ಸಂಪುಟ ವಿಸ್ತರಣೆ : ತುಮಕೂರು ಜಿಲ್ಲೆಗೆ ಚಿಕ್ಕನಾಯಕನಹಳ್ಳಿ ಚಿಪ್ಪು, ಮುಂದಿನ ಚುನಾವಣೆಯಲ್ಲಿ ಸೊನ್ನೆಯತ್ತ ಕಾಂಗ್ರೆಸ್ ಎಂದು ಕಾರ್ಯಕರ್ತರ ಆಕ್ರೋಶ

ತುಮಕೂರು : ಬಹು ನಿರೀಕ್ಷೆಯ ಸಂಪುಟ ವಿಸ್ತರಣೆಯಾಗಿದ್ದು ರಾಜ್ಯದ 2ನೇ ಜಿಲ್ಲೆಯಾದ ತುಮಕೂರು ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡದೇ ಚಿಕ್ಕನಾಯಕನಹಳ್ಳಿ ಚಿಪ್ಪನ್ನು ನೀಡಿ ಅರ್ಧಚಂದ್ರ ತೋರಿಸಲಾಗಿದೆ.

ತುಮಕೂರು ಜಿಲ್ಲೆಯಲ್ಲಿ ಲಿಂಗಾಯಿತ, ಒಕ್ಕಲಿಗ ಜಾತಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಜಾತಿಯ ಯಾರಿಗಾದರೂ ಒಬ್ಬರಿಗೆ ಮಂತ್ರಿ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು, ಆದರೆ 7ಶಾಸಕರನ್ನು ಕೊಟ್ಟಿರುವ ಜಿಲ್ಲೆಗೆ ಡಾ.ಜಿ.ಪರಮೇಶ್ವರ್ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಸಚಿವ ಸ್ಥಾನ ನೀಡದೆ ಚಿಕ್ಕನಾಯಕನಹಳ್ಳಿ ಚಿಪ್ಪನ್ನು ನೀಡಲಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಸಿಟ್ಟಿನಿಂದ ಮಾತನಾಡಿಕೊಳ್ಳುತ್ತಿದ್ದಾರೆ.

ತಮ್ಮ ರಾಜಕೀಯ ಇಳಿಗಾಲದಲ್ಲಿರುವ ತಿಪಟೂರಿನ ಕೆ.ಷಡಕ್ಷರಿ ಅಥವಾ ಶಿರಾದ ಟಿ.ಬಿ.ಜಯಚಂದ್ರ ಅವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಲಭಿಸಲಿದೆ ಎಂಬುದು ಕರಗಿ ಹೋಗಿದೆ, ಕೊನೆಯ ಹಂತದಲ್ಲಿ ಗುಬ್ಬಿಯ ಎಸ್.ಆರ್.ಶ್ರೀನಿವಾಸ್(ವಾಸು) ಸಚಿವರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಅವರಿಗೂ ಅರ್ಧಚಂದ್ರ ತೋರಿಸಲಾಗಿದೆ.

ಜಿಲ್ಲೆಯಲ್ಲಿ ಲಿಂಗಾಯಿತ ಮತ್ತು ಒಕ್ಕಲಿಗರು ಜನಾಂಗವು ಹೆಚ್ಚು ಮತ್ತು ಪ್ರಬಲವಾಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡುವಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಿಂದೇಟು ಹಾಕಿದ್ದಾರೆ. ತುಮಕೂರು ಜಿಲ್ಲೆಯಲ್ಲಿ 7 ಶಾಸಕರು ಗೆಲ್ಲಲು ಈ ಎರಡು ಜನಾಂಗದ ಮತಗಳು ನಿರ್ಣಯಕವಾಗಿದ್ದು, ಇದೀಗ ಈ ಎರಡು ಜಾತಿಗಳನ್ನು ಜಿಲ್ಲೆಯಲ್ಲಿ ಮಾದಿಗ ಜನಾಂಗಕ್ಕೆ ರಾಜಕೀಯ ಹಿನ್ನಡೆ ಮಾಡಿದಂತೆ ಈ ಎರಡು ಜನಾಂಗಕ್ಕೆ ಮಾಡಲಾಗಿದೆ.

ಜಿಲ್ಲೆಯಲ್ಲಿ 7 ಶಾಸಕರು ಗೆಲ್ಲಲು ಹಗಲು-ರಾತ್ರಿ ಶ್ರಮಿಸಿದ ಕಾರ್ಯಕರ್ತರಿಗೆ ಯಾವುದೇ ಮಂಡಳಿ, ನಿಗಮ ಅಥವಾ ಸ್ಥಳೀಯ ಸಂಸ್ಥೆಗಳಾದ ಟೂಡಾದಲ್ಲಿ ಯಾರಿಗೂ ಅಧ್ಯಕ್ಷರು, ಸದಸ್ಯರನ್ನು ಮಾಡದೆ ಜಿಲ್ಲೆಗೆ ಏಕಮೇವ ಸಚಿವರನ್ನಾಗಿ ಡಾ.ಜಿ.ಪರಮೇಶ್ವರ್ ಅವರನ್ನು ಮಾಡಲಾಗಿದೆ. ಎಸ್.ಟಿ. ಸಮುದಾಯದಿಂದ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರನ್ನು ಹೈಕಮಾಡ್ ಗೆ ಡೊಗ್ಗು ಸಲಾಮ್ ಹೊಡೆಯಲಿಲ್ಲವೆಂದು ಸಿದ್ದರಾಮಯ್ಯನವರ ಕಾಲದಲ್ಲಿ ಕಿತ್ತೆಸಯಲಾಯಿತು.

ರಾಜಣ್ಣನವರ ಸಚಿವ ಸ್ಥಾನ ಕಳೆದುಕೊಂಡ ನಂತರ ಕೆ.ಷಡಕ್ಷರಿ ಮತ್ತು ಟಿ.ಬಿ.ಜಯಚಂದ್ರ ಅವರು ತಮ್ಮ ರಾಜಕೀಯ ಕೊನೆಗಾಲದಲ್ಲಿ ಸಚಿವರಾಗಬೇಕೆಂದು ಬಯಸಿದ್ದರು, ಟಿ.ಬಿ.ಜಯಚಂದ್ರರಾದರೂ ಹಲವಾರು ಸಲ ಸಚಿವರಾಗಿ ಅದರ ಸವಿಯನ್ನುಂಡಿದ್ದಾರೆ, ಆದರೆ ಲಿಂಗಾಯಿತ ಸಮುದಾಯದಿಂದ ಗೆದ್ದಿರುವ ತಿಪಟೂರಿನ ಶಾಸಕರಾದ ಕೆ.ಷಡಕ್ಷರಿಯವರು ತಮ್ಮ ರಾಜಕೀಯ ಕೊನೆಗಾಲದಲ್ಲಿ ಸಚಿವರಾಗಬೇಕೆಂದು ಬಯಸಿದ್ದರಲ್ಲಿ ತಪ್ಪೇನಿಲ್ಲ, ಆದರೆ ಅವರ ಯಾವ ಮನವಿಗಾಗಲಿ,ಅವರ ರಾಜಕೀಯ ಹಿರಿತನ, ಜಾತಿ ಯಾವುದೂ ಕೈ ಹಿಡಿಯದಿರುವುದು ವಿಪರಿಯಾಸ.

ಜಿಲ್ಲೆಯ ಕೊರಟಗೆರೆಯಿಂದ ಗೆದ್ದು ಉಪಮುಖ್ಯಮತ್ರಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ತಮ್ಮ ಪ್ರಭಾವವನ್ನು ಬಳಸಿ ಜಿಲ್ಲೆಗೆ ಮತ್ತೊಂದು ಮಂತ್ರಿಸ್ಥಾನ ನೀಡುವಂತೆ ಪಟ್ಟು ಹಿಡಿಯಬೇಕಿತ್ತು, ಜಿಲ್ಲೆಯ ಶಾಸಕರಿಗೂ ಮಂತ್ರಿಸ್ಥಾನವಿಲ್ಲ, ಕಾರ್ಯಕರ್ತರಿಗೂ ಯಾವ ಸ್ಥಾನಮಾನಗಳನ್ನು ನೀಡಿಲ್ಲ.
ಜಿಲ್ಲೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷ ಕಟ್ಟಿದ ಯುವಕರನ್ನು ಚುನಾವಣೆಯ ಸಂದರ್ಭದಲ್ಲಿ ಕೆಲ ಡೊಂಕುಬಾಲದ ಬೇರೆ ಪಕ್ಷದ ಶಾಸಕರಿಗೆ ಟಿಕೆಟ್ ನೀಡಲು ಇನ್ನೆಂದೂ ಕಾಂಗ್ರೆಸ್ ಎಂದು ಮೆಲು ಧ್ವನಿಯಲ್ಲೂ ಹೇಳಬಾರದು ಆ ರೀತಿ ಪಕ್ಷದಿಂದ ಓಡಿಸಲಾಯಿತು.

ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇದೆಯೋ ಇಲ್ಲವೋ ಅನ್ನುವಂತಹ ಸ್ಥಿತಿ ಈಗಾಗಲೇ ನಿರ್ಮಾಣವಾಗಿದ್ದು, ಇದೀಗ ವಿಸ್ತರಣೆಗೊಂಡ ಸಚಿವ ಸಂಪುಟದಲ್ಲಿ ಜಿಲ್ಲೆಯ ಮತ್ತೊಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಶಾಸಕರಿಂದಷ್ಟೇ ಅಲ್ಲದೆ ಕಾರ್ಯಕರ್ತರು ಸಹ ಬೇಸರ ಮತ್ತು ಸಿಟ್ಟಿಗೆದ್ದಿದ್ದಾರೆ.
ಜಿಲ್ಲೆಗೆ ಮತ್ತೊಂದು ಮಂತ್ರಿಸ್ಥಾನ ಸಿಗದೆ ಇರುವುದರಿಂದ ಕಾಂಗ್ರೆಸ್ ಬಾವುಟವನ್ನು ಅದೇ ಹಳೆ ಮುಖಗಳು ಜೋಲುಮೋರೆ ಹಾಕಿಕೊಂಡು ಹಿಡಿಯುವಂತಹ ಸ್ಥಿತಿ ಬಂದೊದಗಿದೆ ಎಂದು ಕಾಂಗ್ರೆಸ್‍ನ ಯುವ ನಾಯಕರುಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾವು ಗುಲಾಮರಾಗಿ ಎಷ್ಟು ದಿನ ದುಡಿಯಬೇಕಿದೆ ಎಂದು ಸಂಕಟಪಟ್ಟುಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

ಜಿಲ್ಲೆಯ ಯಾವ ತಾಲ್ಲೂಕು, ಹೋಬಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಲೆಯೇ ಇಲ್ಲ, ಗೆದ್ದಿರುವ ಶಾಸಕರುಗಳು ಅವರ ಹಿಂಬಾಲಕರಿಗೆ ಮಣೆ ಹಾಕುತ್ತಿದ್ದರೆ, ಪಕ್ಷಕ್ಕಾಗಿ ದುಡಿದವರನ್ನು ಅವರ ಬಾಗಿಲಿಗೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಳಿದ ಒಂದೂವರೆ ವರ್ಷದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಯುವಕರು, ಅನುಭವಿ ಇರುವ ಎರಡನೇ ಹಂತದ ನಾಯಕರು ಬೇಕಾಗಿದ್ದರೂ ಪಕ್ಷ ಕಟ್ಟುವ ನಿಟ್ಟಿನಲ್ಲಿ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಈಗಾಗಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಕಾಂಗ್ರೆಸ್‍ನಿಂದ ಒಂದು ಕಾಲನ್ನು ಹೊರಗಿಟ್ಟಿದ್ದಾರೆ ಎನ್ನಲಾಗುತ್ತಿದ್ದು, ಕೆ.ಷಡಕ್ಷರಿ, ಟಿ.ಬಿ.ಜಯಚಂದ್ರ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹುತೇಕ ಕಡಿಮೆ ಹಾಗಾದರೆ ಮುಂದೆ ಯಾರು…? ಹಾಗೆಯೇ ತುರುವೇಕೆರೆ, ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್‍ಗೆ ನಾಯಕರೂ ಇಲ್ಲ, ಅಭ್ಯರ್ಥಿಗಳೂ ಇಲ್ಲ ಎಂಬ ಸ್ಥಿತಿ ತಲುಪಿದೆ.

ಹೀಗೆಯಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೊನ್ನೆ ಸುತ್ತುವ ಬಹುತೇಕ ಲಕ್ಷಣಗಳು ಎದ್ದು ಕಾಣುತ್ತಿವೆ ಎಂಬ ಮಾತುಗಳು ಕಾಂಗ್ರೆಸ್‍ನಲ್ಲೇ ಲಗು ನಗುವಿನೊಂದಿಗೆ ಗಾಳಿಯಲ್ಲಿ ತೇಲಾಡುತ್ತಿದ್ದು, ಕೊನೆಗೆ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಆಗಲಿದೆ ಕಾಂಗ್ರೆಸ್ ಸ್ಥಿತಿ ಎನ್ನಲಾಗುತ್ತಿದೆ.

ಡಾ.ಜಿ.ಪರಮೇಶ್ವರ್ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೊಡಿಸುವುದಕ್ಕಿಂತ ತಮಗೇ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಹಿಂದೇಟು ಹಾಕಿದ್ದರೆನ್ನಲಾಗಿದ್ದು, ಕೊನೆಯ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಮಾಯ್ಯನವರ ಕೃಪಾಕಟಾಕ್ಷದಿಂದ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿತೆಂದು ಜಿಲ್ಲೆಯ ಪ್ರಬಲ ಶಾಸಕರೊಬ್ಬರು ತಮ್ಮ ಆಪ್ತವಲಯದಲ್ಲಿ ಹೇಳಿಕೊಂಡು ನಗುತ್ತಾರಂತೆ.

ಒಟ್ಟಿನಲ್ಲಿ ಕುಂತಿ ಮಕ್ಕಳಿಗೆ ರಾಜ್ಯಭಾರವಿಲ್ಲ ಎಂಬಂತೆ ತುಮಕೂರು ಜಿಲ್ಲೆಗೆ ಮತ್ತೊಂದು ಮಂತ್ರಿ ಸ್ಥಾನ ಈ ಅವಧಿಯಲ್ಲಿ ಸಿಗುವುದು ಓಯಸ್ ನಂತಾಗಿದೆ.

ಹೊಸ ಸಚಿವರ ಪಟ್ಟಿ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.

ಲೋಕಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಡಾ.ಅಜಯ್ ಸಿಂಗ್, ಹೆಚ್.ಸಿ ಬಾಲಕೃಷ್ಣ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಕೆ.ಎಸ್ ಬಸವಂತಪ್ಪ ಅವರು ಜಗಜ್ಯೋತಿ ಬಸವೇಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಸವರಾಜ ರಾಯರೆಡ್ಡಿ ಅವರು ಕೇವಲ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರೇ, ಎನ್ ಚೆಲುವರಾಯಸ್ವಾಮಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಲಕ್ಷ್ಮಣ್ ಸವದಿಯವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಮಧು ಬಂಗಾರಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಎಸ್ ಎಸ್ ಮಲ್ಲಿಕಾರ್ಜುನ್ ಅವರು ಕೂಡ ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರೇ, ಬಿ.ನಾಗೇಂದ್ರ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಸಿಎಂ ನರೇಂದ್ರ ಸ್ವಾಮಿ ಅವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಗಂಗಾಧರಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಶಾಸಕ ಪುಟ್ಟರಂಗಶೆಟ್ಟಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಚಳ್ಳಕೆರೆಯ ಶಾಸಕ ಟಿ.ರಘುಮೂರ್ತಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಶಾಸಕ ರಿಜ್ವಾನ್ ಅರ್ಶದ್ ಅವರು ಪ್ರತಿಜ್ಞಾ ವಿಧಿ ಸ್ವೀಕರಿಸಿದರೇ, ರುದ್ರಪ್ಪ ಲಮಾಣಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ಸಂತೋಷ್ ಲಾಡ್ ಅವರು ಯಾವುದೇ ಹೆಸರನ್ನು ಹೇಳದೇ ಪ್ರತಿಜ್ಞಾ ವಿಧಿ ಸ್ವೀಕರಿಸಿದರೇ, ಕೆ.ಎಂ ಶಿವಲಿಂಗೇಗೌಡ ಅವರು ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಶಾಸಕ ಶಿವರಾಜ್ ತಂಡರಗಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೇ, ವಿಜಯಾನಂದ ಕಾಶಪ್ಪನವರ್ ಕೂಡಲ ಸಂಗಮನ ಹೆಸರಿನಲ್ಲಿ, ಪಂಚ ಪೀಠಾಧಿಪತಿಗಳ ಹೆಸರಿನಲ್ಲಿ, ಬುದ್ಧ ಬಸವ, ಅಂಬೇಡ್ಕರ್ ಹೆಸರಿನಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಶಾಸಕ ಬಿ.ಜೆಡ್ ಜಮೀರ್ ಅಹಮದ್ ಖಾನ್ ಅವರು ಅಲ್ಲಾ ಹಾಗೂ ತಾಯಿಯ ಹೆಸರಿನಲ್ಲಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಈ ವೇಳೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಸಂಪುಟ ಸಚಿವರು ಉಪಸ್ಥಿತರಿದ್ದರು.
ನೂತನ ಸಚಿವರ ಪದಗ್ರಹಣ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸತೀಶ್ ಜಾರಕಿಹೊಳಿ ಗೈರು ಎದ್ದು ಕಾಣುತ್ತಿತ್ತು.

Leave a Reply

Your email address will not be published. Required fields are marked *