ಶಿಕ್ಷಣ ನೀತಿಗಳ ಅನುಷ್ಠಾನದಲ್ಲಿ ಸೋಲುತ್ತಿದ್ದೇವೆ-ಪ್ರೊ. ಕೆ. ಸಿದ್ದಪ್ಪ

ತುಮಕೂರು: ಭಾರತವು ಶಿಕ್ಷಣ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸೋಲುತ್ತಿದ್ದೇವೆ. ಶಿಕ್ಷಣದ ತತ್ತ್ವಾದರ್ಶಗಳಿಗೆ ಒತ್ತು ಕೊಟ್ಟು ವೃತ್ತಿಯಲ್ಲಿ ಶಿಕ್ಷಕರು ಮುಂದುವರಿಯದೆ ಇರುವುದು ದುರದೃಷ್ಟಕರ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಸಿದ್ದಪ್ಪ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯವು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿಯಲ್ಲಿ ಮಾತನಾಡಿ, ಶಿಕ್ಷಕನಾದವನು ಓದುವ, ಓದಿಸುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಶಿಕ್ಷಕ ವೃತ್ತಿಗೆ ಗೌರವ. ಕೊರತೆಗಳಿಗೆ ತಲೆಕೆಡಿಸಿಕೊಳ್ಳದೆ ಪಾಠ-ಪ್ರವಚನಗಳಲ್ಲಿ ತಲ್ಲೀನರಾಗಬೇಕು. ಪ್ರಾಮಾಣಿಕತೆ ಪಾಲಿಸಿದರೆ ಅನುಕೂಲಗಳು ಹೆಚ್ಚು ಎಂದರು.

ವಿಶ್ವಗುರು ಶ್ರೇಯಸ್ಸಿಗೆ ಪಾತ್ರರಾದ ಸರ್ವಪಲ್ಲಿ ರಾಧಾಕೃಷ್ಣನ್ ಅವರನ್ನು ಅಮರ ಶಿಕ್ಷಕನೆಂದು ಹೆಮ್ಮೆಯಿಂದ ಹೇಳಬಹುದು. ಮಾನವತ್ವದಿಂದ ದೈವತ್ವಕ್ಕೆ ಏರಿದ ಶಿಕ್ಷಕ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶಿಕ್ಷಕನ ಹುದ್ದೆಯಲ್ಲಿ ಆತ್ಮತೃಪ್ತಿ ಪಡೆದಿದ್ದರು ಎಂದರು.
ವಿದ್ಯಾರ್ಥಿ ಜೀವನದಲ್ಲಿ ರಾಧಾಕೃಷ್ಣನ್ ಅವರು ಪಾಲಿಸಿಕೊಂಡು ಬಂದ ನೀತಿ ಮತ್ತು ಆಧ್ಯಾತ್ಮಿಕ ಕಾಳಜಿ ಎಂದರೆ, ತಮಗೆ ಬಂದ ವಿದ್ಯಾರ್ಥಿವೇತನದಲ್ಲಿ ಪುಸ್ತಕ ಕೊಂಡು ಓದುವುದು, ಬಡ ಸಹಪಾಠಿಗಳಿಗೆ ವಿದ್ಯಾಭ್ಯಾಸದಲ್ಲಿ ಸಹಾಯ ಮಾಡುವುದಾಗಿತ್ತು ಎಂದು ತಿಳಿಸಿದರು.

ಮೈಸೂರು ವಿವಿಯ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಸಮಯವನ್ನು ಸುವರ್ಣ ಕಾಲವೆಂದು ಇಂದಿಗೂ ಪ್ರಸಿದ್ಧಿ. ಪ್ರಾದೇಶಿಕ ಭಾಷೆಯಲ್ಲಿ ಮಕ್ಕಳು ಕಲಿಯಬೇಕು, ಅಭಿವೃದ್ಧಿಗಾಗಿ ಶಿಕ್ಷಣ ಕಡ್ಡಾಯವೆಂದು ಪ್ರತಿಪಾದಿಸಿದ ಸಮಾಜಮುಖಿ ಶಿಕ್ಷಕ ಎಂದರು.

ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ಶಿಕ್ಷಕರ ದಿನಾಚರಣೆಯನ್ನು ಜವಾಬ್ದಾರಿಯ ದಿನವೆಂದು ಆಚರಿಸೋಣ. ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ತಯಾರಿಸೋಣ. ಗ್ರಾಮಕ್ಕೆ ಶಿಕ್ಷಕ ಮಾರ್ಗದರ್ಶಕನಾಗಿರುತ್ತಿದ್ದ ಕಾಲವೊಂದಿತ್ತು. ಉತ್ತಮ ವಿದ್ಯಾರ್ಥಿಗಳನ್ನು ಹೊರತರದೆ, ಸಂಬಳಕ್ಕಾಗಿ, ಸ್ವಾರ್ಥಕ್ಕಾಗಿ ದುಡಿಯುವ ಶಿಕ್ಷಕರನ್ನು ಕಂಡಾಗ ಬೇಸರವಾಗುತ್ತದೆ ಎಂದು ಹೇಳಿದರು.

ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಹಣಕಾಸು ಅಧಿಕಾರಿ ನರಸಿಂಹಮೂರ್ತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಸಂಯೋಜಕ ಡಾ. ಎ. ಎಂ. ಮಂಜುನಾಥ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ನಿರೂಪಿಸಿದರು.

Leave a Reply

Your email address will not be published. Required fields are marked *