45 ಕ್ಕೆ “ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕ್ಕೆ ನಿನ್ನನು”

ಮೇ ತಿಂಗಳ ಬಿರು ಬಿಸಿಲು ಕರಗಿ ಕರಾಳ ರಾತ್ರಿಯಲ್ಲಿ ಪರೀಕ್ಷೆಗೆ ಓದುತ್ತಿದ್ದ ದಿನಗಳು, ಗೆಳೆಯನೊಬ್ಬ ಕಿವಿಗಳಿಂದ ಕೇಳಬಾರದ, ಹೃದಯ ಒಡೆದು ಹೋಗುವಂತಹ ಸುದ್ದಿಯೊಂದನ್ನು ತಂದು ಬಿಟ್ಟ, ಆಕಾಶದಲ್ಲಿ ಮಿನುಗು ನಕ್ಷತ್ರಗಳತ್ತ ನೋಡಿದಾಗ ಆತ ನಕ್ಷತ್ರವಾಗಲು ಯಾಕಿಷ್ಟು ಬೇಗೆ ಹೋದ ಎಂಬುದೇ ಆಗಿನ್ನ ಪದವಿಯ ವಿದ್ಯಾರ್ಥಿಯಾಗಿದ್ದ ನಮಗೆ ಒಂದು ತರಹ ಆಕಾಶವೇ ಮೇಲೆ ಬಿದ್ದಂತಾಯಿತು.

ಆತ ಬೇರಾರು ಅಲ್ಲ, ಇಂದು ಜಿಲ್ಲಾ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ರಾಮಕೃಷ್ಣರವರ ಸಹೋದರ ರಮೇಶ ಪಿ.ಯು.ಸಿ.ಯಿಂದ ಒಂದೇ ತಟ್ಟೆಯಲ್ಲಿ ಉಂಡು ಗೆಳತನದ ಮಾಮರವನ್ನು ನೆಟ್ಟವರು, ಚಿಕ್ಕ ವಯಸ್ಸಿಗೆ ಹಲವಾರು ಆಟ ಆಡುತ್ತಿದ ರಮೇಶ ಅಂತರ್ ಧರ್ಮೀಯ ಎಳೆ ವಯಸ್ಸಿನ ಹುಡುಗಿಯನ್ನು ಮದುವೆಯಾಗಿಬಿಟ್ಟಿದ್ದ.

ನಾವಿದ್ದ ಮನೆಯಲ್ಲೇ ಪರೀಕೆಗೆ ಓದುತ್ತಿದ್ದವನು, ಅದ್ಯಾವ ಮಾಯದಲ್ಲೋ ಹೆಂಡತಿ ನೆನದು ಊರಿಗೆ ಹಾರಿದ್ದ, ಆ ದಿನ ಬಾವಿಯಲ್ಲಿ ಸ್ನಾನ ಮಾಡಲು ಹೋಗಿದ್ದವ ಈಜು ಬಾರದಿರುವುದರಿಂದ ಮುಳಗಿ ಸಾವನ್ನಪ್ಪಿದ್ದ, ಇದು ನನ್ನ ಎದೆಗೆ ಭರ್ಜಿ ಹಾಕಿ ತಿವಿದ ಮೊದಲ ಸಾವು, ಈ ಸಾವಿನಿಂದ ಹೊರಬರಲು ಹಲವಾರು ತಿಂಗಳು ಹಿಡಿದವು.

ಆ ನಂತರ ನನ್ನ ಕಲಕಿದ್ದು ಈ ನಾಡಿನ ಕಳಶ ಪ್ರಾಯವಾಗಿದ್ದ, ಯುವಕರ, ಮಕ್ಕಳ ಪ್ರೀತಿಯ ಅಪ್ಪು ಪುನೀತ್ ರಾಜಕುಮಾರ್ ಸಾವು, ನಂತರ ನಾವೇ ಎತ್ತಿ ಆಡಿಸಿದ್ದ ಸಂಚಾರಿ ವಿಜಯ್, ನಮಗೆಲ್ಲಾ ಚಿಕ್ಕ ಮಕ್ಕಳಲ್ಲಿ ಆಗಿನ ಕಾಲಕ್ಕೆ ಕಾಫಿ ಬೈಟ್ ಚಾಕುಲೇಟ್ ತಂದು ಕೊಡುತ್ತಿದ್ದ ಅಪರ್ಣಾ ಸಾವು, ನಟ ಚಿರಂಜೀವಿ ಸರ್ಜಾ ಗರ್ಭೀಣಿ ಮಡದಿಯನ್ನು ಬಿಟ್ಟು ಸಾವನ್ನಪ್ಪಿದ್ದು, ನಂತರ ತಾನು ಅಂಗವಿಕಲನಾಗಿದ್ದರೂ ಸ್ವಾಭಿಮಾನದಿಂದ ಬದುಕುತ್ತಿದ್ದ ಪತ್ರಕರ್ತ ಗೆಳೆಯ ಎಂ.ಎಸ್.ರುದ್ದೇಶ್ ಮನೆ ಕಟ್ಟಿಸುತ್ತಿರುವಾಗಲೇ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದು ಹೀಗೆ ಸಾವುಗಳ ಸರಮಾಲೆಯನ್ನು ಕೊರಳಿಗೆ ಹಾಕಿಕೊಳ್ಳುತ್ತಾ ದುಃಖವನ್ನು ಎದೆಯಲ್ಲಿಟ್ಟುಕೊಂಡು ಬದುಕಿನ ಬಂಡಿಯನ್ನು ಸಾವುಗಳನ್ನು ನೋಡುತ್ತಾ ಎಳೆಯುತ್ತಿರುವಾಗಲೇ ನನ್ನ ಕಣ್ಣ ಮುಂದೆ ಸಾವಿರಾರು ಸಾವುಗಳು ಗೆಳೆಯರು, ಬಂಧು-ಬಳಗ, ನಾಡಿನ ಅಸ್ಮಿತೆಗಾಗಿ ಇನ್ನೂ ಬದುಕ ಬೇಕಾದವರು ಕ್ಷಣಮಾತ್ರದಲ್ಲಿ ಕಣ್ಮರೆಯಾಗಿದ್ದಾರೆ.

ಈ ಸಾವುಗಳನ್ನೆಲ್ಲಾ ಮಾಲೆಯಂತೆ ಕೊರಳಿಗೆ ಹಾಕಿಕೊಳ್ಳುತ್ತಾ ನಮ್ಮ ಸಾವು ಸಹ ಎಂದು ಬರುತ್ತದೆಯೋ, ನಮಗೂ ಒಂದು ದಿನ ನಮ್ಮ ಕೊರಳಿಗೆ ಸಾವಿನ ಹಾರ ಬೀಳಬಹುದು ಎನ್ನುತ್ತಿರುವಾಗಲೇ ತೀರ ಅಪ್ಪಿಕೊಂಡವರು, ಒಂದಲ್ಲ ಒಂದು ವಿಷಯಕ್ಕೆ ಬೈಯುತ್ತಾ, ಜಗಳವಾಡುತ್ತಾ, ಮತ್ತೆ ತಬ್ಬಿಕೊಂಡು ಪಕಾರನೇ ನಗುತ್ತಾ ಇರುವಾಗಲೇ ಈ ರೀತಿ ನಗು ನಗುತ್ತಾ ಇರುವವರೇ ದಢೀರನೇ ಸಾವಿನ ಮನೆ ಸೇರಿ ಬಿಟ್ಟರೆ ನಮ್ಮಂತಹವರ ಎದೆಯು ಒಡೆದು ಹೋಗುತ್ತದೆ.

ಏಕೆಂದರೆ ಎಳೆಯ ವಯಸ್ಸು, ಹೆಂಡತಿ ಮಕ್ಕಳೊಂದಿಗೆ ನಕ್ಕು ನಲಿಯುತ್ತಾ ಬಹುದೂರ ನಡೆದು ಹೂವಾಗಿ ಅರಳಿ, ಕಾಯಾಗಿ, ಹಣ್ಣಾಗಿ ಬದುಕಿನ ಬಂಡಿಯನ್ನು ಸಾಗಿಸಬೇಕಾದ ಯುವಕರು ಯಾವುದೋ ಕಾರಣಕ್ಕೇ ಯಾವುದರ ಬೆನ್ನತ್ತಿ, ತಮಗೆ ಅದು ಕೆಟ್ಟದ್ದು ಎಂದು ತಿಳಿದಿದ್ದರೂ, ಇವತ್ತೊಂದು ದಿನ , ನಾಳೆ ಒಂದು ದಿನ ಎನ್ನುತ್ತಾ ಯಮರಾಯನ ಪಾದ ಸೇರುವುದಿದೆಯಲ್ಲಾ ಅದು ದುರಂತ, ನೋವು, ಎಂದೆಂದೂ ತಮ್ಮ ಮಡದಿ, ಮಕ್ಕಳಿಗೆ ಭರಿಸಲಾರದ ಸಂಕಟವನ್ನು ಅವರ ಎದೆಗಳಲ್ಲಿ ಬಿಟ್ಟು ಹೋಗುವುದಿದೆಯಲ್ಲಾ ಅದು ಈ ಭೂಮಿ ಮೇಲಿನ ದೊಡ್ಡ ಪಾಪ ಮತ್ತು ದುರಂತ.

ಎಳೆ ವಯಸ್ಸಿನ ಮಡದಿ, ಮಕ್ಕಳ ಎದೆಯಲ್ಲಿ ಇಂತಹ ಸಾವು ಪ್ರತಿ ಕ್ಷಣವೂ ಭರ್ಜಿಯಂತೆ ತಿವಿಯುತ್ತಲೇ ಇರುತ್ತದೆ, ಸಮಾಜವು ಕೆಟ್ಟ ದೃಷ್ಠಿಯಿಂದ ಇಂತಹವರನ್ನು ನೋಡಿ ನಗುತ್ತಿರುತ್ತದೆ, ಅವರು ಮೊದಲೇ ಬೆಂಕಿಯಲ್ಲಿ ಬೇಯುತ್ತಿರುತ್ತಾರೆ, ಸಮಾಜವು ಅವರನ್ನು ಮತ್ತಷ್ಟು ಕೆಟ್ಟದಾಗಿ ನೋಡುವುದರಿಂದ ಬೆಂದು ಬಳಲಿ ಬಾಡುತ್ತಿರುತ್ತಾರೆ, ಯಾರು ಎಷ್ಟೇ ಸಾಂತ್ವಾನ, ನಿಮ್ಮ ಜೊತೆ ಇದ್ದೇವೆ ಎಂದು ಹೇಳಿದರೂ ಆ ಎಳೆಯ ಮನಸ್ಸುಗಳಿಗೆ, ಹೃದಯಗಳಿಗೆ ಆ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಬದುಕು ಕಟ್ಟಿಕೊಳ್ಳಬಹುದು, ಜೀವನ ಮಾಡಬಹುದು, ಮಡದಿ ಮಕ್ಕಳನ್ನು ಅಪ್ಪಿ ಮುದ್ದಾಡಿ ನೀಡುತ್ತಿದ್ದ ಪ್ರೀತಿ, ಆಲಿಂಗನ, ನಗು, ಚೇಷ್ಟೇ, ಈ ಪ್ರಪಂಚದಲ್ಲಿ ನಿಮ್ಮನ್ನೂ ನಾನು ಕೈ ಬಿಡಲಾರೆ ಎಂಬ ನಂಬಿಕೆಯನ್ನು ಮತ್ತಿನ್ಯಾರು ಕೊಡಲು ಸಾಧ್ಯ.

ಈ ಪ್ರೀತಿಯ ಕಂಗಳು ಪ್ರತಿ ದಿನ ಒಡಲನ್ನು ಸುಟ್ಟು ಭಸ್ಮ ಮಾಡುತ್ತಿರುತ್ತದೆ, ಇದಕ್ಕೆ ಪರಿಹಾರ ಯಾರಿಂದಲೂ ಕೊಡಲು ಸಾಧ್ಯವಿಲ್ಲ, ಎಂದೋ ಸಿಕ್ಕಿ ನಕ್ಕು, ಬೈಯ್ದಾಡಿಕೊಂಡು ಮನೆ ಕಡೆ ಹೊರಡುತ್ತಿದ್ದ ನನ್ನಂತಹವನಿಗೇ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಿರದೇ ಇರುವಾಗ, ದಿನವೂ ಮನೆಗೆ ಬಂದು ಪ್ರೀತಿ, ಜಗಳ, ಗುದ್ದಾಟ, ಓಡಾಟ, ಪ್ರವಾಸ, ಮಡದಿಯನ್ನು ಕಛೇರಿಗೆ, ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದ ಅಪ್ಪಿಕೊಳ್ಳುತ್ತಿದ್ದ ಗಂಡ, ಅಪ್ಪ ಇಲ್ಲ ಎಂದಾಗ ಆ ಹೃದಯಗಳಿಗೆ ಏನಾಗಬಹದು ಎಂಬುದನ್ನು ಯಾವ ಮಾತಿನಿಂದ ಹೇಗೆ ಹೇಳುವುದು.

ಭೂಮಿಯ ಮೇಲೆ ಹುಟ್ಟಿದ ಸಕಲ ಜೀವರಾಶಿಗಳಿಗೂ ಸಾವು ಇದ್ದೇ ಇದೆ, ಭಾವನೆಗಳಿದ್ದ ಗಿಡ-ಮರಗಳು ಸತ್ತಾಗ ಯಾರಿಗೂ ಏನು ಅನ್ನಿಸುವುದಿಲ್ಲ, ಪ್ರಾಣಿ-ಪಕ್ಷಿಗಳು ಸತ್ತಾಗ ಅವು ಸಹ ಸತ್ತವರ ಸುತ್ತ ದುಃಖಿಸುತ್ತವೆ, ಅರಚುತ್ತರವೆ, ಹಲವಾರು ದಿನ ಅವು ಸಹ ಅದರ ಧ್ಯಾನದಲ್ಲೇ ಇರುತ್ತವೆ. ಇನ್ನಾ ಮನಸ್ಸಿರುವ ಮನುಷ್ಯ ತನ್ನ ಸಂಬಂಧಗಳನ್ನೆಲ್ಲಾ ಬಿಟ್ಟು ಹೊರಟಾಗ ಆ ದುಃಖದ ಭಾವನೆ ಕಡಲಾಗಿ ಹರಿಯುವುದಿದೆಯಲ್ಲಾ ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ, ಅದು ನಿರಂತರವಾಗಿ ಸಾಯುವ ತನಕ ತನ್ನ ಕುಟುಂಬವನ್ನು ಕಾಡುತ್ತಿರುತ್ತದೆ.

ಸಾವು ಇಂತಹ ಕಾರಣಕ್ಕೇ ಬರುತ್ತದೆ ಎಂದು ಯಾರಿಂದಲೂ ಊಹಿಸಲು ಇದುವರೆವಿಗೂ ಸಾಧ್ಯವಾಗಿಲ್ಲ, ಆದರೆ ಕೆಲವು ವೇಳೆ ಸ್ವಯಂಕೃತ ಅಪರಾಧದಿಂದ ಇದನ್ನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ಪದೇ ಪದೇ ಅದೇ ತಪ್ಪನ್ನು ಮಾಡುತ್ತಾ ಸಾವನ್ನು ತಂದುಕೊಳ್ಳುತ್ತಾರಲ್ಲ ಅದಕ್ಕಿಂತ ಘೋರಪಾಪ, ಘೋರ ದುರುಂತ ಮತ್ತೊಂದಿಲ್ಲ.

ಇಂತಹ ಒಂದು ಘೋರ ದುರಂತವೊಂದು ಜೂನ್ 30ರಂದು ಯಾರೂ ಊಹಿಸಲೂ ಆಗದಂತಹವುದು ನನ್ನ ಕಣ್ಣ ಮುಂದಯೇ ನಡೆಯಿತು, ಒಬ್ಬ ಪ್ರತಿಭಾವಂತ ಪ್ರಕರ್ತ, ಕ್ರೀಡಾಪಟು, ಆರೂಕಾಲು ಅಡಿಯ ಅಜಾನುಬಾಹು, ಸ್ಫುರದೃಪಿ, ಸದಾ ನಗುಮುಖ, ಬೈದರೂ ಎಲ್ಲಾ ಬೈಗುಳವಾಗುವ ತನಕ ನಗುತ್ತಲೇ ಸ್ವೀಕರಿಸುತ್ತಿದ್ದ ಅಜಾನುಬಾಹು ವ್ಯಕ್ತಿ ಬೈಗಳಕ್ಕೆ ಮುಖ ಗಂಟಿಕ್ಕಿರಬೇಕೆಂದು ಕತ್ತೆತ್ತಿ ನೋಡಿದರೆ ಮುಗುಳು ನಗುತ್ತಾ ಆಯಿತೇನಣ್ಣ ಎಂದು ಬಾಚಿ ತಬ್ಬಿ ಬಾರಣ್ಣ, ನೀನು ಬೈಯದೆ ಮತ್ತಿನ್ಯಾರು ಬೈಯಬೇಕೆಂದು ಟೀ ಅಂಗಡಿಗೆ ಕರೆದುಕೊಂಡು ಹೋಗಿ ಟೀ ಕೊಡಿಸಿ, ಆತ ಸಿಗರೇಟ್ ಹಚ್ಚಿ ಒಂದು ದಮ್ಮು ಎಳೆದು ಅಣ್ಣ ಬೈಯ್ದದ್ದು ಆಯಿತಾ ಇನ್ನಾ ಐತಾ ಅಂತ ಮತ್ತೊಮ್ಮೆ ಪಕಾರನೇ ನಗುತ್ತಿದ್ದ, ಥೂ ನಿನಗೆ ಮಾನ-ಮಾರ್ಯಾದೇನೆ ಇಲ್ಲ ಅಂತ ಮತ್ತೊಮ್ಮೆ ಬೈಯುತ್ತಾ ನಕ್ಕರೆ, ನಗುತ್ತಾ ಒಂದು ದಮ್ಮೆಳೆದು ಟೀ ದುಡ್ಡು ಕೊಟ್ಟು, ಅಣ್ಣ ಬರಲೇ ನನ್ನ ಮಗಳ ಶಾಲೆ ಬಿಡುತ್ತೇ, ಶಾಲೆಗೆ ಬಿಡಬೇಕೆಂದು ಬೈಕ್ ಹತ್ತಿ ಅಣ್ಣಾ ಬರಲೇ ಅಂತ ಮತ್ತೊಮ್ಮೆ ಮುದ್ದು ಮುದ್ದಾಗಿ ನಗುತ್ತಾ ಹೊರಟೇ ಬಿಡುತ್ತಿದ್ದ.

ಇಂತಹ ಈಶ್ವರ್ ಮೇ 31ರ ಭಾನುವಾರ ತನ್ನ ಗೆಳೆಯರ ಜೊತೆ ಐಪಿಎಲ್ ನೋಡುತ್ತಾ ಆರ್‍ಸಿಬಿ ಗೆದ್ದಿದ್ದನ್ನು ಮನ ತುಂಬಿಕೊಂಡು ಬಂದು ಮನೆಯಲ್ಲಿ ಟಿವಿ ನೊಡುತ್ತಾ ಮಲಗಿದವನಿಗೆ ಅದ್ಯಾವಾಗ ಬೈನ್ ಸ್ಟ್ರೋಕ್ ಆಯಿತೋ ಗೊತ್ತಿಲ್ಲ, ಆತನ ಮಡದಿ ಎರಡು ಮೂರು ಸಲ ಎಬ್ಬಿಸಿದರೂ ಎದ್ದೇಳದೆ ಇರುವಾಗ, ಆತನ ಗೆಳೆಯರಿಬ್ಬರನ್ನು ಕರೆಸಿದಾಗ, ಈತ ಸ್ವಲ್ಪ ಸ್ವಲ್ಪ ಕಣ್ಣು ಬಿಡುತ್ತಿರುವುದನ್ನು ಕಂಡು, ಅಯ್ಯೋ ಎಲ್ಲೋ ಡ್ರಿಂಕ್ಸ್ ಸ್ವಲ್ಪ ಹೆಚ್ಚಾಗಿರಬೇಕು ಅಂತ ಹೋದರು, ಬೆಳಿಗ್ಗೆ ಮಗಳು ಶಾಲೆಗೆ ರೆಡಿಯಾದ ಮೇಲೆ ದಿನಾ ಅಪ್ಪನೇ ಬಿಡುತ್ತಿದ್ದರಿಂದ ಈಶ್ವರನನ್ನು ಎಬ್ಬಿಸಿದರೂ ಏಳಲಿಲ್ಲ, ಆಗ ಗೆಳೆಯರ ಸಹಾಯದಿಂದ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ತೆಗದುಕೊಂಡು ಹೋಗಿದ್ದಾರೆ.

ಬ್ರೈನ್ ಸ್ಟ್ರೋಕ್ ಆಗಿ ಬಹಳ ಹೊತ್ತಾಗಿದೆ, ಗೋಲ್ಡನ್ ಆವರ್ಸ್ ಮುಗಿದಿದೆ ನಮ್ಮಲ್ಲಿ ಆಗುವುದಿಲ್ಲ ಬೆಂಗಳೂರಿಗೆ ತಗೊಂಡೋಗಿ ಅಂದಿದ್ದಾರೆ, ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ತೆಗದುಕೊಂಡು ಹೋಗಿದ್ದಾರೆ, ಬೈನ್ ಸ್ಟ್ರೋಕ್ ಸಿವಿಯರ್ ಆಗಿರುವುದರಿಂದ ಬಿಪಿ ನಾರ್ಮಲ್ ಗೆ ಬರುವ ತನಕ ಆಪರೇಷನ್ ಸಾಧ್ಯವಿಲ್ಲ ಎಂದಿದ್ದಾರೆ, ಎರಡು ದಿನಗಳ ನಂತರ ಮತ್ತೇ ಸ್ಟ್ರೋಕ್ ಆಗಿದೆ, ಕ್ರಿಟಿಕಲ್ ಪೊಶಿಷನ್ ಇದ್ದರೂ ಜೀವ ಉಳಿಸಲು ವೈದ್ಯರ ತಂಡ ಸತತ 6ಗಂಟೆಗಳ ಕಾಲ ಕಠಿಣ ಶಸ್ರಚಿಕಿತ್ಸೆಯನ್ನು ಮಾಡಿದ್ದಾರೆ, ಆಪರೇಷನ್ ಸಕ್ಸಸ್ ಆಗಿದೆ ಆದರೆ ಎಡಭಾಗದ ಮೆದುಳು ಒಣಗಿದೆ ಅದು ಶೇಕಡ ಕಾಲು ಭಾಗದಷ್ಟಾದರೂ ರಕ್ತಚಲನೆ ಆಗಬೇಕು ಎಂದು ಹೇಳಿದರಂತೆ, ಒಂದಷ್ಟು ದಿನ ಐಸಿಯುನಲ್ಲಿಟ್ಟು ವಾರ್ಡ್‍ಗೆ ಸಹ ಶಿಪ್ಟ್ ಮಾಡಿದರು, ಗೆಳೆಯರು ಈಶ್ವರನ ಕೈ ಹಿಡಿದುಕೊಂಡರೆ ಕೈಯನ್ನು ಬಿಗಿದಪ್ಪಿ ಒತ್ತುತ್ತಿದ್ದನಂತೆ, ಇದರಿಂದ ಬದುಕಬಹುದು ಎಂಬುದು ಎಲ್ಲರ ಆಶಯವಾಗಿತ್ತು.

ಆದರೆ ಜೂನ್ 28ರ ರಾತ್ರಿ ಮತ್ತೊಮ್ಮೆ ಪ್ರಬಲ ಬ್ರೈನ್ ಸ್ಟ್ರೋಕ್ ಆಗಿ, ಬೈನ್ ಡೆಡ್ ಆಯಿತು, ವೈದ್ಯರ ಸತತ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ, ವೆಂಟಿಲೇಟರ್ ನಲ್ಲಿ ಮಾತ್ರ ಉಸಿರಾಟ ಆಡುತ್ತಿದ್ದ ಈಶ್ವರ್ ಸಂಬಂಧಿಕರು, ಪತ್ರಕರ್ತ ಗೆಳೆಯರೊಂದಿಗೆ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದು ಅಂಗಾಂಗ ದಾನ ಮಾಡುವುದಾದರೆ ಮಾಡಿ ಇಲ್ಲದಿದ್ದರೆ ತುಮಕೂರಿಗೆ ತಗೊಂಡು ಹೋಗಿ ಎಂದು ವೈದ್ಯರ ತಂಡ ಹೇಳಿತು.

ಪತ್ರಕರ್ತ ಗೆಳೆಯರು, ಅವರ ಕುಟುಂಬಸ್ಥರು ಈಶ್ವರನ್ನು ತುಮಕೂರು ಜನರಲ್ ಆಸ್ವತ್ರೆಗೆ ಕರೆ ತಂದರು, ಆತನ ಗೆಳೆಯರು, ಬಂಧುಗಳು, ಪತ್ರಕರ್ತರು ಸೇರಿದಂತೆ ನೂರಾರು ಜನ ಆತನನ್ನು ನೋಡಿ ಕಣ್ಣೀರು ಹಾಕಿದರು.

ಜೂನ್ 28ರ ರಾತ್ರಿ ಸುಮಾರು 8ಗಂಟೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿ ಈಶ್ವರನ ಸ್ಥಿತಿ ನೋಡಿ ಇನ್ನ ಕೆಲವೇ ಗಂಟೆಗಳಲ್ಲಿ ಆತ ನಮ್ಮನ್ನೆಲ್ಲಾ ಅಗಲಿ ಹೋಗಲಿದ್ದಾನೆ ಅಂತ ಅನ್ನಿಸಿತು, ಆತನ ಬೆನ್ನಿಗೆ ಹಗಲು ರಾತ್ರಿ ನಿಂತಿದ್ದ ಆತ ಕೆಲಸ ಮಾಡುತ್ತಿದ್ದ ತುಮಕೂರು ವಾರ್ತೆ ಸಂಪಾದಕರಾದ ಶ್ರೀವತ್ಸ ಅವರು ಕೆಲ ಪತ್ರಕರ್ತ ಗೆಳೆÉಯರೊಂದಿಗೆ ಕಟ್ಟೆಯ ಮೇಲೆ ಚಿಂತಕ್ರಾಂತರಾಗಿ ಕುಳಿತ್ತಿದ್ದರು, ಅವರ ಬಳಿ ಹೋಗಿ ಈಶ್ವರನನ್ನು ಕಳಿಸಲು ಎಲ್ಲಾ ತಯಾರಿ ಮಾಡಿಕೊಳ್ಳಿ ಅಂದೆ, ವೈದ್ಯರು ಹಾರ್ಟ್ ಬೀಟ್, ಪಲ್ಸ್ ರೇಟ್ ಮುಗಿಯುವ ತನಕ ಸಾವು ಘೋಷಿಸುವುದಿಲ್ಲ ಎಂದಿದ್ದಾರೆ ಅದ್ಹೇಗೆ ನೀವು ಈ ರೀತಿ ಹೇಳುತ್ತೀರ ಎಂದು ಕೇಳಿದರು.

ನಾನು ನಮ್ಮ ಅಣ್ಣ ಅಪಘಾತವಾಗಿ ನಿಮ್ಹಾನ್ಸ್ ನಲ್ಲಿದ್ದಾಗ ಇಂತಹ ಹಲವಾರು ಜನರು ಬ್ರೈನ್ ಡೆಡ್ ಆದಾಗ ಕೇವಲ ಐದಾರು ಗಂಟೆಯಲ್ಲಿ ಸಾವನ್ನಿಪ್ಪಿದನ್ನು ಕಂಡಿದ್ದರಿಂದ ಈ ರೀತಿ ಹೇಳಿದೆ, ನೋಡೋಣ ಎಂದು ಜನರಲ್ ಆಸ್ಪತ್ರೆಯ ನ್ಯೂರಾಲಾಜಿಸ್ಟ್ ಮತ್ತು ಈಶ್ವರ್ ನನ್ನು ಅಬ್ಸರ್ ವೇಷನ್ ಮಾಡುತ್ತಿದ್ದ ಡಾ|| ದರ್ಶನ್ ಅವರಿಗೆ ಎಲ್ಲರ ಸಮ್ಮುಖದಲ್ಲೇ ಪೋನ್ ಮಾಡಿ ಮಾತನಾಡಿದಾಗ, ಹಾರ್ಟ್ ಬೀಟ್, ಪಲ್ಸ್ ರೇಟ್ ನಿಲ್ಲುವತನಕ ಕುಟುಂಬದವರಾಗಿಲಿ, ವೈದ್ಯಾರಾಗಲಿ ಸಾವನ್ನು ಘೋಷಿಸುವಂತಿಲ್ಲ, ವೆಂಟಿಲೇಟರ್ ತೆಗೆದು ಸಾವಿಗೆ ದೂಡುವಂತಿಲ್ಲ, ಒಂದು ಜೀವವನ್ನು ತೆಗೆಯುವ ಹಕ್ಕು ಯಾರಿಗೂ ಇಲ್ಲ, ಹಾಗೆ ಜೀವ ತೆಗೆದರೆ ಅದು ಅಪರಾಧ(ಅಪೆನ್ಸ್) ಎಂದರು, ಎಲ್ಲರೂ ಮೌನಕ್ಕೆ ಜಾರಿದೆವು, ಬೆಳಿಗ್ಗೆ 10 ಗಂಟೆಗೆ ಬರುವುದು ಎಂದು ನಿರ್ಧಾರ ಮಾಡಿ ಹೊರಟೆವು.

ಬೆಳಿಗ್ಗೆ 10 ಗಂಟೆಗೆ ಆಸ್ಪತ್ರೆಯ ಬಳಿಗೆ ಹೋದಾಗ ತುಮಕೂರು ವಾರ್ತೆ ಸಂಪಾದಕರಾದ ಶ್ರೀವತ್ಸ, ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷರಾದ ಯೋಗೀಶ್, ಪ್ರಜಾಕಹಳೆ ಸಂಪಾದಕ ರಘು, ನಾನು ಈಶ್ವರ್ ಅವರಿರುವ ಐಸಿಯು ವಾರ್ಡ್ ಕಡೆ ಹೊರಟಾಗ ಡಾ||ದರ್ಶನ್ ಅವರು ಎದುರಿಗೆ ಸಿಕ್ಕಿ ಹಾರ್ಟ್‍ಬೀಟ್ ನಿಂತಿದೆ, ಪಲ್ಸ್ ರೇಟ್ ಇದೆ ಇನ್ನೊಂದು ಹದಿನೈದು ನಿಮಿಷ ಆ ನಂತರ ನೋಡೋಣ ಅಂತ ಹೇಳಿದರು, ಬನ್ನಿ ನೋಡೋಣ ಅಂತ ಐಸಿಯುಗೆ ಹೋದಾಗ ಪಲ್ಸ್ ರೇಟ್ 20 ತೋರಿಸುತ್ತಿತ್ತು, ವೈದ್ಯರು ಇನ್ನ ಹತ್ತಾರು ನಿಮಿಷ ಅಂದರು, ಬಾಗಿಲಲ್ಲಿ ಕಾಯುತ್ತಾ ನಿಂತೆವು, ನನಗೆ ಹತ್ತು ನಿಮಿಷದ ನಂತರ ಕಾಯಲು ಆಗದೆ ಒಳ ಹೋದೆ ಪಲ್ಸ್ ರೇಟ್ ಸೊನ್ನೆಗೆ ಬಂದಿತ್ತು, ಅಲ್ಲಿದ್ದ ವೈದ್ಯರನ್ನು ಕೇಳಿದಾಗ ಎಲ್ಲಾ ಮುಗಿಯಿತು ಇನ್ನ ತಗೊಂಡು ಹೋಗಿ ಮುಂದಿನ ಕಾರ್ಯಮಾಡಬಹುದು ಎಂದರು.

ಹೊರ ಬಂದವನೇ ಶ್ರೀವತ್ಸ, ಅಧ್ಯಕ್ಷರಿಗೆ ಹೇಳಿದ ತಕ್ಷಣ ಐಸಿಯು ಒಳ ಹೋಗಿ ಖಚಿತ ಪಡಿಸಿಕೊಂಡು ಸುದ್ದಿಯನ್ನು ಎಲ್ಲರಿಗೂ ಮುಟ್ಟಿಸಿದರು, ಅಲ್ಲಿಗೆ ಈಶ್ವರ್ ನಮ್ಮ ಪಾಲಿಗೆ, ಕುಟುಂಬದ ಪಾಲಿಗೆ ಇಲ್ಲವಾದರು.

ಅಂಗಾಂಗ ದಾನ ಮಾಡಲು ಆ ವೇಳೆಗೆ ಸಮಯ ಮಿರಿದ್ದರಿಂದ ಕೇವಲ ಕಣ್ಣುಗಳನ್ನು ದಾನ ಮಾಡಲಾಯಿತು, ಆಸ್ಪತ್ರೆಯ ಪ್ರೋಷಸ್ ಮುಗಿಯುವ ವೇಳೆಗೆ ಓಡಿ ಹೋಗಿ ಹಾರ ತಂದೆ, ಈಶ್ವರನನ್ನು ಹೊರ ತಂದ ಕೂಡಲೇ ನಾನೇ ಮೊದಲ ಹಾರ ಹಾಕಿದೆ, ಆ ಹಾರ ಆತ ಮಣ್ಣಿಗೆ ಮರಳುವ ತನಕ ಆತನ ಕೊರಳಲ್ಲಿತ್ತು, ಅಲ್ಲಿಗೆ ನನ್ನ ಅವನ ಸ್ನೇಹಕ್ಕೆ ತೆರೆ ಬಿತ್ತು.

ಈಶ್ವರನ ದೇಹವನ್ನು ತುಮಕೂರು ಪತ್ರಿಕಾ ಭವನದಲ್ಲಿ ಅಂತಿಮ ದರ್ಶನಕ್ಕೆ ಇಟ್ಟಾಗ ಗೊಳೋ ಎಂದು ಅತ್ತು ಈಶ್ವರನಿಗೆ ಕೊನೆಯ ಬಾರಿಗೆ ನನಗೆ ಏನೇನು ಬೈಗುಳ ಬರುತ್ತದೋ ಅದೆನ್ನೆಲ್ಲಾ ಬೈಯ್ದು ಕಣ್ಣಿರಿಟೆ, ಆತನ ಸಹಪಾಟಿಗಳಿಗೂ ಬೈದೆ, ನೂರಾರು ಜನ ಬಂದು ಹಾರ ಹಾಕಿದರು, ಶಾಸಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಗೆಳೆಯರು, ಬಂಧುಗಳು, ಎಲ್ಲಾರೂ ಹಾರಹಾಕಿದರೂ ನಾನು ಹಾಕಿದ ಹಾರ ಈಶ್ವರನ ಕೊರಳಲ್ಲಿ ಹಾಗೆ ಇತ್ತು, ಆತನನ್ನು ಅಂಭ್ಯುಲೆನ್ಸ್ ಗೆ ಇಡುವಾಗ ಮತ್ತೊಮ್ಮೆ ದುಕ್ಕಳಿಸಿ ಅಂತೆ, ಈಶ್ವರ್ ಶವವಾಗಿ ಮಣ್ಣಿನಲ್ಲಿ ಮಣ್ಣಾಗಲು ಹೊರಟೇ ಬಿಟ್ಟ.

ನನ್ನಂತಹವನಿಗೆ, ಅವರ ಕುಟುಂಬಕ್ಕೆ, ಸ್ನೇಹಿತರಿಗೆ ಎದೆಯ ನೋವು, ಭಾರ ಬಿಟ್ಟು ಹೋಗಿ ಬಿಟ್ಟ, 45ನೇ ವರ್ಷಕ್ಕೇನೆ ಆತನನ್ನು ಯಾರು ‘ದೂರ ತೀರಕೆ ಯಾವ ಮೋಹನ ಮುರಳಿ ಕರೆಯಿತೋ’ ಗೊತ್ತಿಲ್ಲ, ಆತನೇನೋ ಎಲ್ಲವ ಬಿಟ್ಟು ಹೊರಟ ಉಳಿದವರ ಪಾಡು ಏನು?

ಕೊನೆಯದಾಗಿ ನನ್ನಲ್ಲಿ ಅನ್ನಿಸಿದಿಷ್ಟೇ “ಚಟಗಳನ್ನು ಕಲಿಯಿರಿ, ಕಲಿತ ಮೇಲೆ ಬಿಡಿ ಅಂತ ಹೇಳುವುದಕ್ಕಿಂತ, ಯಾವುದೇ ಚಟವನ್ನು ನಮ್ಮ ಅಳತೆ ಮಿರಿ ಚಟ್ಟ ಗ್ಯಾರಂಟಿ” ಅದರ ಬದಲು ಯಾವುದೇ ಚಟವನ್ನು ಉಪ್ಪಿನ ಕಾಯಿಯಂತೆ ಊಟದಲ್ಲಿ ಬಳಸುವಂತೆ ಬಳಸಿದರೆ ನೂರು ವರ್ಷ ಆಯಸ್ಸು.

ಈಗ ನನ್ನಂತೆಯೇ ಪತ್ರಿಕಾ ಗೆಳೆಯರು, ಆತನ ಸ್ನೇಹಿತರು, ಕುಟುಂಬ, ಬಂಧು-ಬಳಗ ದುಃಖದಲ್ಲಿದೆ, ತಲೆ ಖಾಲಿಯಾಗಿದೆ, ನಮಗೂ ಯಾವಾಗ ಸಾವು ಬಂದು ನಮ್ಮ ಕೊರಳಿಗೆ ಹಾರ ಬೀಳುತ್ತದೋ ಗೊತ್ತಿಲ್ಲ, ಈ ಹಿನ್ನಲೆಯಲ್ಲಿ ಏನಾದರೂ ದುಶ್ಚಟಗಳಿದ್ದರೆ ಕಡಿಮೆ ಮಾಡೋಣ.

ಒಬ್ಬ ಯುವ ಪ್ರತಿಭಾವಂತ, ಬುದ್ದಿವಂತ, ಪತ್ರಕರ್ತ ನನ್ನು ಕಳೆದುಕೊಂಡಿದ್ದೇವೆ, ಅವರ ಕುಟುಂಬಕ್ಕೆ ಆ ಶೂನ್ಯವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ಈಗ ಆ ಕುಟುಂಬಕ್ಕೆ ಎಷ್ಟೇ ಏನೇ ಮಾಡಿದರೂ ಆ ವಸ್ತುವನ್ನು, ಒಂದು ಮಗುವಿಗೆ ತಂದೆಯನ್ನು ತಂದು ಕೊಡಲು ಯಾರಿಂದಲೂ ಸಾಧ್ಯವಿಲ್ಲ.
ಈಗಲಾದರೂ ಎಲ್ಲಾ ಪತ್ರಕತ್ರರು ಯಾಕೆ ಹೀಗಾಯಿತು ಅಂತ ಆತ್ಮಾವಲೋಕನ ಮಾಡಿಕೊಳ್ಳದಿದ್ದರೆ, ಬೆಂಕಿ ಬಿದ್ದ ಮನೆಯಲ್ಲಿ ಗಳ ಇರಿದರು ಅನ್ನುವಂತಾಗುತ್ತದೆ, ನನ್ನೆಲ್ಲಾ ಪತ್ರಿಕಾ ಮಿತ್ರರೇ ಈಗಲಾದರೂ ದುಶ್ಚಗಳಿದ್ದರೆ ಕಡಿಮೆ ಮಾಡಿ, ಆರೋಗ್ಯದ ಕಡೆ ಗಮನ ಹರಿಸಿ, ಮನೆ, ಅಪ್ಪ, ಅಮ್ಮ, ಮಡದಿ, ಮಕ್ಕಳು, ಸಹೋದರರೊಂದಿಗೆ ಸ್ವಲ್ಪ ಕಾಲ ಕೊಟ್ಟು ನಗುತ್ತಿರಿ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ.

ಈಶ್ವರನಿಗೆ ಯಾವ ಪತ್ರಕರ್ತರಿಗೂ ಸಿಗದ ಧನ ಸಹಾಯ ಸಿಕ್ಕಿತು, ಆದರೆ ಬರಗೂರು ರಾಮಚಂದ್ರಪ್ಪನವರು ಹೇಳುವಂತೆ ಸರ್ವಾಧಿಕಾರಿ ವಿಧಿ, ಕ್ರೂರವಿಧಿ ಈಶ್ವರನ್ನು ಹೊತ್ತೋಯಿತು. ಆ ವಿಧಿಗೆ ಧಿಕ್ಕಾರ.
-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *