ತುಮಕೂರು:ವಿಜ್ಞಾನ, ತಂತ್ರಜ್ಞಾನದಲ್ಲಿ ನ್ಯೂಟನ್ ನಿಂದ ಹಿಡಿದು ಇಲ್ಲಿಯವರೆಗೆ ಹಲವಾರು ಹೊಸ ಆವಿಷ್ಕಾರಗಳು ನಡೆದಿದ್ದು, ತಕ್ಷಣದಲ್ಲಿ ಅವರು ಸಮಸ್ಯೆಗಳಿಗೆ ಪರಿಹಾರ ಒದಗಿಸಿದರೂ, ಧೀರ್ಘಕಾಲದಲ್ಲಿ ಜೀವ ವಿರೋಧಿಯಾಗಿ ಪರಿವರ್ತಿತವಾಗುವುದನ್ನು ನಾವು ಕಾಣುತಿದ್ದೇವೆ.ಹಾಗಾಗಿ ಕಣ್ಣಿಗೆ ಕಾಣದ ಹಾಗೂ ಕಾಣುವ ಜೀವಿಗಳೆರಡಕ್ಕೂ ಅನುಕೂಲವಾಗುವ ರೀತಿಯ ಸುಸ್ಥಿರ ಸಂಶೋಧನೆಗಳತ್ತ ನಾವೆಲ್ಲರೂ ಗಮನಹರಿಸಬೇಕಾಗಿದೆ ಎಂದು ಕರ್ನಾಟಕ ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ರಾಜ್ಯಾಧ್ಯಕ್ಷ ಡಾ.ಎ.ಹೆಚ್.ರಾಜಾಸಾಬ್ ಪ್ರತಿಪಾದಿಸಿದ್ದಾರೆ.
ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನ ವಿಜ್ಞಾನ ವಿಭಾಗದಿಂದ, ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನ “ಸೈನ್ಸ್ ಅಂಡ್ ಸೊಸೈಟಿ ಫಾರ್ ಸಸ್ಟೇನಬಲ್ ಪ್ಯೂಚರ್” ಎಂಬ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣದ ಪರಿಚಯ ಭಾಷಣ ಮಾಡಿದ ಅವರು,ಸ್ವಾತಂತ್ರ ನಂತರದಲ್ಲಿ ದೇಶದ 33 ಕೋಟಿ ಜನರಿಗೆ ಆಹಾರ ಒದಗಿಸಲು ಹಸಿರು ಕ್ರಾಂತಿಯನ್ನು ಅಳವಡಿಸಿಕೊಳ್ಳಲಾಯಿತು.ಇದರ ಪರಿಣಾಮವಾಗಿ ಭಾರತ ಆಹಾರ ಸ್ವಾವಲಂಭನೆ ಸಾಧಿಸಿದರೂ,ಅಂತರ್ಜಲ ಬಳಕೆ,ಅತಿಯಾದ ರಸಾಯನಿಕ ಬಳಕೆ,ಹೈಬ್ರಿಡ್ ತಳಿಗಳು,ಕೀಟನಾಶಕಗಳ ಪರಿಣಾಮ ಪರಿಸರ ನಾಶವಾಗಿ,ಕುಡಿಯುವ ನೀರು ಸಹ ವಿಷಯುಕ್ತವಾಯಿತು.ಇದರಿಂದ ಹೊರಬರಬೇಕಾದರೆ ನಾವೆಲ್ಲರೂ ಪರಿಸ್ನೇಹಿ ಸಂಶೋಧನೆಯತ್ತ ಗಮನಹರಿಸಬೇಕಾದ ಅಗತ್ಯವಿದೆ.ಇದೊಂದು ಮುಗಿಯದ ಯುದ್ದ ಎಂದರು.
ಗಾಂಧೀಜಿಯವರು ಹೇಳಿದಂತೆ ಭೂಮಿ ನಮ್ಮ ಆಸೆಯನ್ನು ಪೂರೈಸಬಲ್ಲದೇ ಹೊರತು ದುರಾಸೆಯನ್ನಲ್ಲ. ಇದನ್ನು ನಾವೆಲ್ಲರೂ ಅರಿತು ನಡೆಯಬೇಕಿದೆ.ಬುದ್ದ ಹೇಳಿದಂತೆ ಯಾವುದಕ್ಕು ಆರಂಭ, ಅಂತ್ಯ ಎಂಬುದಿಲ್ಲ.ಅದೊಂದು ನಿರಂತರ ಪ್ರಕ್ರಿಯೆ.ಆದರೆ ಆತನನ್ನು ದೇವರ ಸ್ವರೂಪ ಕೊಟ್ಟು ಪೂಜೆಗೆ ಸಿಮೀತಗೊಳಿಸಿದ್ದೇವೆ.ಕೃತಕ ಬುದ್ದಿಮತ್ತೆಯಿಂದ ಬುದ್ದಿವಂತ ವಿದ್ಯಾರ್ಥಿ,ಅವರೇಜ್ಗೆ ಇಳಿದರೆ,ಸಾಮಾನ್ಯ ವಿದ್ಯಾರ್ಥಿ ಅದಕ್ಕಿಂತಲೂ ಕೆಳಮಟ್ಟಕ್ಕೆ ಕುಸಿಯುತ್ತಿದ್ದಾನೆ.ವಿದ್ಯಾರ್ಥಿಗಳ ಅಸೈನ್ ಮೆಂಟ್ ಮತ್ತು ಸಂಶೋಧನಾ ಪ್ರಬಂಧಗಳಲ್ಲಿ ಯಾವುದು ನಕಲು ಮಾಡಿದ್ದು ಎಂದು ಕಂಡು ಹಿಡಿಯಲು ಹೊಸ ಸಂಶೋಧನೆಗೆ ಮುಂದಾಗುವಂತಹ ದುಸ್ಥಿತಿಗೆ ನಾವು ತಲುಪಿದ್ದೇವೆ ಎಂದು ಆಧುನಿಕ ಸಂಶೋಧನೆಗಳ ಅನುಕೂಲ, ಅನಾನುಕೂಲಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಡಾ.ಎ.ಹೆಚ್.ರಾಜಾಸಾಭಾ ಸಲಹೆ ನೀಡಿದರು.
ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗೀಯ ಜಂಟಿ ನಿರ್ದೇಶಕ ಡಾ.ರಾಮಕೃಷ್ಣಾರೆಡ್ಡಿ,ಸರಕಾರಿ ಕಾಲೇಜುಗಳಲ್ಲಿ ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಾಗಾಗಿಯೇ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಮುಖವಾಗಿದೆ.ಸರಕಾರ ಸಹ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ.ಸುಮಾರು 20ಕ್ಕೂ ಹೆಚ್ಚು ಒಪ್ಪಂದಗಳನ್ನು ಮಾಡಿಕೊಂಡು ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ.ಅಜೀಂ ಪ್ರೇಮಜಿ ಪೌಂಡೇಷನ್ ಸಹಯೋಗದಲ್ಲಿ ರಾಜ್ಯದ ಬೆಂಗಳೂರು ವಿಭಾಗದ ಸುಮಾರು 28 ಸಾವಿರ ವಿದ್ಯಾರ್ಥಿನಿಯರಿಗೆ ವಾರ್ಷಿಕ 30 ಸಾವಿರ ರೂ> ವಿದ್ಯಾರ್ಥಿ ವೇತನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಐ ನಿಂದ ಉದ್ಯೋಗ ನಷ್ಟ ಎನ್ನುವುದಕ್ಕಿಂತ, ಅದಕ್ಕೆ ಅಗತ್ಯವಿರುವ ಕೌಶಲ್ಯ ರೂಢಿಸಿಕೊಂಡರೆ ಹೆಚ್ಚು ದಿನ ಉಳಿಯಲು ಸಾಧ್ಯ. ಪದವಿ ಕಾಲೇಜು ಉಪನ್ಯಾಸಕರಿಗೆ ಸಾಕಷ್ಟು ಸೌಲಭ್ಯ ನೀಡುತಿದ್ದೇವೆ.ಆದರೆ ಅವರಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಮಾಡುವಂತಹ ದುಸ್ಥಿತಿ ಬಂದಿದ್ದು ವಿಪರ್ಯಾಸ,ಶಿಕ್ಷಕರು ಸಹ ಶಿಸ್ತು ಅಳವಡಿಸಿಕೊಳ್ಳಬೇಕಿದೆ. ಸಮಸ್ಯೆಗಳಿದ್ದಾಗಲೇ ಪರಿಹಾರ ಹುಡುಕಲು ಸಾಧ್ಯ.ಬಲಿಷ್ಠ ಭಾರತವೆಂದರೆ, ಬಲಿಷ್ಠ ಬೌದ್ಧಿಕ ಯುವಜನತೆ ಎಂದರು.
ವಿಜ್ಞಾನ ಮತ್ತು ಸಮಾಜದ ಸುಸ್ಥಿರ ಅಭಿವೃದ್ದಿ ವಿಚಾರ ಸಂಕಿರಣ ಕುರಿತು ದಿಸ್ಕೂಚಿ ಭಾಷಣ ಮಾಡಿದ ಹಿರಿಯ ವಿಜ್ಞಾನಿ ಡಾ.ಶೋಭಾ.ವಿ., ವಿದ್ಯಾರ್ಥಿಗಳು ತಮ್ಮ ಕಲಿಕೆಯ ಸಂದರ್ಭದಲ್ಲಿ ನೈತಿಕ ಮೌಲ್ಯ ಹಾಗೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು.ಸತ್ಯ ಮತ್ತು ನ್ಯಾಯದಿಂದ ನಿರ್ಧಿಷ್ಠ ಗುರಿಯಡೆಗೆ ಮುನ್ನೆಡೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಸಂತ.ಟಿ.ಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕುವೆಂಪು ವಿ.ವಿ.ಯ ಕುಲಪತಿ ಪ್ರೊ. ಶರತ್ ಆನಂತಮೂರ್ತಿ,ಐಕ್ಯೂಎಸಿ ಸಂಯೋಜಕರಾದ ಡಾ.ಕೆ.ವಿ.ಅನುಸೂಯ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಓ ಡಾ.ಆನಂದ.ಆರ್.,ಸಂಘಟನಾ ಕಾರ್ಯದರ್ಶಿ ಡಾ.ಫಾತಿಮ ಥು ಜಹಾರ್ ಜಬೀನ್, ವಿಚಾರ ಸಂಕಿರಣದ ಸಂಯೋಜಕರಾದ ಡಾ.ಯೋಗೀಶ್.ಎನ್., ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಬಿ.ಆರ್., ಮತ್ತಿತರರು ಉಪಸ್ಥಿತರಿದ್ದರು.