ತುಮಕೂರು : ತುಮಕೂರು ಜಿಲ್ಲೆಯಲ್ಲಿ ಮಾದಿಗ ಜನಾಂಗದ ಒಬ್ಬರು ರಾಜರಾಗಿದ್ದರೆಂದು ‘ಕುರಂಗರಾಜ’ ನಾಟಕ, ಕಾದಂಬರಿ ಬರೆದು ಇತಿಹಾಸ ತೆರೆದಿಟ್ಟ ಡಾ.ಓ.ನಾಗರಾಜುರವರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿರುವುದು ಎಲ್ಲಾರು ಖುಷಿ ಪಡುವ ವಿಚಾರವಾಗಿದೆ.
ಯುದ್ಧ ನಡೆಯುತ್ತಿರುವ ಕಾಲದಲ್ಲಿ ಇಂತಹ ವಿಚಾರಗಳು ಬಂದರೆ ಇದಕ್ಕಿಂತ ಖುಷಿ ಪಡುವಂತಹವುದು ಯಾವುದಿದೆ. ಕುರುಂಗರಾಜ ವೈಭವ, ಹಟ್ಟಿ ಅರಳಿ ಹೂವಾಗಿ, ಪಲ್ಲಟ, ಹಿಂದೂಪುರ ಕಾದಂಬರಿ ಸೇರಿದಂತೆ ಒಟ್ಟು 11 ಕೃತಿಗಳನ್ನು ರಚಿಸಿರುವ ಡಾ. ಓ. ನಾಗರಾಜು ಅವರು ತುಮಕೂರು ಜಿಲ್ಲೆಯ ಇತ್ತೀಚಿನ ಹೊಸ ಆಯಾಮದ ಬರಹಗಾರರಾಗಿದ್ದಾರೆ.
ಕುರಂಗರಾಜ ವೈಭವದ ಜೊತೆಗೆ ಹಟ್ಟಿ ಅರಳಿ ಹೂವಾಗಿ ಎಂಬುದು ಒಂದು ಪ್ರೀತಿ, ಹೋರಾಟದ ಕಥನವಾಗಿ ಬಂದರೆ, ಹಿಂದೂಪುರ ಕಾದಂಬರಿಯಲ್ಲಿ ಭಾಷೆಯ ನೆಲಗಟ್ಟನ್ನು ಚೆಂದವಾಗಿ ಕಟ್ಟಿ ಕೊಡಲಾಗಿದೆ.

ಡಾ.ಓ.ನಾಗರಾಜು ಅವರು ಸಮಚಿತ್ತದ ಬರಹದೊಂದಿಗೆ ಹೊಸ ಅವಿಷ್ಕಾರವನ್ನು ಹುಡುಕುತ್ತಾ ಹೊರಟಂತಹ ಸಾಹಿತಿಯಾಗಿದ್ದುಕೊಂಡು, ತಮ್ಮದೇಯಾದ ಒಂದು ಪ್ರಕಾರವನ್ನು ಸಾಹಿತ್ಯ ವಲಯಕ್ಕೆ ನೀಡಿದ್ದಾರೆ. ಸದಾ ಯೌವನದ ಹುಡುಗನಂತೆಯೇ ದೊಡ್ಡ ಶರೀರದ ಓ.ನಾಗರಾಜು ಅವರು ನಗು ಮುಖದೊಂದಿಗೆ ಬಾಚಿಕೊಂಡು ಬಾರಣ್ಣ ಎನ್ನುವ ‘ಕುರಂಗರಾಜ’ ಕಾದಂಬರಿ, ನಾಟಕ ಬರೆದು ತೆರೆಯ ಮೇಲೆಯೂ ಈ ನಾಟಕವನ್ನು ತಂದು ಜನತೆಗೆ ತೋರಿಸಿದಂತಹ ನಮ್ಮ ಒಡನಾಡಿ ಓ.ನಾಗರಾಜು ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ಲಭಿಸಿರುವಾಗ ಇದಕ್ಕಿಂತ ಖುಷಿ ಬೇರೊಂದಿಲ್ಲ.
ಸದಾ ಹುಡುಕಾಟ ನೆಲಗಟ್ಟಿನಲ್ಲಿ ಹೊಸ ಬರಹಗಳನ್ನು ಸಾಹಿತ್ಯ ಲೋಕಕ್ಕೆ ನೀಡುತ್ತಿರುವ ಓ.ನಾಗರಾಜು ಅವರಿಗೆ ಮತ್ತಷ್ಟು ಉತ್ತಮ ಬರಹಗಳು ಅವರಿಂದ ಬರಲಿ ಎಂಬುದು ನಮ್ಮೆಲ್ಲರ ಅಭಿನಂದನೀಯ.
ಪ್ರಶಸ್ತಿ ವಿವಿರ :
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ 50 ರಿಂದ 60ರ ವಯೋಮಾನದ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ಸಾಹಿತ್ಯಶ್ರೀ ಪ್ರಶಸ್ತಿಗೆ 2025ನೇ ಸಾಲಿಗೆ ತುಮಕೂರು ಜಿಲ್ಲೆಯ ಹಿರಿಯ ಸಾಹಿತಿ ಡಾ.ಓ.ನಾಗರಾಜ್ ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ಮಾ.25ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಒಟ್ಟು 10 ಮಂದಿ ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಳ್ಳಾರಿಯ ಸಾಹಿತಿ ಡಾ.ನಿಷ್ಠಿ ರುದ್ರಪ್ಪ, ಬಾಗಲಕೋಟೆಯ ಡಾ.ವೀರೇಶ ಬಡಿಗೇರ, ತುಮಕೂರು ಜಿಲ್ಲೆಯ ಡಾ.ಸಿ.ಜಿ.ಲಕ್ಷ್ಮೀಪತಿ, ಬೆಂಗಳೂರಿನ ಕಂನಾಡಿಗ ನಾರಾಯಣ, ಹಾಸನ ಜಿಲ್ಲೆಯ ರೂಪ ಹಾಸನ, ವಿಜಯವಾಡದ ಜಯರಾಮ್ ರಾಯಪುರ, ದಾವಣಗೆರೆ ಜಿಲ್ಲೆಯ ಕುಮುದಾ ಸುಶೀಲ್, ಮಂಗಳೂರಿನ ಬಿ.ಎಂ.ಬಷೀರ್, ಬೆಂಗಳೂರಿನ ಡಾ.ಜ್ಯೊತಿ ಅವರನ್ನು ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ತಿಳಿಸಿದ್ದಾರೆ.