ನನ್ನ ಸಂಬಂಧಿಯೊಬ್ಬರ ಮಗಳು ಅಂತರ್ಜಾತಿ ವಿವಾಹವಾದ್ದರಿಂದ ಆ ಜೋಡಿಗೆ ನೈತಿಕ ಮತ್ತು ಒಂದು ಭದ್ರತೆಯ ಧೈರ್ಯ ತುಂಬುವ ಕೆಲಸವಾಗಬೇಕಿತ್ತು, ಅದಕ್ಕೆ ಒಂದು ಸಣ್ಣ ಔತಣಕೂಟವನ್ನು ಏರ್ಪಡಿಸಬೇಕೆಂದು ನನ್ನ ಮನಸ್ಸಲ್ಲಿ ಕೊರೆಯುತ್ತಲೇ ಇತ್ತು.
ತುಮಕೂರಿನ ಅಂತರ್ಜಾತಿ ವಿವಾಹವಾಗಿರುವವರ ಬಳಿ ಈ ಬಗ್ಗೆ ಮಾತನಾಡಿದಾಗ ಅವರೇಕೋ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ, ತುಮಕೂರಿನ ಅಂತರ್ಜಾತಿ ವಿವಾಹಿತರು ಇತ್ತೀಚೆಗೆ ಹೆದ್ದಾರಿ ಬಿಟ್ಟು ಬಂಡಿ ಜಾಡು ಹಿಡಿದಿದ್ದಾರೆ ಅನ್ನಿಸಿತು, ಅಯ್ಯೋ ತುಮಕೂರಿನ ಗೆಳೆಯರೇ ಹಿಂಗಾದ ಮೇಲೆ ಮೈಸೂರಿನ ಗೆಳೆಯರು ಹ್ಯಂಗೋ ಅಂತ ಮೊದಲಿಗೆ ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಅವರಿಗೆ ಪೋನ್ ಮಾಡಿದೆ, ನಾನು ಆಗಂತ ಹೇಳಿದ ಕೂಡಲೇ ಸ್ವರ್ಗ ಮೂರೇ ಗೇಣು ಅನ್ನುವಂತೆ ವೆಂಕಟಾಚಲರವರೇ ಏನೂ ಯೋಚನೇನೆ ಮಾಡಬೇಡಿ ಬನ್ನಿ ಮಾಡೋಣ, ಅಯ್ಯೋ ನಾವೇ ಅವರ ಜೊತೆ ನಿಲ್ಲದಿದ್ದರೆ ಹೇಗೆ ಮೊದಲು ಸ್ಥಳ ಎಲ್ಲಾ ಗೊತ್ತು ಮಾಡಿ ಎಂದರು.

ಆಗ ಸ್ವಲ್ಪ ಬಂಡ ದೈರ್ಯ ಬಂದು ನನ್ನ ಯಾವಾಗಲೂ ಅಣ್ಣ ಎಂದೇ ಕರೆಯುವ ಮಂಟೇಸ್ವಾಮಿಗೆ ಪೋನ್ ಹಾಕಿದೆ ಏನಣ್ಣ ಎಂದೇ ಕೇಳಿದ ಅವರು, ನಾನು ಹಿಂಗೆ ಒಂದು ಜೋಡಿ ಅಂತರ್ಜಾತಿ ವಿವಾಹವಾಗಿದೆ ಅವರಿಗೆ ಔತಣಕೂಟ ಕೊಡಬೇಕು ಅಂದೆ, ಅಷ್ಟೇ ಅಯ್ಯೋ ಬಾರಣ್ಣ ನೀನು ಬರೋದು ಹೆಚ್ಚೋ, ನಾನು ಅದರ ಉಸ್ತುವಾರಿ ತಗೋಳೋದು ಹೆಚ್ಚೋ ಯೋಚ್ನೆ ಮಾಡಬ್ಯಾಡ ದಿನಾಂಕ ಹೇಳು ಅಷ್ಟೇ ಎಂದರು.
ಇನ್ನ ಮೈಸೂರಿನ ಗೆಳೆಯರಾದ ಉಗ್ರನರಸಿಂಹೇಗೌಡ (ನಮಗೆ ಹಂದಿ ಮಾಂಸದ ವಿವಿಧ ಅಡಿಗೆ ತೋರಿಸಿದ ಹಿರಿಯ ಗೆಳೆಯರು), ಸಹಜ ಸಮೃದ್ಧಿಯ ನಿರ್ದೇಶಕರಾದ ಕೃಷ್ಣಪ್ರಸಾದ್, ನಮ್ಮ ತುಮಕೂರಿನವರೇ ಆದ ಹೆಚ್.ಜಿ.ವೆಂಕಟೇಶಮೂರ್ತಿ, ರಂಗಾಯಣದ ನಿರ್ದೇಶಕರಾದ ಸತೀಶ್ ತಿಪಟೂರು, ಅವರಿಗೆ ವಿಷಯ ತಿಳಿಸಿದಾಗ ಅಯ್ಯೋ ಬಾರೋ ಮಾರಯ್ಯ ಅದ್ಯಾಕೆ ನೀನು ಬಂದರೆ ಸಂತೋಷ ಮಾಡೋಣ ಬಾ ಎಂದು ನನ್ನ ಹೆಗಲ ಮೇಲಿದ್ದ ಭಾರವನ್ನು ಜರ್ರನೇ ಇಳಿಸಿಬಿಟ್ಟರು.

ಜುಲೈ 25ರ ಶನಿವಾರ ಸಂಜೆ 5ಗಂಟೆಗೆ ಅಂತರ್ಜಾತಿ ವಿವಾಹಿರಾಗಿದ್ದ ರೇಖಾ.ಆರ್ ಮತ್ತು ಕಿರಣಕುಮಾರ ಅವರಿಗೆ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದ ಒಂದು ಹಾಲ್ ನಲ್ಲಿ ಏರ್ಪಾಟು ಮಾಡಲಾಯಿತು, ನನ್ನ ಪ್ರೀತಿಯ ಗೆಳೆಯರಾದ ಮಂಟೇಸ್ವಾಮಿಯವರಿಗೆ ಮತ್ತೊಮ್ಮೆ ಪೋನ್ ಮಾಡಿದೆ, ಅಣ್ಣಾ ಬಾರಣ್ಣ ಯಾಕೆ ಯೋಚನೆ ಮಾಡ್ತೀಯ ನಾನಿರುವಾಗ ಎಲ್ಲಾ ಗೆಳೆಯರ ಜೊತೆ ಮಾತನಾಡಿ ಸರಳವಾಗಿ ಅಚ್ಚುಕಟ್ಟಾಗಿ ಔತಣಕೂಟ ಮಾಡೋಣ ಅಂತ ಮತ್ತೊಮ್ಮೆ ನನಗೆ ಧೈರ್ಯ ತುಂಬಿದರು.
ಮೈಸೂರಿನ ಗೆಳೆಯರಾದ ಮಹದೇವ ಭರಣಿ, ಸುರೇಶ್ ಅಮ್ಮಸಂದ್ರ ಅವರಿಗೂ ಈ ವಿಷಯ ತಿಳಿಸಿದಾಗ ತುಂಬಾ ಸಂತೋಷ ಪಟ್ಟರು, ಖಂಡಿತ ಬರುವುದಾಗಿ ತಿಳಿಸಿದರು, ಜುಲೈ25ರ ಶನಿವಾರ ಮೈಸೂರು ಕಡೆ ಪ್ರಯಾಣ ಬೆಳೆಸಿದಾಗ ಮೈಸೂರು ಗೆಳೆಯರಿಗೆ ಪೋನ್ ಮಾಡಿದಾಗ ನೋ ಬಿಪಿ ಬೀ ಹ್ಯಾಪಿಯಾಗಿ ಮೈಸೂರಿಗೆ ಬಂದು ಆರಾಮಾಗಿ ಓಡಾಡಿಕೊಂಡು ಸಮಾರಂಭದ ಸಮಯಕ್ಕೆ ಬಾ ಅಂದರು.

ಆದರೂ ನನಗೆ ಹೃದಯ ಹೊಡೆದುಕೊಳ್ಳುತ್ತಿತ್ತು, ಯಾಕೆಂದರೆ ಅಂತರ್ಜಾತಿ ವಿವಾಹವಾದವರಿಗೆ ಔತಣಕೂಟ ಎಂದು ಏರ್ಪಡಿಸಿದ್ದು ಇದೇ ಮೊದಲು, ಈ ಹಿಂದೆ ಮದುವೆ ಮಾಡಿಸಿದರೆ ಕೆ.ರಾಮದಾಸ್, ಪೋಲಂಕಿ ರಾಮಮೂರ್ತಿ, ದೇವನೂರು ಮಹದೇವ ಅಥವಾ ರವಿವರ್ಮಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದು ಸರಳವಾಗಿ ಮದುವೆ, ಸಿಂಪಲ್ ಊಟ ಮಾಡಿಕೊಂಡು ಹೆಣ್ಣು-ಗಂಡಿಗೆ ಮತ್ತೊಮ್ಮೆ ಮಾತನಾಡಿಸಿ ತೊಂದರೆಯೇನಾದರೂ ಆದರೆ ಇಂತಹವರನ್ನು ಸಂಪರ್ಕಿಸಿ ಎಂದು ಹೇಳಿ ಹೊರಟರೆ ಮುಗಿಯಿತು.

ಅಂತರ್ಜಾತಿ ವಿವಾಹಗಳನ್ನು ಮಾಡಿಸಿ ಪೊಲೀಸ್ ಠಾಣೆಗೆ ಹಲವಾರು ಸಲ ಹೋಗಿದ್ದೇನೆ, ಪತ್ರಕರ್ತನಾಗಿದ್ದರಿಂದ ಹೆಚ್ಚು ತೊಂದರೆಯಾಗಿಲ್ಲ, ಕೆಲವರು ಕಾಲು ಕೈ ಮುರಿಯುವ, ಜೀವ ಬೆದರಿಕೆ ಹಾಕಿದರೂ ಮೊಂಡು ಧೈರ್ಯದಿಂದ ಎದುರಿಸಿ ಇಲ್ಲಿಯವರೆವಿಗೂ ಯಾವ ಅಂಗವನ್ನೂ ಊನು ಮಾಡಿಕೊಳ್ಳದೆ ಅಂತರ್ಜಾತಿ ವಿವಾಹಿತರ ಜೊತೆ ಜೊತೆಯಾಗಿ ಅವರ ಎಲ್ಲಾ ಕಷ್ಟ-ದುಃಖಗಳಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಹೆಜ್ಜೆ ಹಾಕುತ್ತಲೇ ಇದ್ದೇವೆ.
ಈಗ ಅಂತರ್ಜಾತಿ ವಿವಾಹಿತ ಜೋಡಿಗೆ ಔತಣಕೂಟ ಎಂಬುದು ಒಂದು ಕಡೆ ಸಮಾನ ಮನಸ್ಕರೆಲ್ಲಾ ಸೇರಿ ಆ ಯುವ ಜೋಡಿಗಳಿಗೆ ನೈತಿಕ ಬೆಂಬಲ, ಧೈರ್ಯ ತುಂಬುವ ಒಂದು ಸಣ್ಣ ಪ್ರಯತ್ನ, ಅಂತ ಮೈಸೂರು ತಲುಪಿ ಗೆಳೆಯರಿಗೆ ಪೋನ್ ಹಾಕಿದರೆ ಮೈಸೂರೆಲ್ಲಾ ಅಡ್ಡಾಡಿಕೊಂಡ ಬಾ ಅಂದರು, ನನ್ನ ಜೊತೆ ನನ್ನ ಕಿರಿಯ ಮಗ ಬಂದಿದ್ದ, ಎಲ್ಲಿಗೆ ಹೋಗಾನ ಅಂದಾಗ ಮೈಸೂರು ಮೃಗಾಲಾಯ ನೋಡೋಣ ಅಂದ, ಮೈಸೂರು ಬಸ್ ನಿಲ್ದಾಣಕ್ಕೆ ಹತ್ತಿರವಿರುವ ವಿಷ್ಣು ಭವನದಲ್ಲಿ ಊಟ ಮಾಡಿ ಸುಮಾರು 2.30ರ ವೇಳೆಗೆ ಮೃಗಾಲಯ ನೋಡಲು ಹೊರಟೆವು.
ಮೃಗಾಲಯ ನೋಡಿಕೊಂಡು ಹೊರ ಬರುವ ವೇಳೆಗೆ 4.15 ಆಗಿತ್ತು, ಅಲ್ಲಿಂದ ನಂಜರಾಜ ಬಹದ್ದೂರು ಛತ್ರ ತಲುಪಿದಾಗ 4.30 ಆಗಿತ್ತು, ಮಂಟೇಸ್ವಾಮಿಯವರಿಗೆ ಪೋನಾಕಿದಾಗ ಅಣ್ಣ ಟೆನ್ಷನ್ ಫ್ರೀಯಾಗಿರು ಅಂದರು, ಐದು ಗಂಟೆಯ ವೇಳೆಗೆ ಬ್ಯಾನರ್ ಮಾಡಿಸಿಕೊಂಡು ಬರೋಣ ಅಂತ ಪ್ಲೆಕ್ಸ್ ಅಂಗಡಿಗೆ ಹೋದಾಗ ಅಲ್ಲಿದ್ದ ಡಿಸೈನ್ ಮಾಡುವ ಹುಡುಗಿಯರು ಅಂತರ್ಜಾತಿ ವಿವಾಹಿತರಿಗೆ ಔತಣಕೂಟ ಎಂಬುದನ್ನು ನೋಡಿ ನಗಾಡಿದರು, ಯಾಕ್ರೀ ಅಂದ್ರೆ ಇಂತಹ ಬ್ಯಾನರ್ ಇವತ್ತೇ ನೋಡ್ತಾ ಇರೋದು, ನಾವು ಊಟಕ್ಕೆ ಬರಬಹುದಾ ಅಂತ ಕಿಚಾಯಿದ್ರು, ಬನ್ನಿ ಅಂತ ಪೋನ್ ನಂಬರ್ ಕೊಟ್ಟೆ, ನೀವೇ ಅಂಕಲ್ ಊಟಕ್ಕೆ ಬನ್ನಿ ಅಂದಿದ್ದು, ಖಂಡಿತ ಬರುತ್ತೇವೆ ಅಂದು ಬ್ಯಾನರ್ ಕೈಗಿತ್ತರು.

ಅಲ್ಲಿಂದ ಬರುವ ವೇಳೆಗೆ ಕಾಳೇಗೌಡ ನಾಗವಾರ, ಹೆಚ್.ಜಿ.ವೆಂಕಟೇಶಮೂರ್ತಿ ಬಂದಿದ್ದರು, 6ಂಟೆಯ ವೇಳೆಗೆ ಎಲ್ಲಾ ಗೆಳೆಯರು, ಹುಡುಗ-ಹುಡುಗಿ ಕಡೆಯವರು, ಅವರ ತಂದೆ-ತಾಯಿಗಳು, ಗೆಳೆಯರು ಸೇರಿ ಸುಮಾರು 30 ಜನ ಸೇರಿದರು.
ಅಚ್ಚುಕಟ್ಟಾದ ಶಾಮಿಯನದಲ್ಲಿ ಸಣ್ಣ ವೇದಿಕೆ, ಊಟಕ್ಕೆ ತುಂಬಾ ಅಲುಂಕಾರಗೊಳಿಸಿದ್ದ ಊಟದ ಟೇಬಲ್ ಗಳು, ಬಂದವರು ಕೂತುಕೊಳ್ಳಲು ಖುರ್ಚಿಗಳ ವ್ಯವಸ್ಥೆಯನ್ನು ಮೈಸೂರಿನ ಗೆಳೆಯರು ಅಚ್ಚಕಟ್ಟಾಗಿ ಮಾಡಿದ್ದರು.
ಸಮಾರಂಭದ ಮೊದಲಿಗೆ ತಿಪಟೂರು ಸತೀಶ್ ಮಾತನಾಡಿ ನಮ್ಮ ಕುಟುಂಬದಲ್ಲಿ ಮೂರು ತಲೆಮಾರಿನಿಂದ ಅಂತರ್ಜಾತಿ ವಿವಾಹವಾಗಿರುವುದಾಗಿ ತಿಳಿಸಿದರೆ, ಸಹಜ ಸಮೃದ್ಧಿ ನಿರ್ದೇಶಕರಾದ ಕೃಷ್ಣಪ್ರಸಾದ್ ನಮಗೆ ಅಂತರ್ಜಾತಿ ವಿವಾಹದ ಬಗ್ಗೆ ಆಸಕ್ತಿಯುಂಟಾಗಲು ನಮ್ಮ ಅಣ್ಣ ಶ್ರೀನಿವಾಸಕುಮಾರ್ ಅವರೇ ಕಾರಣ, ಅವರ ಪ್ರಭಾವದಿಂದಲೇ ನಮ್ಮ ಅಕ್ಕ ಅಂತರ್ಜಾತಿ ವಿವಾಹವಾದಾಗ ನಮ್ಮ ತಂದೆ ಬಿಸಿ ನೀರಿನ ಬುಗ್ಗೆಯಂತೆ ಕುದ್ದರೂ, ನಮ್ಮ ಭಾವ ಡಾ.ಬಸವರಾಜು ಅವರ ತಾಳ್ಮೆ, ಅವರ ನಡಾವಳಿಕೆಯಿಂದ ಕುದಿಯುತ್ತಿದ್ದ ನಮ್ಮ ತಂದೆಯವರು ಚಿಲುಮೆಯಂತಾದರು, ಅವರು ಕೊನೆಗಾಲದಲ್ಲೂ ಬಸವರಾಜು ಅವರನ್ನು, ನಮ್ಮಕ್ಕನನ್ನೇ ಹೆಚ್ಚು ಹಚ್ಚಿಕೊಂಡಿದ್ದರು, ನಮ್ಮ ತಂದೆ ಜಾತಿಯಿಂದ ಅಲ್ಪಮಟ್ಟಿಗಾದರೂ ಹೊರ ಬಂದಿದ್ದರು ಎಂದು ಅಪ್ತವಾಗಿ ಮಾತನಾಡಿದರು.
ಮಂಟೇಸ್ವಾಮಿಯವರು ಅಂತರ್ಜಾತಿ ವಿವಾಹವಾಗಿರುವುದನ್ನು ಅಂದೇ ಹೇಳಿದ್ದು, ರಾಮದಾಸ್ ನೇತೃತ್ವದಲ್ಲಿ ವಿವಾಹವಾಗಿದ್ದನ್ನು ನೆನಸಿಕೊಂಡ ಅವರು, ಹಲವಾರು ಅಂತರ್ಜಾತಿ ವಿವಾಹಗಳನ್ನು ಮಾಡಿಸಿರುವುದಲ್ಲದೆ, ಅವರಿಗೆ ಒತ್ತಾಸೆಯಾಗಿ ನಿಂತಿದ್ದೇವೆ, ವೆಂಕಟಾಚಲ ಅವರು ಅಂತರ್ಜಾತಿ ವಿವಾಹಿತರಿಗೆ ಔತಣಕೂಟ ಎಂದ ಕೂಡಲೇ ನನಗಾದ ಸಂತೋಷ ಹೇಳ ತೀರದು, ಬಾರಣ್ಣ ನೀನು ಅಂತ ಹೇಳಿ ಅವರ ಮನಸ್ಸಿನ ಭಾರ ಇಳಿಸಿದೆ ಎಂದರು.
ಕಾಳೇಗೌಡ ನಾಗವಾರ ಅವರು ಪಂಪನಿಂದ ಹಿಡಿದು ಕುವೆಂಪುರವರಿಗೂ ಜಾತಿಯು ಸರ್ಪದಂತೆ ಕಾಡುತ್ತಲೇ ಇದೆ, ಇಂತಹ ಜಂತುವನ್ನು ಹೋಗಲಾಡಿಸಲು ಪೆರಿಯಾರ್, ಬಸವಣ್ಣ, ಅಂಬೇಡ್ಕರ್ ಶ್ರಮಿಸಿದರೂ ಅದು ಹಾವಿನ ಹಿಡಿತದಂತೆ ಗಟ್ಟಿಯಾಗಿ ಸುತ್ತಿಕೊಳ್ಳುತ್ತಲೇ ಇದೆ ಅದನ್ನು ಬಿಸಿಕೊಳ್ಳಲು ಆಗುತ್ತಲೇ ಇಲ್ಲ, ಇಂತಹ ಜೋಡಿಗಳಿಗೆ ನಾವು ಒತ್ತಾಸೆಯಾಗಿ ನಿಂತಾಗ ಸಮಾಜದಲ್ಲಿ ಮತ್ತಷ್ಟು ಅಂತರ್ಜಾತಿ ವಿವಾಹಗಳಾಗುತ್ತವೆ ಎಂದರು.
ಸೀಮಾಕೃಷ್ಣಪ್ರಸಾದ್ ಮಾತನಾಡಿ ಇಂದು ಗಂಡು ಮಕ್ಕಳಿಗೆ ಹೆಣ್ಣು ಸಿಗದೆ ಎಷ್ಟೋ ಹುಡುಗರು ಮದುವೆಯ ಆಸೆಯನ್ನೇ ಬಿಟ್ಟಿದ್ದಾರೆ, ಈಗೀಗ ಯಾವ ಜಾತಿಯಾದರೇನು ಹೆಣ್ಣು ಸಿಕ್ಕರೆ ಸಾಕು ಅನ್ನುವಂತಹ ಕಾಲದಲ್ಲಿ ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ಆಗುತ್ತಿರುವುದು ನೋಡುತ್ತಿದ್ದೇವೆ ಎಂದರು.
ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಮೊಮ್ಮಗಳ ಮಗಳನ್ನು ಅಂತರ್ಜಾತಿ ವಿವಾಹವಾಗಿರುವ ಸುರೇಶ್ ಅಮ್ಮಸಂದ್ರ ಅವರು, ನನ್ನ ಹೆಂಡತಿಗೆ ಸುಮಾರು ಸಾವಿರಾರು ಸಲ ಕ್ಷಮೆ(ಸಾರಿ) ಕೇಳಿರಬಹದು, ಇಬ್ಬರೂ ಒಂದೇ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ, ಅಲ್ಲಿ ನಮ್ಮ ಮನೆಯವರನ್ನು ಮೇಡಂ ಅಂತಲೇ ಕರೆಯುತ್ತೇನೆ, ಇದಕ್ಕೆ ನಮ್ಮ ಕಛೇರಿ ಸಿಬ್ಬಂದಿ ಅದೇನ್ರಿ ನೀವು ಮೇಡಂ ಅನ್ನೋದು ಅಂತ ಅಕ್ಷೇಪಣೆ ವ್ಯಕ್ತಪಡಿಸಿದರೂ, ನಾನು ಮೇಡಂ ಅಂತ ಕರೆಯುವುದನ್ನು ನಿಲ್ಲಿಸಲ್ಲ ಅಂದಾಗ ಸಭೆ ನಗೆಗಡಲಲ್ಲಿ ಅಲೆ ಅಲೆಯಾಗಿ ತೇಲಿತು.
ಕೊನೆಯದಾಗಿ ಮಾತನಾಡಿದ ಮಹದೇವ ಭರಣಿಯವರು 80 ಮತ್ತು 90ರ ದಶಕದಲ್ಲಿ ಅಂತರ್ಜಾತಿ ವಿವಾಹಗಳು ಮೈಸೂರಿನಲ್ಲಿ ಕ್ರಾಂತಿಕಾರಿ ರೀತಿಯಲ್ಲಿ ಕಾಳೇಗೌಡ ನಾಗವಾರ, ಕೆ.ರಾಮದಾಸ್, ಪೋಲಂಕಿ ರಾಮಮೂರ್ತಿ, ದೇವನೂರು ಮಹದೇವ ನೇತೃತ್ವದಲ್ಲಿ ನಡೆದಿದ್ದನ್ನು ಮೆಲಕು ಹಾಕಿದರು.
ಮಹದೇವ ಭರಣಿಯವರು ಹೇಳದೆ ಇದ್ದರೂ ಬರುವಾಗ ದೊಡ್ಡ ಹೂವಿನ ಹಾರ ಜೊತೆಯೇ ಬಂದಾಗ, ಅವುಗಳನ್ನು ನವ ದಂಪತಿಗಳಿಗೆ ಹಾಕಿಸಿ ಖುಷಿ ಪಟ್ಟಿದ್ದನ್ನು ಯಾರೂ ಮರೆಯಲಾರರು.
ಹೆಚ್.ಜಿ.ವೆಂಕಟೇಶಮೂರ್ತಿ ಅಂತರ್ಜಾತಿ ವಿವಾಹಿತರನ್ನು ಅರಸಿದರು.

ನಂತರ ರಾಗಿ ಸಾವಿಗೆ, ಪಲಾವ್, ಮೊಸರನ್ನ, ಜಾಮೂನು, ಪಾಯಸ, ಮಜ್ಜಿಗೆ, ನುಗ್ಗೆಕಾಯಿ ಸಂಬಾರು ನಾವು ಮತ್ತೊಮ್ಮೆ ಉಣಬೇಕು ಅನ್ನುವಂತಹ ರುಚಿಯೊಂದಿಗೆ ಬಿಸಿ ಬಿಸಿ ಊಟದ ಸವಿ ಮೈಸೂರು ಎಂದ ಕೂಡಲೇ ಈ ಊಟದ ಸವಿ ನೆನಪು ತಪ್ಪದೇ ಕಾಡಲಿದೆ, ಈ ಊಟದ ವ್ಯವಸ್ಥೆ ಮಾಡಿದವರ ಹೊಟ್ಟೆ ಸದಾ ತಣ್ಣಗಿರಲಿ ಎಂಬುದೇ ಎಲ್ಲರ ಆಶಯವಾಗಿತ್ತು, ಸುಮಾರು 8.30ರ ವೇಳೆಗೆ ಔತಣಕೂಟ ಭರಕಾಸ್ತಾಯಿತು.
ಸಣ್ಣ ಔತಣಕೂಟವದರೂ ಮತ್ತೆ ಮತ್ತೆ ನೆನಪಾಗುವಂತಹ ಲವಲವಿಕೆಯ ಔತಣಕೂಟ ರೇಖಾ ಮತ್ತು ಕಿರಣಕುಮಾರ್ ಅವರ ನೆಪದಲ್ಲಿ ನಡೆದದ್ದು ಒಂದು ಔಚಿತ್ಯವಾದರೂ ಅಲ್ಲಿ ನಡೆದ ಮಾತುಕತೆ, ಮಾತನಾಡಿದವರು ಬಹುದೂರ ಸಾಗಿ ಬಂದಿರುವ ನಾವುಗಳು ಹೊಸದನ್ನು ಯುವ ಪೀಳಿಗೆಗೆ ಧಾಟಿಸುವ ಜವಬ್ದಾರಿ ನಮ್ಮಗಳ ಮೇಲಿದೆ ಅದನ್ನು ಇಂತಹ ಸರಳ ಸಮಾರಂಭಗಳ ಮೂಲಕ ಎಲ್ಲಾ ಕಡೆ ಮಾಡುತ್ತಾ ಹೊಸತನ, ಹೊಸ ಆಲೋಚನೆಗಳ ಹೂವಿನ ಗಿಡ ನೆಟ್ಟು ಹೂವಾಗಿ ಅರಳ ಬೇಕಾಗಿದೆ ಎಂಬುದೇ ಆಗಿತ್ತು.
ಎಲ್ಲರೂ ಬಹಳ ವರ್ಷಗಳ ನಂತರ ಸೇರಿ ಇಂತಹ ಮನ-ಹೃದಯ ಎರಡನ್ನೂ ತಂಗಾಳಿಯಂತೆ ತಣಿಸಿದೆ, ಆಗಾಗ ಸೇರೋಣ ಎಂದು ಒಬ್ಬೊಬ್ಬರೆ ನಂಜರಾಜ ಬಹದ್ದೂರ್ ಛತ್ರದಿಂದ ಅವರವರ ಗೂಡಿಗೆ ಮರಳಿದರು.
ಗೂಡು ಸೇರಿದವರು ಗುಡಿ ಸೇರದೆ ಹೊಸ ಗುರಿಯತ್ತ ನಮ್ಮ ಹಜ್ಜೆಯನ್ನಿಡೋಣ, ಮುನಿಸು, ಹುಸಿ ಜಗಳ ಇದ್ದದ್ದೇ ಆದರೆ ಸಾಗುವ ದಾರಿ, ಗುರಿ ಒಂದೇ ಆಗಿರಲಿ.
ಮೈಸೂರಿನ ಗೆಳೆಯರು ಮೈಸೂರು ಪಾಕಿನಷ್ಟೇ ಸಿಹಿಯ ಪ್ರೀತಿ ತೋರಿಸಿದ್ದಕ್ಕೆ ಅವರಿಗೆ ಅನಂತ ಧನ್ಯವಾದಗಳು, ಮತ್ತೇ ಸೇರುವ ದಿನ ಬರಲಿ…
-ವೆಂಕಟಾಚಲ.ಹೆಚ್.ವಿ.