ ಓದಿನಿಂದ ನಾನು ಪರಿವರ್ತನಾದೆ, ಸಾಧನೆ ಮಾಡಲು ಸಾಧ್ಯವಾಯಿತು ಎಂದು ಅನೇಕರು ಹೇಳಿಕೊಂಡಿದ್ದಾರೆ. ಓದುವಿಗೆ ಅಂತಹ ಪರಿವರ್ತನೆ ಮಾಡುವ ಶಕ್ತಿ ಇದೆ. ಪುಸ್ತಕಗಳು ಮನುಷ್ಯನ ಅತ್ತುತ್ತಮ ಸ್ನೇಹಿತರು ಎನ್ನುವ ಮಾತಿನಲ್ಲಿ ಅರ್ಥವಿದೆ. ಪುಸ್ತಕ ಓದುವ ಹವ್ಯಾವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದರು.
ಸಮಾರಂಭದ ಸಾನಿಧ್ಯವಹಿಸಿದ್ದ ಹಿರಿಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಓದು ನಮ್ಮನ್ನು ವಿಕಸಿನಗೊಳಿಸುತ್ತದೆ. ಓದುವಿನಿಂದ ಗ್ರಹಿಕೆಯಿಂದ, ಸಂವಾದದಿಂದ ನಮ್ಮನ್ನು ನಾವು ಅರಳಿಸಿಕೊಳ್ಳಬಹುದು. ಮಕ್ಕಳಲ್ಲಿ ಓದಿನ ಅಭಿರುಚಿ ಬೆಳೆಸಬೇಕು, ಮನೆಗಳಲ್ಲಿ ಪುಸ್ತಕ ಓದುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸಲಹೆ ಮಾಡಿದರು.
ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಹೆಚ್.ಬಸವರಾಜೇಂದ್ರ ಅವರು ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ, ಗ್ರಂಥಾಲಯಗಳು ಜ್ಞಾನದ ಭಂಡಾರ ಒದಗಿಸರುವ ಪವಿತ್ರ ಕೇಂದ್ರಗಳು. ಗ್ರಂಥಾಲಯಗಳು ಓದುಗರನ್ನು ಸೆಳೆಯಬೇಕು. ಓದುಗರಿಗೆ ಹೆಚ್ಚಿನ ಸೌಲಭ್ಯ ನೀಡಬೇಕು, ಅವರು ಕೇಳುವ ಪುಸ್ತಕವನ್ನು ಕಾಳಜಿಯಿಂದ ಒದಗಿಸಬೇಕು ಎಂದು ಗ್ರಂಥಾಲಯ ಸಿಬ್ಬಂದಿಗೆ ಹೇಳಿದರು.
ಸಂಶೋಧನಾ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಜನರಿಗೆ ಅಗತ್ಯವಿರುವ ಮಾಹಿತಿ ಪಡೆಯಲು ಗ್ರಂಥಾಲಯ ನೆರವಾಗುತ್ತವೆ. ಓದುವು ಬೌದ್ಧಿಕ ಬೆಳವಣಿಗೆಯೊಂದಿಗೆ ವ್ಯಕ್ತಿಕತ್ವ ವಿಕಸನಕ್ಕೂ ಸಹಕಾರಿಯಾಗಿದೆ. ಗ್ರಂಥಾಲಯಗಳು ಓದುಗರನ್ನು, ಓದುವ ಅಭಿರುಚಿಯನ್ನು ಹೆಚ್ಚು ಮಾಡಲು ಕಾಳಜಿವಹಿಸಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಜ್ಞಾನಕ್ಕಿಂಥಾ ದೊಡ್ಡದು ಜಗತ್ತಿನಲ್ಲಿ ಇನ್ನಾವುದೂ ಇಲ್ಲ. ಓದುವುದರಿಂದ ಜ್ಞಾನ ಸಂಪಾದಿಸಬಹುದು. ಪ್ರತಿ ಮನೆಯಲ್ಲೂ ಒಂದು ಗ್ರಂಥಾಲಯ ಇರಬೇಕು. ಓದುವ ಹವ್ಯಾಸ ಮಕ್ಕಳಿಗೆ ಮನೆಯಿಂದಲೇ ಆರಂಭವಾಗಬೇಕು. ಅಡುಗೆಮನೆ, ದೇವರಮನೆಯಂತೆ ಒಂದು ಪುಸ್ತಕಮನೆ ಎಲ್ಲರ ಮನೆಯಲ್ಲಿರಲಿ ಎಂದರು.
ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೆಂಕಟೇಶ್ವರಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ರಾಜ್ಯ ಗ್ರಂಥಪಾಲಕರ ಸಂಘದ ಅಂತರ್ಜಾಲಕ್ಕೆ ಈ ವೇಳೆ ಚಾಲನೆ ನೀಡಿದರು.
ಸುಮಾರು 20 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವ ಪದ್ಮಶ್ರೀ ಪುರಸ್ಕøತರಾದ ಪುಸ್ತಕ ಮನೆ ಅಂಕೇಗೌಡರನ್ನು ಈ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅಂಕೇಗೌಡರು, ಎಲ್ಲರೂ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು, ದಿನದಲ್ಲಿ ಕನಿಷ್ಟ 4 ಪುಟಗಳನ್ನಾದರೂ ಓದಬೇಕು. ಇದು ಜ್ಞಾನದ ಯುಗ ಜ್ಞಾನದಿಂದಲೇ ಬದುಕು ರೂಪಿಸಿಕೊಳ್ಳಬೇಕಾಗಿರುವುದರಿಂದ ಜ್ಞಾನವಂತರಾಗಲು ಓದಬೇಕು ಎಂದರು.
ರಾಜ್ಯ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ.ಎಸ್.ಎಲ್.ಕಾಡದೇವರಮಠ ಪ್ರಾಸ್ತಾವಿಕ ಮಾತುಗಳನ್ನಾಡಿ, ಓದುಗರೇ ನಾಯಕರು ಎಂದು ಘೋಷವಾಕ್ಯದಲ್ಲಿ ವಿದ್ಯಾರ್ಥಿ, ಸಾರ್ವಜನಿಕರಲ್ಲಿ ಓದುವ ಸಂಸ್ಕøತಿಯನ್ನು ಬೆಳೆಸುವಲ್ಲಿ ಗ್ರಂಥಾಲಯಗಳ ಪಾತ್ರ ತಿಳಿಸುವುದರ ಜೊತೆಗೆ ನಾಯಕತ್ವ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಗ್ರಂಥಾಲಯಗಳು ಹೇಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರ ಬಗ್ಗೆ ಚರ್ಚೆ ನಡೆಸುವುದು ಸಮ್ಮೇಳನದ ಆಶಯವಾಗಿದೆ ಎಂದರು.
ಈ ವೇಳೆ ದಾವಣಗೆರೆ ವಿಶ್ವವಿದ್ಯಾಲಯ ಕುಲಪತಿ ಬಿ.ಜಿ.ಕುಂಬಾರ, ಬೀದರ್ ವಿವಿ ಕುಲಪತಿ ಡಾ.ಬಿ.ಎಸ್.ಬಿರಾದಾರ, ಗ್ರಂಥಪಾಲಕರಾದ ಪ್ರೊ.ಎ.ವೈ.ಅಸುಂದಿ, ಪ್ರೊ.ಟಿ.ವಿ.ಕೆಂಪರಾಜು, ಪ್ರೊ.ಮುತ್ತಯ್ಯ ಕೊಗನೂರುಮಠ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಲ್ಐಎಸ್ ಅಕಾಡೆಮಿ ಅಧ್ಯಕ್ಷ ಡಾ.ಪಿ.ವಿ.ಕೊಣ್ಣೂರು, ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಡಾ.ಎಂ.ಕೃಷ್ಣಪ್ಪ, ಕಾರ್ಯಾಧ್ಯಕ್ಷ ಡಾ.ರಾಜೇಶ್ ಎನ್.ತುರಮರಿ, ರಾಜ್ಯ ಗ್ರಂಥಾಲಯ ಸಂಘದ ಕಾರ್ಯದರ್ಶಿ ಹೆಚ್.ಪಿ.ಶೇಖರ್ ಮೊದಲಾದವರು ಭಾಗವಹಿಸಿದ್ದರು.