ಯುವಜನರ ಚಿಂತನೆ ಸಮಾಜದ ಅಭಿವೃದ್ಧಿಯತ್ತ ಇರಬೇಕು :ಡಾ. ಎಂ.ವೆಂಕಟೇಶ್ವರಲು

ತುಮಕೂರು: ಯುವ ಜನತೆಯ ಚಿಂತನೆ ಮತ್ತು ಸಂಶೋಧನಾ ಮನೋಭಾವ ದೇಶವನ್ನು ಅಭಿವೃಧಿಯತ್ತ ಕೊಂಡೊಯ್ಯುತ್ತದೆ ಹಾಗಾಗಿ ವಿದ್ಯಾರ್ಥಿಗಳು ಈ ದಿಕ್ಕಿನಲ್ಲಿ ಚಿಂತಿಸಬೇಕಿದೆ ಎಂದು ತುಮಕೂರು ವಿಶ್ವ ವಿದ್ಯಾನಿಲಯದ ಉಪಕುಲಪತಿಗಳಾದ ಡಾ. ಎಂ.ವೆಂಕಟೇಶ್ವರಲು ಅಭಿಪ್ರಾಯ ಪಟ್ಟರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಶ್ರೀ ಸಿದ್ಧಾರ್ಥ ವ್ಯವಹಾರ ನಿರ್ವಹಣಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದಂತಹ “ಇನ್‍ಸ್ಪಿರೋ 2025” ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಸಮಾಜದದ ಬದಲಾವಣೆಗೆ ಒಂದು ಉತ್ತಮ ಸಂಶೋಧನೆಗಳು ಕಾರಣವಾಗಬಹುದು. ಅದೇ ರೀತಿ ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸಿಕೊಳ್ಳಲು ಒಂದು ಸಣ್ಣ ಬದಲಾವಣೆಗಳು ಕಾರಣವಾಗುತ್ತದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಹೊಸ ಹೊಸ ವಿಚಾರಗಳನ್ನು ಕಲಿಯುತ್ತಿರಬೇಕು. ವಿದ್ಯಾರ್ಥಿಗಳ ಗುರಿ ಕೇವಲ ಉದ್ಯೋಗವನ್ನು ಪಡೆಯುವುದಷ್ಟೇ ಅಲ್ಲ ಹೆಚ್ಚು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳುವುದಾಗಿರಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸಾಹೇ ವಿ.ವಿ ಉಪಕುಲಾಧಿಪತಿಗಳಾದ ಡಾ. ಕೆ.ಬಿ ಲಿಂಗೇಗೌಡ ಮಾತನಾಡಿ ವಿದ್ಯಾರ್ಥಿಗಳಿಗೆ ಅವಕಾಶಗಳು ಸಾಕಷ್ಟಿದೆ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಏನಾದರೊಂದು ಸಾಧಿಸಬೇಕು ಎಂದು ಹಸಿವಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ವಿದ್ಯಾರ್ಥಿಗಳು ಯಾವಾಗಲೂ ಅಧ್ಯಯನ ಶೀಲರಾಗಿ ವಿಭಿನ್ನವಾಗಿ ಆಲೋಚಿಸಿ, ಸದಾ ಸಂಶೋಧನಾ ಮನೋಭಾವವನ್ನು ಹೊಂದಿರಿ ಎಂದು ಹೇಳಿದರು.

ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ ರವರು ಮಾತನಾಡಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಶ್ರದ್ಧೆಯಿಂದ ಕಲಿತಾಗ ಮಾತ್ರ ತಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಹಾಗಾಗಿ ವಿದ್ಯಾರ್ಥಿಗಳು ಸಮಯ ಪಾಲನೆಗೆ ಹೆಚ್ಚು ಗಮನವನ್ನು ನೀಡಿ ತಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಭಾಗದ ವಿದ್ಯಾರ್ಥಿಗಳಿಂದ ಸಾಕಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳಾದ ನೃತ್ಯ, ಸಂಗೀತ, ಫ್ಯಾಷನ್ ಶೋಗಳು ಬಹಳ ಸೊಗಸಾಗಿ ಮೂಡಿಬಂದವು.

ಈ ಸಂದರ್ಭದಲ್ಲಿ ಸಾಹೇ ವಿವಿಯ ಕುಲಪತಿಗಳ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ, ಎಸ್.ಎಸ್.ಐ.ಬಿಎಂ. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಮತಾ ಜಿ. ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *