ಸಚಿವ ಡಿ. ಸುಧಾಕರ್,ನಿಧನ,ಚಳ್ಳಕೆರೆ ಯಲ್ಲಿ ಅಂತಿಮ ಸಂಸ್ಕಾರ

ತುಮಕೂರು: ರಾಜ್ಯ ಸರ್ಕಾರದ ಸಚಿವ ಡಿ. ಸುಧಾಕರ್ (ಬೆಳಗಿನ ಜಾವ 3.15ಕ್ಕೆ) ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ (KIMS) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

​ಶಸ್ತ್ರಚಿಕಿತ್ಸೆ ಬಳಿಕ ಉಲ್ಬಣಿಸಿದ ಸಮಸ್ಯೆ:

​ಕೆಲವು ದಿನಗಳ ಹಿಂದೆ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಮಂಡಿ ಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುಧಾಕರ್ ಅವರಿಗೆ, ಆಪರೇಷನ್ ನಂತರ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಧೂಮಪಾನದ ಹಿನ್ನೆಲೆಯಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿ ಅವರ ಆರೋಗ್ಯ ಸ್ಥಿತಿ ಗಂಭೀರ ಹಂತಕ್ಕೆ ತಲುಪಿತ್ತು ಎಂದು ತಿಳಿದುಬಂದಿದೆ.

​ವೈದ್ಯರ ಸತತ ಪ್ರಯತ್ನ:

​ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ:
​ಆರಂಭದಲ್ಲಿ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು.
​ನಂತರ ಶ್ವಾಸಕೋಶ ಮತ್ತು ಹೃದಯದ ಕಾರ್ಯವೈಖರಿ ಕುಸಿದಿದ್ದರಿಂದ ECMO (ಎಕ್ಮೋ) ಚಿಕಿತ್ಸೆ ನೀಡಲಾಗುತ್ತಿತ್ತು.

​ಸುಮಾರು ನಾಲ್ಕು ವಾರಗಳ ಕಾಲ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರಿದಿತ್ತು.
​ಒಂದು ಹಂತದಲ್ಲಿ ಶ್ವಾಸಕೋಶ ಕಸಿ (Lung Transplant) ಮಾಡುವ ಆಲೋಚನೆಯೂ ಇತ್ತಾದರೂ, ಚಿಕಿತ್ಸೆಗಳಿಗೆ ಸ್ಪಂದಿಸದ ಕಾರಣ ಇಂದು ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಚಿನ್ನದೊರೈ ತಿಳಿಸಿದ್ದಾರೆ.

ಸಚಿವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ,   ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸೇರಿದಂತೆ ರಾಜಕೀಯ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *