ತುಮಕೂರು: ಅಂದಿನಿಂದ ಇಂದಿನವರೆಗೂ ಜೆಡಿಎಸ್ ಕಾರ್ಯಕರ್ತರ ಪಕ್ಷವಾಗಿ ಉಳಿದು ಬೆಳೆದಿದೆ. ಇಲ್ಲಿ ಬೆಳೆದು ಉನ್ನತ ಸ್ಥಾನಕ್ಕೆ ಏರಿದವರು ಪಕ್ಷ ಬಿಟ್ಟುಹೋದರೂ ಕಾರ್ಯಕರ್ತರು ಪಕ್ಷದ ಶಕ್ತಿಯಾಗಿದ್ದಾರೆ. ಇಂತಹ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ಸಿಗಬೇಕು. ಕಾರ್ಯಕರ್ತರು ಅಧಿಕಾರ ಪಡೆಯುವಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಮ್ಮ ಮುಂದಿದೆ. ಪಕ್ಷವನ್ನು ಬೂತ್ ಮಟ್ಟದಿಂದ ಸಂಘಟಿಸಿ ಚುನಾವಣೆಗೆ ಸಜ್ಜಾಗಬೇಕು ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಾರ್ಯಕರ್ತರಿಗೆ ಮನವಿ ಮಾಡಿದರು.
ತಾಲ್ಲೂಕಿನ ನಾಗವಲ್ಲಿಯಲ್ಲಿ ಶನಿವಾರ ನಡೆದ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರೊಂದಿಗೆ ಜನತಾದಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕಾಳಜಿಯಿಂದ ಕಟ್ಟಿದ ಜೆಡಿಎಸ್ 25 ವರ್ಷ ಪೂರೈಸಿದೆ. ಇದರ ಯಶಸ್ಸು ಕಾರ್ಯಕರ್ತರಿಗೆ ಸಲ್ಲಬೇಕು. ಎಂತಹ ಕಷ್ಟಕಾಲದಲ್ಲೂ ಕಾರ್ಯಕರ್ತರು ಪಕ್ಷವನ್ನು ಬಿಡದೆ ಬೆಂಬಲಿಸಿದ್ದಾರೆ. ಮುಂದೆ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬರಬೇಕು. ಈಗಿನಿಂದಲೇ ತಳಮಟ್ಟದಿಂದ ಪಕ್ಷ ಸಂಘಟಿಸಬೇಕು. ಜಿಲ್ಲೆಯಲ್ಲಿ ಈ ಹಿಂದೆ 11 ವಿಧಾನಸಭಾ ಕ್ಷೇತ್ರಗಳಲ್ಲಿ 9 ಸ್ಥಾನಗಳನ್ನು ಗೆಲ್ಲಿಸಿ ತುಮಕೂರು ಜಿಲ್ಲೆ ಕೊಡುಗೆ ನೀಡಿದೆ ಅಂತಹ ಸುವರ್ಣ ಕಾಲ 2028ಕ್ಕೆ ಮರುಕಳಿಸಬೇಕು ಎಂದು ವಿನಂತಿಸಿದರು.
ಜೆಡಿಎಸ್ ನಾಯಕರನ್ನು ತಯಾರಿಸುವ ಕಾರ್ಖಾನೆಯಾಗಿದೆ. ಇಲ್ಲಿ ನಾಯಕರಾಗಿ ಬೆಳೆದು ಉನ್ನತ ಸ್ಥಾನ ಪಡೆದ ಸುಮಾರು 50ಕ್ಕೂ ಹೆಚ್ಚು ನಾಯಕರು ಜೆಡಿಎಸ್ ಬಿಟ್ಟುಹೋಗಿ ಬೇರೆ ಪಕ್ಷ ಸೇರಿದ್ದಾರೆ. ಚುನಾವಣೆಗಳಲ್ಲಿ ತಮ್ಮನ್ನು ಗೆಲ್ಲಿಸಿದ, ರಾಜಕೀಯವಾಗಿ ಬೆಳೆಸಿದ ಕಾರ್ಯಕರ್ತರನ್ನು ಬೀದಿಯಲ್ಲಿ ಬಿಟ್ಟುಹೋಗುವುದು ನಾಯಕನಾದವನಿಗೆ ಶೋಭೆತರುವುದಿಲ್ಲ. ನಾಯಕರು ಹೋದರೂ ನಾಯಕರನ್ನು ರೂಪಸುವ ಶಕ್ತಿವಂತ, ಚಿನ್ನದಂತ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ, ಯಾರೇ ಕೈ ಬಿಟ್ಟರೂ ನಾವು ನಿಮ್ಮನ್ನು ಬಿಡುವುದಿಲ್ಲ, ನಿಮ್ಮ ಜೊತೆಗಿರುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿಗಾಗಿ ತಾವು ರಾಜ್ಯಾದ್ಯಂತ ಜನರೊಂದಿಗೆ ಜನತಾದಳ ಸಮಾವೇಶ ನಡೆಸುತ್ತಿದ್ದು, ಇದೂವರೆಗೆ 54 ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶಗಳಾಗಿವೆ. ಈ ತಿಂಗಳ 27ರಂದು ವಿಜಯಪುರದಲ್ಲಿ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಸಮಾವೇಶ ಹಾಗೂ ಪಕ್ಷದ ಬೆಳ್ಳಿ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ. ತುಮಕೂರು ಜಿಲ್ಲೆಯ 11 ಕ್ಷೇತ್ರಗಳು ಒಳಗೊಂಡ ಬೆಳ್ಳಿ ಹಬ್ಬ, ಸಮಾವೇಶ ಆಯೋಜಿಸಲು ಚರ್ಚೆ ನಡೆದಿದೆ ಎಂದರು.
ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ ಸೇರಿದಂತೆ ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಗೆದ್ದು ನಾಯಕತ್ವ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಈಗಿನಿಂದಲೇ ಮತಗಟ್ಟೆ ಹಂತದಿಂದ ಪಕ್ಷವನ್ನು ಸದೃಢವಾಗಿ ಸಂಘಟನೆ ಮಾಡಬೇಕು ಎಂದು ಹೇಳಿದರು.
ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ, ಬದ್ಧತೆ ಇಲ್ಲ, ರೈತರ ಯಾವ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ಈ ಸರ್ಕಾರದ ಅವಧಿಯಲ್ಲಿ 2800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಜಿಲ್ಲೆಯ 40ಕ್ಕೂ ಹೆಚ್ಚು ರೈತರು ಜೀವ ಕಳೆದುಕೊಂಡಿದ್ದಾರೆ. ಅತಿವೃಷ್ಠಿ, ಅನಾವೃಷ್ಠಿಯಿಂದ ಸಂಕಷ್ಟದ ರೈತರಿಗೆ ಪರಿಹಾರ ನೀಡಿ, ಅವರಿಗೆ ಸ್ಪಂದಿಸುವ ಪ್ರಯತ್ನವನ್ನು ಈ ಸರ್ಕಾರ ಮಾಡಲಿಲ್ಲ ಎಂದು ಟೀಕಿಸಿದರು.
ಸವರ್ಣ ಕಾಲ ಮರುಕಳಿಸಲಿ
ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಹಿಂದೆ ನಾನು 10 ವರ್ಷ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ, ದೇವೇಗೌಡರು, ಕುಮಾರಸ್ವಾಮಿಯವರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅಧ್ಯಕ್ಷನಾಗುವ ಅವಕಾಶ ನೀಡಿದ್ದಾರೆ, ಹಿಂದೆ ಅಧ್ಯಕ್ಷನಾಗಿದ್ದಾಗ 2006ರಲ್ಲಿ ಜಿಲ್ಲೆಯಲ್ಲಿ ಪಕ್ಷ ಹಾಗೂ ಅಭಿವೃದ್ಧಿಯಲ್ಲಿ ಸವರ್ಣ ಕಾಲ. ಆಗ ಜಿಲ್ಲೆಯ 11 ಕ್ಷೇತ್ರಗಳಲ್ಲಿ ತಾವೂ ಸೇರಿದಂತೆ 9 ಶಾಸಕರು ಆಯ್ಕೆಯಾದರು. ಅದೃಷ್ಟಕ್ಕೆ ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದರು. ಅಧಿಕಾರವಹಿಸಿಕೊಂಡ ಕೂಡಲೇ ರೈತರ ಸಾಲ ಮನ್ನಾ ಮಾಡಿ ನೆರವಾದರು ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಆಡಳಿತಾವಧಿ ಅಭಿವೃದ್ಧಿಯಲ್ಲಿ ದಾಖಲು ಮಾಡುವಂತಹ ಕಾಲಘಟ್ಟ. ಗ್ರಾಮಾಂತರ ಕ್ಷೇತ್ರದಲ್ಲಿ ಆ ಅವಧಿಯಲ್ಲಿ ಗೂಳೂರು, ಹೆಬ್ಬೂರು ಏತನೀರಾವರಿ, ತುಮಕೂರು ವಿವಿಗೆ ಬಿದರೆಕಟ್ಟೆಯಲ್ಲಿ ಜಾಗ, ಆಸ್ಪತ್ರೆಗಳು, 6 ಉಪವಿದ್ಯುತ್ ಸ್ಥಾವರಗಳ ಸ್ಥಾಪನೆ, ಶಾಲಾ, ಕಾಲೇಜುಗಳ ಸ್ಥಾಪನೆ, ನೀರಾವರಿ ಕಾರ್ಯಕ್ರಮಗಳು, ರಸ್ತೆಗಳ ಅಭಿವೃದ್ಧಿ ಹೀಗೆ ಹಲವಾರು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕಾರಣವಾಗಿರುವ ಕುಮಾರಸ್ವಾಮಿಯವರು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮತ್ತೊಮ್ಮೆ ಅಂತಹ ಅಭಿವೃದ್ಧಿಪರ್ವ ಮರುಕಳಿಸಬೇಕೆಂದರೆ 2028ರಲ್ಲಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಹೆಚ್.ನಿಂಗಪ್ಪ ಮನವಿ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ, ಜಿಲ್ಲಾ ಜೆಡಿಎಸ್ ಮಾಜಿ ಅಧ್ಯಕ್ಷ ಆರ್.ಸಿ.ಆಂಜನಪ್ಪ, ತಾಲ್ಲೂಕು ಅಧ್ಯಕ್ಷ ರಾಮಣ್ಣ, ಮುಖಂಡರಾದ ಗುಬ್ಬಿ ನಾಗರಾಜು, ಕೆ.ಟಿ.ಶಾಂತಕುಮಾರ್, ಡಾ.ರವಿ ನಾಗರಾಜಯ್ಯ, ಉಗ್ರೇಶ್, ನರಸಿಂಹರಾಜು, ಟಿ.ಎಲ್.ಕುಂಭಯ್ಯ, ಟಿ.ಆರ್.ನಾಗರಾಜು, ಸೋಲಾರ್ ಕೃಷ್ಣಮೂರ್ತಿ, ಮೋಹನ್ಕುಮಾರ್, ಧರಣೇಂದ್ರಕುಮಾರ್, ಹೆಚ್ಡಿಕೆ ಮಂಜುನಾಥ್, ಗಂಗಣ್ಣ, ವಿಜಯ್ಗೌಡ, ಬೆಳಗುಂಬ ವೆಂಕಟೇಶ್, ತಿಮ್ಮಪ್ಪಗೌಡರು, ಯೊಗಾನಂದಕುಮಾರ್, ಗೂಳೂರು ನವೀನ್, ಲೀಲಾವತಿ, ಹನುಮಂತರಾಯಪ್ಪ ಮೊದಲಾದವರು ಭಾಗವಹಿಸಿದ್ದರು.