ತುಮಕೂರು : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (85) ಅವರು ನಿಧನರಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ, ಜುಲೈ 15ರಂದು ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ಸಂಜೆ ನಿಧನ ಹೊಂದಿದರು.
ದೇವೇಗೌಡರ ದೀರ್ಘ ಹಾಗೂ ಸುದೀರ್ಘ ರಾಜಕೀಯ ಪಯಣದಲ್ಲಿ ಸದಾ ನೆರಳಾಗಿ, ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿದ್ದ ಗಟ್ಟಿಗಿತ್ತಿ ಚನ್ನಮ್ಮ ಅವರ ಅಗಲಿಕೆ ಗೌಡರ ಕುಟುಂಬಕ್ಕೆ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿ ಮೂಲದ ಚನ್ನಮ್ಮ ಅವರು 1954ರ ಮೇ 25ರಂದು ಹೆಚ್.ಡಿ. ದೇವೇಗೌಡರ ಜೊತೆ ವಿವಾಹ ಮಹೋತ್ಸವದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದಿನಿಂದ ಇಂದಿನವರೆಗೂ ದೇವೇಗೌಡರು ರಾಜಕೀಯವಾಗಿ ಸದಾ ಬ್ಯುಸಿಯಾಗಿದ್ದರೂ, ಕುಟುಂಬದ ಯಾವೊಂದು ಹೊರೆಯೂ ಅವರ ಮೇಲೆ ಬೀಳದಂತೆ ಇಡೀ ಸಂಸಾರವನ್ನು ಚನ್ನಮ್ಮ ಅವರೇ ಮುನ್ನಡೆಸಿದ್ದರು.
ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಹೆಚ್.ಡಿ. ಕುಮಾರಸ್ವಾಮಿ ಎಂಬ ನಾಲ್ವರು ಗಂಡು ಮಕ್ಕಳು ಹಾಗೂ ಶೈಲಜಾ ಮತ್ತು ಅನಸೂಯಾ ಎಂಬ ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ಆರು ಜನ ಮಕ್ಕಳನ್ನು ಅತ್ಯಂತ ಶಿಸ್ತಿನಿಂದ ಬೆಳೆಸಿ, ಅವರಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಚನ್ನಮ್ಮ ಅವರ ಪಾತ್ರ ಅನನ್ಯವಾಗಿತ್ತು. ರಾಜಕೀಯವಾಗಿ ದೊಡ್ಡ ಎತ್ತರಕ್ಕೆ ಬೆಳೆದ ದೇವೇಗೌಡರ ಯಶಸ್ಸಿನ ಹಿಂದೆ ಚನ್ನಮ್ಮ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮ ಅಡಗಿದೆ. ಮೃತರ ನಿಧನಕ್ಕೆ ನಾಡಿನ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ದೇವೇಗೌಡರು ರಾಜಕೀಯದ ಏರಿಳಿತಗಳಲ್ಲಿ, ಸೋಲು-ಗೆಲುವುಗಳ ಸವಾಲುಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾಗ, ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡವರು ಚೆನ್ನಮ್ಮನವರು. ಗೌಡರು ಹಳ್ಳಿ ಹಳ್ಳಿಗಳಲ್ಲಿ ತಿರುಗುತ್ತಾ, ಜನಸೇವೆ ಮತ್ತು ಪಕ್ಷ ಸಂಘಟನೆಯಲ್ಲಿ ಮುಳುಗಿದ್ದಾಗ, ಮನೆಯ ವ್ಯವಸ್ಥೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬದ ಸ್ಥಿರತೆಯನ್ನು ಕಾಪಾಡುವ ಮೂಲಕ ಅವರು ಗೌಡರಿಗೆ ಬಲವಾದ ಬೆನ್ನೆಲುಬಾಗಿ ನಿಂತರು.
ದೇವೇಗೌಡರೇ ಸ್ವತಃ ಹಲವು ವೇದಿಕೆಗಳಲ್ಲಿ, “ನನ್ನ ರಾಜಕೀಯ ಜೀವನದ ಏಳಿಗೆಯಲ್ಲಿ ಚೆನ್ನಮ್ಮನ ಪಾತ್ರ ಅತಿ ದೊಡ್ಡದು. ನಾನು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ಬೆಳೆಯಲು ಅವರು ಕೊಟ್ಟ ಬೆಂಬಲ ಮತ್ತು ಮನೆ ನಡೆಸಿದ ರೀತಿ ಕಾರಣ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕಠಿಣ ಸಂದರ್ಭಗಳಲ್ಲಿ, ರಾಜಕೀಯ ಪಿತೂರಿಗಳು ನಡೆದಾಗಲೂ ದೇವೇಗೌಡರಿಗೆ ಮಾನಸಿಕ ಧೈರ್ಯ ತುಂಬುವ ಕೆಲಸವನ್ನು ಚೆನ್ನಮ್ಮನವರು ಮಾಡಿಕೊಂಡು ಬಂದಿದ್ದರು.
ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಪ್ರಚಾರದ ಹಂಗಿಲ್ಲದ, ಸರಳ ಜೀವನ ನಡೆಸುವ ಮೂಲಕ ರಾಜಕೀಯ ಕುಟುಂಬಗಳಿಗೆ ಅವರು ಮಾದರಿಯಾಗಿದ್ದಾರೆ. ಪರಿವಾರದ ಒಗ್ಗಟ್ಟು: ರಾಜಕೀಯ ಒತ್ತಡಗಳ ನಡುವೆಯೂ ಕುಟುಂಬವನ್ನು ಒಗ್ಗೂಡಿಸಿ ಕೊಂಡು ಹೋಗುವ ಕಲೆ ಚೆನ್ನಮ್ಮನವರದ್ದು. ಇದು ಇಂದಿನ ಪೀಳಿಗೆಯ ರಾಜಕಾರಣಿಗಳಿಗೆ ಕುಟುಂಬದ ಮೌಲ್ಯಗಳನ್ನು ಕಲಿಸುತ್ತದೆ.
ಒಬ್ಬ ನಾಯಕನ ಯಶಸ್ಸಿನ ಹಿಂದೆ ಕೇವಲ ಆತನ ವ್ಯಕ್ತಿತ್ವ ಮಾತ್ರವಲ್ಲ, ಆತನಿಗೆ ಆಧಾರಸ್ತಂಭವಾಗಿ ನಿಲ್ಲುವ ಸಹಧರ್ಮಿಣಿಯ ಪಾತ್ರ ಎಷ್ಟು ನಿರ್ಣಾಯಕ ಎಂಬುದನ್ನು ಇವರ ಬದುಕು ಸಾಬೀತುಪಡಿಸುತ್ತದೆ. ಹಿಂದೆ ದೇವೇಗೌಡರು ಪ್ರಧಾನಿಯಾದಾಗ ಅಥವಾ ರಾಜ್ಯ ರಾಜಕಾರಣದಲ್ಲಿ ಬಿಕ್ಕಟ್ಟುಗಳು ಎದುರಾದಾಗ, ಚೆನ್ನಮ್ಮನವರು ಮನೆಯನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದರು. ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ, ಪರದೆಯ ಹಿಂದಿನಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದ ಶಕ್ತಿ ಅವರು. ಕೃಷಿ ಭೂಮಿಯ ಕೆಲಸದಿಂದ ಹಿಡಿದು ರಾಜಕೀಯ ಸಭೆಗಳವರೆಗೆ ಗೌಡರ ಪ್ರತಿಯೊಂದು ನಡೆಯ ಹಿಂದೆಯೂ ಚೆನ್ನಮ್ಮನವರ ಮೌನ ಸಮ್ಮತಿ ಮತ್ತು ಪ್ರೇರಣೆ ಇರುತ್ತಿತ್ತು ಎಂಬುದು ಕುಟುಂಬದ ಆಪ್ತ ವಲಯದ ಮಾತಾಗಿದೆ.
ವಿ.ಸೋಮಣ್ಣ, ಡಾ.ಜಿ.ಪರಮೇಶ್ವರ್ ಸಂತಾಪ
ಕೇಂದ್ರ ರಾಜ್ಯ ರೈಲ್ವೆ ಹಾಗೂ ಜಲಸಂಪನ್ಮೂಲ ಸಚಿವ ವಿ.ಸೋಮಣ್ಣ ಮೃತ ಚೆನ್ನಮ್ಮನವರ ಆತ್ಮಕ್ಕೆ ಶಾಂತಿ ಕೋರಿದ್ದು, ಕುಟುಂಬಸ್ಥರಿಗೆ ದುಃಖಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾಥಿಸಿದ್ದಾರೆ.
ಉಪಮುಖ್ಯಮಂತ್ರಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಚೆನ್ನಮ್ಮನವರ ನಿಧನಕ್ಕೆ ತೀವ್ರ ಕಂಬನಿ ಮಿಡಿದಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಕುಟುಂಬಸ್ಥರಿಗೆ ದುಃಖಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾಥಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ನಿಧನಕ್ಕೆ ತುಮಕೂರು ಮಾಹಾನಗರ ಪಾಲಿಕೆಯ ಮಾಜಿ ಉಪಾಧ್ಯಕ್ಷರಾದ ಟಿ.ಜಿ.ನಾಗರಾಜು ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, ಕುಟುಂಬಸ್ಥರಿಗೆ ದುಃಖಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಡಾ. ರಫೀಕ್ ಅಹ್ಮದ್ ಸಂತಾಪ :
ಮಾಜಿ ಶಾಸಕರು, ತುಮಕೂರು ನಗರದ ಮಾಜಿ ಶಾಸಕರಾದ ಡಾ. ರಫೀಕ್ ಅಹ್ಮದ್. ಎಸ್. ಅವರು ಭಾರತದ ಮಾಜಿ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರ ಮಾತೃಶ್ರೀ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರು ದೈವಾಧೀನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ.
ಮಾತೋಶ್ರೀ ಚೆನ್ನಮ್ಮ ದೇವೇಗೌಡ ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಕೋರುತ್ತಾ, ಗೌರವಾನ್ವಿತ ದೇವೇಗೌಡರು ಹಾಗೂ ಅವರ ಇಡೀ ಕುಟುಂಬಕ್ಕೆ ಈ ಅಪಾರ ದುಃಖ ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಡಾ. ರಫೀಕ್ ಅಹ್ಮದ್. ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಗಣ್ಯರ ಸಂತಾಪ
ಚೆನ್ನಮ್ಮನವರ ನಿಧನಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವರಾದ ಸೊಗಡು ಶಿವಣ್ಣ, ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ, ತಿಪಟೂರು ಟೂಡಾ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್, ತುಮಕೂರಿನ ಕಾಂಗ್ರಸ್ ಮುಖಂಡ ಇಕ್ಬಾಲ್ ಅಹ್ಮದ್, ಜೆಡಿಎಸ್ನ ಮಾಜಿ ಜಿಲ್ಲಾಧ್ಯಕ್ಷರಾದ ಆರ್.ಸಿ.ಆಂಜಿನಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಕೆಂಚಮಾರಯ್ಯ ,ಮೈತ್ರಿನ್ಯೂಸ್ ಪತ್ರಿಕೆ ಬಳಗ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.