ಅಂಡರ್ ಪಾಸ್ : ಸ್ವಲ್ಪದರಲ್ಲೇ ತಪ್ಪಿದ ಪ್ರಾಣಾಪಾಯ

ತುಮಕೂರು- ನಗರದ ಶೆಟ್ಟಿಹಳ್ಳಿ ಗೇಟ್ ಅಂಡರ್‍ಪಾಸ್‍ನಲ್ಲಿ ಎತ್ತರದ ಕ್ಯಾಂಟರ್ ಚಲಿಸಿದ ಪರಿಣಾಮ ಅಂಡರ್‍ಪಾಸ್ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಯೊಂದು ಮುರಿದು ಬಿದ್ದಿರುವ ಘಟನೆ ನಡೆದು, ಸ್ವಲ್ಪದರಲ್ಲೇ ಪ್ರಾಣಾಪಾಯ ತಪ್ಪಿದ ಘಟನೆ ನಡೆಯಿತು.

ಶೆಟ್ಟಿಹಳ್ಳಿಗೇಟ್ ಅಂಡರ್‍ಪಾಸ್‍ನಲ್ಲಿ ಭಾರೀ ವಾಹನಗಳು ಹಾಗೂ ಎತ್ತರದ ವಾಹನಗಳು ಚಲಿಸದಂತೆ ಕಬ್ಬಿಣದ ಕಂಬಿಗಳನ್ನು ಅಳವಡಿಸಲಾಗಿದೆ. ಆದರೆ ಕ್ಯಾಂಟರ್ ಚಾಲಕ ಇದನ್ನು ಗಮನಿಸದೆ ಕ್ಯಾಂಟರ್‍ನ್ನು ಚಲಾಯಿಸಿದ್ದಾನೆ. ಈ ಪರಿಣಾಮ ಅಂಡರ್‍ಪಾಸ್ ಮೇಲ್ಭಾಗದಲ್ಲಿ ಅಳವಡಿಲಾಗಿದ್ದ ದಪ್ಪನೆಯ ಕಬ್ಬಿಣದ ಕಂಬಿಯ ಒಂದು ತುದಿ ಕೆಳಗೆ ಬಿದ್ದಿದೆ. ಅದೇ ವೇಳೆ ದ್ವಿಚಕ್ರ ವಾಹನವೊಂದು ಹಾದು ಹೋಗಿದ್ದು, ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.

ರಾಘವೇಂದ್ರಸ್ವಾಮಿ ಮಠದ ಕಡೆಯಿಂದ ಬಂದಿರುವ ಕ್ಯಾಂಟರ್ ವಾಹನ ಅಂಡರ್‍ಪಾಸ್ ತುದಿಯಲ್ಲೇ ಅಳವಡಿಸಲಾಗಿದ್ದ ಕಬ್ಬಿಣದ ಕಂಬಿಗೆ ತಗುಲಿದೆ. ಇದರಿಂದ ಕಂಬಿ ಮುರಿದು ಬಿದ್ದಿದ್ದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡು ಕೆಲಕಾಲ ವಾಹನಗಳ ಸವಾರರು ಪರದಾಡುವಂತಾಯಿತು.

ಬೆಳಿಗ್ಗೆ 9.10 ಗಂಟೆ ಸಮಯದಲ್ಲಿ ಒಂದು ಕುಟುಂಬದವರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಹಾದು ಹೋಗುತ್ತಿದ್ದರು. ಅದೃಷ್ಟವಶಾತ್ ಕಬ್ಬಿಣದ ಕಂಬಿಯಿಂದ ಪಾರಾಗಿದ್ದಾರೆ. ಈ ಅಂಡರ್‍ಪಾಸ್‍ನಲ್ಲಿ 5 ಬಾರಿ ಕಬ್ಬಿಣದ ಕಂಬಿ ಕಳಚಿಕೊಂಡು ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಇಂದು ಪ್ರಾಣಹಾನಿ ಆಗುವುದು ತಪ್ಪಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಅಳವಡಿಸಿರುವ ಕಬ್ಬಿಣದ ರಾಡ್‍ನ್ನು ಇನ್ನು ಮೇಲ್ಭಾಗಕ್ಕೆ ಅಳವಡಿಸುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಸಂಭವಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರತ್ಯಕ್ಷದರ್ಶಿ ಗಣೇಶ್ ಜಿ. ಪ್ರಸಾದ್ ಒತ್ತಾಯಿಸಿದ್ದಾರೆ.

ಅಂಡರ್‍ಪಾಸ್‍ನಲ್ಲಿ ಕೆಳಗೆ ಬಿದ್ದಿದ್ದ ಕಬ್ಬಿಣದ ರಾಡ್‍ನ್ನು ಘಟನೆ ನಡೆದ ಸುಮಾರು 3 ಗಂಟೆಗಳ ಬಳಿಕ ಕ್ರೇನ್ ಮೂಲಕ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಸಂಚಾರಿ ಠಾಣೆ ಪಿಎಸ್‍ಐ ಮಂಗಳಗೌರಮ್ಮ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಈ ಭಾಗದಲ್ಲಿ ಉಂಟಾಗಿದ್ದ ಟ್ರಾಫಿಕ್ ಸಮಸ್ಯೆಯನ್ನು ನಿವಾರಣೆಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *