ತುಮಕೂರು : ಪ್ರತಿಯೊಬ್ಬರಿಗೂ ಮನುಷ್ಯತ್ವ ಇರಬೇಕು, ಮನುಷ್ಯತ್ವ ಇದ್ದಾಗ ಮಾತ್ರ ಸಮ ಸಮಾಜವನ್ನು ಕಾಣಲಿಕ್ಕೆ ಸಾಧ್ಯ, ಸಮಾಜದಲ್ಲಿ ಬದಲಾವಣೆ ಕಾಣಲಿಕ್ಕೆ ಸಾಧ್ಯವಾಗುತ್ತದೆ, ಈ ಬದಲಾವಣೆ ಆಗಬೇಕೆಂದರೆ ಪ್ರತಿಯೊಬ್ಬರಿಗೂ ಕೂಡ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಯನ್ನು ತುಂಬುವಂತಹ ಕೆಲಸವನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರಿಂದು ನಗರದಲ್ಲಿ ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರ 75 ನೇ ಜನ್ಮ ದಿನಾಚರಣೆ ಮತ್ತು ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದರು.
ಹಣೆಬರಹ, ಕರ್ಮ ಸಿದ್ದಾಂತಗಳನ್ನು ಬಸವಾದಿ ಶರಣರು ತ್ಯಜಿಸಿದ್ದರು. ದೇವರು ಯಾರ ನಡುವೆಯೂ ತಾರತಮ್ಯ ಮಾಡುವುದಿಲ್ಲ. ಮೇಲು ಕೀಳು ಎಂಬುದಿಲ್ಲ. ಹುಟ್ಟಿನಿಂದ ಯಾರೂ ದಡ್ಡರೂ ಅಲ್ಲ, ಮೇಧಾವಿಗಳೂ ಅಲ್ಲ. ಅವಕಾಶಗಳು ಸಿಗಬೇಕು ಎಂದರು. ರಾಜಣ್ಣ ಅವರು ದಲಿತ ಜನಾಂಗದಲ್ಲಿ ಹುಟ್ಟಿ ಸಮರ್ಥ ಸಹಕಾರಿಯಾವುದು ಸುಲಭವಲ್ಲ. ಸಂವಿಧಾನ ಇರದೇ ಹೋಗಿದ್ದರೆ ನಾವ್ಯಾರೂ ಮುಖ್ಯವಾಹಿನಿಗೆ ಬರಲು ಸಾಧ್ಯವಿರಲಿಲ್ಲ ಎಂದ ಮುಖ್ಯಮಂತ್ರಿಗಳು, ನಮ್ಮ ಸರ್ಕಾರ ಬಂದ ನಂತರ ಸಮಾಜದಲ್ಲಿ ಬಡತನ ತೊಡೆದುಹಾಕಲು ಸಾಮಾಜಿಕ, ಆರ್ಥಿಕ ಶಕ್ತಿಯನ್ನು ತುಂಬುವ ಪ್ರಯತ್ನವನ್ನು ಮಾಡಿದ್ದೇವೆ ಎಂದರು.

ಸಾಮಾಜಿಕ ಅಸಮಾನತೆಯನ್ನು ತೊಲಗಿಸಿ ಎಲ್ಲಾರೂ ಮುಖ್ಯವಾಹಿನಿಗೆ ಬರುವಂತಹ ಪ್ರಯತ್ನ ಮಾಡುವಂತಹವುದೇ ನಿಜವಾದ ರಾಜಕೀಯ ಗುರಿ, ಸಂವಿಧಾನ ಸ್ಪಷ್ಟವಾಗಿ ಹೇಳಿದೆ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಒದಗಿಸಿಕೊಡಬೇಕೆಂದು, ಅದರಲ್ಲಿ ಜಾತಿ, ಧರ್ಮ, ಪ್ರದೇಶ, ಭಾಷೆ ಯಾವುದೂ ಬರಲ್ಲ ಎಂದು ಹೇಳಿದರು.
ಮೇಲ್ಜಾತಿಯ ಬಡವ ಬಂದರೆ ಸ್ವಾಮಿ, ಬುದ್ದಿ ಅಂತ ಕೈ ಮುಗಿಯುತ್ತೇವೆ, ಅದೇ ಒಬ್ಬ ದಲಿತ ವಿದ್ಯಾವಂತನಾಗಿ, ಶ್ರೀಮಂತನಾಗಿ ಬಂದರೂ ಅವನನ್ನು ಏಕ ವಚನದಲ್ಲೇ ಮಾತನಾಡಿಸುತ್ತೇವೆ, ಇದು ಗುಲಾಮಗಿರಿಯ ಸಂಕೇತ, ಇದು ಶೂದ್ರರಿಗೆ ಇರುವ ದಾಸ್ಯದ ಸಂಕೇತ ಎಂದು ಹೇಳಿದರು.
ಕೆ.ಎನ್.ರಾಜಣ್ಣ ಮೀಸಲು ಕ್ಷೇತ್ರದಲ್ಲಿ ನಿಲ್ಲದೆ ಸಾಮಾನ್ಯ ಕ್ಷೇತ್ರದಲ್ಲಿ ನಿಂತು ಮೂರು ಬಾರಿ ಶಾಸಕರಾಗಿದ್ದಾರೆ, ಸಾಮಾನ್ಯವಾಗಿ ಪರಿಶಿಷ್ಟ ವರ್ಗದವರು ಮೀಸಲು ಕ್ಷೇತ್ರದಲ್ಲಿ ನಿಂತು ಗೆಲ್ಲುತ್ತಾರೆ, ನಾನು ನಾಲ್ಕು ಬಾರಿ ಸೋತು ಒಂಬತ್ತು ಬಾರಿ ಗೆದ್ದಿದ್ದೇನೆ. ಸೋಲಿರಲಿ, ಗೆಲುವಿರಲಿ ನಮ್ಮ ಬದ್ಧತೆಯನ್ನು ಮರೆಯಬಾರದು, ವಿಚಲಿತನಾಗದೆ ಇದ್ದಾಗ ನಾವು ರಾಜಕೀಯದಲ್ಲಿರುವುದು ಸಾರ್ಥಕವಾಗುತ್ತದೆ, ನಾವು ಬದುಕಿರುವ ಕಾಲದಲ್ಲಿ ಸಾರ್ಥಕತೆಗೊಳಿಸುವುದೇ ನಿಜವಾದ ಬದುಕು, ಪ್ರತಿಯೊಬ್ಬರೂ ಒಮ್ಮೆ ತಿರುಗಿ ನೋಡಿ ನಾನು ಹುಟ್ಟಿದ ಮೇಲೆ ಜೀವನ ಸಾರ್ಥಕವಾಗಿದೆಯೇ ಎಂಬ ಸಮಧಾನವಾದರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಕೆ.ಎನ್.ರಾಜಣ್ಣ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ, ರಾಜಣ್ಣ ಒಮ್ಮೆ ಸೋತಾಗ ನನ್ನನ್ನು ಬೈದುಕೊಂಡಿರಬಹುದು, ಹಣೆಬರಹ ಎಂಬುದನ್ನು ನಂಬ ಬಾರದು ಈ ತರ್ಕ ಸಿದ್ದಾಂತ ನಂಬ ಬಾರದು, ಯಾವ ದೇವರು ಯಾರ ಹಣೆಯ ಮೇಲೂ ಬರೆಯುವುದಿಲ್ಲ, ದೇವರು ಯಾರಿಗೂ ತಾರತಮ್ಯ ಮಾಡುವುದಲ್ಲ, ಅದಕ್ಕೆ ಬಸವಾದಿ ಶರಣರು ಕರ್ಮ ಸಿದ್ಧಾಂತವನ್ನು ತ್ಯಜಿಸಿದರು ಎಂದು ಹೇಳಿದರು.
ರಾಜಣ್ಣನವರು ಬಡವರ ಬಗ್ಗೆ ತುಂಬಾ ಕಳಕಳಿ ಮುಖ್ಯ, ಸಮಾಜದಲ್ಲಿರುವ ಎಲ್ಲಾ ಬಡವರಿಗೂ ಕೂಡ ಸಹಾಯ ಮಾಡಬೇಕು, ಅವರ ಕಷ್ಟದಲ್ಲಿ ಭಾಗಿಯಾಗಬೇಕು, ಅವರನ್ನು ಆರ್ಥಿಕವಾಗಿ ಮೇಲತ್ತಬೇಕೆಂಬ ಪ್ರಯತ್ನದ ಕಾಳಜಿ ಇದೆಯಲ್ಲಾ ಅದು ದೊಡ್ಡ ಗುಣ ರಾಜಣ್ಣನವರಲ್ಲಿದೆ ಎಂದು ಹೇಳಿದರು.
ರೈತರು ಸಾಲ ಮನ್ನಾ ಮಾಡಬೇಕೆಂದು ಒತ್ತಡ ತಂದಿದ್ದ ಸಂದರ್ಭದಲ್ಲಿ 50,000 ರೂ.ಗಳ ವರೆಗೆ ಅಪೆಕ್ಸ್ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕುಗಳಲ್ಲಿ ರೈತರ ಸಾಲದ ಸಂಪೂರ್ಣ ವಿವರಗಳನ್ನು ನೀಡಿದವರು ರಾಜಣ್ಣ. ಅವರಿಲ್ಲದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅವಧಿಯಲ್ಲಿ ಸಾಲ ಮನ್ನಾ ಮಾಡಿದ್ದರ ಪೈಕಿ 300 ಕೋಟಿಗಳು ಬಾಕಿಯಿದ್ದು, ರೈತರ ಕಾರ್ಯಕ್ರಮವಾಗಿರುವುದರಿಂದ ಇದನ್ನು ಮುಂದಿನ ದಿನಗಳಲ್ಲಿ ಚುಕ್ತಾ ಮಾಡಲಾಗುವುದು ಎಂದು ತಿಳಿಸಿದರು. ಇದರ ಶ್ರೇಯ ರಾಜಣ್ಣನವರಿಗೆ ಸೇರಬೇಕಾಗಿದ್ದರೂ ಕುಮಾರಸ್ವಾಮಿಯವರು ಪಡೆದರು. ರಾಜಣ್ಣ ನೇರ ನಡೆ ನುಡಿಯವರು, ನಿಸ್ಪೃಹವಾಗಿ ಮಾತನಾಡುವವರು. ಈ ಗುಣಗಳು ಸ್ವಾಭಿಮಾನದ ಸಂಕೇತ. ಸ್ವಾಭಿಮಾನವಿದ್ದವರು ಮೇಲೆ ಬರುತ್ತಾರೆ ಎಂದರು.
ಗ್ಯಾರಂಟಿ ಯೋಜನೆಗಳು ಎಲ್ಲ ಜಾತಿ ಧರ್ಮದವರಿಗೆ ಒದಗಿಸಲಾಗಿದೆ. 1.64 ಕೋಟಿ ಜನರಿಗೆ ಗೃಹಜ್ಯೋತಿ, 1.22 ಕೋಟಿ ಜನರಿಗೆ ಗೃಹಲಕ್ಷ್ಮೀ, ಎಲ್ಲ ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ, ಅನ್ನ ಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಜನರನ್ನು ತಲುಪಿದೆ ಎಂದರು.
ಇದೇ ಸಂದರ್ಭದಲ್ಲಿ ರಾಜಣ್ಣ ಅವರಿಗೆ ಜನ್ಮ ದಿನದ ಶುಭಾಶಯಗಳನ್ನು ತಿಳಿಸಿದ ಮುಖ್ಯಮಂತ್ರಿಗಳು ನೂರು ವರ್ಷಗಳಿಗೂ ಹೆಚ್ಚು ಕಾಲ ಬಾಳಲಿ ಎಂದು ಹಾರೈಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೃಹ ಸಚಿವರಾದ ಜಿ. ಪರಮೇಶ್ವರ್ ಸೇರಿದಂತೆ ಅನೇಕ ಸಚಿವರು ಉಪಸ್ಥಿತರಿದ್ದರು. ಸಾಹಿತಿ ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡಿದರು, ಕೆ.ಎನ್.ರಾಜಣ್ಣ ಅವರ ಕುಟುಂಬ ವರ್ಗ ಉಪಸ್ಥಿತರಿದ್ದರು.