ಯುವ ಸಮೂಹ ಮೌಢ್ಯಾಚರಣೆ ವಿರುದ್ಧ ಧ್ವನಿ ಎತ್ತಲಿ: ಡಾ. ನಾಗಲಕ್ಷ್ಮಿ ಚೌಧರಿ ಕರೆ

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಹಾಗೂ ರೂಪಾಂತರ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಪಿಂಕ್‍ಥಾನ್ ರ್ಯಾಲಿ ಮತ್ತು ಅಂತರರಾಷ್ಟ್ರೀಯ ಮಹಿಳೋತ್ಸವ 2026 ಅಭೂತಪೂರ್ವ ಯಶಸ್ಸು ಕಂಡಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಪಾತ್ರವಾಗಿದೆ.

ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ಸೇರಿದಂತೆ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ಈ ರ್ಯಾಲಿಯಲ್ಲಿ 5628 ಮಹಿಳೆಯರು ಪಾಲ್ಗೊಂಡಿದ್ದರು. ಈ ಬೃಹತ್ ಸಂಖ್ಯೆಯ ಮಹಿಳಾ ಸಮೂಹದ ಜಾಗೃತಿ ನಡಿಗೆಯನ್ನು ಗುರುತಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲಾಗಿದೆ. ವೈದ್ಯರಾದ ಡಾ.ಎಸ್.ಸಗಯರಾಜ್ ಅವರು ಪ್ರಮಾಣಪತ್ರ ನೀಡಿ ಗೌರವಿಸಿದರು. ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜಮ್ ಜಮ್ ರ್ಯಾಲಿಗೆ ಹಸಿರು ನಿಶಾನೆ ತೋರಿದರು. ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಡಾ. ಮೋಹನ್ ಎಚ್.ಎಸ್, ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ. ಎಸ್. ನಾಗಣ್ಣ ಭಾಗವಹಿಸಿದ್ದರು.

ಅಂತರಾಷ್ಟ್ರೀಯ ಮಹಿಳೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಸಮಾಜದಲ್ಲಿ ಬೇರೂರಿರುವ ಮೌಢ್ಯಾಚರಣೆಗಳ ವಿರುದ್ಧ ಯುವಜನತೆ ಸಂಘಟಿತವಾಗಿ ಧ್ವನಿ ಎತ್ತಬೇಕು ಎಂದರು.
ಮಹಿಳೆಯರ ರಕ್ಷಣೆಗಾಗಿ ಆಯೋಗ ಸದಾ ಸನ್ನದ್ಧವಾಗಿದ್ದು, ಸಂಕಷ್ಟದ ಸಮಯದಲ್ಲಿ 181 ಸಹಾಯವಾಣಿಯ ಸದುಪಯೋಗ ಪಡಿಸಿಕೊಳ್ಳಬೇಕು. ಮುಂದಿನ ಶತಮಾನ ಮಹಿಳೆಯರದ್ದಾಗಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ದೊಡ್ಡದಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಅವರು, ಧೈರ್ಯವೇ ನಿಜವಾದ ಶಕ್ತಿ. ತೃತೀಯ ಲಿಂಗಿಗಳನ್ನು ಅಸಡ್ಡೆಯಿಂದ ನೋಡದೆ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪೂರಕ ಅವಕಾಶ ನೀಡಬೇಕು ಎಂದು ಭಾವುಕರಾಗಿ ನುಡಿದರು.

ಜೊತೆಗೆ ಸಾಧಕಿಯರಾದ ಪದ್ಮಶ್ರೀ ಪುರಸ್ಕೃತೆ ಡಾ. ಎಸ್.ಜಿ. ಸುಶೀಲಮ್ಮ, ಶಾಂತಲಾ ರಾಜಣ್ಣ, ಪ್ರಿಯಾ ಪ್ರದೀಪ್, ಎಂ.ಆರ್. ಭಾರತಿ ನಾರಾಯಣ್, ದುರ್ಗಾದೇವಿ ಹುಲಿನಾಯ್ಕರ್, ಮರಿ ಚನ್ನಮ್ಮ ಹಾಗೂ ನೇತ್ರಾವತಿ ಚಂದ್ರಹಾಸ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ, ರೂಪಾಂತರ ಸಂಸ್ಥೆಯ ಸಂಸ್ಥಾಪಕಿ ರೂಪಾಶ್ರೀ ಹಾಗೂ ಪಿಆರ್ ಒ ಪ್ರೀತಮ್ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *