ವೃತ್ತಿಜೀವನದ ಯಶಸ್ವಿಗೆ ಶಿಸ್ತು, ತಾಳ್ಮೆ- ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳಬೇಕು

ತುಮಕೂರು : ವಿದ್ಯಾರ್ಥಿಗಳು ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಎಂದಿಗೂ ಹಣದ ಹಿಂದೆ ಓಡಬೇಡಿ, ಕೇವಲ ಹಣಕ್ಕಾಗಿ ದುಡಿಯದೆ ನಿಮ್ಮ ಯಶಸ್ಸಿಗಾಗಿ ದುಡಿಯಿರಿ ಆಗ ಹಣವು ತಾನಾಗೇ ನಿಮ್ಮ ಹಿಂದೆ ಬರುತ್ತದೆ ಎಂದು ಇನ್ಪೋಸಿಸ್‍ನ ಸಹಾಯಕ ಉಪಾಧ್ಯಕ್ಷ ಹಾಗೂ ಉತ್ಪನ್ನ ವಿಭಾಗದ ವ್ಯವಸ್ಥಾಪಕರಾದ ನರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಟೆಕ್ನೊಡಿಯಾ 2026ರನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು, ತಾಳ್ಮೆ, ಸಮಯಪ್ರಜ್ಞೆಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ, ಉದ್ಯಮದಲ್ಲಿ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವುದು ಪ್ರಮುಖವಾಗಿರುತ್ತದೆ, ಗ್ರಾಹಕರ ಹಿತಾದೃಷ್ಟಿ ಒಂದು ಉದ್ಯಮದ ಯಶಸ್ವಿಗೆ ಕಾರಣವಾಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಎಐ ಇಂದು ಎಲ್ಲಾ ವಿಭಾಗದಲ್ಲೂ ಕಾರ್ಯನಿರ್ವಹಿಸುತ್ತಿರುವುದರಿಂದ ಅದರ ಮೇಲೆ ಹೆಚ್ಚು ಅವಲಂಬಿತರಾಗದೆ ನಿಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡು ವೃತ್ತಿ ಜೀವನವನ್ನು ಉನ್ನತ ಮಟ್ಟಕ್ಕೇರಿಸಬಹುದು. ಜೀವನದಲ್ಲಿ ಏನಾಗಬೇಕೆನ್ನುವುದನ್ನು ಇಂದೇ ತೀರ್ಮಾನಿಸಿ ಅದರಂತೆ ಯೋಜನೆಗಳನ್ನು ರೂಪಿಸಿಕೊಳ್ಳಿ. ವಿದ್ಯಾರ್ಥಿಗಳು ವಿಭಿನ್ನವಾಗಿ ಯೋಚಿಸಿದಾಗ ಮಾತ್ರ ಸ್ವರ್ಧಾತ್ಮಕಯುಗದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದು ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಸಾಹೇ ವಿವಿಯ ಕುಲಸಚಿವರಾದ ಡಾ. ಅಶೋಕ್ ಮೆಹ್ತ ಮಾತನಾಡಿ ಟೆಕ್ನೋಡಿಯಾ ಕಾರ್ಯಕ್ರಮವು ವಿದ್ಯಾರ್ಥಿಗಳು ಸಂಶೋಧನೆ ಮಾಡಿದ ಪ್ರಾಜೆಕ್ಟ್‍ಗಳ ಪ್ರದರ್ಶನಕ್ಕೆ ಇದೊಂದು ಅತ್ಯುತ್ತಮವಾದ ವೇದಿಕೆಯಾಗಿದೆ. ಈ ವಸ್ತು ಪ್ರದರ್ಶನದ ಮೂಲಕ ನಿಮ್ಮ ವಿಭಿನ್ನ ವಿಚಾರಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬಹುದು. ಈ ಟೆಕ್ನೋಡಿಯಾ ಕಾರ್ಯಕ್ರಮದಲ್ಲಿ ನೀವು ಸಿದ್ಧಪಡಿಸಿದ ಪ್ರಾಜೆಕ್ಟ್‍ಗಳನ್ನು ಪ್ರದರ್ಶನಕ್ಕಿಟ್ಟು ಅದನ್ನು ವಿವರಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬಹುದಾಗಿದೆ ಜೊತೆಗೆ ವಿವಿಧ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳ ಸಂಪರ್ಕ ಬೆಳೆಯುತ್ತದೆ ಎಂದು ಹೇಳಿದರು.

ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಡಕಟ್ಟಿ ಮಾತನಾಡಿ ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನಕ್ಕೆ ಈ ಟೆಕ್ನೋಡಿಯಾ ಕಾರ್ಯಕ್ರಮ ಅತ್ಯುತ್ತಮ ಅವಕಾಶವಾಗಿದೆ. ಎಐ ಎಂಬುದು ಇಂದು ಎಲ್ಲಾ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು ಎಐ ಮೇಲೆ ತುಂಬಾ ಅವಲಂಬಿತರಾಗಿ ನಿಮ್ಮ ಕ್ರಿಯಾಶೀಲತೆಯನ್ನು ಹಾಳುಮಾಡಿಕೊಳ್ಳಬೇಡಿ. ನಿಮ್ಮ ಹಿಡಿತದಲ್ಲಿ ಎಐ ಇರಬೇಕೇ ವಿನಃ ನೀವು ಎಐನ ಹಿಡಿತದಲ್ಲಿ ಇರಬಾರದು ಎಐ ಅನ್ನು ನಿಮ್ಮ ಒಂದು ಸಾಧನವನ್ನಾಗಿ ಬಳಸಿಕೊಳ್ಳಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸಾಹೇ ವಿವಿಯ ಪರೀಕ್ಷಾಂಗ ನಿಯಂತ್ರಕರಾದ ಡಾ. ಕೆ. ಸುನಿಲ್, ಅಕಾಡೆಮಿಕ್ ಡೀನ್ ಡಾ. ಎಸ್ ರೇಣುಕಾಲತಾ, ಎಸ್‍ಎಸ್‍ಎಸ್‍ಇ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜೀವ್‍ಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಡಾ. ಮನು, ಗುರುನಂದನ್ ಹಾಗೂ ಕಾಲೇಜಿನ ಎಲ್ಲಾ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

Your email address will not be published. Required fields are marked *