ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು, ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ -ನ್ಯಾ.ನೂರುನ್ನಿಸಾ

ತುಮಕೂರು:ಮಹಿಳೆಯರು ಶಿಕ್ಷಣದ ಜೊತೆಗೆ, ಅರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಬೇಕು.ಪದವಿ,ಸ್ನಾತಕೋತ್ತರ ಪದವಿ ನಂತರ ಮನೆಯಲ್ಲಿಯೇ ಕುಳಿತುಕೊಳ್ಳದೆ ತನ್ನ ಆರ್ಹತೆಗೆ ತಕ್ಕಂತೆ ಉದ್ಯೋಗ ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಸಲಹೆ ನೀಡಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ತುಮಕೂರು ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿ ಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಸಂಕಿರಣವನ್ನು ಅಂಬೇಡ್ಕರ್ ಮತ್ತು ಸಾವಿತ್ರಿ ಬಾಯಿ ಫುಲೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದ ಅವರು,ಶೈಕ್ಷಣಿಕ ಆರ್ಹತೆಗೆ ತಕ್ಕ ಉದ್ಯೋಗ ಪಡೆದರೆ, ಇನ್ನೊಬ್ಬರ ಮೇಲೆ ಅವಲಂಭನೆಯಾಗುವುದು ತಪ್ಪುತ್ತದೆ.ಸ್ವಾವಲಂಬಿ ಬದುಕು ಸಾಧ್ಯ ಎಂದರು.

ಭಾರತದ ಮಹಿಳಾ ಸಾಕ್ಷರತೆಯ ಹಿಂದೆ ಸಾವಿತ್ರಿ ಬಾಯಿ ಫುಲೆ ಅವರ ಜೊತೆಗೆ, ಅವರ ಪತಿ ಜೋತಿ ಬಾ ಫುಲೆ ಅವರ ಶ್ರಮವೂ ಇದೆ.ಮಹಿಳೆಯರು ಅಕ್ಷರ ಕಲಿಯುವುದೇ ನಿಷಿದ್ಧ ಎಂಬ ವಾತಾವರಣ ಇದ್ದರೂ,ತಮ್ಮ ಪತ್ನಿಗೆ ಸ್ವತಹಃ ಅಕ್ಷರಾಭ್ಯಾಸ ಮಾಡಿಸಿ,ಅವರನ್ನು ಶಿಕ್ಷಕಿಯಾಗಿ ರೂಪಿಸಿ,ಪತ್ನಿಯ ಪ್ರತಿ ಕೆಲಸಕ್ಕೂ ಬೆನ್ನೆಲುಬಾಗಿ ನಿಂತವರು ಜೋತಿ ಬಾ ಫುಲೆ.ಅವರ ಅಂದು ಪಟ್ಟ ಶ್ರಮ ಸಾರ್ಥಕವಾಗಬೇಕೆಂದರೆ ಇಂದು ಪ್ರತಿ ಹೆಣ್ಣು ಮಗುವು ಶಿಕ್ಷಣದಿಂದ ವಂಚಿತರಾಗದಂತೆ ನಾವುಗಳು ನೋಡಿಕೊಳ್ಳಬೇಕಾಗಿದೆ.ತಾಯಿಯಾಗಿ, ಪತ್ನಿಯಾಗಿ ಸಂಸಾರದ ಬಾರ ಹೊರುವ ಹೆಣ್ಣು ಮಗಳು,ಪುರುಷರಗಿಂತ ದಕ್ಷತೆಯಿಂದ ಕಾರ್ಯನಿರ್ವಹಿಸಬಲ್ಲಳ್ಳು ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ ಎಂದು ನ್ಯಾ.ನೂರುನ್ನಿಸಾ ತಿಳಿಸಿದರು.

ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಬೇಕಾಗಿದೆ.ಹಿಂದೆ ಶಿಕ್ಷೆಯ ಭಯದಿಂದಾದರೂ ಮಕ್ಕಳು ತಪ್ಪು ಮಾಡಲು ಹಿಂಜರಿಯುತಿದ್ದರು.ಈಗ ಶಿಕ್ಷಕರ,ಪೋಷಕರ ಭಯ ಇಲ್ಲದೆ, ತಪ್ಪು ದಾರಿಯತ್ತ ಯುವಜನತೆ ಸಾಗುತ್ತಿದೆ.ಡ್ರಗ್ಸ್ ಎಂಬುದು ನಗರಕ್ಕಷ್ಟೇ ಸಿಮೀತಗೊಳ್ಳದೆ ಪ್ರತಿ ಹಳ್ಳಿಯನ್ನು ತಲುಪಿದೆ.ಬಾಹ್ಯ ಅಕರ್ಷಣೆಗಳಿಗೆ ಒಳಗಾಗಿ ಮಕ್ಕಳು ಹಾದಿ ತಪ್ಪುತಿದ್ದಾರೆ.ಸುಶಿಕ್ಷಿತರ ಸಂಖ್ಯೆ ಹೆಚ್ಚಿದರೆ ಸಾಲದು, ಗುಣಾತ್ಮಕ ಸುಶಿಕ್ಷಿತ ಸಮೂಹ ಹೆಚ್ಚಾಗಬೇಕು.ಆಗ ಮಾತ್ರ ಇಂತಹ ದುಶ್ಚಟಗಳಿಂದ ಯುವಜನತೆ ದೂರವಾಗಲು ಸಾಧ್ಯ ಎಂದು ನ್ಯಾ.ನೂರುನ್ನಿಸಾ ನುಡಿದರು.

ಭಾರತದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಸಾವಿತ್ರಿ ಬಾಯಿ ಫುಲೆ ಅವರ ಕೊಡುಗೆಗಳು ಎಂಬ ವಿಚಾರ ಕುರಿತು ಮಾತನಾಡಿದ ತುಮಕೂರು ವಿವಿ ಇಂಗ್ಲಿಷ್ ವಿಷಯದ ಪ್ರಾಧ್ಯಾಪಕಿ ಡಾ.ಜೋತಿ,ಮಹಿಳೆಯರು, ದಲಿತರು ಅಕ್ಷರ ಕಲಿತರೆ ಸಾಮಾಜಿಕ ಬಹಿಷ್ಕಾರದಂತಹ ಶಿಕ್ಷೆಗೆ ಗುರಿಪಡಿಸುತ್ತಿದ್ದ ಕಾಲದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದು,ಸತ್ಯ ಶೋಧನಾ ಸಮಾಜ ಸಂಘಟನೆಯ ಮೂಲಕ ವರದಕ್ಷಿಣೆ ವಿರೋಧ ವೇದಿಕೆ, ಕಾರ್ಮಿಕರಿಗಾಗಿ ರಾತ್ರಿ ಶಾಲೆ,ಸರಳ ವಿವಾಹ,ಮಹಿಳಾ ಸೇವಾ ಮಂಡಳಿ,ಬಾಲ್ಯ ವಿವಾಹ, ಭ್ರೂಣ ಹತ್ಯೆ, ಶಿಶುವಿಹಾರ,ಸಾಮೂಹಿಕ ಬೋಜನದಂತಹ ಕ್ರಾಂತಿಕಾರಿ ಹೆಜ್ಜೆಗಳನಿಟ್ಟರು.ಹೆಣ್ಣು ಮಕ್ಕಳಿಗೆ ಶಾಲೆ ತೆರೆದರೆಂಬ ಕಾರಣಕ್ಕೆ ಮನೆಯಿಂದ ಹೊರ ಹಾಕಲ್ಪಟ್ಟಾಗ,ಆಶ್ರಯ ನೀಡಿದ ಷೇಕ್ ಉಸ್ಮಾನ್ ಅವರ ಪುತ್ರಿ ಫಾತಿಮಾ ಬೇಗಂ ಅವರನ್ನು ಶಿಕ್ಷಕಿಯಾಗಿಸಿ,ಹೊಸ ಇತಿಹಾಸ ಬರೆದರು.ಬ್ರಿಟಿಷ್ ಸರಕಾರವೇ ಅವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿತು.ಮಹರಾಷ್ಟ್ರ ಸರಕಾರ ಜನವರಿ 03 ನ್ನು ಮಹಿಳಾ ದಿನವಾಗಿ ಆಚರಿಸುತ್ತಿದೆ. ಇಡೀ ಭಾರತವೇ ಈ ದಿನವನ್ನು ಮಹಿಳಾ ದಿನವನ್ನಾಗಿ ಆಚರಿಸುವಂತಾಗಬೇಕು ಎಂದರು.

ಆರ್.ಎಂ.ಓ ಡಾ.ಅಶೋಕ್ ಟಿ.ಬಿ. ಮಾತನಾಡಿ,ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಸಾವಿತ್ರಿ ಬಾ ಫುಲೆ ಅವರದ್ದು ಮರೆಯಲಾಗದ ಸಾಧನೆ.ಶಿಕ್ಷಣದ ಜೊತೆಗೆ, ಮೌಲ್ಯಯುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ವಹಿಸಿದ್ದರು. ವೇದಿಕೆಯಲ್ಲಿ ದಸಂಸ ಪರಿವರ್ತನವಾದದ ರಾಜ್ಯ ಪ್ರಧಾನ ಸಂಚಾಲಕ ಗೋವಿಂದರಾಜ್.ಎಂ., ಪಿ.ಎನ್.ರಾಮಯ್ಯ, ಡಾ.ಲಕ್ಷ್ಮಿರಂಗಯ್ಯ,ಹೆಗ್ಗೆರೆ ಕೃಷ್ಣಪ್ಪ, ಯಲ್ಲಯ್ಯ ಸಿದ್ದಾಪುರ, ನಳಿನಮ್ಮ ಸಿಂಗನಳ್ಳಿ, ಛಲವಾದಿ ಶೇಖರ್, ವಿಜಯಲಕ್ಷ್ಮಿ, ಭಾಗ್ಯ, ಸಿದ್ದಲಿಂಗಯ್ಯ ಗೌಡಿಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *