ತುಮಕೂರು: ವಿಪ್ರೋ ಸಂಸ್ಥೆಯು ತುಮಕೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್ನಲ್ಲಿ 15 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಜೀವವೈವಿಧ್ಯ ಅಭಯಾರಣ್ಯದ ಪ್ರಗತಿ ಪರಿಶೀಲಿಸಲು ವಿಪ್ರೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ವಿನೀತ್ ಅಗರವಾಲ್ ಬುಧವಾರ ಭೇಟಿ ನೀಡಿದ್ದರು.
‘ಸ್ಥಳೀಯ ಸಸ್ಯ ಪ್ರಭೇದಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಪರಿಸರ ವ್ಯವಸ್ಥೆಯ ಸ್ಥಾಪನೆಯನ್ನು ಉತ್ತೇಜಿಸಲು ವಿಪ್ರೋ ಸಂಸ್ಥೆಯು ಮುಂದಾಗಿದ್ದು, ದೀರ್ಘಾವಧಿಯ ಜೀವವೈವಿಧ್ಯ ಉದ್ಯಾನದ ಸ್ಥಾಪನೆ ಮತ್ತು ನಿರ್ವಹಣೆಯನ್ನು ಪ್ರಾಯೋಜಿಸುತ್ತಿದೆ. ಮೂರು ವರ್ಷಗಳ ಈ ಒಪ್ಪಂದದಲ್ಲಿ 3000ಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದಗಳನ್ನು ಅವುಗಳ ನೈಸರ್ಗಿಕ ಜನಸಂಖ್ಯೆಗೆ ಅಪಾಯವಾಗದಂತೆ ಸಂಶೋಧನಾ ಉದ್ದೇಶಗಳಿಗಾಗಿ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ’ ಎಂದು ವಿನೀತ್ ಅಗರವಾಲ್ ಈ ಸಂದರ್ಭದಲ್ಲಿ ತಿಳಿಸಿದರು.
ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್, ವಿವಿಯ ಕೌಶಲ್ಯಾಭಿವೃದ್ಧಿ ಕೇಂದ್ರದ ಸಂಯೋಜಕ ಪ್ರೊ. ಕೆ. ಜಿ. ಪರಶುರಾಮ, ಉಪಕುಲಸಚಿವ ಡಾ. ಬಿ. ಕೆ. ಸುರೇಶ್, ಪ್ರೊ. ಮೋಹನ್ರಾಮ್, ವಿಪ್ರೋ ಸಂಸ್ಥೆಯ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಬಿ. ಸಿ. ಪ್ರವೀಣ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹನುಮಂತರಾಯಪ್ಪ, ತುಮಕೂರು ಘಟಕದ ಉತ್ಪಾದನಾ ವಿಭಾಗದ ಉಪಾಧ್ಯಕ್ಷ ವಿಶ್ವನಾಥ್ ಕಾರ್ಕಡ, ಖಾತೆಗಳ ವ್ಯವಸ್ಥಾಪಕ ವಿನಯ್ ಎಂ., ಸುರಕ್ಷತಾ ಅಧಿಕಾರಿ ಸಂಪತ್ ಕುಮಾರ್, ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಈಶ್ವರಪ್ಪ ಎಸ್. ಆರ್., ನಿರ್ಮಾಣ ವಿಭಾಗದ ವ್ಯವಸ್ಥಾಪಕ ದಯಾನಂದ, ಸಹಾಯಕ ವ್ಯವಸ್ಥಾಪಕ ದಾಮೋಧರನ್ ಉಪಸ್ಥಿತರಿದ್ದರು.