ತುಮಕೂರು:ಸರಕಾರದಿಂದ ಮಂಜೂರಾದ ಸಾಗುವಳಿ ಭೂಮಿ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಅರಣ್ಯ ಸಂರಕ್ಷಣಾ ಕಾಯ್ದೆಗೆ ತಿದ್ದಪಡಿ ತರಲು ಆಗ್ರಹಿಸಿ,ರೈತರ ಮೇಲಿನ ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ, ಎಲ್ಲಾ ಬಗರ್ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ, ಸಾಗುವಳಿ ಚೀಟಿ ಪಡೆದ ಎಲ್ಲಾ ಭೂಮಿಯ ದುರಸ್ತಿಗೆ ಒತ್ತಾಯಿಸಿ ಜುಲೈ 27ರ ಸೋಮವಾರ ಶಿರಾ ತಾಲೂಕು ಬುಕ್ಕಾಪಟ್ಟಣದ ಪ್ರಸನ್ನಗಣಪತಿ ಸಭಾಂಗಣದಲ್ಲಿ ಸಾಗುವಳಿ ರೈತರ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ಕೆ.ದೊರೆರಾಜು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಡಿಮ್ಡ್ ಫಾರೆಸ್ಟ್ ಹೆಸರಿನಲ್ಲಿ ನಾಲ್ಕೈದು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿದ್ದ ರೈತರನ್ನು ಒಕ್ಕಲೆಬ್ಬಿಸಲು ಹೊರಟಿರುವ ಅರಣ್ಯ ಇಲಾಖೆಯ ವಿರುದ್ದ ಈ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಿರಾ ತಾಲೂಕಿನ ಹುಳಿಯಾರು ಹೋಬಳಿ ಮುತ್ತುಗದನಹಳ್ಳಿ, ಅಂಬ್ರಾಪುರ ಸೇರಿದಂತೆ ಹಲವು ಹಳ್ಳಿಗಳ ರೈತರಿಗೆ ಮೈಸೂರು ಮಹಾರಾಜರ ಕಾಲದಲ್ಲಿ 1926 ಮತ್ತು 1948 ರಲ್ಲಿ ಭೂಮಿ ಮಂಜೂರಾಗಿ ಗೆಜೆಟ್ ನೋಟಿಫಿಕೇಷನ್ ಅಹ ಆಗಿದೆ.ರೈತರು ತಮಗೆ ಮಂಜೂರಾದ ಭೂಮಿಯಲ್ಲಿ ಆಹಾರ ಬೆಳೆಗಳ ಜೊತೆಗೆ,ತೆಂಗು,ಅಡಿಕೆ ಮುಂದಾದ ತೋಟಗಾರಿಕಾ ಬೆಳೆಗಳ ಜೊತೆಗೆ, ವಿವಿಧ ಆಹಾರ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.ಈಗ ಏಕಾಎಕಿ ಸುಪ್ರಿಂ ಕೋರ್ಟ್ ಆಡರ್ ಎಂದು ಮಕ್ಕಳ ರೀತಿ ನೆಟ್ಟು ಬೆಳೆಸಿ,ಪೋಷಿಸಿದ ಫಸಲು ಬೀಡುತ್ತಿರುವ ಅಡಿಕೆ,ತೆಂಗಿನ ಮರಗಳನ್ನು ಕಡಿದು ದೌರ್ಜನ್ಯ ಎಸಗಿರುವುದು ಖಂಡನೀಯ.ಕೂಡಲೇ ಸರಕಾರ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು.ಹಾಗು ಭೂಮಿಯನ್ನು ಹಿಂದಿರುಗಿಸ ಬೇಕೆಂದು ಈ ಸಮಾವೇಶ ರೂಪಿಸಿದ್ದು,ಸಂತ್ರಸ್ಥ ರೈತರ ಜೊತೆಗೆ, ಈಗಾಗಲೇ ಅರಣ್ಯ ಇಲಾಖೆಯಿಂದ ನೊಟೀಷ್ ಪಡೆದಿರುವ ರೈತರು ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು, ಸರಕಾರಕ್ಕೆ ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸ ಬೇಕೆಂದರು.
ಸಂಯುಕ್ತ ಹೋರಾಟದ ಸಂಚಾಲಕರಾದ ಸಿ.ಯತಿರಾಜು ಮಾತನಾಡಿ,ಸರಕಾರದ ಅರಣ್ಯ ನೀತಿ ಸರಿಯಲ್ಲ. ರೈತರಿಗೆ ಭೂಮಿ ಮಂಜೂರಾಗಿ 70-80 ವರ್ಷಗಳು ಕಳೆದ ನಂತರ, ಹಳೆಯ ಗೆಜೆಟ್ವೊಂದನ್ನು ಮುಂದಿಟ್ಟುಕೊಂಡು ಇದು ನಮ್ಮದು ಎಂದು ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ.ಬಗರ್ ಹುಕ್ಕಂ ಮಾಡುವ ರೈತರ ಹತ್ತಾರು ಸಾವಿರ ಆರ್ಜಿಗಳು ಸರಕಾರದ ಮುಂದಿವೆ.ಅವುಗಳಿಗೆ ಸಾಗುವಳಿ ಚೀಟಿ ನೀಡುವ ಬದಲು, ಹಲವು ತಲೆಮಾರುಗಳಿಂದ ಬದುಕು ಕಟ್ಟಿಕೊಂಡಿರುವ ರೈತರನ್ನು ಒಕ್ಕಲೆಬ್ಬಿಸಲು ಹೊರಟಿರುವ ಸರಕಾರದ ಕ್ರಮವನ್ನು ವಿರೋಧಿಸಿ,ಜುಲೈ 27 ರಂದು ಬುಕ್ಕಾಪಟ್ಟಣದಲ್ಲಿ ರೈತರ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಗತಿಪರ ವೈದ್ಯ ಚಕರ ಆಸ್ಪತ್ರೆಯ ಡಾ.ಬಸವರಾಜು ಮಾತನಾಡಿ,ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಅಂಬ್ರಾಪುರ, ಮುತ್ತುಗದಹಳ್ಳಿ, ಮಾದೇನಹಳ್ಳಿ ಸೇರಿದಂತೆ 8-10 ಹಳ್ಳಿಗಳಲ್ಲಿ ಪರಿಸರ ಕಾಪಾಡಬೇಕಾದ ಅರಣ್ಯ ಇಲಾಖೆಯ ಅಧಿಕಾರಿಗಳೇ ರೈತರು ಹತ್ತಾರು ವರ್ಷಗಳಿಂದ ಮಕ್ಕಳಂತೆ ಬೆಳೆಸಿದ ಫಸಲು ಬೀಡುತ್ತಿರುವ ಅಡಿಕೆ ಗಿಡಗಳನ್ನು ಕಡಿದು,ಭೂಮಿಯನ್ನು ಆಗೆದು ಕಡಿದ ಮರಗಳನ್ನು ಮುಚ್ಚುವ ಮೂಲಕ ಸಾಕ್ಷ ನಾಶ ಪಡಿಸಿದ್ದಾರೆ.7-8 ದಶಕಗಳಿಂದ ಇಲ್ಲದ ಅರಣ್ಯ ಭೂಮಿ, ದತ್ತೆಂದು ಉದ್ಬವಿಸಲು ಸಾಧ್ಯವೇ?, ಎಲ್ಲಾ ಇಲಾಖೆಗಳ ಮಾತೃ ಸಂಸ್ಥೆಯಾದ ಕಂದಾಯ ಇಲಾಖೆಯೇ ರೈತರಿಗೆ ಭೂಮಿ ಮಂಜೂರು ಮಾಡಿ,ಸಾಗುವಳಿ ಚೀಟಿ ನೀಡಿದೆ.ಇಂದಿಗೂ ಖಾತೆ, ಪಹಣಿಯಲ್ಲಿ ಕಂದಾಯ ಇಲಾಖೆ ಎಂದೇ ಬರುತ್ತಿದೆ.ಆದರೂ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿ ಗಿಡಗಳನ್ನು ಕಿತ್ತು ಹಾಕಿದ್ದಾರೆ. ನೊಂದ ರೈತರಿಗೆ ಸಾಂತ್ವನ ಹೇಳುವುದರ ಜೊತೆಗೆ, ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಜುಲೈ 27ರ ರೈತರ ಪ್ರತಿಭಟನಾ ಸಮಾವೇಶ ಮಹತ್ವದ್ದು, ಹಾಗಾಗಿ ನಾವೆಲ್ಲರೂ ಭಾಗವಹಿಸುವುದಾಗಿ ತಿಳಿಸಿದರು.
ಸಿಐಟಿಯುನ ಸೈಯದ್ ಮುಜೀಬ್,ಬಿ.ಎಸ್.ಪಿಯ ರಾಜಸಿಂಹ,ರೈತ ಸಂಘದ ಚಿಕ್ಕಬೋರೇಗೌಡ, ಪ್ರಾಂತ ರೈತಸಂಘದ ದೊಡ್ಡ ನಂಜಪ್ಪ,ದಸಂಸ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಮುರುಳಿ ಕುಂದೂರು ಜುಲೈ 27ರ ರೈತರ ಪ್ರತಿಭಟನಾ ಸಮಾವೇಷದ ಮಹತ್ವ ಕುರಿತು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜಾತ್ಯಾತೀತ ಯುವವೇದಿಕೆಯ ಡ್ಯಾಗೇರಹಳ್ಳಿ ವಿರೂಪಾಕ್ಷ,ಕಟ್ಟಡ ಕಾರ್ಮಿಕರ ಸಂಘಟನೆಯ ಬಿ.ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.