ತುಮಕೂರು: ಮಳೆ ಇಲ್ಲದೆ ರಾಜ್ಯದಲ್ಲಿ ತೀವ್ರ ಬರಗಾರ ಪರಿಸ್ಥಿತಿ ಎದುರಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಫಸಲ್ ಬೀಮಾ ಯೋಜನೆಯ ವಿಮಾ ಯೋಜನೆಗೆ ಹಣ ಕಟ್ಟಲೂ ರೈತರಿಗೆ ಕಷ್ಟವಾಗಿದೆ. ಸರ್ಕಾರವೇ ರೈತರ ವಿಮಾ ಹಣ ಪಾವತಿಸಬೇಕು, ಪ್ರತಿ ತಾಲ್ಲೂಕಿಗೆ ಸರ್ಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿದೆ, ಅದು ಸಾಕಾಗುವುದಿಲ್ಲ, ಹೆಚ್ಚುವರಿಯಾಗಿ ತಲಾ ಇನ್ನೂ ಎರಡು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಬೈ. ವಿಜಯೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಂಗಳವಾರ ಜಿಲ್ಲೆಯಲ್ಲಿ ಬರ ಅಧ್ಯಯನಕ್ಕೆ ಆಗಮಿಸಿದ್ದ ವಿಜಯೇಂದ್ರ ಅವರು ತುಮಕೂರು ಗ್ರಾಮಾಂತರ ಕ್ಷೇತ್ರದ ದುರ್ಗದಹಳ್ಳಿ, ಆಚಾರಗುಡ್ಲು, ಕೊರಟಗೆರೆ ತಾಲ್ಲೂಕಿನ ವಡ್ಡರಹಳ್ಳಿ, ಇರಕಸಂದ್ರ, ತಣ್ಣೇನಹಳ್ಳಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ಮಾಡಿ ಪರಿಸ್ಥಿತಿಯ ಮಾಹಿತಿ ಪಡೆದರು. ರೈತರ ಹೊಲಗಳಿಗೆ ಭೇಟಿ ನೀಡಿದರು, ಬಹುತೇಕ ಜಮೀನುಗಳಲ್ಲಿ ಇನ್ನೂ ಬಿತ್ತನೆ ಆಗಿಲ್ಲ, ತೆಂಗು, ಅಡಿಕೆ ತೋಟಗಳು ನೀರಿಲ್ಲದೆ ಬತ್ತಿಹೋಗಿ ರೈತರು ಕಂಗಾಲಾಗಿ ದು:ಖ ತೋಡಿಕೊಂಡರು.
ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ, ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಿ ತುರ್ತು ಪರಿಹಾರ ಕಾರ್ಯ ಆರಂಭಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು. ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈಕಟ್ಟಿ ಕೂರುವುದು ಸರಿಯಲ್ಲ. ತಕ್ಷಣ ಹತ್ತು ಸಾವಿರ ಕೋಟಿ ರೂ ಬಿಡುಗಡೆ ಮಾಡಿ ಕುಡಿಯುವ ನೀರು ಮತ್ತಿತರ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.
ಗ್ರಾಮಾಂತರ ಶಾಸಕ ಬಿ. ಸುರೇಶ್ಗೌಡ ಮಾತನಾಡಿ, ರೈತರು ಚೆನ್ನಾಗಿದ್ದರೆ ದೇಶ ಚೆನ್ನಾಗಿರುತ್ತಾರೆ. ಕರ್ನಾಟಕದಲ್ಲಿ ಈ ಬಾರಿ ಶೇಕಡ 70ರಷ್ಟು ಮಳೆ ಬಿದ್ದಿಲ್ಲ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು ರಾಜ್ಯ ಸರ್ಕಾರ ಪರಿಹಾರ ಕ್ರಮಗಳನ್ನು ಆರಂಭಿಸಿ ರೈತರನ್ನು ಉಳಿಸಿಬೇಕು. ತಕ್ಷಣ ಹತ್ತು ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಬರಪರಿಹಾರ ಕಾರ್ಯವನ್ನು ತ್ವರಿತವಾಗಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಚಿದಾನಂದಗೌಡ, ವೈ.ಎ. ನಾರಾಯಣಸ್ವಾಮು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಮುಖಂಡರಾದ ವೈ.ಹೆಚ್.ಹುಚ್ಚಯ್ಯ, ಅನಿಲ್ಕುಮಾರ್, ಹನುಂತೇಗೌಡ, ಚೈತ್ರ ಮಂಜುನಾಥ್, ಗೂಳೂರು ಶಿವಕುಮಾರ್, ಊರ್ಡಿಗೆರೆ ರವಿ, ಆಂಜನಪ್ಪ ಮೊದಲಾದವರು ಹಾಜರಿದ್ದರು.