
ತುಮಕೂರು: ಆರ್ಥಿಕ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಮೊದಲು ಸಾಮಾಜಿಕ ವ್ಯವಸ್ಥೆ ಬದಲಾಗಬೇಕು ಎಂಬ ಬಲವಾದ ಸಿದ್ಧಾಂತವನ್ನು ನಂಬಿ, ಭಾರತದ ಏಳ್ಗೆಗಾಗಿ ದುಡಿದವರು ಬಾಬೂಜಿ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠವು ಗುರುವಾರ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಮ್ ಅವರ 37ನೇ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ‘ಸಮಗ್ರ ಭಾರತದ ಅಭಿವೃದ್ಧಿಗೆ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ದೀನದುರ್ಬಲರ ಸಾಮಾಜಿಕ ನ್ಯಾಯಕ್ಕಾಗಿ ಬಾಬೂಜಿ ಕೈಗೊಂಡ ಹಲವಾರು ನಿರ್ಧಾರಗಳು ಅವರ ತತ್ತ್ವ ಆದರ್ಶದ ಹಾದಿಯನ್ನು ನೆನಪಿಸುತ್ತದೆ. ಕಾಯಕ ಶ್ರಮಜೀವಿಗಳಿಗೆ ಪಿಂಚಣಿ ಹಾಗೂ ಬಡ್ತಿ ಸಮಸ್ಯೆಗಳನ್ನು ಬಗೆಹರಿಸಿದ ಪರಿ ಗಮನಾರ್ಹ. ಕಾರ್ಮಿಕ ಕಾಯ್ದೆಗಳ ಹರಿಕಾರನಾಗಿ ತೆಗೆದುಕೊಂಡ ನಿಲುವುಗಳು ಬಾಬೂಜಿಯವರ ನಿಷ್ಠಾವಂತ ಬದುಕನ್ನು ತೋರಿಸಿಕೊಡುತ್ತದೆ ಎಂದು ತಿಳಿಸಿದರು.
ವೈಜ್ಞಾನಿಕ ಹಾಗೂ ಅಧ್ಯಾತ್ಮದ ಚಿಂತನೆಗಳನ್ನು ಬಾಬೂಜಿ ಮೈಗೂಡಿಸಿಕೊಂಡವರು. ಭಾರತ ಸ್ವಾತಂತ್ರ್ಯೋತ್ತರದಲ್ಲೇ ಸ್ವಾವಲಂಬಿಯಾಗಬೇಕೆಂಬ ಕನಸು ಕಂಡು ಅದಕ್ಕೆ ಬೇಕಾದ ತಯಾರಿಯನ್ನು ನಡೆಸಿದವರು ಬಾಬೂಜಿ. ಅನ್ನಭಾಗ್ಯಕ್ಕೆ ಹಸಿರು ಕ್ರಾಂತಿಯ ಹರಿಕಾರನಾಗಿ ಹೆಸರು ಪಡೆದವರು ಬಾಬೂಜಿ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು ಮಾತನಾಡಿ, ಮಹನೀಯರ ದಿನವನ್ನು ಸ್ಮರಿಸುವು ಮುಂಚೆ, ಅವರ ತತ್ತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರಬೇಕು. ಸ್ಥಾನಕ್ಕಿಂತ ಕಾರ್ಯಸಾಧನೆ ಮುಖ್ಯವೆಂದು ದುಡಿದ ಬಾಬೂಜಿಯವರು ದೇಶವನ್ನು ಸರ್ವರೀತಿಯಲ್ಲೂ ಬಲಿಷ್ಠಗೊಳಿಸಬೇಕೆಂಬ ಪಣತೊಟ್ಟು ಅದಕ್ಕಾಗಿ ಶ್ರಮಿಸಿದವರು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್, ಅಸಮಾನತೆಯ ವಿರುದ್ಧ ಹೋರಾಡಿ, ಸ್ವಾವಲಂಬಿ ಭಾರತಕ್ಕೆ ಮೊದಲ ಹೆಜ್ಜೆ ಇಟ್ಟ ದಿಟ್ಟ ನಾಯಕ ಬಾಬೂಜಿಯವರು. ಸತತ 50 ವರ್ಷಗಳು ಸಂಸದರಾಗಿ ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸಮರ್ಥವಾಗಿ ಪರಿಹರಿಸಿದವರು ಬಾಬೂಜಿ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ. ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಬಾಬೂಜಿ ಭವ್ಯ ಭಾರತದ, ಸುಧಾರಿತ ಭಾರತದ ಕನಸು ಕಂಡವರು. ನಮ್ಮಲ್ಲಿ ಬಾಬೂಜಿಯಂತಹ ಧೈರ್ಯ, ದಿಟ್ಟತನ ಇಲ್ಲವಾದಲ್ಲಿ ಜಯಂತಿಗಳನ್ನು ಆಚರಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ ಪೀಠದ ಸಂಚಾಲಕ ಡಾ. ದ್ವಾರಕಾನಾಥ್ ವಿ. ಸ್ವಾಗತಿಸಿದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಲಕ್ಷ್ಮೀರಂಗಯ್ಯ ನಿರೂಪಿಸಿ, ವಂದಿಸಿದರು.