ತುಮಕೂರು: ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು ವಿರೋಧಿಸಿದ ಕಾರ್ಪೊರೇಟ್ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅವಿವೇಕಿಗಳಾಗಿ ಬೌದ್ಧಿಕ ಜ್ಞಾನವನ್ನು ಕಂಪನಿಗಳ ಹಿಡಿತಕ್ಕೆ ಕೊಟ್ಟು ಉಳುವ ಭೂಮಿಯನ್ನು ಮಾರಿ ದಿವಾಳಿ ಹೊಂದುತ್ತಿದ್ದೇವೆ ಎಂದು ಕುವೆಂಪು ವಿವಿಯ ಸಹ್ಯಾದ್ರಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಮಂಗಳವಾರ ಆಯೋಜಿಸಿದ್ದ ‘ಭಾರತದ ಸಮಾಜವಾದಿ ಚಳುವಳಿಯಲ್ಲಿ ಪೆÇ್ರ. ಎಂ. ಡಿ. ನಂಜುಂಡಸ್ವಾಮಿ ಅವರ ಪಾತ್ರ’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು 60ರ ದಶಕದಲ್ಲಿ ಭೂಸುಧಾರಣೆ, ಸಹಕಾರಿ ಕೃಷಿ, ಜಾತಿ ರಹಿತ ಸಮಾಜ ನಿರ್ಮಾಣ, ಸರ್ಕಾರಿ ಉತ್ಪಾದನಾ ವ್ಯವಸ್ಥೆಗೆ ಬೆಂಬಲ- ಇಂತಹ ಸಮಾಜವಾದಿ ಪರಿಕಲ್ಪನೆಯನ್ನು ಪರಿಚಯಿಸಿದರು. ಸಮಾಜವಾದ, ಸಮತವಾದ, ಸರ್ವೋದಯ ಪರಿಕಲ್ಪನೆಯಲ್ಲಿ ಬದುಕಬೇಕೆಂದು ಹೋರಾಡಿದರು ಎಂದು ತಿಳಿಸಿದರು.
ಸಂವಿಧಾನ ಸಮಾನತೆಯನ್ನು ಕಲ್ಪಿಸಿಕೊಟ್ಟರೂ, ಸಾಮಾಜಿಕ ವ್ಯವಸ್ಥೆ ಬಡವರನ್ನು ಅಸಮಾನತೆಯಿಂದ ನಡೆಸಿಕೊಳ್ಳುತ್ತಿದೆ. ಬಡ ರೈತನ ಕಷ್ಟಗಳನ್ನು ಗಾಳಿಗೆ ತೂರಿ, ಕಂಪೆನಿಯ ಅಧೀನದಲ್ಲಿರುವ ಸರ್ಕಾರಗಳು, ಐಷಾರಾಮಿ ಕೊಠಡಿಗಳಲ್ಲಿ ಕೂತು ನಿಯಮಗಳನ್ನು, ಕಾನೂನುಗಳನ್ನು ರಚಿಸುವ ಅಧಿಕಾರಶಾಹಿಗಳ ವಿರುದ್ಧ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಹೋರಾಡಿದರು ಎಂದರು.
ಪ್ರಭುತ್ವದ ವಿರುದ್ಧ ಹೋರಾಡಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಪ್ರೊ. ಎಂ. ಡಿ. ನಂಜುಂಡಸ್ವಾಮಿ ದಶಕಗಳ ಹೋರಾಟ ನಡೆಸಿದರು. ಭವಿಷ್ಯದಲ್ಲಿ ಭೂಮಿ ರಹಿತ ರೈತರಾಗಿ, ಬೇರೊಂದು ದೇಶದ ಅಡಿಯಾಳಾಗಿ ದುಡಿಯುವ ಪರಿಸ್ಥಿತಿ ಬರುತ್ತದೆ ಎಂದು ಪ್ರೊ. ಎಂ. ಡಿ. ನಂಜುಂಡಸ್ವಾಮಿ ಸರ್ಕಾರಗಳಿಗೆ ಎಚ್ಚರಿಕೆಯನ್ನು ನೀಡುತ್ತಲೇ ಬಂದರು ಎಂದರು.
ಗ್ರಾಮ ಕೇಂದ್ರಿತವಾಗಿ ಚಿಂತಿಸಿದ ನಾಯಕ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರು ರೈತರ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸಲು ಹಗಲಿರುಳು ದುಡಿದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಹಲವಾರು ರೈತರು ಸ್ವಂತ ಜಮೀನು ಮಾರಿ ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಸಲು ಬರುವ ಹೊಲಗಳಲ್ಲೀಗ ಐಷಾರಾಮಿ ರೆಸಾರ್ಟ್ಗಳು ತಲೆಯೆತ್ತುತ್ತಿವೆ. ಪರಿಸರ, ಆಹಾರ, ನೀರು, ಮಣ್ಣು, ಮನಸ್ಸು ಎಲ್ಲವೂ ಮಲಿನವಾಗಿದೆ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ವಿವಿಯ ಪ್ರೊ. ನಂಜುಂಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕ ಡಾ. ಮುನಿರಾಜು ಎಂ., ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ. ಜಯಶೀಲ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಡಾ. ರವೀಂದ್ರ ಕುಮಾರ್ ಬಿ. ನಿರೂಪಿಸಿದರು.