ತುಮಕೂರು : ಕಳ್ಳಂಬೆಳ್ಳ ಸಮೀಪ ನಾಡಬಾಂಬ್ ಸ್ಪೋಟಿಸಿಕೊಂಡು ಸುಟ್ಟು ಕರಕಲಾದ ಭಗ್ನ ಪ್ರೇಮಿಗೆ ಅನಧಿಕೃತವಾಗಿ ನಾಡಬಾಂಬ್ ತಯಾರಿಸಿ ಒದಗಿಸಿದ್ದ ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದರು.
ಅವರಿಂದ ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 27ರಂದು ಕಳ್ಳಂಬೆಳ್ಳ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದ ನಾಡಬಾಂಬ್ ಬ್ಲಾಸ್ಟ್ ನಲ್ಲಿ ಪ್ರೇಮಿಯೊಬ್ಬ ಸುಟ್ಟು ಭಸ್ಮವಾದ ಸ್ಥಳಕ್ಕೆ ಶಿರಾ ವಿಭಾಗದ ಡಿ.ವೈ.ಎಸ್.ಪಿ. ರವರು ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿ ಎನ್.ಹೆಚ್48 ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಬಿದ್ದಿದ್ದ ಕಚ್ಛಾ ಬಾಂಬ್ ನಿಂದ ಯಾವುದೇ ಅನಾಹುತವಾಗದಂತೆ ಸಂರಕ್ಷಿಸಿರುತ್ತಾರೆ, ಕೃತ್ಯ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಕೆ.ವಿ.ಅಶೋಕ್, ಐ.ಪಿ.ಎಸ್.ರವರು ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಸಿ.ಗೋಪಾಲ್ ಕೃತ್ಯ ನಡೆದ ಸ್ಥಳವನ್ನು ಪರಿಶೀಲಿಸಿ ಕೃತ್ಯ ನಡೆದ ಸ್ಥಳದಲ್ಲಿದ್ದ ಕಚ್ಛಾ ಬಾಂಬ್ ಅನ್ನು ಶಿರಾ ನಗರದ ಇಂಡಸ್ಟ್ರೀಯಲ್ ಏರಿಯಾದ ನಿರ್ಜನ ಪ್ರದೇಶದಲ್ಲಿ ಸ್ಪೋಟಿಸಿ ಅದರ ಅವಶೇಷಗಳನ್ನು ಸಂಗ್ರಹಿಸಿ ಎಫ್.ಎಸ್.ಎಲ್ ಗೆ ಕಳುಹಿಸಿ, ಮಾಹಿತಿ ಸಂಗ್ರಹಿಲಾಯಿತು ಎಂದು ಎಸ್ಪಿ ಕೆ.ವಿ.ಆಶೋಕ ತಿಳಿಸಿದರು.
ಸದರಿ ತಂಡಗಳು ಆರೋಪಿ ನಾಗೇಂದ್ರನ ಸ್ವಂತ ಊರಾದ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕ್ ಹೆಬ್ಬೂಲ್ ರಾಜಾನಗುಳಿ ಗ್ರಾಮದಲ್ಲಿರುವ ಮನೆಯನ್ನು ಮತ್ತು ಪಿರ್ಯಾದಿ ರಮ್ಯಾ ರವರ ಸ್ವಂತ ಗ್ರಾಮವಾದ ಅಗಸೂರು ಗ್ರಾಮಕ್ಕೆ ಭೇಟಿ ನೀಡಿರುತ್ತಾರೆ. ಹಾಗೆಯೇ ಆರೋಪಿ ನಾಗೇಂದ್ರ ಬೆಂಗಳೂರಿನಲ್ಲಿ ವಾಸವಾಗಿದ್ದ ಪಿ.ಜಿ.ಸೆಂಟರ್ ಬಳಿ ಮತ್ತು ಪಿರ್ಯಾದಿ ವಾಸವಾಗಿದ್ದ ಸಿದ್ದಾಪುರ ಸ್ಥಳಗಳಲ್ಲಿ ಆರೋಪಿ ನಾಗೇಂದ್ರ ಓಡಾಡಿದ್ದ ಮಾಹಿತಿ ಸಂಗ್ರಹಿಸಿ, ಸ್ಥಳೀಯ ಬಾತ್ಮೀದಾರರಿಂದ ಮತ್ತು ವೈಜ್ಞಾನಿಕ ವಿಧಾನದಿಂದ ತನಿಖೆ ಕೈಗೊಂಡು ಆರೋಪಿ ನಾಗೇಂದ್ರನು ಹೊನ್ನಾವರ ತಾಲ್ಲೂಕ್ ಚಂದಾವರ ಗ್ರಾಮದ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್, (64) ಎಂಬುವನ ಬಳಿ ಕಚ್ಚಾ ಬಾಂಬ್ ಖರೀದಿಸಿರುವುದನ್ನು ಪತ್ತೆ ಮಾಡಿರುತ್ತಾರೆ ಎಂದು ತಿಳಿಸಿದರು.
ಜೂನ್ 29ರಂದು ತಡರಾತ್ರಿ ತುಮಕೂರಿನ ವಿಶೇಷ ತನಿಖಾ ತಂಡ ಮತ್ತು ಉತ್ತರ ಕನ್ನಡ ಜಿಲ್ಲೆಯ ತನಿಖಾ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು ಈ ಸಮಯದಲ್ಲಿ ಜಾರ್ಜ ನಿಕ್ಲೋವ್ ಫರ್ನಾಂಡೀಸ್ ಆರೋಪಿ ನಾಗೇಂದ್ರನಿಗೆ ಅಲ್ಲದೇ ಸ್ಥಳೀಯವಾಗಿ ಸಂದೀಪ್ ಗೌಡ , ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ರವರುಗಳಿಗೂ ಸಹ ಕಚ್ಛಾ ಬಾಂಬ್ ಗಳನ್ನು ಕೊಟ್ಟಿರುವುದು ತನಿಖೆಯಿಂದ ಪತ್ತೆಯಾಗಿದೆ, ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ ಎಂದು ತಿಳಿಸಿದರು.
ಆರೋಪಿ ಜಾರ್ಜ ನಿಕ್ಲೋವ್ ಫರ್ನಾಂಡೀಸ್ ರವರನ್ನು ವಿಚಾರಣೆ ಮಾಡುವ ಸಮಯದಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿದ್ದರಿಂದ ಅವರನ್ನು ಅಂಕೋಲಾ ಪೊಲೀಸರು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಕಾರಾವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಆರೋಪಿ ಜಾರ್ಜ ನಿಕ್ಲೋವ್ ಫರ್ನಾಂಡೀಸ್ ಸ್ಥಳೀಯವಾಗಿ ಮೀನುಗಾರಿಕೆ ಉದ್ದೇಶಕ್ಕಾಗಿ ಕಚ್ಛಾ ಬಾಂಬ್ ಅನ್ನು ತಯಾರು ಮಾಡಿ ಮಾರಾಟ ಮಾಡಿರುವುದಾಗಿ ತಿಳಿದು ಬಂದಿರುತ್ತೆ. ಈತನು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುವುದು ಎಂದರು.
ಅಂತರ ರಾಜ್ಯ ಖಧೀಮನ ಬಂಧನ.
ಜೂನ್ 27ರಂದು ರಂದು ಮದ್ಯ ರಾತ್ರಿ ಸುಮಾರು 2-30 ಗಂಟೆಯ ಸಮಯದಲ್ಲಿ ಆದರ್ಶ
ನಗರದ ವಾಸಿ ವಸಂತಕುಮಾರ್ ಬಿನ್ ಗಂಗಾಧರಯ್ಯ ಎಂಬುವರ ಮನೆಯಲ್ಲಿ ಪಿರ್ಯಾದಿಯ ತಮ್ಮ ಮೋಹನ್ ಕುಮಾರ್ & ಇವರ ಹೆಂಡತಿ ನಯನಾ ರವರು ಮನೆಯ ಮೇಲ್ಭಾಗದ ಒಂದು ರೂಮಿನಲ್ಲಿ ಮಲಗಿದ್ದು, ಮಲಗುವ ಸಮಯದಲ್ಲಿ ನಯನಾರವರು ತನ್ನ ಕೊರಳಲ್ಲಿದ್ದ ಸುಮಾರು 50 ಗ್ರಾಂ ಚಿನ್ನದ ಕೊರಳ ಮಾಂಗಲ್ಯ ಸರವನ್ನು ರೂಮಿನ ಮಿರರ್ ಕಬೋರ್ಡನ ಮೇಲೆ ಇಟ್ಟಿದ್ದು, ಮಲಗಿದ್ದ ಸಮಯದಲ್ಲಿ ಯಾರೋ ಅಪರಿಚಿತ ಕಳ್ಳ ಮನೆಯ ಮೇಲ್ಭಾಗದಿಂದ ಬಂದು ಅಕ್ರಮವಾಗಿ ಮನೆ ಒಳಗಡೆ ಪ್ರವೇಶಿಸಿ, ಸದರಿ ಮಾಂಗಲ್ಯದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆಂತಾ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅರೋಪಿ ಯನ್ನು ತಮಿಳುನಾಡು ರಾಜ್ಯದಲ್ಲಿ ದಸ್ತಗಿರಿ ಮಾಡಿ ಆರೋಪಿ ಕಡೆಯಿಂದ ಪಿರ್ಯಾದಿಯವರ ವಾಸದ ಮನೆಯಲ್ಲಿ ಕಳವು ಮಾಡಿದ್ದ ಸುಮಾರು 40 ಗ್ರಾಂ ಚಿನ್ನದ ಸರವನ್ನು ಪ್ರಕರಣದಲ್ಲಿ ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ ಕಳ್ಳರ ಬಂಧನ
ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಅಂತರ್ ಜಿಲ್ಲಾ ಕುಖ್ಯಾತ ಕಳ್ಳರ ತಂಡವನ್ನು ತುರುವೇಕೆರೆ ಪೊಲೀಸರು ಬಂಧಿಸಿ, 22 ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ತಿಳಿಸಿದರು.
ತುಮಕೂರು ನಗರದಲ್ಲಿ ಬುಧವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 19ರಂದು ರಾತ್ರಿ ಸುಮಾರು 8.45ರ ವೇಳೆಗೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜೋಡುಗಟ್ಟೆ ಗ್ರಾಮದ ಸಮೀಪ ಬಸ್ ನಿಲ್ದಾಣದ ಬಳಿ 5-6 ಮಂದಿ ದರೋಡೆಗೆ ಸಿದ್ಧತೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಖಾರದ ಪುಡಿ, ಕಬ್ಬಿಣದ ಚಾಕು, ಲಾಂಗು ಸೇರಿದಂತೆ ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ರೂಪಿಸುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು ಎಂದು ವಿವರಿಸಿದರು.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ತುರುವೇಕೆರೆ, ದಂಡಿನಶಿವರ, ಕುಣಿಗಲ್, ಅಮೃತೂರು, ಮಿಡಿಗೇಶಿ, ತಿಪಟೂರು ಗ್ರಾಮಾಂತರ, ಕೊಡಿಗೇನಹಳ್ಳಿ, ಚಿಕ್ಕನಾಯಕನಹಳ್ಳಿ, ಕೆ.ಬಿ. ಕ್ರಾಸ್, ಶಿರಾ, ಸಿ.ಎಸ್.ಪುರ, ಕೂದುರು ಹಾಗೂ ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ರಾತ್ರಿ ವೇಳೆ ಬೀಗ ಮುರಿದು ದೇವರ ಚಿನ್ನದ ತಾಳಿ, ಚಿನ್ನ-ಬೆಳ್ಳಿ ಆಭರಣಗಳು ಹಾಗೂ ಹುಂಡಿ ಹಣ ಕಳವು ಮಾಡಿದ್ದರು ಎಂದು ತಿಳಿಸಿದರು.