ತುಮಕೂರು : 2026 ಜೂನ್ 30 ರಂದು ರಾಜ್ಯಾದ್ಯಂತ ಶುರುವಾಗಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕಾರ್ಯಕ್ಕೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರ ಗಾಂಧಿನಗರದಲ್ಲಿರುವ ಮನೆಗೆ ತುಮಕೂರು ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭ ಕಲ್ಯಾಣ್ ಹಾಗೂ ಅಧಿಕಾರಿಗಲ ತಂಡದೊಂದಿಗೆ ಭೇಟಿ ನೀಡಿ, ಎನ್ಯೂಮರೇಷನ್ ಫಾರಂ ವಿತರಿಸಿ ಎಸ್.ಐ.ಆರ್ ಕಾರ್ಯಕ್ಕೆ ಚಾಲನೆ ನೀಡಿದರು.
2026 ಜೂನ್ 30 ರಿಂದ ಜುಲೈ 29ರವರೆಗೆ ಎಸ್.ಐ.ಆರ್ ಕಾರ್ಯದ ಪ್ರಯುಕ್ತ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗಳಿಗೆ ಭೇಟಿ ನೀಡಿ, ಎನ್ಯೂಮರೇಷನ್ ಫಾರಂ ವಿತರಿಸಿ, ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ಬೂತ್ ಮಟ್ಟದ ಅಧಿಕಾರಿಗಳ ಬಳಿ ಇರುವ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ, ನಮೂನೆ-6ನ್ನು ಭರ್ತಿ ಮಾಡಿ, ಘೋಷಣಾ ಫಾರಂ ಜೊತೆಗೆ ಬೂತ್ ಮಟ್ಟದ ಅಧಿಕಾರಿಗೆ ಸಲ್ಲಿಸುವುದರ ಮೂಲಕ ಯಾವುದೇ ಭಾರತೀಯ ನಾಗರೀಕರು ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯಿಂದ ವಂಚಿತರಾಗಬಾರದೆಂದು ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಸಾರ್ವಜನಿಕರಿಗೆ ಮನವಿ ಮಾಡಿದರು.
ತುಮಕೂರು ನಗರದಲ್ಲಿ ಎಸ್.ಐ.ಆರ್ ಪ್ರಕ್ರಿಯೆಗೆಂದು ಈಗಾಗಲೇ ತುಮಕೂರು ಮಹಾನಗರಪಾಲಿಕೆ ಕಛೆರಿಯಲ್ಲಿಯು ಸೇರಿದಂತೆ ನಗರದ 25 ಕಡೆಗಳಲ್ಲಿ ಆರಂಭವಾಗಿದ್ದು, ಜನರಿಗೆ ಅರ್ಜಿ ತುಂಬುವ ಬಗ್ಗೆ ಸರಿಯಾದ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗೆ ತುಮಕೂರು ನಗರ ಶಾಸಕರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತುಮಕೂರು ಮಹಾನಗರಪಾಲಿಕೆ ಆಯುಕ್ತರಾದ ಶುಭ.ಬಿ, ಉಪ-ಆಯುಕ್ತರಾದ ಮನುಕುಮಾರ್ ಹಾಗೂ ಮುಂತಾದ ಅಧಿಕಾರಿಗಳು ಪಾಲ್ಗೊಂಡಿದ್ದರು.