ಜೂನ್ 21-ಸಿದ್ಧರಬೆಟ್ಟ ಬಾಳೆಹೊನ್ನೂರು ಶಾಖಾ ಮಠದಿಂದ ಸಾಮೂಹಿಕ ವಿವಾಹ, ಜನ ಜಾಗೃತಿ ಧರ್ಮ ಸಮಾರಂಭ

ತುಮಕೂರು: ಕೊರಟಗೆರೆ ತಾಲ್ಲೂಕು ಸಿದ್ಧರಬೆಟ್ಟ ಬಾಳೆಹೊನ್ನುರು ಖಾಸಾ ಶಾಖಾ ಮಠದ 20ನೇ ವಾರ್ಷಿಕೋತ್ಸವದ ಅಂಗವಾಗಿ ಈ ತಿಂಗಳ 21ರಂದು ಸಾಮೂಹಿಕ ವಿವಾಹ, ಜನ ಜಾಗೃತಿ ಧರ್ಮ ಸಮಾರಂಭದ ಜೊತೆಗೆ ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶುಕ್ರವಾರ ನಗರದ ವೀರಶೈವ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ವಾರ್ಷಿಕೋತ್ಸವದ ಪ್ರಯುಕ್ತ ಜಗದ್ಗುರು ರೇಣುಕಾಚಾರ್ಯರ, ಜಗಜ್ಯೋತಿ ಬಸವೇಶ್ವರರ ಜಯಂತ್ಯುತ್ಸವ ಆಯೋಜಿಸಲಾಗಿದೆ. ಸಾಮೂಹಿಕ ವಿವಾಹದಲ್ಲಿ ಹಸಮಣೆ ಏರಲು 20 ಜೋಡಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.

20ರಂದು ಬೆಳಿಗ್ಗೆ ಗಂಗಾಪೂಜೆಯೊಂದಿಗೆ ವಿವಿಧ ಧಾರ್ಮಿಕ ಆಚರಣೆ, ವಿಶೇಷ ಪೂಜೆ ನೆರವೇರಲಿದೆ. ನಂತರ ಕ್ಷೇತ್ರನಾಥ ಸಿದ್ಧೇಶ್ವರ ಸ್ವಾಮಿ, ಮಹಾಗಣಪತಿ, ರೇಣುಕಾಚಾರ್ಯರು, ವೀರಭದ್ರಸ್ವಾಮಿಗೆ ಮಹಾರುದ್ರಾಭಿಷೇಕ, ಬಿಲ್ವಾವರ್ಚನೆ ಹಮ್ಮಿಕೊಳ್ಳಲಾಗಿದೆ. ಚಿಕ್ಕತೊಟ್ಲುಕೆರೆ ಅಟವಿ ಮಠದ ಅಟವಿ ಶಿವಲಿಂಗ ಸ್ವಾಮೀಜಿ ಪುಸ್ತಕ ದಾಸೋಹ ಉದ್ಘಾಟಿಸುವರು. ನಂತರ ಉಚಿತ ಸಾಮೂಹಿಕ ದೀಕ್ಷಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.

ಬೆಳಿಗ್ಗೆ 10 ಗಂಟೆಗೆ ರಂಭಾಪುರಿ ಪೀಠದ ಜಗದ್ಗುರು ಪಸನ್ನ ರೇಣುಕ ಡಾ. ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಜನ ಜಾಗೃತಿ ಧರ್ಮ ಸಮಾರಂಭ ನಡೆಯಲಿದೆ. ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ಎಡೆಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಎಲೆರಾಂಪುರ ಮಠದ ಡಾ.ಹನುಮಂತನಾಥ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗವಹಿಸುವರು.

ಕೇಂದ್ರ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಮಾಜಿ ಸಚಿವ ಕೆ.ಎನ್. ರಾಜಣ್ಣ ಸಂಸ್ಕøತ ಪಾಠಶಾಲಾ ಕೊಠಡಿ ಉದ್ಘಾಟಿಸುವರು.
ಗೌರಿಬಿದನೂರು ಶಾಸಕ ಪುಟ್ಟಸ್ವಾಮಿಗೌಡರು ಸಾಮೂಹಿಕ ವಿವಾಹದಲ್ಲಿ ಮಾಂಗಲ್ಯ ವಿತರಣೆ ಮಾಡುವರು. ಶಾಸಕ ಟಿ.ಬಿ. ಜಯಚಂದ್ರ ಮೂಗುತಿ ವಿತರಿಸುವರು. ಶಾಸಕ ಜಿ.ಬಿ. ಜ್ಯೋತಿಗಣೇಶ್ ರೈತರಿಗೆ ಸಸಿ ವಿತರಣೆ ಮಾಡುವರು ಎಂದು ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರ ವೀರಶೈವ ಸಮಾಜಸೇವಾ ಸಮಿತಿ ಕಾರ್ಯದರ್ಶಿ ಶಶಿಧರನ್, ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಆರ್. ಸದಾಶಿವಯ್ಯ, ಜಿಲ್ಲಾ ಆರ್ಯ ಈಡಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಮುಖಂಡರಾದ ಮೋಹನ್‍ಕುಮಾರ್ ಪಟೇಲ್, ಮಹೇಶ್‍ಬಾಬು, ಕುಮಾರಸ್ವಾಮಿ, ರಾಮಲಿಂಗಯ್ಯ, ರುದ್ರೇಶ್, ಸ್ವರೂಪ್, ಮಂಜುಳ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *