ಪತ್ರಕರ್ತ ಈಶ್ವರ್ ನಿಧನ : ಪತ್ರಕರ್ತರ ಭಾವುಕ ವಿದಾಯ

ತುಮಕೂರು: ಹಿರಿಯ ಪತ್ರಕರ್ತ, ತುಮಕೂರು ವಾರ್ತೆ ಪತ್ರಿಕೆಯ ವರದಿಗಾರ ಎಂ. ಈಶ್ವರ್ ಮಂಗಳವಾರ ಬೆಳಿಗ್ಗೆ ನಿಧನರಾದರು. ಇವರಿಗೆ 45 ವರ್ಷ ವಯಸ್ಸಾಗಿತ್ತು. ಇವರು ಪತ್ನಿ ಅನಿತಾ, ಪುತ್ರಿ ಆಧ್ಯಶ್ರೀ ಹಾಗೂ ಅಪಾರ ಬಂಧುಬಗಳವನ್ನು ಅಗಲಿದ್ದಾರೆ.

ಮೆದುಳಿನ ಪಾಶ್ರ್ವವಾಯು ಸಮಸ್ಯೆಯಿಂದಾಗಿ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಈಶ್ವರ್ ಅವರ ಸ್ವಗ್ರಾಮ ಆಂಧ್ರಪ್ರದೇಶದ ಹೇಮಾವತಿ ಬಳಿಯ ಕೆಂಕೆರೆಯಲ್ಲಿ ಸಂಜೆ ಅಂತ್ಯಸಂಸ್ಕಾರ ನೆರವೇರಿತು.

ನಗರದ ಪತ್ರಿಕಾ ಭವನ ಬಳಿ ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವಶರೀರ ಇಡಲಾಗಿತ್ತು. ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್. ಯೋಗೇಶ್, ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್, ಖಜಾಂಚಿ ಹಾರೋಗೆರೆ ಸತೀಶ್ ಹಾಗೂ ಪದಾಧಿಕಾರಿಗಳು, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಡಾ.ಎಸ್. ನಾಗಣ್ಣ, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಆರ್. ಕಾಮರಾಜ್, ಚಿ.ನಿ. ಪುರುಷೋತ್ತಮ್, ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಕರುಣಾಕರ್, ಪ್ರಧಾನ ಕಾರ್ಯದರ್ಶಿ ಮಂಜುನಾಥಗೌಡ, ತುಮಕೂರು ಪ್ರೆಸ್ ಕ್ಲಬ್ ಅಧ್ಯಕ್ಷ ಶಶಿಧರ್ ದೋಣಿಹಕ್ಲು, ಮೈತ್ರಿನ್ಯೂಸ್ ಸಂಪಾದಕ ವೆಂಕಟಾಚಲ.ಹೆಚ್.ವಿ. ಸೇರಿದಂತೆ ಜಿಲ್ಲೆಯ ಹಲವು ಪತ್ರಕರ್ತರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ನೇತ್ರ ದಾನ:

ಈಶ್ವರ್ ಅವರ ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದರು. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬೆರೆಯುತ್ತಿದ್ದ ಗೆಳೆಯ ಈಶ್ವರ್ ಅಗಲಿಕೆಗೆ ಪತ್ರಕರ್ತರು ಶೋಕ ವ್ಯಕ್ತಪಡಿಸಿದರು.

ಸಂತಾಪ:
ಪತ್ರಕರ್ತ ಈಶ್ವರ್ ನಿಧನಕ್ಕೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ. ಈಶ್ವರ್ ಅವರು ಪತ್ರಕರ್ತರಾಗಿ ಜಿಲ್ಲೆಯ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಗಂಗಹನುಮಯ್ಯ, ಎಂ.ಡಿ. ಲಕ್ಷ್ಮೀನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಜಿಲ್ಲಾ ವಕ್ತಾರ ಜೆ. ಜಗದೀಶ್ ಮೊದಲಾದವರು ಈಶ್ವರ್ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *